Advertisement

ಮಳೆ: ಉಡುಪಿ ಜಿಲ್ಲೆಯಲ್ಲಿ 166 ಕೋ.ರೂ. ಮೂಲಸೌಕರ್ಯ ನಷ್ಟ

02:11 AM Jul 26, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಸಮೀಕ್ಷೆ ಮತ್ತು ತುರ್ತು ಮೂಲಸೌಕರ್ಯ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಅಂದಾಜು 166 ಕೋ.ರೂ.ಗಳಷ್ಟು ನಷ್ಟ ಸಂಭವಿಸಿದ್ದು, ವಿಶೇಷ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಮತ್ತು ಮನೆ, ಜಾನುವಾರುಗಳಿಗೆ ಹಾನಿಯಾಗಿರುವ ಮಾಹಿತಿಯನ್ನು ಆಗಿಂದಾಗ್ಗೆ ಕಲೆ ಹಾಕಿ ಆನ್‌ಲೈನ್‌ ಮೂಲಕ ಅಪ್‌ಡೇಟ್‌ ಮಾಡಲಾಗುತ್ತದೆ. ಜುಲೈ ತಿಂಗಳ ಮೊದಲೆರಡು ವಾರದಲ್ಲಿ ಸುರಿದ ಭಾರೀ ಮಳೆಗೆ ರಸ್ತೆ, ಸೇತುವೆ, ಅಂಗನವಾಡಿ ಕೇಂದ್ರ ಸಹಿತ ಮೂಲಸೌಕರ್ಯದ ಹಾನಿಯೂ ಆಗಿದೆ. ಅದರ ನಷ್ಟ ಅಂದಾಜಿಸಲಾಗಿದೆ. ಈವರೆಗೆ ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯಲ್ಲಿ 907.85 ಕಿ.ಮೀ. ರಸ್ತೆ, 1 ಸೇತುವೆ, ಸಾರ್ವಜನಿಕ ಶಿಕ್ಷಣ ಇಲಾಖೆಯ 180 ಶಾಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 70 ಅಂಗನವಾಡಿ, ಲೋಕೋಪಯೋಗಿ, ಬಂದರು, ಒಳನಾಡು ಸಾರಿಗೆ ಇಲಾಖೆಯ 28.46 ಕಿ.ಮೀ. ರಾಜ್ಯರಸ್ತೆ, 44.17 ಕಿ.ಮೀ. ಜಿಲ್ಲಾರಸ್ತೆ, 20 ಸೇತುವೆ, 1 ಕಟ್ಟಡ, ಜಿಲ್ಲಾ ನಗರಾಭಿವೃದ್ಧಿ ಕೋಶ ವ್ಯಾಪ್ತಿಯ 152.50 ಕಿ.ಮೀ. ರಸ್ತೆ, 44 ಸೇತುವೆ, ಮೆಸ್ಕಾಂ ವ್ಯಾಪ್ತಿಯ 1,283 ಕಂಬಗಳು, 20 ಪರಿವರ್ತಕ ಹಾಗೂ 35.90 ಕಿ.ಮೀ. ವಿದ್ಯುತ್‌ ತಂತಿ ನಾಶವಾಗಿದೆ.

ಒಟ್ಟಾರೆಯಾಗಿ 166.29 ಕೋ.ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾಶ್ವತ ಪರಿಹಾರ ಕಾರ್ಯಕ್ಕೆ ಇಷ್ಟು ಅನುದಾನ ಅಗತ್ಯವಿದೆ. ತುರ್ತು ಪರಿಹಾರ ಕಾರ್ಯಕ್ಕೆ 76 ಕೋ.ರೂ. ಬೇಕಿದೆ. ಸೇತುವೆ, ರಸ್ತೆ ಇತ್ಯಾದಿ ತುರ್ತು ಅಗತ್ಯತೆಯ ಮೂಲಸೌಕರ್ಯವನ್ನು ಆಗಿಂದಾಗ್ಗೆ ಲಭ್ಯವಿರುವ ಅನುದಾನದಲ್ಲಿ ಸರಿಪಡಿಸುವ ಕಾರ್ಯವೂ ನಡೆ
ಯುತ್ತಿದೆ. ಹಾನಿ ಸಮೀಕ್ಷೆ ನಿರಂ ತರ ನಡೆಯುತ್ತಿದೆ ಎಂದರು.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಬಿದ್ದಿರುವ ಹೊಂಡಗಳಿಂದ ಆಗುತ್ತಿರುವ ಅನಾಹುತಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಲಾಗಿದೆ. ಹಾಗೆಯೇ ರಸ್ತೆ ಹೊಂಡವನ್ನು ತುರ್ತಾಗಿ ಸರಿಪಡಿಸಲು ನಿರ್ದೇಶ ನೀಡಲಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮುಂದಿನ ಕ್ರಮ ಸರಕಾರದಿಂದಲೇ ಆಗಲಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದಂತೆ ಸರಕಾರಕ್ಕೆ ದೂರು ಸಲ್ಲಿಸಲಾಗಿದೆ ಎಂದರು.

ಪರ್ಕಳ ರಸ್ತೆ ಕಾಮಗಾರಿಗೆ ಸೂಚನೆ
ಪರ್ಕಳದಲ್ಲಿ ಹೆದ್ದಾರಿ ಮಳೆಯಿಂದ ಹಾಳಾಗಿ ಸಾರ್ವಜನಿಕರಿಗೆ ನಿತ್ಯ ಸಮಸ್ಯೆ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ನಿರ್ದೇಶನವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

Advertisement

ಇಲಿಜ್ವರ, ಮಂಕಿಪಾಕ್ಸ್‌:
ಅಗತ್ಯ ಮುನ್ನೆಚ್ಚರಿಕೆ
ಉಡುಪಿ ಜಿಲ್ಲೆಯಲ್ಲಿ ಮಂಕಿಪಾಕ್ಸ್‌ನ ಯಾವುದೇ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ವಿದೇಶ ಹಾಗೂ ಹೊರರಾಜ್ಯದಿಂದ ಬರುವವರ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

ಜನವರಿಯಿಂದ ಜೂನ್‌ ವರೆಗೆ ಉಡುಪಿಯಲ್ಲಿ 28, ಕುಂದಾಪುರದಲ್ಲಿ 44, ಕಾರ್ಕಳದಲ್ಲಿ 13 ಸೇರಿ 85 ಇಲಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಸಾರ್ವಜನಿಕರು ಈ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು. ಜ್ವರ ಬಂದ ತತ್‌ಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಜನರು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಮಂಕಿಪಾಕ್ಸ್‌ ಸಂಬಂಧ ಜಿಲ್ಲೆಯಲ್ಲಿ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ವಿದೇಶದಿಂದ ಬರುವವರ ಮಾಹಿತಿ ಪಡೆದು ಅವರ ಮೇಲೆ ನಿಗ ಇಡಲಾಗುತ್ತಿದೆ. ಕೇರಳಕ್ಕೆ ಬಂದಿರುವ ಒಬ್ಬರಿಗೆ ಮಂಕಿಪಾಕ್ಸ್‌ ಕಾಣಿಸಿಕೊಂಡಿರುವುದರಿಂದ ಅವರು ಪ್ರಯಾಣಿಸಿರುವ ವಿಮಾನದಲ್ಲಿದ್ದ ನಮ್ಮ ಜಿಲ್ಲೆಯವರ ಮಾಹಿತಿ ಕಲೆಹಾಕಿರುವ ನಿಗಾ ಇಡಲಾಗಿದೆ ಎಂದರು.

415.97 ಹೆ. ಪ್ರದೇಶದಲ್ಲಿ ಬೆಳೆ ಹಾನಿ;
3.39 ಕೋ.ರೂ. ನಷ್ಟ ಅಂದಾಜು
ಉಡುಪಿ: ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 129 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿಯವರು ಬಂದ ಸಂದರ್ಭದಲ್ಲಿ ಅಧಿಕಾರಿಗಳು ವರದಿ ಒಪ್ಪಿಸಿದ್ದರು. ವಾಸ್ತವದಲ್ಲಿ ಇನ್ನೂ ಹೆಚ್ಚು ಹಾನಿಯಾಗಿದೆ.

ಈವರೆಗೆ ಜಿಲ್ಲೆಯ ಸುಮಾರು 750 ರೈತರಿಂದ 415.97 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಕೃಷಿ ಇಲಾಖೆಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. 3.39 ಕೋ.ರೂ. ನಷ್ಟ ಅಂದಾಜಿಸಲಾಗಿದೆ. ಗ್ರಾಮೀಣ ರೈತರು ಹಾನಿಯ ಮಾಹಿತಿಯನ್ನು ದಾಖಲೆಗಳೊಂದಿಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ಇಲಾಖೆಯ ತಾಲೂಕು ಕಚೇರಿಗಳಿಗೆ ಸಲ್ಲಿಸುತ್ತಿದ್ದಾರೆ. ಅಲ್ಲಿನ ಸಿಬಂದಿ ಅದನ್ನು ಕ್ರೋಡೀಕರಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ. 8.77 ಹೆಕ್ಟೇರ್‌ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ.

ನೇರಹಣ ವರ್ಗಾವಣೆ
ಬೆಳೆ ಹಾನಿಗೆ ಹೆಕ್ಟೇರ್‌ಗೆ 6,500 ರೂ.ಗಳನ್ನು ಕೇಂದ್ರ ಸರಕಾರ ಹಾಗೂ 6,500 ರೂ. ರಾಜ್ಯ ಸರಕಾರ ನೀಡಲಿದೆ. ಪ್ರತೀ ರೈತರಿಗೆ ಒಂದು ಹೆಕ್ಟೇರ್‌ಗೆ 13,000 ರೂ.ಗಳನ್ನು ಅವರ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ. ಇದು ಸಾಫ್ಟ್ವೇರ್‌ ಆಧಾರದಲ್ಲಿ ಆಗಲಿರುವುದರಿಂದ ಈಗ ಮಾಹಿತಿ ಸಂಗ್ರಹಿಸಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಪರಿಹಾರ ನೀಡುವಾಗ ಏಕಕಾಲದಲ್ಲಿ ಎಲ್ಲ ರೈತರಿಗೂ ಹೋಗುತ್ತದೆ. ಬೆಳೆಹಾನಿಗೆ ಪ್ರತ್ಯೇಕವಾಗಿ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪರ್ಯಾಯ ವ್ಯವಸ್ಥೆ
ಈಗಾಗಲೇ ಸರಕಾರಿಂದ ಬೀಜ ಖರೀದಿಸಿ ಬಿತ್ತನೆ ಮಾಡಿ ಮಳೆಯಿಂದ ನಾಶವಾಗಿದ್ದರೆ ಅಂತಹ ರೈತರಿಗೆ ಮತ್ತೆ ಅದೇ ಬೀಜ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಕರಾವಳಿಗೆ ಸರಿ ಹೊಂದುವ ಜ್ಯೋತಿ ತಳಿಯ ಬೀಜಗಳನ್ನು ನೀಡಲಾಗುತ್ತದೆ. ಎಂಒ4, ಕಜೆ ಮೊದಲಾದ ಬೀಜಗಳನ್ನು ಕರಾವಳಿಯಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತದೆ. ಯಾವುದೇ ರೈತರು ಬೀಜದ ಕೊರತೆಯಿಂದ ಬಿತ್ತನೆ ಮಾಡದೇ ಇರುವುದು ಸರಿಯಲ್ಲ. ಈಗಾಗಲೇ ಬೀಜ ತೆಗೆದುಕೊಂಡಿದ್ದು, ಮಳೆಯಿಂದ ನಾಶವಾಗಿದ್ದರೆ ಮತ್ತೆ ಬೀಜ ನೀಡುವ ವ್ಯವಸ್ಥೆಯನ್ನು ಇಲಾಖೆ ಮಾಡುತ್ತಿದೆ. ಅಂತಹ ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

ಶೀಘ್ರ ಪರಿಹಾರಕ್ಕೆ ಆಗ್ರಹ
ಹಾನಿಯ ಮಾಹಿತಿಯನ್ನು ಘಟನೆ ನಡೆದ ಕೂಡಲೇ ಪಡೆಯಲಾಗುತ್ತದೆ. ಆದರೆ ಪರಿಹಾರ ವಿಳಂಬವಾಗುತ್ತದೆ. ಅಷ್ಟರ ವರೆಗೆ ಕಾದು ಕುಳಿತರೆ ಕೃಷಿ ಚಟುವಟಿಕೆ ಸಾಗುವುದಿಲ್ಲ. ಮರು ಬಿತ್ತನೆ ತತ್‌ಕ್ಷಣವೇ ಮಾಡಬೇಕಿರುವುದರಿಂದ ಸರಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next