Advertisement

ರಾಜ್‌ ಮೊಮ್ಮಗಳ ಸಿನಿಮಾ ಎಂಟ್ರಿ

12:50 PM Jun 04, 2019 | Lakshmi GovindaRaj |

ವರನಟ ಡಾ.ರಾಜಕುಮಾರ್‌ ಅವರದು ಕಲಾಕುಟುಂಬ. ಈಗಾಗಲೇ ಮಕ್ಕಳು, ಮೊಮ್ಮಕ್ಕಳು ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ್ದಾರೆ. ಈಗ ಅವರ ಮತ್ತೊಬ್ಬ ಮೊಮ್ಮಗಳು ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಹೌದು, ನಟ ರಾಮ್‌ಕುಮಾರ್‌ ಅವರ ಪುತ್ರಿ ಧನ್ಯಾರಾಮ್‌ಕುಮಾರ್‌ ಅವರು ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಒಂದೊಳ್ಳೆಯ ಕಥೆ ಮತ್ತು ಪಾತ್ರವನ್ನು ಹುಡುಕುತ್ತಿದ್ದ ಅವರಿಗೆ ಈಗ ಹೊಸ ಚಿತ್ರದ ಕಥೆ ಮತ್ತು ಪಾತ್ರ ಇಷ್ಟವಾಗಿ ನಟಿಸಲು ಒಪ್ಪಿದ್ದಾರೆ. ಆ ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಮಾಡಿಲ್ಲ. ಈ ಚಿತ್ರಕ್ಕೆ ಸೂರಜ್‌ಗೌಡ ಹೀರೋ. ಚಿತ್ರದ ವಿಶೇಷವೆಂದರೆ, ಸೂರಜ್‌ಗೌಡ ಅವರೇ ಚಿತ್ರದ ಕಥೆ ಬರೆದಿದ್ದಾರೆ. ಆ ಮೂಲಕ ಬರಹಗಾರರಾಗಿಯೂ ಸೂರಜ್‌ಗೌಡ ಗುರುತಿಸಿಕೊಂಡಂತಾಗಿದೆ.

ಇನ್ನು, ನಾಯಕರಾಗಿ ಅವರಿಗೆ ಇದು ನಾಲ್ಕನೆಯ ಚಿತ್ರ. ಚಿತ್ರವನ್ನು ಸುಮನ್‌ ಜಾದುಗಾರ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ಸಿಲಿಕಾನ್‌ ಸಿಟಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. “ಸಕ್ಕರೆ’ ಮತ್ತು ಕಮಲಹಾಸನ್‌ ಅವರ “ಉತ್ತಮ ವಿಲನ್‌’ ಚಿತ್ರಕ್ಕೂ ಕೆಲಸ ಮಾಡಿದ್ದರು. ಆ ಅನುಭವ ಈಗ ನಿರ್ದೇಶನಕ್ಕೆ ಇಳಿಸಿದೆ.

ತಮ್ಮ ಹೊಸ ಚಿತ್ರದ ಕುರಿತು ಮಾತನಾಡುವ ಸೂರಜ್‌ಗೌಡ, “ಇದೊಂದು ಬ್ಯೂಟಿಫ‌ುಲ್‌ ಲವ್‌ಸ್ಟೋರಿ ಹೊಂದಿರುವ ಚಿತ್ರ. ಕಂಪ್ಲೀಟ್‌ ಪ್ಯಾಕೇಜ್‌ ಇರುವಂತಹ ಚಿತ್ರ ಇದಾಗಲಿದೆ. ವಿನಾಕಾರಣ ಇಲ್ಲಿ ಬಿಲ್ಡಪ್ಸ್‌ಗಳಿಲ್ಲ. ಸಿನಿಮಾ ನೋಡಿದವರಿಗೆ ಇದು ಎಲ್ಲೋ ನೋಡಿದ, ಕೇಳಿದ ಲವ್‌ಸ್ಟೋರಿ ಎನಿಸುವಷ್ಟರ ಮಟ್ಟಿಗೆ ಚಿತ್ರ ಮೂಡಿಬರಲಿದೆ. ಇಲ್ಲಿ ನನ್ನದು ಲವ್ವರ್‌ ಬಾಯ್‌ ಪಾತ್ರ.

ಧನ್ಯಾರಾಮ್‌ಕುಮಾರ್‌ ಅವರ ಮೊದಲ ಚಿತ್ರವಿದು. ಇದಕ್ಕೂ ಮೊದಲು ಹಲವು ಕಥೆ ಕೇಳಿದ್ದರೂ, ಅವರಿಗೆ ಅದ್ಯಾವುದೂ ಇಷ್ಟವಾಗಿರಲಿಲ್ಲ. ಈ ಕಥೆ ಕೇಳಿದ ಕೂಡಲೇ ನಟಿಸಲು ಗ್ರೀನ್‌ಸಿಗ್ನಲ್‌ ಕೊಟ್ಟಿದ್ದಾರೆ. ಇನ್ನು, ಚಿತ್ರದಲ್ಲಿ ನನ್ನದು ಮೂರು ಶೇಡ್‌ ಇರುವ ಪಾತ್ರವಿದೆ’ ಎಂದು ವಿವರ ಕೊಡುತ್ತಾರೆ ಸೂರಜ್‌ಗೌಡ. ಚಿತ್ರವನ್ನು ವೈಟ್‌ ಅಂಡ್‌ ಗ್ರೇ ಮೀಡಿಯಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

Advertisement

ಈ ನಿರ್ಮಾಣ ಸಂಸ್ಥೆಗೆ ಚಿತ್ರರಂಗ ಹೊಸದಲ್ಲ. ಈಗಾಗಲೇ ಬಾಲಿವುಡ್‌ನ‌ ಹಲವು ಸಿನಿಮಾಗಳ ಮಾರುಕಟ್ಟೆ ಮಾಡಿದ ಅನುಭವ ಈ ಸಂಸ್ಥೆಗಿದೆ. ಚಿತ್ರಕ್ಕೆ ರಘುದೀಕ್ಷಿತ್‌ ಅವರು ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಮೂರು ಹಾಡುಗಳು ಮಾಂಟೇಜಸ್‌ನಲ್ಲೇ ಸಾಗುತ್ತವೆ. ಇನ್ನೊಂದು ಹಾಡನ್ನು ಹೊರಗಡೆ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ. “ಲೂಸಿಯಾ’, “ಯು ಟರ್ನ್’ ಚಿತ್ರಗಳಿಗೆ ಸಂಕಲನ ಮಾಡಿದ್ದ ಸುರೇಶ್‌ ಆರ್ಮುಗಂ ಅವರು ಚಿತ್ರಕ್ಕೆ ಸಂಕಲನ ಮಾಡುತ್ತಿದ್ದಾರೆ.

ಜುಲೈನಲ್ಲಿ ಚಿತ್ರೀಕರಣ ಶುರುವಾಗಲಿದೆ. ಬಹುತೇಕ ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಪ್ರವೀಣ್‌ ಸಂಭಾಷಣೆ ಬರೆದಿದ್ದಾರೆ. ಎರಡು ಹಂತಗಳಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.

“ಮೊದಲಿನಿಂದಲೂ ಕಲಾವಿದೆಯಾಗಬೇಕು ಎನ್ನುವ ಕನಸು ಮನಸ್ಸಿನಲ್ಲಿತ್ತು. ಆ ಕನಸು ಈಗ ನನಸಾಗುತ್ತಿದೆ. ನಾನು ನಟಿಯಾಗಬೇಕು ಎಂದು ನಿರ್ಧರಿಸಿದಾಗಿನಿಂದ ಹಲವು ಚಿತ್ರಗಳಿಗೆ ಆಫ‌ರ್ ಬಂದಿದ್ದವು. ಅನೇಕ ಕಥೆಗಳನ್ನು ಕೇಳಿದ್ದೆ. ಆದರೆ ಯಾವ ಕಥೆ, ಪಾತ್ರ ನನಗೆ ಅಷ್ಟಾಗಿ ಇಷ್ಟವಾಗದ ಕಾರಣ, ಅಂಥ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಬಂದಿರುವ ಆಫ‌ರ್ನಲ್ಲಿ ಕಥೆ, ಪಾತ್ರಗಳು ಎಲ್ಲವೂ ಚೆನ್ನಾಗಿದೆ. ನನಗೆ ಇಷ್ಟವಾದ ಕಾರಣ, ಈ ಸಿನಿಮಾ ಮೂಲಕವೇ ನನ್ನ ಸಿನಿ ಕೆರಿಯರ್‌ ಶುರು ಮಾಡುತ್ತಿದ್ದೇನೆ. ಇದು ನನ್ನ ಮೊದಲ ಸಿನಿಮಾವಾಗಿರುವುದರಿಂದ, ಇದರ ಮೇಲೆ ನನಗೂ ಕುತೂಹಲ, ನಿರೀಕ್ಷೆ ಇದೆ. ತಮ್ಮ ಚೊಚ್ಚಲ ಚಿತ್ರದ ಪಾತ್ರ ಹೇಗಿರಬಹುದು ಎಂಬ ಗುಟ್ಟನ್ನು ಈಗಲೇ ಬಿಟ್ಟುಕೊಡಲ್ಲ. ನಾನು ಹೇಗೆ ಕಾಣುತ್ತೇನೆ ಎನ್ನುವುದನ್ನು ತೆರೆ ಮೇಲೆ ನೋಡಬೇಕು’.
-ಧನ್ಯಾ ರಾಮ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next