Advertisement

Rabkavi Banhatti: ಶತಮಾನದ ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಗರಡಿ ಮನೆ

04:17 PM May 17, 2024 | Team Udayavani |

ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಯಾವುದದೇ ಜಾತ್ರೆ, ಉತ್ಸವ, ಹಬ್ಬ, ಹರಿದಿನಗಳಿರಲಿ ಅಲ್ಲಿ ಕಡ್ಡಾಯವಾಗಿ ಕುಸ್ತಿ ಇರಲೇಬೇಕು.

Advertisement

ಕುಸ್ತಿ ಇಲ್ಲಿಯ ಜನರಿಗೆ ಒಂದು ಮನರಂಜನೆಯಾದರೆ ಪೈಲ್ವಾನರಿಗೆ ತಮ್ಮ ಕಲೆ ಪ್ರದರ್ಶನ ಮಾಡಲು ಒಂದು ವೇದಿಕೆ ದೊರೆತಂತಾಗುತ್ತದೆ. ಗ್ರಾಮೀಣರಲ್ಲಿ ನಮ್ಮ ಮನೆಯಲ್ಲಿ ಒಬ್ಬ ಕುಸ್ತಿಪಟು ಇದ್ದಾನೆ ಎಂಬುದನ್ನು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿ.

ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ನಾವು ಗರಡಿ ಮನೆಗಳನ್ನು ಕಾಣಬಹುದಾಗಿದೆ.

ಅಲ್ಲಿ ಬೆಳಗ್ಗೆ ಮತ್ತು ಸಂಜೆ ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಕಿರಿಯರು ತಾಲೀಮು ನಡೆಸುತ್ತಾರೆ. ಅಂತಹದ್ದೇ ಒಂದು ತಾಲಿಮನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರಪೇಟೆ ಎಂಬಲ್ಲಿ ಸಮಸ್ತ ದೈವ ಮಂಡಳಿಯ ಶತಮಾನ ಕಂಡಿರುವ ಗರಡಿ ಮನೆ ನಿತ್ಯ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಹೊಸ ಪ್ರತಿಭೆಗಳನ್ನು ಬೆಳೆಸುತ್ತಾ ನಡೆದಿದೆ.

ಅದಕ್ಕೆ ಬೆಂಗಾವಲಾಗಿ ನಿಂತವರು ಸೋಮವಾರಪೇಟೆ ಸಮಸ್ತ ದೈವ ಮಂಡಳಿಯ ಹಿರಿಯರು ಹಾಗೂ ಹಿರಿಯ ತರಬೇತಿದಾರ ಕಾಡಪ್ಪ ಜಿಡ್ಡಿಮನಿ ಮತ್ತು ಅವರ ತಂಡ. ಸದ್ಯ ಗರಡಿ ಮನೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಕುಸ್ತಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

Advertisement

ಇಲ್ಲಿ ತರಬೇತಿ ಪಡೆದುಕೊಂಡ ಯಲ್ಲಟ್ಟಿ ಗ್ರಾಮದ ಪೈಲ್ವಾನರು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ರಾಘವೇಂದ್ರ ನಾಯಕ, ಬಾಲಾಜಿ ಭಜಂತ್ರಿ, ಯಶ್ವಂತ ಸಣ್ಣಕ್ಕಿ, ಆದಿತ್ಯ ತಳವಾರ, ತನ್ವೀರ ಫಣಿಬಂದ, ಆದಿತ್ಯ ಹಟ್ಟಿಪಾಟೀಲ, ಕಲ್ಮೇಶ ಹನಗಂಡಿ, ಅನಸ ಅಪರಾಧ, ಕಾರ್ತಿಕ ಮಡ್ಡಿ, ದಾಮೋದರ ಕಾಜುವೆ, ಪ್ರಶಾಂತ ಧೋತರೆ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಗರಡಿ ಮನೆ ಕೀರ್ತಿ ಹೆಚ್ಚಿಸಿದ್ದಾರೆ.

ಶತಮಾನದ ಇತಿಹಾಸ ಹೊಂದಿರುವ ಸೋಮವಾರಪೇಟೆ ದೈವ ಮಂಡಳಿಯ ಗರಡಿ ಮನೆಯಲ್ಲಿ ತರಬೇತಿ ಹೊಂದಿ ರಾಜ್ಯ ಹಾಗೂ ಕೇಂದ್ರ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೂರಾರು ಜನ ಕೆಲಸ ಮಾಡುತ್ತಿರುವುದು ಈ ಗರಡಿ ಮನೆಯ ಹೆಮ್ಮೆ.

ಇಂತಹ ಗರಡಿ ಮನೆಯನ್ನು ಸದ್ಯ ಹಿರಿಯ ಕುಸ್ತಿ ಪಟು, ತರಬೇತುದಾರ ಕಾಡಪ್ಪ ಜಿಡ್ಡಿಮನಿ ಮಾರ್ಗದರ್ಶನದಲ್ಲಿ ತರಬೇತುದಾರ ರಮೇಶ ಜಿಡ್ಡಿಮನಿ, ಕಾಡಪ್ಪ ಮಹಿಷವಾಡಗಿ ನಡೆಸಿಕೊಂಡು ಹೋಗುತ್ತಿದ್ದು, ಗ್ರಾಮೀಣ ಕುಸ್ತಿ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಎಲ್ಲ ಕುಸ್ತಿ ಪಟುಗಳು ಕೇವಲ ಶಾಲಾ-ಕಾಲೇಜು ಮಟ್ಟದ ಕುಸ್ತಿ ಪಂದ್ಯದಲ್ಲಿ ಭಾಗವಹಿಸದೆ, ಈ ಭಾಗದಲ್ಲಿ ನಡೆಯುವ ಇತರೆ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.

ಬನಹಟ್ಟಿ, ಜಗದಾಳ, ಹೊಸೂರ, ಆಸಂಗಿ ಮತ್ತು ಅಸ್ಕಿ ಗ್ರಾಮದ ಬಾಲಕರು ತರಬೇತಿಗಾಗಿ ಇಲ್ಲಿಗೆ ಬರುತ್ತಾರೆ. ಇವರೆಲ್ಲರಿಗೂ ಇಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ. ಇವರೆಲ್ಲರಿಗೂ ಸದ್ಯ ಮಣ್ಣಿನ ಮೇಲೆಯೇ ತರಬೇತಿ ನೀಡಲಾಗುತ್ತದೆ.

ಇಲ್ಲಿಯ ಹಿರಿಯ ತರಬೇತುದಾರ ಕಾಡಪ್ಪ ಜಿಡ್ಡಿಮನಿ ಕುಸ್ತಿಗಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡಿದ್ದು, ಈ ಭಾಗದಲ್ಲಿ ಎಲ್ಲೇ ಕುಸ್ತಿ ಪಂದ್ಯಾವಳಿ ನಡೆದರೂ ಅಲ್ಲಿ ನಿರ್ಣಾಯಕರಾಗಿ ಭಾಗವಹಿಸುತ್ತಾರೆ. ಅಲ್ಲದೇ ಅವರ ಗರಡಿಯಲ್ಲಿ ಸಾವಿರಾರು ಪೈಲ್ವಾನರು ತರಬೇತಿ ಹೊಂದಿ ಉತ್ತಮ ಪೈಲ್ವಾನರಾಗಿ ಹೊರಹೊಮ್ಮಿದ್ದಾರೆ. ಕುಸ್ತಿ ವಿಷಯವಾಗಿ ಝೀ ಟೀವಿ ವಾಹಿನಿಯ ಲೈಫ್ ಸುಪರ್ ಗುರು ಎಂಬ ರಿಯಾಲಿಟಿ ಷೋದಲ್ಲಿ ಭಾಗವಹಿಸಿದ್ದರು.

ಇಲ್ಲಿನ ಗರಡಿ ಮನೆಯನ್ನು 2001 ರಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ತಮ್ಮ ತಂದೆ ದಿ. ಮಹಾದೇವಪ್ಪ ಬಿದರಿ ಅವರ ಸ್ಮರಣಾರ್ಥ ನಿರ್ಮಿಸಿ ಕೊಟ್ಟಿದ್ದಾರೆ. ಇಂತಹ ಅಪರೂಪದ ಗರಡಿ ಮನೆಗೆ ಇನ್ನಷ್ಟು ಸೌಕರ್ಯಗಳು ಬೇಕಾಗಿದ್ದು, ರಾಜ್ಯ ಸರಕಾರ ಹಾಗೂ ಸ್ಥಳೀಯ ಶಾಸಕರು ಇತ್ತ ಗಮನ ಹರಿಸಿ ಗರಡಿ ಮನೆಗೆ ಹಾಗೂ ಮ್ಯಾಟ್ ಕುಸ್ತಿಗೆ ಬೇಕಾಗುವ ಆಧುನಿಕ ಸಲಕರಣೆಗಳನ್ನು ಒದಗಿಸಿದ್ದಲ್ಲಿ ಇಲ್ಲಿನ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ.

ಇಂದಿನ ಆಧುನಿಕ ಮ್ಯಾಟ್ ಕುಸ್ತಿಗೆ ಬೇಕಾಗುವ ಮ್ಯಾಟ್‌ಗಳನ್ನು ಒದಗಿಸಿದ್ದಲ್ಲಿ ಯುವ ಪೀಳಿಗೆಗೆ ಇದರಿಂದ ಅನುಕೂಲವಾಗಲಿದೆ. ಆದಷ್ಟು ಬೇಗ ಸರಕಾರ ಹಾಗೂ ಸಚಿವರು ಇತ್ತ ಗಮನ ಹರಿಸಬೇಕಿದೆ. – ಕಾಡಪ್ಪ ಜಿಡ್ಡಿಮನಿ, ಹಿರಿಯ ತರಬೇತುದಾರರು

ಸೋಮವಾರಪೇಟೆ ಸಮಸ್ತ ದೈವ ಮಂಡಳಿ ಗರಡಿ ಮನೆ ಶತಮಾನದ ಇತಿಹಾಸ ಹೊಂದಿದ್ದು ಇಲ್ಲಿ ತರಬೇತಿ ಹೊಂದಿದ್ದ ಹಲವಾರು ಜನ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಇಂದಿನ ಆಧುನಿಕ ಕುಸ್ತಿಗೆ ತಕ್ಕಂತೆ ಬದಲಾಗಬೇಕಾದ ಅನಿವಾರ್ಯತೆ ಇದ್ದು ಸರಕಾರ ಇಂತಹ ಗರಡಿಮನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಗತ್ಯ ಪ್ರೋತ್ಸಾಹ ನೀಡಬೇಕು. –ಪ್ರಶಾಂತ ಕೊಳಕಿ, ಸದಸ್ಯರು, ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ, ಬನಹಟ್ಟಿ

  • ಕಿರಣ ಶ್ರೀಶೈಲ ಆಳಗಿ
Advertisement

Udayavani is now on Telegram. Click here to join our channel and stay updated with the latest news.

Next