Advertisement

ಮಳೆ ಕೊಯ್ಲು: ಕೊಡಿಯಾಲ ಗ್ರಾ.ಪಂ. ಮಾದರಿ ನಡೆ 

12:06 PM Nov 17, 2018 | |

ಕಾಣಿಯೂರು: ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಿ ಇಂಗು ಗುಂಡಿಗಳ ಜತೆ ಮಳೆಕೊಯ್ಲು ಘಟಕ ನಿರ್ಮಿಸಿ ವ್ಯರ್ಥವಾಗಿ ಹರಿಯುವ ನೀರನ್ನು ಭೂಮಿಗೆ ಇಂಗಿಸುವುದು ಪ್ರಸ್ತುತ ದಿನಗಳಲ್ಲಿ ತೀರಾ ಆವಶ್ಯ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಸುಳ್ಯ ತಾಲೂಕು ಕೊಡಿಯಾಲ ಗ್ರಾ.ಪಂ. ತನ್ನ ಕಟ್ಟಡದಲ್ಲೆ ಮಳೆ ನೀರು ಕೊಯ್ಲು ಘಟಕ ನಿರ್ಮಿಸಿ, ಮಾದರಿ ಕಾರ್ಯ ಮಾಡಿದೆ.

Advertisement

ಭವಿಷ್ಯಕ್ಕೆ ಪ್ರಯೋಜನ
ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳಿಂದ ಭೂಮಿಯೊಳಗೆ ಇಂಗಿದ ನೀರು ಬ್ಯಾಂಕ್‌ನಲ್ಲಿಟ್ಟ ಹಣದಂತೆ ಎನ್ನುತ್ತಾರೆ ಹಿರಿಯರು. ಈ ಹಿಂದಿನ ಕಾಲದಲ್ಲಿ ಎಂತಹ ಬೇಸಿಗೆಯಲ್ಲೂ ಕುಡಿಯುವ ನೀರಿಗೆ, ಕೃಷಿಗೆ ನೀರಿಗೆ ಅಷ್ಟೊಂದು ತಾಪತ್ರಯ ಇರಲಿಲ್ಲ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ಮಳೆ ನೀರು ಕೆರೆ, ಬಾವಿ, ಮಣ್ಣಿನ ಕಟ್ಟಗಳಲ್ಲಿ ಶೇಖರಣೆಯಾಗುತ್ತಿತ್ತು. ಆದರೆ ಈಗ ಕೆರೆ, ಬಾವಿ, ಮಣ್ಣಿನ ಕಟ್ಟಗಳು ಕಾಣಸಿಗುವುದೇ ವಿರಳ. ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳಿಂದ ನಮ್ಮ ಅಂತರ್ಜಲ ಮಟ್ಟ ಹೆಚ್ಚಳಗೊಂಡು ಭವಿಷ್ಯದ ದಿನಗಳಿಗೆ ಪ್ರಯೋಜನವಾಗಲಿದೆ. 

ಸ್ವಯಂ ಪ್ರೇರಣೆಯಿಂದ ಅಳವಡಿಕೆ
ಹಲವು ಕಡೆಗಳಲ್ಲಿ ಕೆಲವು ಉತ್ಸಾಹಿಗಳು ತಮ್ಮ ಮನೆಯಲ್ಲಿ ಮಳೆ ಕೊಯ್ಲು, ಜಲ ಮರುಪೂರಣ ಘಟಕವನ್ನು ನಿರ್ಮಿಸಿದ್ದಾರೆ. ಇದರಿಂದ ಅವರ ಕೊಳವೆ ಬಾವಿಯಲ್ಲಿ ಬೇಸಿಗೆಯಲ್ಲೂ ನೀರಿನ ಮಟ್ಟ ಈ  ಹಿಂದಿನಂತೆ ಕುಸಿತವಾಗಿಲ್ಲ. ಮಳೆಕೊಯ್ಲಿನ ಮೂಲಕ ಮಳೆ ನೀರನ್ನು ಬಾವಿಗೆ ನೀರು ಇಂಗಿಸಿದರಿಂದ ನೀರು ಬಿರು ಬೇಸಿಗೆಯಲ್ಲೂ ಸಿಗುತ್ತದೆ.

ಉದ್ಯೋಗ  ಖಾತರಿಯಲ್ಲಿ ನಿರ್ಮಾಣ
ಕೊಡಿಯಾಲ ಗ್ರಾ.ಪಂ.ನಲ್ಲಿ ಮಳೆಕೊಯ್ಲ ಘಟಕವನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಯೋಜನೆಯಲ್ಲಿ ಮಾಡಲಾಗಿದೆ. ಅಂದಾಜು 1.45 ಲಕ್ಷ ರೂ ವೆಚ್ಚದ ಈ ಕಾಮಗಾರಿಯಲ್ಲಿ 140 ಮಾನನ ದಿನಗಳ ಕೆಲಸ ಮಾಡಲಾಗಿದೆ. ಮಳೆ ಕೊಯ್ಲು ಘಟಕದ ನೀರು ಇಂಗಲು ಟ್ಯಾಂಕ್‌ ನಿರ್ಮಾಣ ಮಾಡಲಾಗಿದೆ. ಕೇಂದ್ರ ಸರಕಾರದ ಉದ್ಯೋಗ ಖಾತರಿ ಯೋಜನೆಯ ಮೂಲಕ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಾಣಕ್ಕೆ ಅವಕಾಶವಿದೆ. ಗ್ರಾ.ಪಂ.ನಲ್ಲಿ ಉದ್ಯೋಗ ಚೀಟಿ ಮಾಡಿಸಿಕೊಂಡು ಯೋಜನೆಯ ಕುರಿತಾದ ಕೆಲ ದಾಖಲೆಗಳನ್ನು ನೀಡಿ ತಮ್ಮ ಮನೆಗಳಲ್ಲೂ ಈ ಘಟಕವನ್ನು ಆರಂಭಿಸಬಹುದು.

ಮಾದರಿ ಯೋಜನೆ 
ಇಂತಹ ಪ್ರಯತ್ನವನ್ನು ಎಲ್ಲ ಗ್ರಾ.ಪಂ.ಗಳು ಅನುಷ್ಠಾನಕ್ಕೆ ತಂದರೆ ಮಾದರಿ ಯೋಜನೆಯಾಗಿ ರೂಪುಗೊಳ್ಳಲು ಸಾಧ್ಯ. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿಯೂ ಇದು ಸಹಕಾರಿ ಯಾಗಲಿದೆ. ಭೂಮಿ ಯಲ್ಲೂ ತೇವಾಂಶ ನಿಲ್ಲುವ ಜತೆಗೆ ವ್ಯರ್ಥವಾಗಿ ಹರಿದು ಹೋಗುವ ನೀರು ನಮ್ಮ ಭೂಮಿಯಲ್ಲೇ ಇಂಗುತ್ತದೆ.

Advertisement

ಜಲಸಂರಕ್ಷಣೆ ಉದ್ದೇಶ
ಜಲ ಸಂರಕ್ಷಣೆಯ ಹಿತದೃಷ್ಟಿಯಿಂದ ತಾ.ಪಂ. ನಿರ್ದೇಶನದಂತೆ ಆಡಳಿತ ಮಂಡಳಿಯ ಸಹಕಾರದಲ್ಲಿ ಉದ್ಯೋಗ ಖಾತರಿ ಯೋಜನೆಯ ಮೂಲಕ ಈ ಘಟಕ ನಿರ್ಮಿಸಲಾಗಿದೆ. ಸಾರ್ವಜನಿಕರಿಗೂ ಮಳೆಕೊಯ್ಲು ಘಟಕ ನಿರ್ಮಾಣ ಮಾಡಲು ಪೂರಕವಾಗಿ ಸಂದೇಶ ನೀಡುವ ದೃಷ್ಟಿಯಿಂದ ಈ ಘಟಕವನ್ನು ಮಾಡಲಾಗಿದೆ.
– ಮೋಹನ್‌ ಸಾಲಿಯಾನ್‌,
ಅಧ್ಯಕ್ಷರು ಕೊಡಿಯಾಲ ಗ್ರಾ.ಪಂ,

ಎಲ್ಲರಿಗೂ ಸಂದೇಶ
ಈ ಘಟಕವನ್ನು ಉದಾಹರಣೆಯಾಗಿಟ್ಟುಕೊಂಡು ಸಾರ್ವಜನಿಕರೂ ಮಳೆಕೊಯ್ಲು ಘಟಕ ಅನುಷ್ಠಾನ ಮಾಡವಂತಾಗಲಿ ಎಂಬ ಆಶಾಭಾವನೆ ಇದೆ. ಸ್ಥಳೀಯಾಡಳಿದಲ್ಲಿ ಇಂತಹ ಕೆಲಸ ಮಾಡಿದರೆ ಎಲ್ಲರಿಗೂ ಸಂದೇಶ ತಲುಪುವಂತಾಗುತ್ತದೆ. ಈ ನಿಟ್ಟಿನಲ್ಲಿ ಮಳೆಕೊಯ್ಲು ಘಟಕ ನಿರ್ಮಾಣ ಮಾಡಲಾಗಿದೆ.
 - ಹೂವಪ್ಪ ಗೌಡ,
   ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಕೊಡಿಯಾಲ

 ಪ್ರವೀಣ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next