Advertisement

ಉಸ್ತುವಾರಿ ಸಚಿವರ ಮುಂದಿದೆ ಅಭಿವೃದ್ಧಿ ಸವಾಲು

01:22 PM Jun 11, 2023 | Team Udayavani |

ರಾಮನಗರ: ಜಿಲ್ಲೆಗೆ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ. ಹಿರಿಯ, ಅನುಭವಿ ಸಚಿವರಾದ ರಾಮಲಿಂಗಾರೆಡ್ಡಿ ಹೆಗಲಿಗೆ ಜಿಲ್ಲಾ ಉಸ್ತುವಾರಿ ಹೊಣೆ ಸಿಕ್ಕಿದ್ದು, ನೂತನ ಉಸ್ತುವಾರಿ ಸಚಿವರ ಮುಂದೆ ಅಭಿವೃದ್ಧಿಯ ಸವಾಲು ಸಾಕಷ್ಟಿವೆ.

Advertisement

ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಸಚಿವರು ಯಾವ ರೀತಿ ಸ್ಪಂದಿಸಿಯಾರು ಎಂಬ ನಿರೀಕ್ಷೆ ಜಿಲ್ಲೆಯ ಜನತೆಯಲ್ಲಿ ಮೂಡಿದೆ. ಕಾಂಗ್ರೆಸ್‌ ಪ್ರಮುಖ ಪ್ರಣಾಳಿಕೆಯಾಗಿರುವ ಮೇಕೆದಾಟು ಅಣೆಕಟ್ಟೆ, ಕಳೆದ 12 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ಸೇರಿದಂತೆ ಹಲವು ಸಮಸ್ಯೆ ನೂತನ ಉಸ್ತುವಾರಿ ಸಚಿವರ ಮುಂದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಹಾಗೂ ಕಾಂಗ್ರೆಸ್‌ ಶಾಸಕರಾದ ಬಾಲಕೃಷ್ಣ ಮತ್ತು ಇಕ್ಬಾಲ್‌ ಹುಸೇನ್‌ರ ಸಾಥ್‌ ಇದ್ದು, ಜಿಲ್ಲೆಯ ಸಮಸ್ಯೆಗೆ ನೂತನ ಉಸ್ತುವಾರಿ ಸಚಿವರು ಇವರೆಲ್ಲರನ್ನೂ ಸಂಘಟಿಸಿ ಹೋರಾಟ ಮಾಡಬೇಕಿದೆ.

ನೀರಾವರಿಗೆ ಬೇಕಿದೆ ಚಾಲನೆ: ಚನ್ನಪಟ್ಟಣ ತಾಲೂಕ ನ್ನು ಹೊರತು ಪಡಿಸಿದರೆ ಜಿಲ್ಲೆ 3 ತಾಲೂಕುಗಳಿಗೆ ಸೂಕ್ತ, ಸಮರ್ಪಕ ನೀರಾವರಿ ಯೋಜನೆ ಅಗತ್ಯತೆಇದೆ. ಈ ನಿಟ್ಟಿನಲ್ಲಿ ಹಲವು ನೀರಾವರಿ ಯೋಜನೆಗಳು ರೂಪುಗೊಂಡಿವೆಯಾದರೂ ಕಾಮಗಾರಿ ಮಂದಗತಿ ಯಲ್ಲಿ ಸಾಗುತ್ತಿವೆ. ಮಾಗಡಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಶ್ರೀರಂಗ ಏತನೀರಾವರಿ ಯೋಜನೆ ನನೆಗು ದಿಗೆ ಬಿದ್ದಿದೆ. ಜಿಲ್ಲೆಯ 4 ತಾಲೂಕಿಗೆ ನೀರಾವರಿ ಸೌಲ ಭ್ಯ ಕಲ್ಪಿಸುವ ಸತ್ತೆಗಾಲ ನೀರಾವರಿ ಯೋಜನೆ ಪೂರ್ಣ ಗೊಳ್ಳಬೇಕಿದೆ. ಇದರೊಂದಿಗೆ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ಕೆರೆಗಳ ಅಭಿವೃದ್ಧಿ ಸೇರಿ ಸಾಕಷ್ಟು ನೀ ರಾವರಿ ಕೆಲಸಕ್ಕೆ ಚುರುಕು ಮೂಡಿಸಬೇಕಿದೆ.

ನಗರಾಭಿವೃದ್ಧಿಗೆ ಆದ್ಯತೆ: ಬೆಂಗಳೂರಿಗೆ ಹೊಂದಿಕೊಂ ಡಂತೆ ಇರುವ ರಾಮನಗರ ಜಿಲ್ಲೆಯ ನಗರಗಳು ಬೆಳೆಯುತ್ತಿವೆ. ಜಿಲ್ಲಾ ಕೇಂದ್ರ ರಾಮನಗರದ ಜತೆಗೆ ಚನ್ನಪಟ್ಟಣ, ಮಾಗಡಿ, ಕನಕಪುರ ಪಟ್ಟಣ ಹಾಗೂ ಹೊಸದಾಗಿ ಪಟ್ಟಣ ಪ್ರದೇಶ ಎಂದು ಬಡ್ತಿ ಪಡೆದಿರುವ ಬಿಡದಿ ಮತ್ತು ಹಾರೋಹಳ್ಳಿಯ ಸಮಗ್ರ ಅಭಿವೃದ್ಧಿ ಕೆಲಸ ನಡೆಯಬೇಕಿದೆ. ಯುಜಿಡಿ ಕಾಮಗಾರಿ, ಹೊಸ ಬಡಾವಣೆಗಳ ನಿರ್ಮಾಣ, ನಗರದ ಬಹುತೇಕ ಬಡಾವಣೆಗೆ ಮೂಲಸೌಕರ್ಯ ಹೀಗೆ ನಗರ ನಾಗರೀಕರ ಸಾಲು ಸಾಲು ಸವಾಲುಗಳಿದ್ದು ಇದಕ್ಕೆಲ್ಲ ಪರಿಹಾರ ನೀಡಲು ಸಚಿವರು ಮುಂದಾಗಬೇಕಿದೆ.

ಆಡಳಿತ ಯಂತ್ರಕ್ಕೆ ಚುರುಕು: ಜಿಲ್ಲೆಯಲ್ಲಿ ಆಡಳಿತ ವರ್ಗ ಶ್ರೀಸಾಮಾನ್ಯರಿಗೆ ಸ್ಪಂದಿಸುವುದಿಲ್ಲ ಎಂಬ ಕೂಗು ವ್ಯಾಪಕವಾಗಿದೆ. ಗ್ರಾಪಂ ನಿಂದ ಹಿಡಿದು ಜಿಲ್ಲಾ ಮಟ್ಟದ ಕಚೇರಿವರೆಗೆ ಸಾರ್ವಜನಿಕರು ಕೆಲಸ ಕಾರ್ಯಗಳಿಗಾಗಿ ಅಲೆದಾಡುವಂತಾಗಿದೆ. ಇನ್ನು ಅಧಿಕಾರಿಗಳು ಜನರ ಕೈಗೆ ಸಿಗದೆ ಸಮಸ್ಯೆಯಾಗುತ್ತಿದೆ. ಗ್ರಾಪಂ, ನಗರಸಭೆಗಳಲ್ಲಿ ಖಾತೆಗಾಗಿ ಜನರನ್ನು ಅಲೆದಾಡಿಸುತ್ತಿದ್ದು, ಇ-ಖಾತೆ ಕೊಡಲು ಲಂಚ ಕೇಳವುದು ಸಾಮಾನ್ಯವೆನಿಸಿದೆ. ಹಳಿತಪ್ಪಿರುವ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿದೆ.

Advertisement

ಮಹನೀಯರ ಸ್ಮಾರಕ ನಿರ್ಮಾಣ: ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮದಲ್ಲಿ ಸ್ಮಾರಕ ನಿರ್ಮಾಣ, ಸಿದ್ದ ಗಂಗಾ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರದಲ್ಲಿ ಅವರ ಪ್ರತಿಮೆ ನಿರ್ಮಾಣ, ಗ್ರಾಮದ ಸಮಗ್ರ ಅಭಿವೃದ್ಧಿ, ಬಾಲಗಂಗಾ ಧರನಾಥ ಶ್ರೀಗಳ ಜನ್ಮಭೂಮಿ ಬಾನಂದೂರು ಅಭಿವೃದ್ಧಿ ಹೀಗೆ ಮಹನೀಯರ ಜನ್ಮಸ್ಥಳಗಳಲ್ಲಿ ಸ್ಮಾರಕವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸಚಿವರು ಚಾಲನೆ ನೀಡಬೇಕಿದೆ. ಹೀಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ನೂತನ ಸಚಿವರು ನೆರವು ನೀಡಿಯಾರೇ ಎಂಬ ನಿರೀಕ್ಷೆ ಜಿಲ್ಲೆಯ ಜನತೆಯದ್ದಾಗಿದೆ.

ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಆಗಬೇಕಿದೆ :

 ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ  ಕನಕಪುರ ಮೆಡಿಕಲ್‌ ಕಾಲೇಜು ನಿರ್ಮಾಣ, ಜಿಲ್ಲಾ ಕೇಂದ್ರದಲ್ಲಿ ಬಸ್‌ನಿಲ್ದಾಣ

 ಬೈರಾಪಟ್ಟಣ ಬಳಿ ನನೆಗುದಿಗೆ ಬಿದ್ದಿರುವ ಮಾವು ಸಂಸ್ಕರಣಾ ಘಟಕ

 ಕಣ್ವ ಜಲಾಶಯದಲ್ಲಿ ಚಿಲ್ಡ್ರನ್‌ಪಾರ್ಕ್‌ ನಿರ್ಮಾಣ ಮಾಡುವುದು

 ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶವನ್ನು ವಿಸ್ತೀರ್ಣ ಹೆಚ್ಚಿಸುವುದು

 ಬೆಂಗಳೂರು-ಮಾಗಡಿ ನಡುವೆ ಇರುವ ಚತುಷ್ಪಥ ರಸ್ತೆಯನ್ನು ನಿರ್ಮಾಣ

 ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸರ್ಕೀಟ್‌ ನಿರ್ಮಾಣವನ್ನು ಮಾಡುವುದು

 ರಾಜೀವ್‌ಗಾಂಧಿ ಆರೋಗ್ಯ ವಿವಿ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next