Advertisement

ಮಳೆನೀರು ಮಾತಾಡಿದೆ, ಕೇಳಿಸಿಕೊಳ್ಳಿ…

12:26 PM Oct 21, 2017 | |

ಕಾಲುವೆಯ ಜಾಗ ಎಂದು ತಿಳಿದಮೇಲೂ ಅಲ್ಲಿ ಮನೆ ಕಟ್ಟಿಕೊಂಡರೆ ಅದು ನನ್ನ ತಪ್ಪಾ? ಹರಿದುಹೋಗಲು ಜಾಗ ಇಲ್ಲವಾದಾಗ ಅದೇ ನೀರು ರಸ್ತೆಗೆ ನುಗ್ಗಿ ಅಲ್ಲಿ ಹೊಂಡಗಳಾದರೆ ಅದು ನನ್ನ ತಪ್ಪಾ? ನಿಮ್ಮ ಮನೆಯ ಪಕ್ಕದ ಜಾಗವನ್ನೋ, ನಿಮ್ಮ ಜಮೀನಿನ ಒಂದು ಭಾಗವನ್ನೋ ಮತ್ತೂಬ್ಬರು ಆಕ್ರಮಿಸಿಕೊಂಡರೆ ಏನು ಮಾಡ್ತೀರಿ ಹೇಳಿ? 

Advertisement

ಪ್ರೀತಿಯ ಬೆಂಗಳೂರಿಗರೆ, 
ಪಟಾಕಿ ಹೊಡೆದು ಬಂದ ಖುಷಿ ನಿಮ್ಮ ಕಂಗಳಲ್ಲಿ ಎದ್ದು ಕಾಣುತ್ತಿದೆ. “ಸದ್ಯ ಹಬ್ಬದ ದಿನ ಮಳೆ ಬರಲಿಲ್ಲ. ವಾರದ ಹಿಂದೆ ಸುರಿಯಿತಲ್ಲ, ಅಂಥ ಮಳೆ ಹಬ್ಬದ ದಿನವೇನಾದ್ರೂ ಬಂದಿದ್ರೆ ಹಬ್ಬದ ಖುಷಿಯೆಲ್ಲಾ ಹೋಗಿಬಿಡ್ತಿತ್ತು. ಪುಣ್ಯಕ್ಕೆ ಹಾಗೇನೂ ಆಗಲಿಲ್ಲ…’ ಎಂದೆಲ್ಲಾ ಮಾತಾಡಿಕೊಳ್ಳುತ್ತಿದ್ದೀರಿ. ಉಹುಂ, ನೀವು ಅಷ್ಟಕ್ಕೇ ಸುಮ್ಮನಾಗುತ್ತಿಲ್ಲ. “ಹಾಳಾದ ಮಳೆ ಇಡೀ ವಾರ ಸುರೀತು. ಅನ್ಯಾಯವಾಗಿ 12 ಜನರನ್ನು ಬಲಿ ತಗೊಳ್ತು. ರಸ್ತೆಗಳಲ್ಲಿ ನೀರು ನದಿಯಂತೆ ಹರೀತು.

ಚರಂಡಿಗಳು, ರಾಜಾಕಾಲುವೆಗಳು ಉಕ್ಕಿ ಹರಿದವು. ಮನೆಗಳಿಗೆ ಮಾತ್ರವಲ್ಲ, ದೇವಾಲಯಗಳಿಗೂ ನೀರು ನುಗ್ಗಿತು. ಈ ದರಿದ್ರ ಮಳೆಯಿಂದ ಸಾವಿರಾರು ಜನರ ನೆಮ್ಮದಿಯೇ ಹಾಳಾಗಿಹೋಯ್ತು. ಸುರಿಯಲೇಬೇಕು ಅಂತಿದ್ರೆ ಸಿಟಿಯಿಂದ ಆಚೆಗಿರುವ ಹಳ್ಳಿಗಳಲ್ಲಿ ಸುರಿಯಲಿ, ಯಾವನು ಬ್ಯಾಡ ಅಂತಾನ್ರೀ…ಈ ಬೆಂಗಳೂರಲ್ಲಿ ಮಳೆ ಆಗದಿದ್ರೂ ಬದುಕು ನಡೆಯುತ್ತೆ. ಇದೆಲ್ಲಾ ಆ ಮಳೆಗೆ ಗೊತ್ತಾಗೋದು ಹೇಗ್ರೀ….’ಎಂದೆಲ್ಲಾ ಮಾತಾಡುತ್ತಿದ್ದೀರಿ. ಆ ಮೂಲಕ ನಿಮ್ಮ ಮೂಗಿನ ನೇರಕ್ಕೆ ವಾದ ಮಂಡಿಸ್ತಾ ಇದೀರ. ಈಗ ನನ್ನವೊಂದಿಷ್ಟು ಮಾತುಗಳಿವೆ, ಕೇಳಿಸಿಕೊಳ್ಳಿ. 

ಒಂದು ಊರು, ಒಂದು ಪ್ರದೇಶವನ್ನಷ್ಟೇ ಗುರಿ ಮಾಡಿಕೊಂಡು ನಾನು ಯಾವತ್ತೂ ಹರಿಯುವುದಿಲ್ಲ. ಮಳೆಯಾಗುವುದು ಪ್ರಕೃತಿ ನಿಯಮ. ಆಕಾಶದಿಂದ ಮಳೆ ಸುರಿಸುವುದು ಮಾತ್ರವಲ್ಲ, ಇಳೆಗೆ ಬಿದ್ದ ನೀರು ಹೇಗೆ, ಯಾವ ಮಾರ್ಗದಲ್ಲಿ ಹರಿಯಬೇಕು ಎಂಬುದನ್ನೂ ಪ್ರಕೃತಿ ಮೊದಲೇ ನಿರ್ಧರಿಸಿರುತ್ತದೆ ಅರ್ಥವಾಯ್ತಾ? ಇನ್ಮುಂದೆ ನಾನು ಹೇಳುವ ಮಾತುಗಳನ್ನು ಇನ್ನಷ್ಟು ಹುಷಾರಾಗಿ ಕೇಳಿಸಿಕೊಳ್ಳಿ. ಬೆಂಗಳೂರು ನಿರ್ಮಾಣ ಆಯಿತಲ್ಲ?

ಆಗ ಮಳೆ ನೀರು ಹರಿದುಹೋಗಲೆಂದು ಚರಂಡಿಗಳನ್ನು, ಕಾಲುವೆಗಳನ್ನು ನಿರ್ಮಿಸಿದ್ದರು. ಅಲ್ಲಿಂದ ಹರಿದ ನೀರು ನೇರವಾಗಿ ಕೆರೆಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದರು. ಕೆರೆಗಳು ಕೋಡಿ ಬಿದ್ದರೆ ಅಲ್ಲಿನ ನೀರು ಹರಿದುಹೋಗಿ ದೊಡ್ಡ ನದಿಯೊಂದನ್ನು ಕೂಡಿಕೊಳ್ಳಲು ಅನುಕೂಲವಾಗುವಂತೆ, ಹೆದ್ದಾರಿಗಳಷ್ಟೇ ವಿಶಾಲವಾಗಿದ್ದ ರಾಜಾಕಾಲುವೆಗಳನ್ನು ನಿರ್ಮಿಸಿದ್ದರು. ಆ ದಿನಗಳಲ್ಲೂ ಭಾರೀ ಮಳೆಯಾಗುತ್ತಿತ್ತು. ನನ್ನ ಪಾಡಿಗೆ ನಾನು ಹರಿಯುತ್ತಿದ್ದೆ. ಕಾಲುವೆ ಹಾಗೂ ಚರಂಡಿಯ ನೀರು ತಿಳಿಯಾಗಿತ್ತು.

Advertisement

ಶುಚಿಯಾಗೂ ಇರುತ್ತಿತ್ತು. ಅದು, ಕೃಷಿ ಚಟುವಟಿಕೆಗೆ ಬಳಕೆಯಾಗುತ್ತಿತ್ತು. ಕೆರೆಗಳಲ್ಲಿ ವರ್ಷವಿಡೀ ನೀರಿರುತ್ತಿತ್ತು. ಕಾಲುವೆಗಳು ಯಾವ ಸಂದರ್ಭದಲ್ಲೂ ಒಣಗದೇ ಇದ್ದುದರಿಂದ ಭೂಮಿಯಲ್ಲಿ ಅಂತರ್ಜಲದ ಮಟ್ಟ ಚೆನ್ನಾಗಿತ್ತು. ಕೃಷಿ ಚಟುವಟಿಕೆಗೆ ಅಥವಾ ಮನೆಯಲ್ಲಿನ ಉಪಯೋಗಕ್ಕೆ ಎಲ್ಲಿಯಾದರೂ ಬೋರ್‌ವೆಲ್‌ ತೋಡಿಸಿದರೆ, ಕೆಲವೇ ಅಡಿಗಳಲ್ಲಿ ಸಿಹಿನೀರು ಸಿಗುತ್ತಿತ್ತು. ಜಾನುವಾರುಗಳು ಕಾಲುವೆಯ ನೀರು ಕುಡಿದೇ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು!

ಇದೆಲ್ಲಾ 25 ವರ್ಷಗಳ ಹಿಂದೆ ಇದ್ದ ಬೆಂಗಳೂರಿನ ಸ್ಥಿತಿ… ಆನಂತರದಲ್ಲಿ ಏನೇನೆಲ್ಲಾ ಆಗಿಹೋಯ್ತು ಗೊತ್ತಾ?

ಬೆಂಗಳೂರಿನ ಜನ ದುರಾಸೆಗೆ ಬಿದ್ದರು. ಮೊದಲಿಗೆ, ಮನೆಯ ಪಕ್ಕದಲ್ಲೇ ಇದ್ದ ಚರಂಡಿಯ ಜಾಗವನ್ನು ಆಕ್ರಮಿಸಿಕೊಂಡರು. ಅಲ್ಲಿ ಒಂದಷ್ಟು ಅಂಗಡಿಗಳನ್ನು ತೆರೆದರು. ಆನಂತರದಲ್ಲಿ ಕಾಲುವೆಗಳ ಅಂಚಿನಲ್ಲಿ ಚಿಕ್ಕದೊಂದು ಮನೆ ಕಟ್ಟಿಸಿದರು. ಆ ಮೂಲಕ ಕಾಲುವೆಯ ವಿಸ್ತಾರವನ್ನೂ ಚಿಕ್ಕದು ಮಾಡಿದರು. ಆನಂತರದಲ್ಲಿ ಹಲವರ ಕಣ್ಣು ಕೆರೆಗಳ ಮೇಲೆ ಬಿತ್ತು. ಬೇಸಿಗೆಯಲ್ಲಿ ಕೆರೆ ಒಣಗುವುದನ್ನೇ ಕಾಯುತ್ತಿದ್ದು, ತರಾತುರಿಯಲ್ಲಿ ಅದನ್ನು ಲೋಡ್‌ಗಟ್ಟಲೆ ಮಣ್ಣಿನಿಂದ ಸಮತಟ್ಟು ಮಾಡಿಸಿ ಕೆರೆಯನ್ನೇ ಮಾಯ ಮಾಡಿಬಿಟ್ಟರು.

ಮತ್ತೆ ಕೆಲವರು ಆ ಕಷ್ಟವನ್ನೂ ತೆಗೆದುಕೊಳ್ಳಲಿಲ್ಲ. ತಗ್ಗು ಪ್ರದೇಶದಲ್ಲಿಯೇ ಮತ್ತೂಂದು ದೊಡ್ಡ ಹೊಂಡ ನಿರ್ಮಿಸಿ, ಅದರೊಳಗೆ ಕಬ್ಬಿಣದ ಸರಳುಗಳನ್ನು ನೆಟ್ಟು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿಬಿಟ್ಟರು. ಹೀಗಿರುವಾಗಲೇ ಕೆಲವರ ಕಣ್ಣು ತುಂಬ ವಿಸ್ತಾರದಿಂದ ಕೂಡಿದ್ದ ರಾಜಾಕಾಲುವೆಗಳ ಮೇಲೆ ಬಿತ್ತು. ಚರಂಡಿ ನೀರು ಹರಿಯೋಕೆ ಅಷ್ಟೊಂದು ಜಾಗ ಏಕೆ ಎಂದೇ ಯೋಚಿಸಿದ ಅವರೆಲ್ಲ ಆ ಜಾಗವನ್ನೂ ಆಕ್ರಮಿಸಿಕೊಂಡು ಬಂಗಲೆಗಳನ್ನು ಎಬ್ಬಿಸಿಬಿಟ್ಟರು.

ಅಕಸ್ಮಾತ್‌ ಮಳೆ ಬಂದರೆ ತೊಂದರೆ ಆಗದಿರಲಿ ಎಂದು ಕಾಂಪೌಂಡ್‌ಗಳನ್ನೂ ನಿರ್ಮಿಸಿಕೊಂಡರು. ಬೆಂಗಳೂರಲ್ಲಿರುವ ಜನರ ಕೆಟ್ಟ ಕೆಲಸಗಳು ಇಷ್ಟಕ್ಕೇ ನಿಲ್ಲಲಿಲ್ಲ. ಮನೆ ಕಟ್ಟುವಾಗ ಉಳಿದ ವಸ್ತುಗಳನ್ನೆಲ್ಲ ತಂದು ಚರಂಡಿಗೆ/ ಕಾಲುವೆಗೆ ಹಾಕಿಬಿಟ್ಟರು. ಈ ವೇಳೆಗೆ ಬೆಂಗಳೂರಿನ ನಾಲ್ಕು ದಿಕ್ಕಿನಲ್ಲೂ ಫ್ಯಾಕ್ಟರಿಗಳು ಶುರುವಾಗಿದ್ದವಲ್ಲ, ಅಲ್ಲಿನ ರಾಸಾಯನಯುಕ್ತ ವಿಷದ ನೀರೂ ನನ್ನ ಒಡಲು ಸೇರಿತು. ದುರಾಸೆಯೆಂಬುದು ಜನರನ್ನು ಹೇಗೆಲ್ಲಾ ಬದಲಿಸಿತ್ತು ಅಂದರೆ, ಮಣ್ಣಿನಲ್ಲಿ ಕೊಳೆತು ನಂತರ ಗೊಬ್ಬರ ಆಗಬೇಕಿದ್ದ ವಸ್ತುಗಳು ಹಾಗೂ ಸತ್ತ ಪ್ರಾಣಿಗಳ ದೇಹಕ್ಕೂ ಚರಂಡಿ ಹಾಗೂ ರಾಜಾ ಕಾಲುವೆಯೇ ಜಾಗ ನೀಡಬೇಕಾಗಿ ಬಂತು. 

ಇವೆಲ್ಲದರ ಪರಿಣಾಮವಾಗಿ, ಚರಂಡಿ ಹಾಗೂ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿತು. ರಾಜಾಕಾಲುವೆ ಕಿರಿದಾಯಿತು. ಇಷ್ಟಾದರೂ, ನಾವೆಲ್ಲಾ ತಪ್ಪು ಮಾಡುತ್ತಲೇ ಇದ್ದೇವೆ. ಇದರಿಂದ ಮುಂದೆ ಘೋರ ಪರಿಣಾಮ ಎದುರಾಗಬಹುದು ಎಂದು ಯಾರೊಬ್ಬರೂ ಯೋಚಿಸಲೇ ಇಲ್ಲ. ಹೀಗಿರುವಾಗಲೇ ಮಳೆಗಾಲ ಶುರುವಾಯಿತು. ಮೋಡಗಳು ತಮ್ಮಿಚ್ಛೆಯಂತೆ ಮಳೆ ಸುರಿಸಿದವು. ಈ ಹಿಂದೆ ನನಗೆಂದೇ ಮೀಸಲಾಗಿತ್ತಲ್ಲ, ಅದೇ ದಾರಿಯಲ್ಲಿ ನಾನು ಹರಿದುಬಂದೆ.

ಚರಂಡಿ ಹಾಗೂ ಕಾಲುವೆಗಳಲ್ಲಿ ಜಾಗವೇ ಕಿರಿದಾಗಿರುವಾಗ ನಾನಾದರೂ ಏನು ಮಾಡಲಿ? ಈ ಮೊದಲು ನನ್ನದಾಗಿತ್ತಲ್ಲ, ಅದೇ ಜಾಗದಲ್ಲಿ ಹರಿದುಹೋದೆ. ಹೇಳಿ, ಕಾಲುವೆಯ ಜಾಗ ಎಂದು ತಿಳಿದಮೇಲೂ ಅಲ್ಲಿ ಮನೆ ಕಟ್ಟಿಕೊಂಡರೆ ಅದು ನನ್ನ ತಪ್ಪಾ? ಹರಿದುಹೋಗಲು ಜಾಗ ಇಲ್ಲವಾದಾಗ ಅದೇ ನೀರು ರಸ್ತೆಗೆ ನುಗ್ಗಿ ಅಲ್ಲಿ ಹೊಂಡಗಳಾದರೆ, ಅದರಿಂದ ಬಗೆಬಗೆಯ ಅನಾಹುತಗಳಾದರೆ ಅದು ನನ್ನ ತಪ್ಪಾ?

ನಿಮ್ಮ ಮನೆಯ ಪಕ್ಕದ ಜಾಗವನ್ನೋ, ನಿಮ್ಮ ಜಮೀನಿನ ಒಂದು ಭಾಗವನ್ನೋ ಮತ್ತೂಬ್ಬರು ಆಕ್ರಮಿಸಿಕೊಂಡರೆ ಏನು ಮಾಡ್ತೀರಿ ಹೇಳಿ? ಹೊಡೆದಾಟ ಮಾಡಿಯಾದ್ರೂ ಅದನ್ನು ಪಡ್ಕೊàತೀರಿ ತಾನೇ? ಈಗ ನಾನು ಮಾಡಿರೋದೂ ಅಷ್ಟೇ. ನನ್ನ ಜಾಗದಲ್ಲಿ ನಾನು ಹರೀತಾ ಇದೀನಿ. ಇದರಲ್ಲಿ ತಪ್ಪೇನು ಬಂತು? ಈ ಮೊದಲು ಕಾಲುವೆಯ, ಕೆರೆಗಳ ನೀರು ತಿಳಿಯಾಗಿ ಇರುತ್ತಿತ್ತು. ದನ-ಕರುಗಳು ನೀರು ಕುಡಿಯಲು, ಮಕ್ಕಳು ಈಜು ಕಲಿಯಲು ಬರುತ್ತಿದ್ದರು. ಆದರೆ ಈಗ, ಕಾರ್ಖಾನೆಯ ವಿಷವೆಲ್ಲಾ ಕೆರೆ-ಕಾಲುವೆಗೆ ಹರಿಯಲು ಬಿಟ್ಟು ತಿಳಿಯಾಗಿದ್ದ ನನ್ನನ್ನು ಕಲುಷಿತ ಮಾಡಿದಿರಿ. 

ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ನೀವು ಮಾಡಿರುವುದು/ ಮಾಡುತ್ತಿರುವುದು ಸರಿಯಾ? ನನ್ನ ಜಾಗವನ್ನೆಲ್ಲ ಅತಿಕ್ರಮಿಸಿದ್ದು ಮಾತ್ರವಲ್ಲದೆ, ನನ್ನನ್ನೇ ದೂರುವ, ನನಗೇ ಶಾಪ ಹಾಕುವ ಮಟ್ಟಕ್ಕೆ ಹೋಗಿದ್ದೀರಲ್ಲಾ…ಇದು ನ್ಯಾಯವಾ? ನೆನಪಿರಲಿ, ನೀರಿದ್ದರೆ ನೀವು…ಅಕಸ್ಮಾತ್‌ ಒಂದುವೇಳೆ ಬೆಂಗಳೂರಿನಲ್ಲಿ ಒಂದು ವರ್ಷ ಮಳೆಯೇ ಸುರಿಯದಿದ್ದರೆ ಪರಿಸ್ಥಿತಿ ಏನಾಗಬಹುದೋ ಯೋಚಿಸಿ. ಇನ್ನಾದರೂ ತಪ್ಪು ಸರಿಪಡಿಸಿಕೊಳ್ಳಿ. 

ಇಂತಿ ನಿಮ್ಮ…
ಮಳೆನೀರು

Advertisement

Udayavani is now on Telegram. Click here to join our channel and stay updated with the latest news.

Next