Advertisement

ರಾಮಕೃಷ್ಣ ಡಬಲ್‌ ಸೆಂಚುರಿ

09:02 AM Jan 09, 2019 | |

ಹಿರಿಯ ನಟ ರಾಮಕೃಷ್ಣ ಇದೀಗ ಖುಷಿಯ ಮೂಡ್‌ನ‌ಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು, “ಸಿನಿಮಾರಂಗದ ದಿಗ್ಗಜರೆಲ್ಲಾ ಆರಂಭದ ದಿನಗಳಲ್ಲಿ ನನ್ನ ಬೆನ್ನುತಟ್ಟಿದ್ದರು. ಅಷ್ಟೇ ಅಲ್ಲ, ಚೆನ್ನಾಗಿ ಕೆಲಸ ಮಾಡು ಎಂದು ಆಶೀರ್ವದಿಸಿದ್ದರು. ಆದರೆ, ನಾನು ಅವರ ನಂಬಿಕೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿದ್ದೇನೆ, ಇಲ್ಲಿಯವರೆಗೂ ನಾನೇನೂ ಮಾಡಿಯೇ ಇಲ್ಲವಲ್ಲಾ ಎಂಬ ಫೀಲ್‌’ ಇದೆ ಎಂದು ಹೇಳಿಕೊಂಡಿದ್ದರು.

Advertisement

ಈಗೇಕೆ ಅವರ ಮಾತಿನ ಪ್ರಸ್ತಾಪ ಎಂಬ ಪ್ರಶ್ನೆ ಎದುರಾಗಬಹುದು. ವಿಷಯ ಇದೆ. ಅವರೀಗ 200 ಚಿತ್ರಗಳನ್ನು ಪೂರ್ಣಗೊಳಿಸಿದ್ದಾರೆ. ಹೌದು, ರಾಮಕೃಷ್ಣ ಅವರು ಅಲ್ಲಿಂದ ಇಲ್ಲಿಯವರೆಗೆ ಮಾಡಿರುವ ಬಹುತೇಕ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳೇ ಸಿಕ್ಕಿವೆ. ಸಿಕ್ಕ ಪಾತ್ರವನ್ನು ಅಷ್ಟೇ ಶ್ರದ್ಧೆಯಿಂದ ನಿರ್ವಹಿಸುವ ಮೂಲಕ ತಮ್ಮ ಕೆಲಸವನ್ನು ಪ್ರೀತಿಯಿಂದ ಮಾಡಿಕೊಂಡು ಬಂದಿದ್ದಾರೆ.

ಹಳಬರು, ಹೊಸಬರು ಎಂಬ ಭೇದ-ಭಾವ ಇಲ್ಲದೆ, ಪಾತ್ರಕ್ಕೆ ಏನು ಬೇಕೋ, ನಿರ್ದೇಶಕ ಏನು ಹೇಳುತ್ತಾನೋ ಅಷ್ಟು ಮಾಡುವ ಮೂಲಕ ಸಿನಿಮಾವನ್ನು ಪ್ರೀತಿಸಿಕೊಂಡು ಬಂದಿದ್ದಾರೆ. ಈಗ ಅವರು ಡಬ್ಬಲ್‌ ಸೆಂಚುರಿ ಬಾರಿಸಿದ್ದಾರೆ. ಹೊಸಬರೇ ಸೇರಿ ಮಾಡುತ್ತಿರುವ “ಅಗ್ರಸೇನ’ ಎಂಬ ಚಿತ್ರದಲ್ಲಿ ರಾಮಕೃಷ್ಣ ನಟಿಸಿದ್ದಾರೆ. “ಅಗ್ರಸೇನ’ ಅವರ ಅಭಿನಯದ 200 ನೇ ಸಿನಿಮಾ ಎಂಬುದು ವಿಶೇಷತೆಗಳಲ್ಲೊಂದು.

ಈ ಚಿತ್ರಕ್ಕೆ ಎನ್‌.ಕೆ.ಮುರುಗೇಶ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಇವರೇ ಬರೆದಿದ್ದಾರೆ. ನೃತ್ಯ ನಿರ್ದೇಶಕ ಕಮ್‌ ನಿರ್ದೇಶಕ ಹರ್ಷ ಜೊತೆ ಕೆಲಸ ಮಾಡಿದ್ದ ಮುರುಗೇಶ್‌, ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಮಮತಾ ಜಯರಾಮರೆಡ್ಡಿ ಈ ಚಿತ್ರದ ನಿರ್ಮಾಪಕರು. ಈ ಚಿತ್ರದಲ್ಲಿ ರಾಮಕೃಷ್ಣ ಅವರಿಗೆ ಎರಡು ಶೇಡ್‌ ಪಾತ್ರಗಳಿವೆ ಎಂಬುದು ನಿರ್ದೇಶಕರ ಮಾತು.

ಇದು 80 ರ ದಶಕದಲ್ಲಿ ನಡೆಯೋ ಕಥೆ. ಹಾಗಂತ ಚಿತ್ರದುದ್ದಕ್ಕೂ ಅದೇ ಇರುವುದಿಲ್ಲವಂತೆ. ಒಂದು ವರ್ಷನ್‌ ಮಾತ್ರ ಆ ಕಾಲದ ಕಥೆ ಸಾಗಿದರೆ, ಇನ್ನೊಂದು ವರ್ಷನ್‌ ಈಗಿನ ವಸ್ತುಸ್ಥಿತಿಯ ಕಥೆ ಹೇಳಲಿದೆಯಂತೆ. ರಾಮಕೃಷ್ಣ ಅವರು ಹಳ್ಳಿಯೊಂದರ ಮುಖಂಡರಾಗಿ ಕಾಣಿಸಿಕೊಂಡಿದ್ದಾರಂತೆ.

Advertisement

ಅದೊಂದು ಫ್ಯಾಶ್‌ಬ್ಯಾಕ್‌ ಕಥೆಯಾಗಿದ್ದರಿಂದ, ರಾಮಕೃಷ್ಣ ಅವರಿಗೆ ವಿಶೇಷ ಗೆಟಪ್‌ ಹಾಕಿಸಿ, ಪಾತ್ರ ಮಾಡಿಸಲಾಗಿದೆ ಎನ್ನುವ ಚಿತ್ರತಂಡ, ಇದೊಂದು ಕೌಟುಂಬಿಕ ಹಿನ್ನೆಲೆಯ ಕಥೆಯಾಗಿದ್ದು, ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಇವೆ. ಇಲ್ಲಿ ಅಮರ್‌, ಯತ್ವಿಕೃಷ್ಣ ನಾಯಕರಾದರೆ, ರಚನಾ ದಶರಥ, ಉಗ್ರಂ ಮಂಜು ಇತರರು ನಟಿಸಿದ್ದಾರೆ. ಚಿತ್ರಕ್ಕೆ ಆರ್‌.ಪಿ.ರೆಡ್ಡಿ ಛಾಯಾಗ್ರಹಣವಿದೆ. ತ್ಯಾಗು ಅವರ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next