ನಂಜನಗೂಡು: ಮನುಷ್ಯನಿಗೆ ದೊರೆಯುವ ಸಂಸ್ಕಾರದಿಂದ ಆತನ ಬದಲಾವಣೆ ಸಾಧ್ಯ ಎಂದು ಸುತ್ತೂರು ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ತಿಳಿಸಿದರು.
ಸುಕ್ಷೇತ್ರ ಮಲ್ಲನಮೂಲೆ ಮಠದಲ್ಲಿ ಭಾನುವಾರ ಆಯೋಜಿಸಿದ್ದ ರಾಜೇಂದ್ರ ಶ್ರೀಗಳ 105ನೇ ಜಯಂತಿ ಮಹೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಶಿವಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜೇಂದ್ರ ಶ್ರೀಗಳು ಅಂತಃಶಕ್ತಿಯೇ ಇಂದು ನಮ್ಮೆಲ್ಲರನ್ನು ಇಂತಹ ಗುರುತರವಾದ ಸ್ಥಾನಕ್ಕೇರಿಸಿದೆ ಎಂದು ಸ್ಮರಿಸಿದ ಅವರು, ಪ್ರತಿಯೊಬ್ಬನಿಗೂ ವಿವೇಕಯುಕ್ತವಾದ ಸಂಸ್ಕಾರ ನೀಡಿದಾಗ ಮಾತ್ರ ಅತನಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ನೀವೆಲ್ಲರೂ ಪ್ರತಿಭಾವಂತರಾಗಿದ್ದು,ನಿಮ್ಮಲ್ಲಿರುವಕೀಳರಿಮೆಯನ್ನು ಬಿಟ್ಟು ಹೊರಬಂದಾಗ ನಿಮ್ಮಲ್ಲಿನ ಪ್ರತಿಭೆಅನಾವರಣಗೊಳ್ಳುತ್ತದೆ. ಎಲ್ಲರೂ ಏಕಾಗ್ರತೆಯನ್ನು ರೋಢಿಸಿಕೊಳ್ಳಿ, ಆಗ ನಿಮ್ಮ ಸಾಧನೆ ಅಮೋಘವಾಗಿರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ಅನ್ನ ಅರಿವು ಅನುಭಾವವನ್ನು ಎಲ್ಲರಿಗೂ ಹಂಚುವ ವಿಶಾಲಹೃದಯ ರಾಜೇಂದ್ರ ಶ್ರೀಗಳದ್ದಾಗಿತ್ತು ಎಂದರು. ನೀವು ಉಪಯೋಗಿಸುವ ಮೊಬೈಲ್ ನಿಮ್ಮ ಹೆತ್ತವರ ಕನಸನ್ನು ನುಚ್ಚು ಮಾಡದಿರಲಿ ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು. ತ್ರಿವೇಣಿ ಸಂಗಮ: ಸಾಹಿತಿ ಮಲೆಯೂರು ಗುರುಸ್ವಾಮಿ ಮಾತನಾಡಿ, ಸುತ್ತೂರು, ದೇವ ನೂರು ಹಾಗೂ ಮಲ್ಲನಮೂಲೆ ಮಠಗಳು ನಮ್ಮ ತ್ರಿವೇಣಿ ಸಂಗಮಗಳು. 1680ರಲ್ಲಿ ರೈತ ದಂಗೆಯಲ್ಲೇ ಶ್ರೀಮಠ ರೈತರ ಪರವಾಗಿನಿಂತಿದ್ದನ್ನು ಸ್ಮರಿಸಿ, ಸಮಾಜದ ವಿಸ್ತೀರ್ಣಜ್ಞಾನದಿಂದಾಗಬೇಕು, ಸಂಖ್ಯೆಯಿಂದ ಅಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ತಾಲೂಕಿನ 313ಮಂದಿಗೆ ಶಿವದೀಕ್ಷೆ ನೀಡಲಾಯಿತು. ಈ ಸಂದರ್ಭದಲ್ಲಿ ಮಲ್ಲನಮೂಲೆ, ವಾಟಾಳು, ಕುಂದೂರು, ಬೆಟ್ಟದಪುರ, ಹರವೆ, ದಂಡಿನಕರೆ, ಮುಡಿಗುಂಡ, ರಾಮಾಪುರ, ಮಾದಾಪುರ ಮಠಾಧೀಶರು ಉಪಸ್ಥಿತರಿದ್ದರು. ಮುಡಿಗುಂಡ ಮಠಾಧ್ಯಕ್ಷರಾದ ಶ್ರೀಕಂಠಸ್ವಾಮಿ ಣಗಳು ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾರಂಭಕ್ಕೆ ಸರ್ಪಭೂಷಣ ಸ್ವಾಮಿಗಳು ಸ್ವಾಗತಿಸಿದರೆ, ಶಿರಮಳ್ಳಿಯ ಮುರುಗಿ ಸ್ವಾಮಿಗಳು ವಂದಿಸಿದರು.