Advertisement

ರಘುನಾಥಾಯ ನಾಥಾಯ: ಜೈ ಶ್ರೀರಾಮ್‌, ಸಿಯಾವರ್‌ ರಾಮಚಂದ್ರ ಕೀ ಜೈ ಎಂಬ ಘೋಷವಾಕ್ಯ ಮೊಳಗಿಸಿದ ಜನ

03:43 AM Aug 06, 2020 | Hari Prasad |

ಅಯೋಧ್ಯೆ: ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಿದ ದೃಶ್ಯಗಳನ್ನು ಅಯೋಧ್ಯೆಯ ಪ್ರತಿ ಬೀದಿ ಬೀದಿಗಳಲ್ಲಿ ಜನರು ಟಿವಿಗಳ ಮುಂದೆ ಗುಂಪುಗುಂಪಾಗಿ ವೀಕ್ಷಿಸಿದರು.

Advertisement

ಯಾವ ಬೀದಿಗಳಿಗೆ ಹೋದರೂ ಅಲ್ಲಿ ಮನೆಗಳಲ್ಲಿ,ಅಂಗಡಿಗಳಲ್ಲಿನ ಟಿವಿಗಳ ನೇರ ಪ್ರಸಾರವಾಗುತ್ತಿದ್ದ ಭೂಮಿ ಪೂಜೆಯ ದೃಶ್ಯಗಳನ್ನು ಒಟ್ಟಿಗೆ ನಿಂತು ನೋಡುತ್ತಿದ್ದು ಸಾಮಾನ್ಯವಾಗಿತ್ತು.

ಅದು, ದಶಕಗಳ ಹಿಂದೆ ರಾಮಾಯಣ, ಮಹಾಭಾರತವನ್ನು ಟಿವಿ ಇರುವ ಮನೆಗಳಲ್ಲಿ ಜನರು ಗುಂಪು ಸೇರಿ ನೋಡುತ್ತಿದ್ದ ದೃಶ್ಯಗಳನ್ನು ನೆನಪಿಸುತ್ತಿತ್ತು.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅಯೋಧ್ಯೆ ತುಂಬೆಲ್ಲಾ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೆಜ್ಜೆ ಹೆಜ್ಜೆಗೂ ಪೊಲೀಸರು ನಿಂತಿದ್ದರು, ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.

ಹಾಗಾಗಿ ಭೂಮಿ ಪೂಜೆಯನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಸಾವಿರಾರು ಸಂಖ್ಯೆಯ ಜನರಿಗೆ ನಗರದಲ್ಲಿ ಆಯೋಜಿಸಲಾಗಿದ್ದ ಬಿಗಿ ಭದ್ರತೆಯಿಂದಾಗಿ ಹನುಮಾನ್‌ ದೇಗುಲದ ಬಳಿಗೂ ಹೋಗಲಾಗಲಿಲ್ಲ.

Advertisement

ಹಾಗಾಗಿಯೇ ಅವರೆಲ್ಲರೂ ಸಿಕ್ಕ ಸಿಕ್ಕ ಕಡೆ ಟಿವಿಗಳ ಮೂಲಕ ಭೂಮಿ ಪೂಜೆಯನ್ನು ನೋಡಿದರು. ಈ ಅನಿವಾರ್ಯತೆಗೆ ಒಳಗಾಗಿದ್ದರು. ಇಡೀ ನಗರದ‌ಲ್ಲಿ ತೆರೆದಿದ್ದ ಕೆಲವೇ ಕೆಲವು ಅಂಗಡಿಗಳಲ್ಲಿದ್ದ ಟಿವಿಗಳ ಮೂಲಕ ಭೂಮಿ ಪೂಜೆಯನ್ನು ಕಂಡು ಪುಳಕಿತರಾದರು.

ಮೋದಿಯವರು ತಮ್ಮ ಭಾಷಣದಲ್ಲಿ, ರಾಮಚರಿತ ಮಾನಸದ ಕೆಲ ಶ್ಲೋಕಗಳನ್ನು ಹೇಳಿದ್ದನ್ನು ಟಿವಿ ಅಂಗಡಿಗಳಲ್ಲೇ ನಿಂತು ಕೆಲವರು ಪುನರಾವರ್ತಿಸಿದರು.

ಅಯೋಧ್ಯೆಯ ಶೃಂಗಾರ್‌ ಹಾತ್‌ ಎಂಬ ಬೀದಿ ಮಹಿಳೆಯರ ಆಲಂಕಾರಿಕ ಹಾಗೂ ಪ್ರಸಾಧ‌ನ ಸಾಮಗ್ರಿಗಳ ಮಾರಾಟಕ್ಕೆ ಹೆಸರುವಾಸಿ. ಆ ಓಣಿಯಲ್ಲಿ ಹೆಚ್ಚಾಗಿ ಆಭರಣದ ಅಂಗಡಿಗಳೂ ಇವೆ. ಆ ಎಲ್ಲ ಅಂಗಡಿಗಳ ಮುಂದೆ ಬುಧವಾರ ಮಧ್ಯಾಹ್ನ ಜನವೋ ಜನ.


ಅದಕ್ಕೆ ಕಾರಣ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಭೂಮಿ ಪೂಜೆ. ಹಾದಿಯಲ್ಲಿ ಅಡ್ಡಾಡುವವರಷ್ಟೇ ಅಲ್ಲ, ಬಿಗಿ ಭದ್ರತೆಗೆ ನೇಮಿಸಲಾಗಿದ್ದ ಕೆಲವು ಪೊಲೀಸರು, ಭೂಮಿ ಪೂಜೆಯ ವರದಿಗಾಗಿ ಬೇರೆ ಊರುಗಳಿಂದ ಅಯೋಧ್ಯೆಗೆ ಬಂದಿದ್ದ ವರದಿಗಾರರು ಕೂಡ ಆ ಜನರ ಗುಂಪಿನ ನಡುವೆ ಸೇರಿ ಅಂಗಡಿಗಳಲ್ಲಿ ಭೂಮಿ ಪೂಜೆಯ ನೇರ ಪ್ರಸಾರ ವೀಕ್ಷಿಸಿದರು. ವೀಕ್ಷಣೆಯ ಜತೆಯಲ್ಲೇ ‘ಜೈ ಶ್ರೀರಾಮ್‌’, ‘ಸಿಯಾವರ್‌ ರಾಮಚಂದ್ರ ಕೀ ಜೈ’ ಎಂಬ ಘೋಷ ವಾಕ್ಯಗಳನ್ನು ಕೂಗಿ ಕೃತಾರ್ಥರಾದರು. ಇದರಿಂದ ಪುಳಕಿತರಾದ ಕೆಲವು ಅಂಗಡಿ ಮಾಲಕರೂ ಕೂಡ ಭಕ್ತಿ ಪರವಶರಾಗಿ, ಟಿವಿ ನೋಡಲು ನೆರೆದಿದ್ದವರಿಗೆ ಲಡ್ಡು ಹಾಗೂ ಇತರ ಸಿಹಿ ಪದಾರ್ಥಗಳನ್ನು ಹಂಚಿದರು.

ಹೀಗೆ, ಅಂಗಡಿಯೊಂದರಲ್ಲಿ ಕುಳಿತು ಭೂಮಿ ಪೂಜೆಯನ್ನು ನೋಡಿದ ಶಾಂತಿ (60) ಎಂಬ ವೃದ್ಧೆ, ಶ್ರೀರಾಮ ದೇಗುಲ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ನೋಡಿ ತುಂಬಾ ಖುಷಿಯಾಯಿತು. ದಶಕಗಳಿಂದ ನಾವು ನಿರೀಕ್ಷಿಸುತ್ತಿದ್ದ ಶ್ರೀರಾಮ ದೇಗುಲದ ನಿರ್ಮಾಣಕ್ಕೆ ಇಂದು ಚಾಲನೆ ಸಿಕ್ಕಿದೆ. ಇದು ನಿಜಕ್ಕೂ ಅತ್ಯಂತ ಸಂತೋಷದಾಯಕ ವಿಚಾರ ಎಂದರು.


ಮಹೇಂದ್ರ ಯಾದವ್‌ ಎಂಬ ಯುವಕ ಮಾತನಾಡಿ, ‘ಇದೊಂದು ಅವಿಸ್ಮರಣೀಯ ಕ್ಷಣ. ನಾನಂತೂ ಖುಷಿಯ ಉತ್ತುಂಗಕ್ಕೆ ಹೋಗಿದ್ದೇನೆ. ಮುಂದೆ ನಾನು ಮುದುಕನಾದಾಗ ನನ್ನ ಮೊಮ್ಮಕ್ಕಳಿಗೆ ಈ ಅವಿಸ್ಮರಣೀಯ ದಿನವನ್ನು ವಿವರಿಸಿ ತಿಳಿಸುತ್ತೇನೆ’ ಎಂದರು. ನಾಗರಾಜ್‌ ಎಂಬುವರು ಮಾತನಾಡಿ, “ಈ ಶೃಂಗಾರ್‌ ಹಾತ್‌ನಲ್ಲಿ ಕುಳಿತು ಟಿವಿ ವೀಕ್ಷಿಸಿದ್ದು, ನಾನು ಸಾಕ್ಷಾತ್‌ ಭೂಮಿ ಪೂಜೆಯನ್ನು ಹತ್ತಿರದಿಂದಲೇ ನೋಡಿದಷ್ಟು ಖುಷಿಯಾಗುತ್ತಿದೆ’ ಎಂದರು.

ಅಲ್ಲಿನ ಅಂಗಡಿಯೊಂದರ ಮಾಲಕರಾದ ಶಿವ ದಯಾಳ್‌ ಸೋನಿ, ‘ಇವತ್ತು ನನ್ನ ಅಂಗಡಿಗೆ ಯಾವುದೇ ಗ್ರಾಹಕರು ಬರಲಿಲ್ಲ. ಬದಲಿಗೆ, ವಿವಿಧ ವರ್ಗಗಳ ಜನರು ಬಂದು ಟಿವಿ ವೀಕ್ಷಿಸಿದರು. ರಾಮಭಕ್ತರು ಬಂದು ಟಿವಿ ನೋಡಿ, ಜಯಕಾರ ಹಾಕಿದ್ದು ನನಗೆ ಖುಷಿಕೊಟ್ಟಿದೆ’ ಎಂದರು.

ಸಾವಿತ್ರಿ ಸೋನಿ ಮಾತನಾಡಿ, ಒಂದೇ ರೀತಿಯ ಭಕ್ತಿ-ಭಾವವಿರುವ ಜನರನ್ನು ಒಂದೆಡೆ ನೋಡಿ ಖುಷಿಯಾಯಿತು. ನನಗೆ ಹೆಮ್ಮೆಯೆನಿಸುತ್ತಿದೆ. ಪ್ರತಿ ಅಂಗಡಿಗಳಲ್ಲೂ ಜನರು ಹೀಗೆ ಸ್ವಯಂಪ್ರೇರಿತವಾಗಿ ಜಮಾಯಿಸಿ ಟಿವಿ ವೀಕ್ಷಿಸಿದ ದೃಶ್ಯವನ್ನು ನಾನೆಂದಿಗೂ ಮರೆಯಲಾರೆ’ ಎಂದರು.

ಕಟ್ಟಡ, ಮರಗಳ ಮೊರೆ ಹೋದ ಮಾಧ್ಯಮ ಸಿಬಂದಿ
ಅಯೋಧ್ಯೆಗೆ ಆಗಮಿಸಿದ ಕೂಡಲೇ ಮೋದಿಯವರು ಮೊದಲು ಭೇಟಿ ನೀಡಿದ ಹನುಮಾನ್‌ ದೇಗುಲದ ಸುತ್ತಲಿನ ಕಟ್ಟಡಗಳ ಮೇಲೆ ಪತ್ರಿಕಾ ಛಾಯಾಚಿತ್ರ ಗ್ರಾಹಕರು, ಟಿವಿ ಚಾನೆಲ್‌ಗ‌ಳ ವೀಡಿಯೋ ಗ್ರಾಹಕರು ಹಾಗೂ ವರದಿಗಾರರು ಗುಂಪುಗುಂಪಾಗಿ ನಿಂತಿದ್ದರು. ಅಲ್ಲಿಂದ ಮೋದಿಯವರು ದೇಗುಲ ಪ್ರವೇಶಿಸುವುದನ್ನು ಹೊರಬರುವುದರನ್ನು ತಮ್ಮ ಕೆಮರಾಗಳಲ್ಲಿ ಸೆರೆ ಹಿಡಿಯಲು ಯತ್ನಿಸಿದ್ದರು. ರಸ್ತೆ ಬದಿಗಳಲ್ಲಿನ ಮರಗಳ ಮೇಲೂ ಮಾಧ್ಯಮ ಮಂದಿ ಹಾಗೂ ಇನ್ನಿತರ ಜನರು ಹತ್ತಿ ಕುಳಿತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next