Advertisement

Rain; ಮಲೆನಾಡು, ಕರಾವಳಿಯ 6 ಜಿಲ್ಲೆಗಳಲ್ಲಿ ಮಳೆ ಇಳಿಮುಖ: ಕೊಂಕಣದ ಮಳೆಗೆ ಪ್ರವಾಹ ಭೀತಿ

12:59 AM Jul 21, 2024 | Team Udayavani |

ಬೆಂಗಳೂರು/ಚಿಕ್ಕೋಡಿ: ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಶನಿವಾರ ಮಳೆ ಪ್ರಮಾಣ ಇಳಿಮುಖವಾಗಿದೆ. ಆದರೆ ಮಹಾರಾಷ್ಟ್ರದ ಕೊಂಕಣ ಭಾಗದ ಮಹಾಬಲೇಶ್ವರ, ಕೊಯ್ನಾ, ನವಜಾ ಹಾಗೂ ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ರಾಜ್ಯದ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಪ್ರವಾಹ ಭೀತಿ ಎದುರಾಗಿದೆ.

Advertisement

ಕೃಷ್ಣಾ ನದಿಗೆ ಸುಮಾರು 81 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಮೂರೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ರಾಜ್ಯದ ಗಡಿ ಭಾಗದ ಚಿಕ್ಕೋಡಿ, ನಿಪ್ಪಾಣಿ, ರಾಯಭಾಗ ಭಾಗದಲ್ಲಿ ಮಳೆ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ 2 ಅಡಿಯಷ್ಟು ಏರಿಕೆಯಾದರೆ ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ 3 ಅಡಿಯಷ್ಟು ಹೆಚ್ಚಳವಾಗಿದೆ.

ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುವುದರಿಂದ ಚಿಕ್ಕೋಡಿ ಉಪವಿಭಾಗದ ಐದು ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 63 ಸಾವಿರ ಕ್ಯುಸೆಕ್‌ ನೀರು ಹರಿದುಬಂದರೆ, ದೂಧಗಂಗಾ ಮತ್ತು ವೇದಗಂಗಾ ನದಿಗೆ 19 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಒಟ್ಟು ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 81 ಸಾವಿರ ಕ್ಯುಸೆಕ್‌ ನೀರು ಹರಿದು ಬರಲಾರಂಭಿಸಿದೆ.

ಬಂಗಾಲಿ ಬಾಬಾ ದೇವಸ್ಥಾನಕ್ಕೆ ಜಲದಿಗ್ಬಂಧನ
ದೂಧಗಂಗಾ ನದಿಗೆ ಅಪಾರ ಪ್ರಮಾಣದ ನೀರು ಬರುತ್ತಿರುವ ಪರಿಣಾಮ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತಗೊಂಡಿದೆ. ದರ್ಶನಕ್ಕೆ ಭಕ್ತರು ಪರದಾಡುವಂತಾಗಿದೆ.

Advertisement

ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆ ಪ್ರಮಾಣ ತಗ್ಗಿದ್ದು ಜನರು ಉಸಿರಾಡುವಂತಾಗಿದೆ.

ಭಾರೀ ವಾಹನಗಳಿಗೆ ತಡೆ: ಗೋವಾಕ್ಕೆ ಸಾಗಣೆ ವ್ಯತ್ಯಯ
ಬೆಳಗಾವಿ: ಧಾರಾಕಾರ ಮಳೆಯಿಂದ ಚೋರ್ಲಾ ಘಾಟಿ ಮೂಲಕ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿ-ಜಾಂಬೋಟಿ ಮಾರ್ಗದ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಭಾರೀ ವಾಹನಗಳ ಸಂಚಾರ ತಡೆ ಹಿಡಿಯಲಾಗಿದೆ. ಹೀಗಾಗಿ ಗೋವಾಕ್ಕೆ ಹಾಲು-ಅಗತ್ಯ ವಸ್ತುಗಳ ಸಾಗಾಟದಲ್ಲಿ ವ್ಯತ್ಯಯವಾಗಿದೆ. ಗೋವಾಕ್ಕೆ ತರಕಾರಿ, ಹಾಲು, ಅಗತ್ಯ ವಸ್ತುಗಳು ಬೆಳಗಾವಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತವೆ. ಸುಮಾರು ಮೂರ್‍ನಾಲ್ಕು ದಿನಗಳಿಂದ ವಾಹನಗಳು ನಿಂತಲ್ಲೇ ಇವೆ.

ಸೊರಬ: ಪ್ರವಾಹಕ್ಕೆ ಸಿಲುಕಿ ವ್ಯಕ್ತಿ ಸಾವು
ಸೊರಬ: ಶಿವಮೊಗ್ಗ ಜಿಲ್ಲೆ ಸೊರಬದ ದಂಡಾವತಿ ನದಿಗೆ ಮೀನು ಹಿಡಿಯಲು ಹೋದ ವಡ್ಡಿಗೇರಿ ಗ್ರಾಮದ ಯಲ್ಲಪ್ಪ (50) ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಶುಕ್ರವಾರ ಘಟನೆ ಸಂಭವಿಸಿದ್ದು, ಶನಿವಾರ ಬೆಳಗ್ಗೆ ಅಗ್ನಿಶಾಮಕ ಸಿಬಂದಿ ಹಾಗೂ ಸೊರಬದ ಮುಳುಗು ತಜ್ಞ ಸರ್ದಾರ್‌ ಖಾನ್‌ ಸತತ ಮೂರು ತಾಸು ಶೋಧ ನಡೆಸಿ ಮೃತದೇಹವನ್ನು ಪತ್ತೆಹಚ್ಚಿದರು.

Advertisement

Udayavani is now on Telegram. Click here to join our channel and stay updated with the latest news.

Next