Advertisement

ಮೂಲ್ಕಿ ಸಿಎಸ್‌ಐ ಚರ್ಚ್‌ನ ಬಾಲಿಕಾಶ್ರಮದಲ್ಲಿ ಮಳೆಕೊಯ್ಲು

11:09 AM Jun 24, 2019 | keerthan |

ಮಹಾನಗರ: ಮೂಲ್ಕಿಯ ಸಿಎಸ್‌ಐ ಚರ್ಚ್‌ನ ಬಾಲಿಕಾಶ್ರಮದಲ್ಲಿ ಸುಮಾರು 100 ವರ್ಷಗಳ ಹಿಂದಿನ ಬಾವಿ ಇದ್ದು, ಕಳೆದ ವರ್ಷದ ವರೆಗೆ ನೀರಿನ ಸಮಸ್ಯೆ ಬರಲಿಲ್ಲ. ಆದರೆ, ಈ ವರ್ಷ ಮೇ ತಿಂಗಳಿನಲ್ಲಿ ಬಾವಿಯಲ್ಲಿ ನೀರು ಖಾಲಿಯಾಗಿ ಸಮಸ್ಯೆ ಉಂಟಾಗಿತ್ತು.

Advertisement

ಆಶ್ರಮದಲ್ಲಿ ಒಟ್ಟಾರೆ 70ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದು, ಶಾಲೆಗೆ ರಜಾ ಇದ್ದ ಕಾರಣ ಮನೆಗಳಿಗೆ ತೆರಳಿ ಜೂನ್‌ ವೇಳೆಗೆ ಆಶ್ರಮಕ್ಕೆ ಬರುವ ಸಮಯ ನೀರಿಗೆ ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆ ಪರಿಹರಿಸಲು ಚರ್ಚ್‌ನ ಸೂಪರ್‌ವೈಸಿಂಗ್‌ ವಾರ್ಡನ್‌ ಆಗಿದ್ದ ರೆ| ಶಶಿಕಲಾ ಅಂಚನ್‌ ಅವರು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸುವ ಬಗ್ಗೆ ಯೋಚಿಸಿದು.

ಅದರಂತೆಯೇ ರೇವುದಂಡ ಡಾ| ನಾನಾ ಸಾಹೆಬ್‌ ಧರ್ಮಾಧಿಕಾರಿ ಪ್ರತಿಷ್ಠಾನವು ಜಲ ಪುನರ್‌ಭರಣ ಎಂಬ ಕಾರ್ಯಕ್ರಮದಲ್ಲಿ ಅನೇಕ ಕಡೆಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡುಸುತ್ತಿದ್ದು, ಅವರನ್ನು ಸಂಪರ್ಕಿಸಿ ಶುಕ್ರವಾರ ಆಶ್ರಮದ ಬಾವಿಗೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಬಾವಿಯ ಬಳಿಯೇ ಪಿಲ್ಟರ್‌ ಅಳವಡಿಕೆ
ಆಶ್ರಮದ ಮೇಲ್ಛಾವಣಿಯಿಂದ ಬರುವ ಮಳೆ ನೀರನ್ನು ನೀರನ್ನು ಪೈಪ್‌ ಮುಖೇನ ಬಾವಿಗೆ ಬಿಡಲಾಗಿದೆ. ಬಾವಿಯ ಬಳಿಯೇ ಪಿಲ್ಟರ್‌ ಅಳವಡಿಸಲಾಗಿದ್ದು, ಇದರಲ್ಲಿ ಬಾಡ್ರಸ್‌ ಕಲ್ಲು, ಜಲ್ಲಿ, ಹೊಗೆ ಹಾಕಿ ಪಿಲ್ಟರ್‌ ಹಾಕಲಾಗಿದೆ. ಇದೀಗ ಶುದ್ಧ ಮಳೆ ನೀರು ಪೋಲಾಗುವ ಬದಲಾಗಿ ಬಾವಿಗೆ ಬೀಳುತ್ತಿದೆ.

ಮದುವೆ ಮನೆಯಲ್ಲಿ ಜಾಗೃತಿ
ಮದುವೆ ಸೇರಿದಂತೆ ಶುಭ ಸಮಾರಂಭಗಳು ಉಪಯುಕ್ತ ಮಾಹಿತಿ ನೀಡುವ ಕಾರ್ಯವಾಗಬೇಕು ಎಂಬ ಉದ್ದೇಶದಿಂದ ನರನ್ಸ್‌ ಸಮೂಹ ಸಂಸ್ಥೆಯ ಮಾಲಕ ರಾಮ ಭಟ್ ನಿಡ್ಲೆ ಮತ್ತು ಸರಸ್ವತಿ ರಾಮ್‌ ದಂಪತಿ ಮಗನ ಮದುವೆ ಸಮಾರಂಭದಲ್ಲಿ ‘ಮಳೆ ನೀರು ಕೊಯ್ಲು’ ವಿಷಯದ ಬಗ್ಗೆ ಜಾಗೃತಿ ನೀಡಲಾಯಿತು.

Advertisement

ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ರವಿವಾರ ಮಹೇಶ್‌ ಮತ್ತು ಸವಿತಾ ಅವರ ಮದುವೆ ನಡೆದಿದ್ದು, ಆಗಮಿಸಿದ ಮಂದಿ ಮಳೆನೀರು ಕೊಯ್ಲು ಮತ್ತು ಪರಿಸರ ಜಾಗೃತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದಾಗಿ ನಗರದಲ್ಲಿ ನೀರಿಗೆ ಹಾಹಾಕಾರವಿತ್ತು. ಹೀಗಿರುವಾಗ ಮಳೆ ನೀರನ್ನು ಸುಮ್ಮನೆ ಪೋಲು ಮಾಡಲು ಬಿಡದೆ ಸಂರಕ್ಷಿಸಬೇಕು ಎಂದು ಜಾಗೃತಿ ಸಾರುವ ಕರಪತ್ರವನ್ನು ಇದೇ ವೇಳೆ ಹಂಚಲಾಯಿತು.

ಕಲ್ಲಡ್ಕ ಶ್ರೀರಾಮ ಶಾಲೆ ಪರಿಸರದಲ್ಲಿ ಮಳೆ ನೀರು ಕೊಯ್ಲು ಅಳವಡಿಸುವ ಉದ್ದೇಶದಿಂದ ನರನ್ಸ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ರಾಮ ಭಟ್ ನಿಡ್ಲೆ ಅವರು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ದೇಣಿಗೆ ನೀಡಿದರು.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಮನೆಮನೆಗೆ ಮಳೆಕೊಯ್ಲು ಉದಯವಾಣಿ ಸುದಿನ ಅಭಿಯಾನದಿಂದ ಪ್ರೇರಿತಗೊಂಡು ಈಗಾಗಲೇ ನಗರದ ಹಲವಾರು ಮಂದಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇವರ ಈ ಸಾಧನೆಯ ಹಿಂದೆ ಇರುವ ಸಾಧ್ಯತೆಗಳ ಕುರಿತು ಬೆಳಕುಚೆಲ್ಲುವ ಪ್ರಯತ್ನ.

ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೊ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. ವಾಟ್ಸಪ್‌ ನಂಬರ್‌: 9900567000
ಮಳೆಕೊಯ್ಲು ಅಳವಡಿಕೆ ಸರಳ

ನಾನು ಪಾಂಗಳ ಚರ್ಚ್‌ ಬಳಿ ಮಳೆ ನೀರು ಕೊಯ್ಲು ವ್ಯವಸ್ಥೆ ನೋಡಿದ್ದೆ. ಇದನ್ನು ಅಳವಡಿಸಲು ತುಂಬಾ ಖರ್ಚು ತಗಲುತ್ತದೆ ಎಂಬ ಯೋಚನೆ ನನ್ನಲ್ಲಿತ್ತು. ಸರಳ ವಿಧಾನದಲ್ಲಿಯೂ ಅಳವಡಿಸಿ, ನೀರಿನ ಸಮಸ್ಯೆಯನ್ನು ನಿವಾರಿಸಬಹುದು ಎಂಬುದನ್ನು ತಿಳಿದುಕೊಂಡೆ. ಉದಯವಾಣಿ ಅಭಿಯಾನವೂ ಇದಕ್ಕೆ ಪ್ರೇರಣೆಯಾಯಿತು. ಮುಂದಿನ ದಿನಗಳಲ್ಲಿ ನಮ್ಮ ಇತರೇ ಸಂಸ್ಥೆಯಲ್ಲೂ ಈ ವ್ಯವಸ್ಥೆ ಅಳವಡಿಸುವಂತೆ ತಿಳಿಸುತ್ತೇನೆ.
– ರೆ| ಶಶಿಕಲಾ ಅಂಚನ್‌
Advertisement

Udayavani is now on Telegram. Click here to join our channel and stay updated with the latest news.

Next