Advertisement

ಕಂಠೀರವ ಸ್ಟುಡಿಯೋದಲ್ಲಿ ರಾಜ್‌ ಹಬ್ಬ

04:48 PM Apr 24, 2018 | Team Udayavani |

ಅಲ್ಲಿ ಎತ್ತ ನೋಡಿದರೂ ಹಬ್ಬದ ಸಂಭ್ರಮ. ರಾರಾಜಿಸುತ್ತಿದ್ದ ಭಾವಚಿತ್ರಗಳು, ಸಾಲುಗಟ್ಟಿದ್ದ ಜನಜಂಗುಳಿ. ಮುಗಿಲು ಮುಟ್ಟಿದ್ದ ಜೈಕಾರ, ಕೈಯಲ್ಲಿ ತರಹೇವಾರಿ ಹೂವು, ಹಾರಗಳು, ಇವೆಲ್ಲದರ ಜತೆಗೆ ಕಣ್ತುಂಬಿಕೊಂಡ ಮನಸುಗಳು…

Advertisement

ಇದೆಲ್ಲಾ ಕಂಡು ಬಂದದ್ದು ಕಂಠೀರವ ಸ್ಟುಡಿಯೋದಲ್ಲಿ. ಏಪ್ರಿಲ್‌ 24 ಅಂದರೆ, ಅದು ಡಾ.ರಾಜಕುಮಾರ್‌ ಅವರ ಅಭಿಮಾನಿಗಳ ಪಾಲಿಗೆ ನಾಡ ಹಬ್ಬವಿದ್ದಂತೆ. ಮಂಗಳವಾರ ನಡೆದ ವರನಟ ಡಾ.ರಾಜಕುಮಾರ್‌ ಅವರ 90ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳದ್ದೇ ಕಾರುಬಾರು.

ಹಾಗಾಗಿ, ಅವರ ಸಮ್ಮುಖದಲ್ಲೇ ಸ್ಮಾರಕ ಬಳಿ, ಡಾ.ರಾಜಕುಮಾರ್‌ ಕುಟುಂಬ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನ್ಮದಿನ ಆಚರಿಸಿತು. ಬೆಳಗ್ಗೆ ಡಾ. ರಾಜಕುಮಾರ್‌ ಅವರ ಸ್ಮಾರಕ ಬಳಿ ಆಗಮಿಸಿದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜಕುಮಾರ್‌ ಹಾಗೂ ಕುಟುಂಬ ವರ್ಗ ರಾಜಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿತು.

ನಂತರ ಜ್ಯೋತಿ ಬೆಳಗಿಸಿ ನಮಿಸಿದರು. ಈ ವೇಳೆ ಎಸ್‌.ಎ. ಗೋವಿಂದರಾಜು, ಲಕ್ಷ್ಮೀ, ಸಾಹಿತಿ ಬರಗೂರು ರಾಮಚಂದ್ರಪ್ಪ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಟ ಬಾಲರಾಜು, ನಿರ್ಮಾಪಕ ಕೆ.ಪಿ. ಶ್ರೀಕಾಂತ್‌, ವಾಸು, ಬಾಲರಾಜ್‌, ರಘುರಾಮ್‌ ಸೇರಿದಂತೆ ಅನೇಕರು ಹಾಜರಿದ್ದು, ರಾಜ್‌ ಸ್ಮಾರಕಕ್ಕೆ ನಮನ ಸಲ್ಲಿಸಿದರು.

ಪಕ್ಕದ್ದಲ್ಲೇ ಇದ್ದ ಪಾರ್ವತಮ್ಮ ರಾಜಕುಮಾರ್‌ ಸಮಾಧಿಗೂ ಈ ವೇಳೆ ಪೂಜೆ ಸಲ್ಲಿಸಲಾಯಿತು. ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಇರುವುದರಿಂದ ಈ ವೇಳೆ ಅನ್ನಸಂತರ್ಪಣೆ ಕಾರ್ಯಕ್ರಮ ಇರಲಿಲ್ಲ. ಆದರೆ, ಪ್ರತಿ ವರ್ಷದಂತೆ ಈ ವರ್ಷವೂ ರಾಜ್‌ ಕುಟುಂಬ, ಆಗಮಿಸಿದ್ದ ಸಾವಿರಾರು ಅಭಿಮಾನಿಗಳಿಗೆ ಸಿಹಿ ವಿತರಿಸಿತು.

Advertisement

ಸಿಹಿ ಸ್ವೀಕರಿಸಿದ ಅಭಿಮಾನಿಗಳು, ರಾಜಕುಮಾರ್‌ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಜೈಕಾರ ಹಾಕಿದ್ದಲ್ಲದೆ, ಕೆಲವರು ಅಣ್ಣಾವ್ರ ಫೋಟೋ ಹಿಡಿದು, ಸ್ಮಾರಕದ ಎದುರು ನಮಸ್ಕರಿಸಿದರು. ಈ ವೇಳೆ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರುಗಳು ಮತ್ತು ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಅಣ್ಣಾವ್ರ ಆಶೀರ್ವಾದ ಪಡೆದ ವಧು-ವರ: ಈ ಬಾರಿಯ ರಾಜಕುಮಾರ್‌ ಹುಟ್ಟುಹಬ್ಬದಲ್ಲಿ ಒಂದು ವಿಶೇಷವಿತ್ತು. ಮದುವೆಗೆ ತಯಾರಾಗಿದ್ದ ನವ ವಧು-ವರ ಇಬ್ಬರು ಕಲ್ಯಾಣ ಮಂಟಪಕ್ಕೆ ಹೋಗುವ ಮುನ್ನ, ಕಂಠೀರವ ಸ್ಟುಡಿಯೋಗೆ ಆಗಮಿಸಿ, ಡಾ.ರಾಜಕುಮಾರ್‌ ಸಮಾಧಿಗೆ ನಮಸ್ಕರಿಸಿ, ಅಣ್ಣಾವ್ರ ಆಶೀರ್ವಾದ ಪಡೆದರು.  

ಈ ವೇಳೆ, ಶಿವರಾಜಕುಮಾರ್‌ ಕೂಡ ನೂತನ ವಧು-ವರರಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಇನ್ನು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಮಂಗಳವಾರ ಬೆಳಗ್ಗೆ ಡಾ.ರಾಜಕುಮಾರ್‌ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಮಂಡಳಿಯ ಎದುರು ಇರುವ ರಾಜ್‌ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು. ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು. ರಾಜಕುಮಾರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಚಿತ್ರಕ್ಕೆ ಮುಹೂರ್ತವೂ ನೆರವೇರಿತು.

ಈ ಚಿತ್ರವನ್ನು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸುತ್ತಿದ್ದಾರೆ. ಇದೇ ದಿನ ವಿನಯರಾಜಕುಮಾರ್‌ ಅವರ “ಅಪ್ಪ ಅಮ್ಮ ಪ್ರೀತಿ’ ಎಂಬ ಹೊಸ ಚಿತ್ರಕ್ಕೂ ಮುಹೂರ್ತ ನೆರವೇರಿತು. ಈ ಚಿತ್ರಕ್ಕೆ ಶ್ರೀಧರ್‌ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next