Advertisement

ಮಳೆ ನಾಡಾದ ಮೈಸೂರು ಜಿಲ್ಲೆ

09:35 PM Oct 23, 2019 | Team Udayavani |

ಮೈಸೂರು: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸಂಚಾರ ನಿರ್ಬಂಧ: ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳುವ ಚಾಮುಂಡಿಬೆಟ್ಟದಲ್ಲಿನ ರಸ್ತೆ ಬದಿಯ ತಡೆಗೋಡೆ ಕುಸಿತವಾಗಿರುವುದರಿಂದ ನಂದಿ ವಿಗ್ರಹದಿಂದ ಚಾಮುಂಡೇಶ್ವರಿ ದೇವಸ್ಥಾನದ ಕಡೆಗೆ ಸಾಗುವ ಮಾರ್ಗದಲ್ಲಿ 15 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಿ, ರಸ್ತೆಯನ್ನು ಬಂದ್‌ ಮಾಡಲಾಗಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಮಂಗಳವಾರ ಚಾಮುಂಡಿಬೆಟ್ಟದ ರಸ್ತೆಯ ತಡೆಗೋಡೆ ಕುಸಿತವಾಗಿದ್ದ ಸ್ಥಳಕ್ಕೆ ಬುಧವಾರ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸ್‌ ನಿಯೋಜನೆ: ಚಾಮುಂಡಿಬೆಟ್ಟದ ಡಾಲ್‌ಹೌಸ್‌ ವ್ಯೂ ಪಾಯಿಂಟ್‌ನಿಂದ ಬೃಹತ್‌ ನಂದಿ ವಿಗ್ರಹದ ಕಡೆಗೆ ತೆರಳುವ ಮಾರ್ಗದ ರಸ್ತೆಯಲ್ಲಿ ಸುಮಾರು 15 ಮೀಟರ್‌ ನಷ್ಟು ತಡೆಗೋಡೆ ಏಳು ಮೀಟರ್‌ನಷ್ಟು ಆಳಕ್ಕೆ ಕುಸಿದಿದೆ. ಸ್ಥಳದಲ್ಲಿ ಇಬ್ಬರು ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ರಾಜು, ಮರಳು ಮಿಶ್ರಿತ ಮಣ್ಣಿನಿಂದ ನಿರ್ಮಿಸಿದ್ದರಿಂದ ತಡೆಗೋಡೆ ಕುಸಿದಿದೆ. ರಸ್ತೆ ಸೇರಿದಂತೆ ತಡೆಗೋಡೆ ಕುಸಿದಿರುವುದರಿಂದ ಬೃಹತ್‌ ನಂದಿಗೆ ಬರುವ ಎರಡು ಮಾರ್ಗವನ್ನೂ ಬಂದ್‌ ಮಾಡಲಾಗಿದೆ.

ನಂದಿ ವಿಗ್ರಹಕ್ಕೆ ಹೋಗಲು ಬದಲಿ ಮಾರ್ಗಗಳ ತೆರಳಬಹುದು. ಪ್ರವಾಸಿಗರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು. ತಡೆಗೋಡೆ ಕುಸಿದಿರುವ ಜಾಗದಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದ್ದು, ಮುಂದಿನ ಐದು ದಿನಗಳಲ್ಲಿ ಉತ್ತಮ ಅಡಿಪಾಯದೊಂದಿಗೆ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗುವುದು ಎಂದರು.

Advertisement

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಶ್ರೀನಿವಾಸ್‌ ಮಾತನಾಡಿ, ಮುಂದಿನ 10-15 ದಿನಗಳಲ್ಲಿ ಕುಸಿದಿರುವ ರಸ್ತೆಯನ್ನು ಸುಸ್ಥಿತಿಗೆ ತರಲು ಪ್ರಯತ್ನಿಸುತ್ತೇವೆ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ತಡೆಗೋಡೆ ಕುಸಿದಿರುವ ಜಾಗದಲ್ಲಿ ತೇವಾಂಶ ಇರುವ ಕಾರಣ ಕೆಲ ದಿನಗಳ ಕಾಲ ಜಾಗರೂಕತೆಯಿಂದ ವಾಹನ ಸವಾರರು ಸಂಚರಿಸಬೇಕಾಗುತ್ತದೆ ಎಂದು ಹೇಳಿದರು.

ಝುಳು ಝುಳು ನಿನಾದ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿಬೆಟ್ಟದಲ್ಲಿ ಹಲವೆಡೆ ಸಣ್ಣಪುಟ್ಟ ಝರಿಗಳು ಸೃಷ್ಟಿಯಾಗಿದ್ದು, ಹೆಬ್ಬಂಡೆಗಳ ನಡುವಿನಿಂದ ಝುಳು ಝುಳು ನಿನಾದದೊಂದಿಗೆ ಹರಿಯುತ್ತಿರುವ ಹಾಲ್ನೊರೆಯಂತಹ ನೀರಿನ ಝರಿಗಳು ಬೆಟ್ಟಕ್ಕೆ ಬರುವ ಯಾತ್ರಿಗಳು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ದೇವಿಕೆರೆಯಿಂದ ದೊಡ್ಡ ಝರಿಯೊಂದು ಜಲಪಾತದ ರೀತಿಯಲ್ಲಿ ಚಾಮುಂಡಿಬೆಟ್ಟದ ಮೇಲಿಂದ ಹರಿದು ಬೆಟ್ಟದ ಕೆಳಗಿರುವ ತಾವರೆಕಟ್ಟೆಯನ್ನು ಸೇರುತ್ತಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಝರಿಗಳನ್ನು ಕಣ್ತುಂಬಿಕೊಳ್ಳುತ್ತಾ ಫೋಟೋ, ಸೆಲ್ಫಿ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ಸಂಭ್ರಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next