Advertisement

ಮೂಲಸೌಲಭ್ಯಕ್ಕೆ ಒತ್ತಾಯಿಸಿ ಅಹೋರಾತ್ರಿ ಧರಣಿ

04:07 PM Mar 17, 2022 | Niyatha Bhat |

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಡಾ| ಬಿ.ಆರ್‌. ಅಂಬೇಡ್ಕರ್‌ ನಗರ (ಹಕ್ಕಿಪಿಕ್ಕಿ ಕಾಲೋನಿ) ಮಲ್ಲಿಗೇನಹಳ್ಳಿಯನ್ನು ಸ್ಲಂ ಎಂದು ಘೋಷಿಸಿ ಇಲ್ಲಿಯ ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ)ಯಿಂದ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಾಯಿತು.

Advertisement

ಮಲ್ಲಿಗೇನಹಳ್ಳಿಯ 9 ಎಕರೆ ಪ್ರದೇಶದಲ್ಲಿ ಅಲೆಮಾರಿ ಸಮುದಾಯಕ್ಕೆ ಸೇರಿದ ಪರಿಶಿಷ್ಟ ಪಂಗಡದ ಹಕ್ಕಿಪಿಕ್ಕಿ, ಪರಿಶಿಷ್ಟ ಜಾತಿಯ ಸಿಳ್ಳೇಕ್ಯಾತ ಮತ್ತು ಇತರೆ ದಲಿತ ಸಮುದಾಯದ 350 ಕ್ಕೂ ಹೆಚ್ಚು ಕುಟುಂಬಗಳು ಮನೆಕಟ್ಟಿಕೊಂಡು ಹತ್ತಾರು ವರ್ಷಗಳಿಂದ ವಾಸವಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಇವರು ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದಾರೆ. 150ಕ್ಕೂ ಹೆಚ್ಚು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಇಲ್ಲಿಯ ಪ್ರಜೆಗಳು ಮೂಲ ಸೌಲಭ್ಯವಿಲ್ಲದೇ ಪಶುಗಳಂತೆ ವಾಸಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರದೇಶವನ್ನು ಕೊಳೆಗೇರಿ ಎಂದು ಘೋಷಿಸಿ ಹಕ್ಕುಪತ್ರ ನೀಡಬೇಕು. ಪಾಲಿಕೆ ವತಿಯಿಂದ ಇವರಿಗೆ ಆಧಾರ್‌, ರೇಷನ್‌ ಕಾರ್ಡ್‌, ಮತದಾರರ ಚೀಟಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಅಗತ್ಯವಿರುವ ರಸ್ತೆ, ಚರಂಡಿ, ಬೀದಿದೀಪ, ಮನೆದೀಪ ವ್ಯವಸ್ಥೆಮಾಡಿಲ್ಲ. ಆದರೆ, ತಾತ್ಕಾಲಿಕ ವಿದ್ಯುತ್‌ ಮೀಟರ್‌ ಅಳವಡಿಸಿ ವಿದ್ಯುತ್‌ ಸಂಪರ್ಕ ನೀಡಿದ್ದು, ವಿದ್ಯುತ್‌ ಬಿಲ್‌ ಅನ್ನು ಪಾಲಿಕೆ ಪಾವತಿಸದ ಕಾರಣ ಲಕ್ಷಾಂತರ ಬಿಲ್‌ ಬಾಕಿ ಇದೆ ಎಂದು ವಿದ್ಯುತ್‌ ಕಡಿತಗೊಳಿಸಲಾಗಿದೆ ಕೂಡಲೇ ಇಲ್ಲಿ ಶಾಶ್ವತ ಬೀದಿದೀಪ, ಮನೆಗಳಿಗೆ ವಿದ್ಯುತ್‌ ಸಂಪರ್ಕ, ಹಕ್ಕುಪತ್ರ ಮತ್ತು ಮೂಲ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಸ್‌. ಹಾಲೇಶಪ್ಪ, ಜಿಲ್ಲಾ ಸಂಚಾಲಕ ಮಂಜುನಾಥ್‌, ಪ್ರಮುಖರಾದ ಶಿವಕುಮಾರ್‌, ಸೂಗುರು ಜಗ್ಗು ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next