Advertisement

BJP vs Congress ಮಧ್ಯೆ ‘ರಾಮಾಶ್ವಮೇಧ’ ಸಮರ

12:53 AM Jan 12, 2024 | Team Udayavani |

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲೇ ಆಯೋಜನೆಗೊಂಡಿರುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವಿಚಾರ ಈಗ ಸಂಪೂರ್ಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ- ಕಾಂಗ್ರೆಸ್‌ ನಡುವಿನ ಜಟಾಪಟಿಗೆ ಕಾರಣವಾಗಿದೆ.

Advertisement

ಆಹ್ವಾನ ತಿರಸ್ಕರಿಸಿರುವ ಕಾಂಗ್ರೆಸ್‌ ಹೈಕಮಾಂಡ್‌, ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಬಿಜೆಪಿ ಪಾಳಯವನ್ನು ಕೆರಳಿಸಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಹಿಂದೂಗಳ ಭಾವನೆಗೆ ಕಾಂಗ್ರೆಸ್‌ ಧಕ್ಕೆ ತಂದಿರುವುದು ಅಕ್ಷಮ್ಯ ಅಪರಾಧ. ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕಿದ ಕಾಂಗ್ರೆಸಿಗರು ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗಬೇಕು ಎಂದು ಪ್ರಶ್ನಿಸುವ ಮೂಲಕ ಸಿಎಂ ಸಿದ್ದರಾಮಯ್ಯನವರು ಚಿಲ್ಲರೆ ರಾಜಕಾರಣ ಮಾಡಿ ಪ್ರಚಾರ ತೆಗೆದುಕೊಳ್ಳುವ ಪ್ರಯತ್ನ ನಡೆಸಿ ದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಒಡೆಯು ವುದರಲ್ಲಿ ಪರಿಣತ. ಸಮಾಜವನ್ನು ಜಾತಿವಾರು ಆಗಿ ಒಡೆದು ಮುಸ್ಲಿಂ ಮತಬ್ಯಾಂಕ್‌ನ ಇಡುಗಂಟು ಉಳಿಸಿಕೊಳ್ಳಲು ಹೊರಟಿದ್ದಾರೆ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರದ ವಿರುದ್ಧ ಬಿಜೆಪಿಗರು ಟ್ವಿಟರ್‌ನಲ್ಲಿ ಟೀಕೆಯ ಸುರಿಮಳೆಗರೆದಿದ್ದು, ಬೆಂಗಳೂರು ಹೊರ ವಲಯದಲ್ಲಿ ನಡೆ ಯುತ್ತಿರುವ ಸಭೆಗೆ ಮುನ್ನ ಪಕ್ಷದ ಘಟಾನುಘಟಿ ನಾಯಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಬಿಜೆಪಿ-ಕಾಂಗ್ರೆಸ್‌ ಮಧ್ಯೆ “ರಾಮಾಶ್ವಮೇಧ’ ಸಮರ ನಡೆಯುವ ಸಾಧ್ಯತೆ ಇದೆ. ಬಿಜೆಪಿ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜ್ಯದ “ಕೈ’ ನಾಯಕರು, “ಚುನಾವಣೆ ಸಂದರ್ಭದಲ್ಲಿ ರಾಮಮಂದಿರ ಉದ್ಘಾಟನೆ ಮಾಡಲಾಗುತ್ತಿದೆ ಅನ್ನುವುದು ಪ್ರಪಂಚಕ್ಕೆ ಗೊತ್ತಿದೆ. ಇದು ಬಿಟ್ಟರೆ ಬೇರೆ ಅಜೆಂಡಾವೇ ಇಲ್ಲ’ ಎಂದು ವಾಗ್ಧಾಳಿ ನಡೆಸಿದ್ದಾರೆ.

ಕಾಂಗ್ರೆಸ್ಸಿಗರು ಹೇಳಿದ್ದೇನು?
ನಾವು ಶ್ರೀರಾಮಚಂದ್ರನ ವಿರೋಧಿಗಳಲ್ಲ
ರಾಮಮಂದಿರ ವಿಚಾರದಲ್ಲಿ ಪಕ್ಷದ ತೀರ್ಮಾನವೇ ನಮ್ಮದು. ರಾಮ ನನ್ನು ನಾವು ಗೌರವಿಸುತ್ತೇವೆ. ಪೂಜಿಸುತ್ತೇವೆ. ರಾಮ ಮಂದಿರವನ್ನೂ ಕಟ್ಟಿದ್ದೇವೆ. ಆದರೆ ದೇವರ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುವುದನ್ನು ವಿರೋಧಿಸುತ್ತೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

ಚುನಾವಣೆಯನ್ನು ದೃಷ್ಟಿ ಇಟ್ಟುಕೊಂಡು ತರಾತುರಿಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಬಿಜೆಪಿ ಮುಂದಾಗಿದೆ. ವಾಸ್ತವವಾಗಿ ಮಂದಿರದ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ವಿಷಯದಲ್ಲಿ ಪಕ್ಷ ಹೇಳಿದ ಹಾಗೆ ಕೇಳಬೇಕು. ಕೆಲವು ನಾಯಕರು ವೈಯಕ್ತಿವಾಗಿ ಹೇಳಿಕೆ ನೀಡುತ್ತಿದ್ದಾರೆ. ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ. ತೀರ್ಮಾನ ಅವರಿಗೆ ಬಿಟ್ಟಿದ್ದು.
-ಡಾ| ಪರಮೇಶ್ವರ್‌, ಗೃಹ ಸಚಿವ

ನಾನು ಸೇರಿದಂತೆ ರಾಮನ ಭಕ್ತರು ಬೇರೆ ಬೇರೆ ದೇವರನ್ನು ಇಷ್ಟಪಡುತ್ತಾರೆ. ರಾಮಮಂದಿರ ಉದ್ಘಾಟನೆ ಚುನಾವಣೆ ಸಂದರ್ಭದಲ್ಲಿ ಆಗುತ್ತದೆ ಅನ್ನುವುದು ಇಡೀ ಪ್ರಪಂಚಕ್ಕೆ ಗೊತ್ತಿತ್ತು. ಮಾಡುವವರು ಶಾಂತವಾಗಿ ಮಾಡಬೇಕಿತ್ತು. ಇಷ್ಟೆಲ್ಲ ಯಾಕೆ ಬೇಕಿತ್ತು? ಅಷ್ಟಕ್ಕೂ ರಾಜಕೀಯ ನಾಯಕರನ್ನು, ಜನರನ್ನು ಉದ್ಘಾಟನ ಕಾರ್ಯಕ್ರಮಕ್ಕೆ ಕರೆಯಲು ಇವರ್ಯಾರು?  -ಸಂತೋಷ್‌ ಲಾಡ್‌, ಕಾರ್ಮಿಕ ಸಚಿವ

ಬಿಜೆಪಿ ನಾಯಕರು ಹೇಳಿದ್ದೇನು?
ಇಷ್ಟು ದಿನಗಳ ಕಾಲ ಜಾತ್ಯತೀತ ಮುಖವಾಡ ಹಾಕಿಕೊಂಡಿದ್ದ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದೆ.ಕಾರ್ಯಕ್ರಮವನ್ನು ಬಹಿಷ್ಕರಿಸುವ ಮೂಲಕ ಯಾವ ಪಕ್ಷ ಮತೀಯವಾದಿ ಎಂಬುದು ಅರ್ಥವಾಗಿದೆ. ಮುಂದಿನ ದಿನಗಳಲ್ಲಿ ಜನ ಇವರಿಗೆ ಪಾಠ ಕಲಿಸುತ್ತಾರೆ.
-ಕೋಟ ಶ್ರೀನಿವಾಸ ಪೂಜಾರಿ,ವಿಧಾನ ಪರಿಷತ್‌ ವಿಪಕ್ಷ ನಾಯಕ.

ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗಬೇಕು ಎಂದು ಪ್ರಶ್ನಿಸುವ ಮೂಲಕ ಸಿಎಂ ಸಿದ್ದರಾಮಯ್ಯನವರು ಚಿಲ್ಲರೆ ರಾಜಕಾರಣ ಮಾಡಿ ಪ್ರಚಾರ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ನಿಮಗೆ ನಾವು ಕರೆದಿದ್ದೇವೆ, ಬರುವುದಾದರೆ ಬನ್ನಿ. ಯಾರಿಗೆ ಎಲ್ಲಿ ಶ್ರದ್ಧೆ ಇದೆಯೋ ಅಲ್ಲಿಗೆ ಹೋಗುತ್ತಾರೆ. ಬೇರೆಯವರು ಅವರವರ ದೇಗುಲಕ್ಕೆ ಹೋದಾಗ ಏಕೆ ಹೋದಿರಿ ಎಂದು ನಾವು ಕೇಳಿದ್ದೆವಾ?
-ಪ್ರಹ್ಲಾದ್‌ ಜೋಶಿ,ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ರಾಮ ಹಿಂದೂಗಳನ್ನು ಜೋಡಿಸುತ್ತಾನೆ. ಹಿಂದೂಗಳನ್ನು ಒಡೆಯಬೇಕೆಂಬ ಮನಃಸ್ಥಿತಿ ಹೊಂದಿರುವವರು ಸಿದ್ದರಾಮಯ್ಯನವರ ರೀತಿ ಮಾತನಾಡುತ್ತಾರೆ. ಅವರು ಒಡೆಯುವುದರಲ್ಲಿ ನಿಪುಣ. ಸಿದ್ದರಾಮಯ್ಯ ಜಾತಿವಾರು ಸಮಾಜವನ್ನು ಒಡೆದು ಮುಸ್ಲಿಂ ಮತಬ್ಯಾಂಕ್‌ನ ಇಡಗಂಟು ಉಳಿಸಿಕೊಳ್ಳಲು ಹೊರಟಿದ್ದಾರೆ.
-ಸಿ.ಟಿ. ರವಿ, ಮಾಜಿ ಸಚಿವ.

ರಾಮಮಂದಿರ ವಿಚಾರದಲ್ಲಿ ಇಷ್ಟು ದಿನಗಳ ಕಾಲ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದ ಸಿಎಂ ಈಗ ದೀಪಕ್ಕೆ ಅಡ್ಡಗೋಡೆ ಕಟ್ಟಿದ್ದಾರೆ. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ನೀವು ಈ ಮಟ್ಟಕ್ಕೆ ಗಾಂಧಿ ಕುಟುಂಬದ ಅಡಿಯಾಳಾಗುತ್ತೀರಿ ಎಂದು ಕನ್ನಡಿಗರು ನಿರೀಕ್ಷೆ ಮಾಡಿರಲಿಲ್ಲ.
-ವಿ. ಸುನಿಲ್‌ ಕುಮಾರ್‌,
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ.

Advertisement

Udayavani is now on Telegram. Click here to join our channel and stay updated with the latest news.

Next