Advertisement

Rain, Flood: ಸಿಎಂ ದಿಲ್ಲಿ ಪ್ರವಾಸ ಬಿಟ್ಟು ಪರಿಹಾರ ವಿತರಿಸಲಿ: ಆರ್‌.ಅಶೋಕ್‌

02:28 AM Aug 01, 2024 | Team Udayavani |

ಬಂಟ್ವಾಳ: ರಾಜ್ಯ ಸರಕಾರವು ಪ್ರಾಕೃತಿಕ ವಿಕೋಪವನ್ನು ನಿರ್ವಹಿಸುವ ರೀತಿ ಸರಿಯಿಲ್ಲ. ವಾಲ್ಮೀಕಿ ನಿಗಮ, ಮುಡಾ ಹಗರಣಗಳಿಗೆ ಸಂಬಂಧಿಸಿ ವಿವರಣೆ ಕೊಡಲು ದಿಲ್ಲಿಗೆ ತೆರಳಿರುವ ಮುಖ್ಯಮಂತ್ರಿಗಳು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮರೋಪಾದಿಯಲ್ಲಿ ಪರಿಹಾರ ವಿತರಣೆ ಕಾರ್ಯ ಮಾಡಬೇಕು ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದರು.

Advertisement

ಅವರು ಬುಧವಾರ ಬಂಟ್ವಾಳದಲ್ಲಿ ಪ್ರವಾಹದಲ್ಲಿ ಮುಳುಗಡೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೆಳಗಾವಿ, ರಾಯಚೂರು, ಯಾದಗಿರಿ ಸಹಿತ ಕರಾವಳಿ, ಮಲೆನಾಡು ಹೀಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಜೀವ ಹಾನಿ, ಭೂಕುಸಿತ, ಕೃಷಿ ಹಾನಿ, ಮನೆಗಳಿಗೆ ಹಾನಿ, ರಸ್ತೆ, ಕೆರೆಕಟ್ಟೆಗಳಿಗೆ ಹಾನಿ
ಹೀಗೆ ಹೆಚ್ಚಿನ ಪ್ರಮಾಣದ ಪ್ರಾಕೃತಿಕ ವಿಕೋಪ ಉಂಟಾಗಿದೆ. ಆದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದು ಆರೋಪಿಸಿದರು.

ಹಿಂದೆ ಬಿಜೆಪಿ ಸರಕಾರದಲ್ಲಿ ತಾನು ಕಂದಾಯ ಸಚಿವನಾಗಿದ್ದಾಗ ಸರಕಾರ ಶೀಘ್ರ ಸ್ಪಂದಿಸಿ ಕೇಂದ್ರ ಸರಕಾರದ ನಿಯಮದಂತೆ ರಾಜ್ಯ ಸರಕಾರದ ಮ್ಯಾಚಿಂಗ್‌  ಗ್ರ್ಯಾಂಟ್‌ ಸೇರಿಸಿ ಮನೆ ಹಾನಿಗೆ 5 ಲಕ್ಷ ರೂ.ವರೆಗೂ ಪರಿಹಾರ ನೀಡಿದೆ. ಗಂಜಿ ಕೇಂದ್ರಗಳನ್ನು ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಿ ಅಲ್ಲಿ ಸಂತ್ರಸ್ತರಿಗೆ ಉತ್ತಮ ಸೇವೆ ನೀಡಲಾಗಿತ್ತು. ಆದರೆ ಈಗ ಅಂತಹ ಕಾಳಜಿ ಕೇಂದ್ರಗಳೇ ಕಾಣುತ್ತಿಲ್ಲ ಎಂದರು.

ಉಸ್ತುವಾರಿ ಸಚಿವರ ಪತ್ತೆ ಇಲ್ಲ
ದ.ಕ.ಜಿಲ್ಲೆಗೆ ಉಸ್ತುವಾರಿ ಸಚಿವರು ಬಾರದೆ 15 ದಿನಗಳೇ ಕಳೆದಿವೆ ಎಂದು ಸಚಿವರು ಹೇಳಿದರು. ಬೆಳೆ ಹಾನಿಗೆ ಸಂಬಂಧಿಸಿ ಕಾಂಗ್ರೆಸ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಕೇಂದ್ರ ಸರಕಾರವು ಕರ್ನಾಟಕ ಸಹಿತ 5 ರಾಜ್ಯಗಳಿಗೆ 3 ಸಾವಿರ ಕೋ.ರೂ.ಗಳಿಗೂ ಅಧಿಕ ಹಣ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರ 2 ತಿಂಗಳಾದರೂ ಅದನ್ನು ವಿತರಿಸುವ ಕಾರ್ಯ ಮಾಡಿಲ್ಲ. ಸರಕಾರವು ವಿಕೋಪದ ಸ್ಥಳಗಳಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ ಶೀಘ್ರ 5 ಕೋ.ರೂ.ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಮಾಜಿ ಸಂಸದ ನಳಿನ್‌ಕುಮಾರ್‌ ಕಟೀಲು, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್‌.ಚೆನ್ನಪ್ಪ ಕೋಟ್ಯಾನ್‌, ಕಿಯೋನಿಕ್ಸ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌, ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement

ಜೋಕಟ್ಟೆಗೆ ಅಶೋಕ್‌ ಭೇಟಿ
ಇತ್ತೀಚೆಗೆ ಮಳೆಯಿಂದ ಮನೆ ಕುಸಿದು ಮೃತಪಟ್ಟ ಜೋಕಟ್ಟೆಯ ಶೈಲೇಶ್‌ ಅವರ ಮನೆಗೆ ವಿಪಕ್ಷ ನಾಯಕ ಆರ್‌. ಅಶೋಕ್‌ ಭೇಟಿ ನೀಡಿದರು. ಶಾಸಕ ಉಮಾನಾಥ್‌ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಸಹಿತ ಪ್ರಮುಖರು ಜತೆಗಿದ್ದರು.

ಜೆಡಿಎಸ್‌ ಜತೆಗೂಡಿಯೇ ಹೋರಾಟ
ಪಾದಯಾತ್ರೆ ಕುರಿತು ಜೆಡಿಎಸ್‌ ಅಪಸ್ವರದ ಪ್ರಶ್ನೆಗೆ ಉತ್ತರಿಸಿದ ಅವರು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, 3ರಿಂದ 4 ಸಾವಿರ ಕೋ.ರೂ.ಗಳ ಹಗರಣ ನಡೆದಿದೆ. ಅದನ್ನು ಬಯಲಿಗೆಳೆದು 85 ಸಾವಿರ ಮಂದಿ ಅರ್ಜಿ ಹಾಕಿರುವವರಿಗೆ ಸೈಟ್‌ ಸಿಗಬೇಕು ಎಂಬುದು ಬಿಜೆಪಿ ನಿಲುವಾಗಿದ್ದು, ಎನ್‌ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್‌ ಜತೆಗೂಡಿಯೇ ಹೋರಾಟ ಮಾಡುತ್ತೇವೆ. ಸದನದಲ್ಲಿ ಕಾಂಗ್ರೆಸ್‌ ಬಾಯಿ ಮುಚ್ಚಿಸುವ ರೀತಿಯಲ್ಲಿ ಹೋರಾಟ ನಡೆದಿದ್ದು, ಈಗ ಪಾದಯಾತ್ರೆ ಕೂಡ ಅದೇ ರೀತಿ ನಡೆಯುತ್ತದೆ.

ಬಂಟ್ವಾಳ: ತಗ್ಗಿದ ನೇತ್ರಾವತಿ ಪ್ರವಾಹ
ಬಂಟ್ವಾಳ: ಉಕ್ಕಿ ಹರಿದು ಬಂಟ್ವಾಳದಲ್ಲಿ ಸಾಕಷ್ಟು ಪ್ರದೇಶವನ್ನು ಮುಳುಗಿಸಿದ್ದ ನೇತ್ರಾವತಿ ನದಿಯಲ್ಲಿ ಬುಧವಾರ ಸಾಕಷ್ಟು ಪ್ರಮಾಣದಲ್ಲಿ ನೀರಿನ ಮಟ್ಟ ಇಳಿಕೆಯಾಗಿ ಪ್ರವಾಹದ ಸ್ಥಿತಿ ದೂರವಾಗಿತ್ತು. ಜು.30ರಂದು ದಿನವಿಡೀ ಏರಿಕೆ ಕಂಡು ತಡರಾತ್ರಿ 10.6 ಮೀ.ಗೆ ಏರಿಕೆಯಾಗಿ ಬಳಿಕ ಇಳಿಕೆ ಸ್ಥಿತಿಗೆ ಬಂದು ಬುಧವಾರ ಬೆಳಗ್ಗೆ 8.5 ಮೀ.ಗೆ ತಲುಪಿ ಬಳಿಕ ಮತ್ತಷ್ಟು ಇಳಿಕೆಯಾಗಿತ್ತು.

ಬಂಟ್ವಾಳದ ಬಸ್ತಿಪಡು³, ಬಡ್ಡಕಟ್ಟೆ, ನಾವೂರಿನ ಕಡವಿನಬಾಗಿಲು, ಪಾಣೆಮಂಗಳೂರಿನ ಆಲಡ್ಕ, ಬೋಗೋಡಿ, ಗುಡ್ಡೆಯಂಗಡಿ ಪ್ರದೇಶಗಳು ಬುಧವಾರ ಜಲಬಂಧನದಿಂದ ಮುಕ್ತಿ ಪಡೆದಿದ್ದವು. ಮುಳುಗಡೆಯಾಗಿದ್ದ ಮನೆಗಳು, ಅಂಗಡಿ ಮುಂಗಟ್ಟುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಸರು ತುಂಬಿದ್ದ ಹಿನ್ನೆಲೆಯಲ್ಲಿ ಬುಧವಾರ ದಿನವಿಡೀ ಶುಚಿತ್ವದ ಕಾರ್ಯ ನಡೆಯಿತು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ಮುಳುಗಡೆ ಪ್ರದೇಶ, ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಸಮಾಲೋಚಿಸಿದರು. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು, ಅಗ್ನಿಶಾಮಕ ದಳದವರು ನೀರು ಹಾಯಿಸಿ ಶುಚಿತ್ವದ ಕಾರ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next