Advertisement

ದೀನ ದುರ್ಬಲರಿಗಾಗಿ ಕುಣಿದ ರಾಧೆ-ಕೃಷ್ಣ-ಗೋಪಿಕೆಯರು

10:12 PM Sep 19, 2019 | mahesh |

ಆತ್ಮ ಸಂತೋಷಕ್ಕಾಗಿ, ಕೃಷ್ಣ ಮೇಲಿನ ಭಕ್ತಿಯಿಂದ/ಪ್ರೀತಿಯಿಂದ, ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಾ ಸಂಗ್ರಹವಾದ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ವೈದ್ಯಕೀಯ ವೆಚ್ಚ, ಶಿಕ್ಷಣ, ಮನೆ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳಿಗಾಗಿ ವೇಷ ಹಾಕುವವರಿದ್ದಾರೆ.

Advertisement

ಶ್ರೀ ಕೃಷ್ಣಜನ್ಮಾಷ್ಟಮಿಗೆ ವೇಷ ಹಾಕುವುದು ಈಗೀಗ ಒಂದು ಹೊಸ ಆಯಾಮ ಪಡೆದುಕೊಂಡಿದೆ. ಹಲವರು ಆತ್ಮ ಸಂತೋಷಕ್ಕಾಗಿ, ಮತ್ತೆ ಕೆಲವರು ಕೃಷ್ಣ ಮೇಲಿನ ಭಕ್ತಿಯಿಂದ/ಪ್ರೀತಿಯಿಂದ, ಇನ್ನು ಕೆಲವರು ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಾ ಸಂಗ್ರಹವಾದ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ವೈದ್ಯಕೀಯ ವೆಚ್ಚ-ಶಿಕ್ಷಣ, ಮನೆ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳಿಗಾಗಿ ವೇಷ ಹಾಕುವವರಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ ಸಮೂಹ ಸಂಚಲನವೊಂದನ್ನು ಈ ಬಾರಿಯ ಶ್ರೀ ಕೃಷ್ಣ ಲೀಲೋತ್ಸವದಂದು ನೃತ್ಯನಿಕೇತನ ಕೊಡವೂರು ಇದರ ವಿದ್ಯಾರ್ಥಿನಿಯರು ಮಾಡಿದ್ದಾರೆ.

ಆಯ್ದ ಮನೆಗಳಲ್ಲಿ ರಾಧಾಕೃಷ್ಣ ನೃತ್ಯ ಪ್ರದರ್ಶನ ನೀಡಿ ಸಂಗ್ರಹವಾದ ಮೊತ್ತವನ್ನು ಸಮಾಜದ ದೀನ-ದುರ್ಬಲರಿಗೆ ಜಾತಿ-ಮತ-ಧರ್ಮ ಬೇಧವಿಲ್ಲದೆ ಹಂಚುವ ಪ್ರಯತ್ನ ಪ್ರಶಂಸನೀಯ. ಸಂಗ್ರಹಿಸಿದ ಹಣವನ್ನು ವಿತರಿಸುವ ಸಮಾರಂಭ ಇತ್ತೀಚೆಗೆ ನಡೆದು ಈ ಸಂದರ್ಭದಲ್ಲಿ ಕುಣಿದಾಡೋ ಕೃಷ್ಣ ಎನ್ನುವ ನೃತ್ಯ ಕಾರ್ಯಕ್ರಮ ನೀಡಿದರು. ಕೃಷ್ಣನಿಗರ್ಪಿತವಾದ ಮೊದಲ ನೃತ್ಯ ಕುಸುಮದಲ್ಲಿ ಮುನಿಸಿಕೊಂಡ ರಾಧೆಯನ್ನು ಒಲಿಸಿಕೊಳ್ಳಲು ಕೃಷ್ಣನು ಹೆಣೆದ ಮಾಯಾಜಾಲ ಪರಿಣಾಮಕಾರಿಯಾಗಿ ಅಭಿವ್ಯಕ್ತವಾಯಿತು. ರಾಧೆಯ ಸಮಕ್ಷಮ ಇತರ ಗೋಪಿಕೆಯರೊಂದಿಗೆ ಸರಸ-ಸಲ್ಲಾಪ, ಅವರೊಂದಿಗೆ ಒಲವಿನ ಒಡನಾಟ ಕಂಡು ರಾಧೆ ಹುಸಿಕೋಪದಿಂದ ಕೃಷ್ಣನನ್ನು ನಿರ್ಲಕ್ಷಿಸುವುದು, ಕೃಷ್ಣನ ರಮಿಸುವಿಕೆ ಇತ್ಯಾದಿಗಳನ್ನು ಕಲಾವಿದೆಯರು ಸೊಗಸಾಗಿ ವ್ಯಕ್ತಪಡಿಸಿದರು. ಮುಂದಿನ ನೃತ್ಯದಲ್ಲಿ ಕಾರಿರುಳಿನಲ್ಲಿ ರಾಧೆಯನ್ನು ಭಯಭೀತಳನ್ನಾಗಿಸಿ ತನ್ಮೂಲಕ ಆಕೆಯ ಸಾಮೀಪ್ಯ ಸಾಧಿಸಿ, ಕತ್ತಲೆಗೆ ಹೆದರಿದಂತೆ ನಟಿಸಿ ಅಮ್ಮ ಯಶೋದಾಳನ್ನು ದೀಪ ತರುವಂತೆ ಬಿನ್ನೆçಸುವ, ತನ್ನ ಸಲಹೆಯಂತೆ ಅಡಗಿ ಕುಳಿತ ರಾಧೆಯನ್ನು ಯಶೋದೆಗೆ ತೋರಿಸಿ ಆಕೆಯನ್ನು ಮುಜುಗರಕ್ಕೀಡು ಮಾಡುವ, ತಾಯಿಗೆ ತನ್ನ ಹಾಗೂ ರಾಧೆಯ ಪ್ರಣಯದಾಟ ಪರಿಚಯಿಸುವ ಮುಂತಾದ ತುಂಟಾಟಗಳನ್ನು ವಿ|ಅನಘಾಶ್ರೀ ಪ್ರಸ್ತುತ ಪಡಿಸಿದರು.

Advertisement

ಗೋಪಿಕೆಯರ ವಸ್ತ್ರಾಪಹರಣ, ಅವರೊಂದಿಗೆ ಕಣ್ಣಮುಚ್ಚಾಲೆಯಾಟ, ವೇಣಿಯೊಂದಿಗೆ ವೇಣುನಿನಾದ ಮುಂತಾದ ಕೃಷ್ಣಲೀಲೆಗಳನ್ನು ಸುರಭಿ ಸುಧೀರ್‌ ಅಭಿನಯಪೂರ್ವಕ ನೃತ್ಯ ಸಂಚಲನದೊಂದಿಗೆ ಸಾಕಾರಗೊಳಿಸಿದರು. ಬಾಹ್ಯ ಚಕ್ಷುಗಳಿಲ್ಲದಿದ್ದರೂ ಅಂತಃಚಕ್ಷುವಿನಿಂದ ಕೃಷ್ಣನನ್ನು ಆರಾಧಿಸುತ್ತಿದ್ದ ಸೂರದಾಸನಿಗೆ ಶ್ರೀಕೃಷ್ಣನು ತನ್ನ ಸುಂದರ ರೂಪವನ್ನು ನೋಡಲು ದಿವ್ಯ ಚಕ್ಷುಗಳನ್ನಿತ್ತು ಮತ್ತೆ ಆತನ ಕೋರಿಕೆಯಂತೆ ಹುಟ್ಟು ಕುರುಡನನ್ನಾಗಿಸಿದ ದೃಶ್ಯಾವಳಿಗಳು ಅಂತಃಕರಣ ಕಲಕುವಂತೆ ಮೂಡಿ ಬಂದವು. ಕೊನೆಯ ನೃತ್ಯದಲ್ಲಿ ಗೋಪಿಕೆಯರ ಮನದಿಂಗಿತವನ್ನು ಪೂರೈಸುವ ವಿವಿಧ ರೂಪ-ಶೈಲಿಗಳಲ್ಲಿ ಪ್ರಕಟವಾಗುವ ತುಂಟ-ನಂಟ ಕೃಷ್ಣನನ್ನು ನಯನಮನೋಹರವಾಗಿ ಚಿತ್ರಿಸಿದ ನೃತ್ಯ ಕಲಾವಿದೆಯರು ಅಭಿನಂದನಾರ್ಹರು.

ಜನನಿ ಭಾಸ್ಕರ ಕೊಡವೂರು

Advertisement

Udayavani is now on Telegram. Click here to join our channel and stay updated with the latest news.

Next