Advertisement

ವಿವಿಧ ತಾಲೂಕುಗಳಲ್ಲಿ ಮಳೆ ಹಾನಿ: ಬದುಕಿಗೆ ಸಿಗಲಿ ಆಸರೆ

01:32 AM Jul 13, 2022 | Team Udayavani |

ಒಂದು ವಾರ ಕಾಲ ನಿರಂತರವಾಗಿ ಧೋ ಎಂದು ಸುರಿದ ಮಳೆಯಿಂದಾಗಿ ಕರಾವಳಿಯ ಹೆಚ್ಚಿನ ತಾಲೂಕುಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ರಾಜ್ಯದ ಸಿಎಂ ಸ್ವಯಂ ಆಗಿ ಪರಿಶೀಲನೆಗೆ ಆಗಮಿಸಿದ್ದಾರೆ. ಈ ಸಂದರ್ಭ ಹಾನಿಯ ಚಿತ್ರಣ ಕಂಡು ಸಂತ್ರಸ್ತರ ಬದುಕಿಗೊಂದು ಆಸರೆಯಾಗುವ ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಿಸಲೆಂಬುದೇ ಈ ವರದಿಯ ಆಶಯ.

Advertisement

ಬಂಟ್ವಾಳ ತಾಲೂಕು
40ಕ್ಕೂ ಅಧಿಕ ಮನೆಗಳಿಗೆ ಹಾನಿ: ಮೂರು
ಜೀವ ಬಲಿ, 50 ಲಕ್ಷ ರೂ.ಗೂ ಅಧಿಕ ನಷ್ಟ
ಬಂಟ್ವಾಳ: ಪಂಜಿಕಲ್ಲಿನ ಮುಕ್ಕುಡದಲ್ಲಿ ಗುಡ್ಡಕುಸಿತ ಸಂಭವಿಸಿ ಮೂರು ಜೀವ ಹಾನಿ ಸೇರಿದಂತೆ ತಾಲೂಕಿನ 40ಕ್ಕೂ ಅಧಿಕ ಮನೆಗಳಿಗೆ ಹಾನಿ ಮತ್ತು ಕೃಷಿ ಹಾನಿಯ ಪರಿಣಾಮ ಸುಮಾರು 50 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.

ಪಂಜಿಕಲ್ಲಿನ ಗುಡ್ಡ ಕುಸಿತದ ದುರಂತ ತಾಲೂಕಿನಲ್ಲೇ ಘೋರ ದುರಂತ ಎನಿಸಿಕೊಂಡಿದ್ದು, ಮಣ್ಣಿನಡಿ ಸಿಲುಕಿದ್ದ ಕೇರಳ ಮೂಲದ ನಾಲ್ವರು ರಬ್ಬರ್‌ ಟ್ಯಾಂಪಿಂಗ್‌ ಕಾರ್ಮಿಕರ ಪೈಕಿ ಮೂವರು ಜೀವ ಕಳೆದುಕೊಂಡಿದ್ದರು. ಅದೇ ಸ್ಥಳದಲ್ಲಿ ಇದೀಗ ಮತ್ತಷ್ಟು ಕುಸಿಯುತ್ತಿದ್ದು, ಒಂ ದಂತಸ್ತಿನ ಮನೆಯೂ ಅಪಾಯಕ್ಕೆ ಸಿಲುಕಿದೆ.

ನೇತ್ರಾವತಿ ನದಿಯು ತುಂಬಿ ಹರಿಯುತ್ತಿದ್ದು, ಜು. 10ರಂದು ನೀರಿನ ಮಟ್ಟ ಏರಿಕೆಯಾದ ಪರಿಣಾಮ ಬಂಟ್ವಾಳ, ಪಾಣೆಮಂಗಳೂರು ಪ್ರದೇಶದ ತಗ್ಗು ಪ್ರದೇಶಗಳು, ಅಂಗಡಿ ಮುಂಗಟ್ಟುಗಳು, ಮನೆಗಳು ಜಲಾವೃತಗೊಂಡಿದ್ದವು. ಈಗಲೂ ನೆರೆ ಆತಂಕ ಇದೆ.

ಹತ್ತಾರು ಕಡೆ ಗುಡ್ಡ ಕುಸಿತದಿಂದ ಆತಂಕವಿದ್ದು, ಪ್ರಮುಖ ರಸ್ತೆಗಳಿಗೂ ತೊಂದರೆಯಾಗುತ್ತಿದೆ. ಕೆಲವೆಡೆ ಗುಡ್ಡ ಕುಸಿತದಿಂದ ರಸ್ತೆಗಳಿಗೆ ಹಾನಿಯಾಗಿದೆ. ಕಾಮಗಾರಿ ಪೂರ್ಣಗೊಂಡಿರುವ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ನಾವೂರು ಗ್ರಾಮದ ಹಲವು ಪ್ರದೇಶ ಗಳಲ್ಲಿ ಗುಡ್ಡ ಕುಸಿತದಿಂದ ಪದೇಪದೆ ಸಂಚಾರಕ್ಕೆ ತೊಂದರೆ ಯಾಗಿದ್ದು, ದೊಡ್ಡ ಮಟ್ಟದ ಕುಸಿತ ಸಂಭವಿಸಿದರೆ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಇದೆ.

Advertisement

ಮಂಗಳೂರು-ಬೆಂಗಳೂರು ರಾ.ಹೆ. 75ರ ಕಲ್ಲಡ್ಕ, ಸೂರಿಕುಮೇರು ಭಾಗದಲ್ಲಿ ಕಾಮಗಾರಿ ನಡೆಯು ತ್ತಿದ್ದು, ಜು. 11ರಂದು ಸೂರಿಕು ಮೇರಿನಲ್ಲಿ ಗುಡ್ಡಕುಸಿದು ಸಂಚಾರಕ್ಕೆ ಅಡ್ಡಿಯಾಗಿತ್ತು. ಪಾಣೆ ಮಂಗಳೂರಿನ ಗೂಡಿನ ಬಳಿಯಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಕರ್ನಾಟಕ-ಕೇರಳ ಸಂಪರ್ಕಿಸುವ ಅಂತಾರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್‌ಪೋಸ್ಟ್‌ ಬಳಿ ಜು. 5ರಂದು ಗುಡ್ಡ ಕುಸಿದು ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಪುಣಚ ಗ್ರಾಮದ ದೇವಿನಗರ, ಕಲ್ಲಾಜೆ, ಮಡ್ಯಾರಬೆಟ್ಟು, ಆಜೇರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸೇತುವೆಯೊಂದು ತೋಡಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಕುಡ್ತಮುಗೇರು-ಕುಳಾಲು ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು.

41 ಮನೆ ಗಳಿಗೆ ಹಾನಿ
ಬಂಟ್ವಾಳ ತಾಲೂಕಿನ ಕೊçಲ, ವಿಟ್ಲ ಕಸ್ಬಾ, ಸಜೀಪಮೂಡ, ಬಿಳಿಯೂರು, ಬಿ.ಕಸ್ಬಾ, ಮೂಡನಡುಗೋಡು, ಮಂಚಿ, ಕನ್ಯಾನ, ನರಿಕೊಂಬು, ಕರೋಪಾಡಿ, ಕೊಳ್ನಾಡು, ಸಂಗಬೆಟ್ಟು, ಪುಣಚ, ಕಾಡ ಬೆಟ್ಟು, ಪುದು, ತೆಂಕಕಜೆಕಾರು, ಬಿಳಿಯೂರು, ಅಳಿಕೆ, ಸಜೀಪಮುನ್ನೂರು, ಮಾಣಿ, ಕೆದಿಲ, ನಾವೂರು, ಪೆರಾಜೆ, ಕಳ್ಳಿಗೆ, ವೀರಕಂಭ ಗ್ರಾಮಗಳ 41 ಮನೆಗಳಿಗೆ ಹಾನಿಯಾಗಿದೆ. ಪುದು ಗ್ರಾಮದ ಅಮ್ಮೆಮಾರ್‌ನಲ್ಲಿ ಗುಡ್ಡ ಪ್ರದೇಶ ದಲ್ಲಿರುವ ಮೂರ್‍ನಾಲ್ಕು ಮನೆಗಳು ಅಪಾಯದಲ್ಲಿದ್ದು, ಮನೆಯವರನ್ನು ಸ್ಥಳಾಂತರಿಸಲಾಗಿದೆ. ಪಂಜಿಕಲ್ಲು ಗ್ರಾ.ಪಂ. ಮಾಹಿತಿ ಪ್ರಕಾರ 10ಕ್ಕೂ ಅಧಿಕ ಮನೆಯವರನ್ನು ಸ್ಥಳಾಂತರಿಸಲಾಗಿದೆ. ಹೀಗೆ ಎಲ್ಲ ಮನೆಗಳ ನಷ್ಟ 40 ಲಕ್ಷ ರೂ.ಗಳಷ್ಟಾಗಬಹುದು.

ಹಿನ್ನೀರಿನಿಂದ ತೊಂದರೆ
ಕೃಷಿ ಭೂಮಿಗೆ ನೀರು ನುಗ್ಗಿದ್ದು, ಒಮ್ಮೆ ಬಂದ ನೀರು ಸ್ವಲ್ಪಹೊತ್ತಿನಲ್ಲಿ ಇಳಿದು ಹೋದರೆ ಸಮಸ್ಯೆ ಇರದು. ಆದರೆ ಸರಪಾಡಿ, ಮಣಿನಾಲ್ಕೂರು ಭಾಗದಲ್ಲಿ ಶಂಭೂರು ಅಣೆಕಟ್ಟಿನ ಹಿನ್ನೀರು 10 ದಿನಗಳಿಂದ ತೋಟದಲ್ಲಿ ನಿಂತು ಅಡಿಕೆ ಗಿಡಗಳು ಕೊಳೆಯಲು ಆರಂಭಿಸಿದೆ ಎಂಬರು ರೈತರ ಆರೋಪ. ತೋಟದಲ್ಲಿ ನೀರು ನಿಲ್ಲದ ರೀತಿ ಯಲ್ಲಿ ಗೇಟ್‌ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

ಸುಳ್ಯ ತಾಲೂಕು
ಭೂ ಕಂಪನದ ಜತೆ ಆತಂಕ ಸೃಷ್ಟಿಸಿದ ಮಳೆ
ಸುಳ್ಯ: ತಾಲೂಕಿನ ವಿವಿಧೆಡೆ ಆಗಾಗ ಭೂಕಂಪನ ಸಂಭವಿ ಸುತ್ತಿದ್ದು, ಮಳೆಯಿಂದ ಅಪಾರ ಹಾನಿ ಸಂಭವಿಸಿದೆ.
ಈವರೆಗೆ 2 ಮನೆಗಳಿಗೆ ಪೂರ್ಣ, 20 ಮನೆಗೆ ಭಾಗಶಃ ಹಾನಿ ಸಂಭವಿಸಿದೆ. 4ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಗೊಂಡಿದ್ದವು.

ಹರಿಹರ ಪಳ್ಳತ್ತಡ್ಕ ಗ್ರಾಮದ ಕೊಪ್ಪತ್ತಡ್ಕ ಸೇತುವೆಯ ತಡೆ ಗೋಡೆ, ಸಂಪರ್ಕ ರಸ್ತೆ ಕುಸಿದ ಪರಿಣಾಮ ಹರಿಹರ-ಕಿರಿಭಾಗ ಬಾಳುಗೋಡು ಸಂಪರ್ಕ ಕಡಿತಗೊಂಡಿದೆ. ಈ ಸೇತುವೆ ಶಿಥಿಲಗೊಂಡಿದೆ.

12 ಮನೆಗಳ ಸಂಪರ್ಕ ಕಡಿತ
ಬಾಳುಗೋಡು ಗ್ರಾಮದ ಉಪ್ಪು ಕಳ ದಲ್ಲಿ ಸಾಂಪ್ರದಾಯಿಕವಾಗಿ ನಿರ್ಮಿಸ ಲಾಗಿದ್ದ ಮರದ ಪಾಲ ನೆರೆ ನೀರಿನ ಪಾಲಾಗಿ 12 ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಸರ್ವಋತು ಸೇತುವೆ ನಿರ್ಮಿಸುವಂತೆ ಆಗ್ರಹ ಕೇಳಿಬಂದಿದೆ.
ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಮುರುಳ್ಯ ಗ್ರಾಮದ ಬೊಬ್ಬೆಕೇರಿಯಲ್ಲಿ ಹೆದ್ದಾರಿ ಕೆಳ ಭಾಗದಲ್ಲಿ ತೋಡಿನ ನೀರಿನ ಹರಿವಿಗೆ ಮಣ್ಣು ಕುಸಿಯುತ್ತಿದ್ದು, ಹೆದ್ದಾರಿಗೆ ಅಪಾಯವಿದೆ. ತೊಡಿಕಾನ- ಮಾವಿನಕಟ್ಟೆ ರಸ್ತೆಯ ಬಾಳೆ ಕಜೆಯಲ್ಲಿ ಮಣ್ಣು ಜರಿದು ರಸ್ತೆ ಬಂದ್‌ ಆಗಿದೆ. ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ದುಗ್ಗಲಡ್ಕ ಸಂಪರ್ಕ ಸೇತುವೆಯ ತಡೆಬೇಲಿ ತುಂಡಾಗಿದೆ. ಮರಕತದ ಕಿಂಡಿ ಅಣೆಕಟ್ಟಿನಲ್ಲಿ ಮರಗಳು ಸಿಲುಕಿ ನೀರು ತೋಟಗಳಿಗೆ ನುಗ್ಗಿದೆ. ರಸ್ತೆ ಸಂಪರ್ಕವೂ ಕಡಿತಗೊಂಡಿದೆ.

ಭೂ ಕಂಪನ
ಸುಳ್ಯ ಹಾಗೂ ಕೊಡಗಿನ ಜನತೆಗೆ ಜೂನ್‌ ಕೊನೆಯಲ್ಲಿ ಭೂ ಕಂಪನ ಆತಂಕವನ್ನು ತಂದೊ ಡ್ಡಿದೆ. ಹಲವು ಬಾರಿ ಭೂಮಿ ಕಂಪಿ ಸಿದ್ದು ಮನೆಗಳು ಬಿರುಕು ಬಿಟ್ಟಿದೆ.

ಪುತ್ತೂರು ತಾಲೂಕು
2.94 ಲಕ್ಷ ರೂ. ನಷ್ಟ
ಪುತ್ತೂರು: ತಾಲೂಕಿನಲ್ಲಿ 2021-22ನೇ ಸಾಲಿನಲ್ಲಿ ಈ ವರೆಗೆ 2.9 ಲಕ್ಷ ರೂ. ನಷ್ಟ ಸಂಭವಿಸಿದೆ. 2 ಮನೆಗಳಿಗೆ ತೀವ್ರ ಸ್ವರೂಪದಲ್ಲಿ ಹಾನಿಯಾಗಿ 65 ಸಾವಿರ ರೂ. ನಷ್ಟ, 15 ಮನೆಗಳಿಗೆ ಭಾಗಶಃ ಹಾನಿಯಾಗಿ 1.90 ಲಕ್ಷ ರೂ. ನಷ್ಟ, ತೋಟ ಗಾರಿಕೆ ಬೆಳೆಗೆ ಸಂಬಂಧಿಸಿ 5 ಮನೆಗಳಿಗೆ 8,250 ರೂ. ಸೇರಿದಂತೆ 23 ಪ್ರಕರಣಗಳಲ್ಲಿ ಒಟ್ಟು 2,94,050 ರೂ. ನಷ್ಟ ಸಂಭವಿಸಿದೆ. ಕಾಣಿಯೂರು -ಮಂಜೇಶ್ವರ ಅಂತಾರಾಜ್ಯ ಸಂಪರ್ಕ ರಸ್ತೆಯ ಚೆಲ್ಯಡ್ಕದಲ್ಲಿ ಮುಳುಗು ಸೇತುವೆ 3 ಬಾರಿ ಮುಳುಗಿದ್ದು ತಾಸು ಗಟ್ಟಲೇ ಹೊತ್ತು ಸಂಚಾರ ವ್ಯತ್ಯಯಗೊಂಡಿದೆ. ಕೂಟೇಲು, ಇರ್ದೆ ಪರಿಸರದಲ್ಲಿ ನೆರೆ ನೀರು ಕೃಷಿ, ಮಸೀದಿ ವಠಾರಕ್ಕೆ ನುಗ್ಗಿ ಹಾನಿ ಉಂಟಾಗಿದೆ. ಉಪ್ಪಿನಂ ಗಡಿಯಲ್ಲಿ ಕುಮಾರ ಧಾರಾ, ನೇತ್ರಾವತಿ ನದಿಗಳ ಪಾತ್ರದ ಕೃಷಿ ತೋಟಕ್ಕೆ ಹಾನಿ ಉಂಟಾಗಿದ್ದು ಈ ತನಕ ಸಂಗಮ ಆಗಿಲ್ಲ. ಜ. 1ರಿಂದ ಜೂ. 30ರ ತನಕ ದಾಖಲಾದ ಮಳೆಯ ಪ್ರಮಾಣ 856.4 ಮಿ.ಮೀ. ಜನವರಿ-0 (ಮಿ.ಮೀ), ಫೆಬ್ರವರಿ-0, ಮಾರ್ಚ್‌- 44.6, ಎಪ್ರಿಲ್‌-74.2., ಮೇ-329.8 ಮಿ.ಮೀ..

ಬೆಳ್ತಂಗಡಿ ತಾಲೂಕು
4 ಮನೆ ಪೂರ್ಣ ಹಾನಿ
ಬೆಳ್ತಂಗಡಿ: ತಾಲೂಕಿನ ಅಲ್ಲಲ್ಲಿ ಕೃಷಿ ಹಾನಿ ಸಹಿತ ಮನೆಗಳ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. 4 ಮನೆಗಳು ತೀವ್ರ ಹಾನಿಗೀಡಾಗಿದ್ದು, 1,23,400 ರೂ. ಹಾಗೂ 4 ಪೂರ್ಣ ಮನೆ ಹಾನಿಯಾಗಿದ್ದು, 3,80,400 ರೂ. ಒದಗಿಸಲಾಗಿದೆ. ಪಕ್ಕಾ ಮನೆ ಭಾಗಶಃ 38 ಪ್ರಕರಣಗಳಾಗಿದ್ದು 1.97,600 ರೂ. ಪರಿಹಾರ ಒದಗಿಸಲಾಗಿದೆ. ಕಚ್ಚಾ ಮನೆ ಭಾಗಶಃ ಹಾನಿ 16 ಪ್ರಕರಣವಿದ್ದು 51,200 ರೂ. ಪರಿಹಾರ ನೀಡಲಾಗಿದೆ. ಪುದುವೆಟ್ಟು ಹೊಳೆಯಲ್ಲಿ ಇತೀ¤ಚೆಗೆ ವ್ಯಕ್ತಿಯೋರ್ವರು ಕೊಚ್ಚಿ ಹೋಗಿ ಮೃತಪಟ್ಟ ಹಿನ್ನೆಲೆಯಲ್ಲಿ 5 ಲಕ್ಷ ರೂ. ಹಾಗೂ 7 ಕೊಟ್ಟಿಗೆ ಹಾನಿ ಪ್ರಕರಣಕ್ಕೆ ಸಂಬಂಧಿಸಿ 14,700 ರೂ. ಪರಿಹಾರ ನೀಡಲಾಗಿದೆ.

ಕುಂದಾಪುರ ತಾಲೂಕು
1 ಜೀವ ಹಾನಿ, ಅಂದಾಜು 50 ಲಕ್ಷ ರೂ. ನಷ್ಟ
ಕುಂದಾಪುರ : ತಾಲೂಕಿನಾದ್ಯಂತ ಮಳೆ, ಬೀಸಿದ ಗಾಳಿಯಿಂದಾಗಿ ಅಪಾರ ಹಾನಿಯಾಗಿದೆ. ಒಟ್ಟು 50 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಉಳ್ತೂರಿನಲ್ಲಿ ಜೀವಹಾನಿಯಾಗಿದ್ದು, ಹೆಂಗವಳ್ಳಿ, ಆನಗಳ್ಳಿ, ಬಳ್ಕೂರು, ಹೊಸಾಡು, ಗಂಗೊಳ್ಳಿ, ಹೊಸಂಗಡಿ, ಬಸ್ರೂರು, ಯಡಾಡಿ ಮತ್ಯಾಡಿ, ಕುಳಂಜೆ, ಅಂಪಾರು, ಕೊರ್ಗಿ, ಸಿದ್ದಾಪುರ, ಹೆಮ್ಮಾಡಿ, ತೆಕ್ಕಟ್ಟೆ, ಅಸೋಡು, ಹಕ್ಲಾಡಿ, ಕಾಳಾವರ, ಮೊಳಹಳ್ಳಿ, ಕುಂದ ಬಾರಂದಾಡಿ, ಶಂಕರ ನಾರಾಯಣ, ಆಲೂರು, ವಂಡ್ಸೆ, ಹಂಗಳೂರು, ರಟ್ಟಾಡಿ, ಚಿತ್ತೂರು, ಕೆರಾಡಿ, ಹಾರ್ದಳ್ಳಿ ಮಂಡಳ್ಳಿ, 74ನೇ ಉಳ್ಳೂರು, ತ್ರಾಸಿ, ಬೆಳ್ಳಾಲ, ಸೇನಾಪುರ, ಮೊಳಹಳ್ಳಿ, ಕಾವ್ರಾಡಿ, ಹಳ್ನಾಡು, ಬೆಳ್ಳಾಲ ಮೊದ ಲಾದ ಗ್ರಾಮಗಳಲ್ಲಿ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ. 2 ಮನೆ ಸಂಪೂರ್ಣ ಹಾನಿಯಾಗಿದ್ದು 6 ಲಕ್ಷ ರೂ., 46 ಮನೆಗಳಿಗೆ ಭಾಗಶಃ ಹಾನಿ ಯಾಗಿ 19.22 ಲಕ್ಷ ರೂ., 6 ಕೊಟ್ಟಿಗೆಗೆ ಹಾನಿಯಾಗಿದ್ದು 93 ಸಾವಿರ ರೂ., 1 ಬಾವಿಗೆ ಹಾನಿಯಾಗಿ 2 ಲಕ್ಷ ರೂ., ತೋಟಗಾರಿಕಾ ಬೆಳೆ ಹಾನಿಯಾಗಿದ್ದು 25 ಸಾವಿರ ರೂ. ನಷ್ಟವಾಗಿದೆ. ಒಟ್ಟು 28.4 ಲಕ್ಷ ರೂ. ನಷ್ಟ ಎಂದು ಅಂದಾಜಿಸಲಾಗಿದೆ.

ಮೆಸ್ಕಾಂಗೆ 7.03 ಲಕ್ಷ ರೂ. ನಷ್ಟ
ಮೆಸ್ಕಾಂ ಕುಂದಾಪುರ ವ್ಯಾಪ್ತಿಯಲ್ಲಿ 103 ಕಂಬಗಳು ಬಿದ್ದಿದ್ದು, 1.75 ಕಿ.ಮೀ. ನಷ್ಟು ವೈರ್‌ ನಷ್ಟವಾಗಿದೆ. 3 ಟ್ರಾನ್ಸ್‌ ಫಾರ್ಮರ್‌ಗಳು ಹಾನಿಯಾಗಿದ್ದು 7.03 ಲಕ್ಷ ರೂ. ನಷ್ಟ ಎಂದು ಅಂದಾಜಿಸಲಾಗಿದೆ.

48 ಹೆಕ್ಟೇರ್‌ ಕೃಷಿ ನಾಶ
1,230 ಹೆಕ್ಟೇರ್‌ ಕೃಷಿ ಮುಳು ಗಡೆಯಾಗಿದ್ದು 48 ಹೆಕ್ಟೇರ್‌ ಕೃಷಿ ನಾಶವಾಗಿದೆ. ಒಟ್ಟು ನಷ್ಟದ ಬಾಬ್ತು ಅಂದಾಜಿಗೆ ಜಂಟಿ ಸರ್ವೇ ನಡೆಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next