Advertisement

ಕಂಬಳಕ್ಕೆ ಶೀಘ್ರ ಕಾನೂನು ಮಾನ್ಯತೆ: ಸಚಿವ ಮಂಜು

12:35 PM Jan 22, 2018 | Team Udayavani |

ಪುತ್ತೂರು: ಕಂಬಳಕ್ಕೆ ಕಾನೂನು ರೂಪಿಸಿ, ರಾಷ್ಟ್ರಪತಿಗೆ ಕಳುಹಿಸಲಾಗಿದೆ. ಅವರು ಅಂಕಿತ ಹಾಕಿದ ತತ್‌ಕ್ಷಣ ಕಂಬಳಕ್ಕೂ ಕಾನೂನಿನ ಮಾನ್ಯತೆ ಸಿಗಲಿದೆ ಎಂದು ಪಶುಸಂಗೋಪನ ಸಚಿವ ಎ. ಮಂಜು ಅವರು ಹೇಳಿದರು.

Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಸಾರಥ್ಯದಲ್ಲಿ ಶನಿವಾರ ಉದ್ಘಾಟನೆಗೊಂಡ ರಜತ ವರ್ಷದ ಹೊನಲು ಬೆಳಕಿನ ಕೋಟಿ- ಚೆನ್ನಯ ಜೋಡುಕರೆ ಕಂಬಳ ಪ್ರಯುಕ್ತ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರಾತನ ಕಾಲದಿಂದ ಕಂಬಳ ಕ್ರೀಡೆಯಾಗಿ ಮಾನ್ಯತೆ ಪಡೆದಿದೆ. ಇಲ್ಲಿ ಶಿಸ್ತಿದೆ. ಕೋಣ ಸಾಕುವ, ಓಡಿಸುವುದರಲ್ಲಿ
ಅಚ್ಚುಕಟ್ಟುತನವಿದೆ. ಇಷ್ಟೆಲ್ಲ ಮಾಡುವುದು ಲಾಭಕ್ಕಾಗಿ ಅಲ್ಲ. ರಾಷ್ಟ್ರಪತಿ ಗಳ ಅಂಕಿತ ಬಿದ್ದ ಬಳಿಕ ಕಂಬಳಕ್ಕೆ ಯಾವುದೇ ಅಡ್ಡಿ- ಆತಂಕ ಇರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಮಾತನಾಡಿ, ಉತ್ತಮ ಕ್ರೀಡೆ ಎಂದರೆ ಕಂಬಳ. ಇದರಲ್ಲೂ ನಂ. 1 ಕಂಬಳ ಪುತ್ತೂರಿನದ್ದು. ಮುಂದೆಯೂ ಇದು ನಂ. 1 ಆಗಿಯೇ ಇರಬೇಕು. ಜಯಕರ್ನಾಟಕ ಸಂಘಟನೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದೆ. ಆಶ್ವಾಸನೆ ನೀಡಿ, ಕೆಲಸ ಮಾಡದ ರಾಜಕೀಯ ನಾಯಕರ ಗಮನ ಸೆಳೆಯುವ ಕೆಲಸವನ್ನು ಸಂಘಟನೆ ಮಾಡುತ್ತಿದೆ. ಎಲ್ಲ ಸಚಿವರ ಜತೆ ಆತ್ಮೀಯವಾಗಿದ್ದೇವೆ. ಹಾಗೆಂದು ಆಶ್ವಾಸನೆ ಈಡೇರಿಸದೇ ಇದ್ದಾಗ, ಮುಲಾಜಿಲ್ಲದೇ ಪ್ರಶ್ನಿಸುತ್ತೇವೆ ಎಂದರು.

ಒಂದು ಸಮಯದಲ್ಲಿ ಪುತ್ತೂರಿನಲ್ಲಿ ತುಂಬಾ ಗಲಾಟೆ ನಡೆಯುತ್ತಿತ್ತು. ಆಗ ಜಿಲ್ಲೆಯಿಂದ ತನ್ನನ್ನು ಡಿಬಾರ್‌ ಮಾಡಲಾಗಿತ್ತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ನೀವೆಲ್ಲರೂ ನನ್ನ ಕೈಬಿಟ್ಟಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

ನಮಸ್ಕಾರ… ನಮಸ್ಕಾರ…
ತಮ್ಮ ಎಂದಿನ ಶೈಲಿಯ ನಮಸ್ಕಾರದ ಮೂಲಕವೇ ಮಾತು ಆರಂಭಿಸಿದವರು ಸಿನೆಮಾ ನಟ, ಗೋಲ್ಡನ್‌
ಸ್ಟಾರ್‌ ಗಣೇಶ್‌. ‘ಐ ಸಪೋರ್ಟ್‌ ಕಂಬಳ’ ಅಭಿಯಾನದಲ್ಲಿ ತಾನೂ ಒಬ್ಬನಾಗಿದ್ದೆ ಎಂದು ನೆನಪಿಸಿಕೊಂಡರು. ರಂಗಾಯಣ ರಘು ಕಾಲುನೋವು ಎಂದರು. ಎರಡು ಜತೆ ಕೋಣ ಕೊಡಿಸುತ್ತೇನೆ. ಅಂಗಿ ಬಿಚ್ಚಿ, ಕೋಣಗಳನ್ನು ಓಡಿಸಿ ಎಂದೆ. ಅವರು ಕೋಣಗಳನ್ನು ಓಡಿಸಲು ಸಿದ್ಧರಾಗಿದ್ದಾರೆ. ನೀವು ನೋಡಲು ರೆಡಿನಾ ಎಂದು ಪ್ರೇಕ್ಷಕರನ್ನು ಪ್ರಶ್ನಿಸಿದರು. ಶಿಳ್ಳೆ, ಚಪ್ಪಾಳೆ ಪ್ರೇಕ್ಷಕರ ಉತ್ತರವಾಗಿತ್ತು. ಸಭಿಕರ ಒತ್ತಾಯದ ಮೇರೆಗೆ “ಅನಿಸುತಿದೆ ಯಾಕೋ ಇಂದು’ ಹಾಡು ಹಾಡಿದರು. ಪ್ರಸಿದ್ಧ ಡೈಲಾಗ್‌, ‘ನೀವೆಲ್ಲೇ ಇರಿ, ಹೇಗೆ ಇರಿ…’ ಹೇಳಿದರು.

ಪ್ರಕೃತಿಗೆ ಪೂರಕ
ಹಾಸ್ಯ ನಟ ರಂಗಾಯಣ ರಘು ಮಾತನಾಡಿ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಉಳಿಸಿಕೊಂಡರು. ತುಳುನಾಡಿನಲ್ಲಿ ಕಂಬಳ ಉಳಿದು, ಬೆಳೆಯಬೇಕು. ಕಂಬಳವನ್ನು ಬ್ಯಾನ್‌ ಮಾಡಿ ಎನ್ನುವವರು ಮೊದಲು ರೇಸ್‌ ಕೋರ್ಸನ್ನು ಬ್ಯಾನ್‌ ಮಾಡುವತ್ತ ಗಮನ ಹರಿಸಬೇಕು. ರೇಸ್‌ ಕೋರ್ಸಲ್ಲಿ ಕುದುರೆಯ ಮೇಲೆ ಕುಳಿತು ಓಡಿಸುವುದು ಹಿಂಸೆಯಲ್ಲವೇ? ಅದು ಶೋಕಿಯ ಆಟ. ಕಂಬಳ ರೈತರ ಆಟ. ಸೆಲ್ಫಿಯ ಶೋಕಿ ಬಿಟ್ಟು, ಕಂಬಳದ ಕೋಣಗಳನ್ನು ಹಿಡಿದುಕೊಳ್ಳಿ. ಪರಂಪರೆಯ ಆಟವನ್ನು ಮುಂದುವರೆಸಿ. ಇದು ಪ್ರಕೃತಿಗೆ ಪೂರಕ ಆಗಿರುತ್ತದೆ ಎಂದರು. ಬಿಜೆಪಿಯಲ್ಲಿದ್ದ ತಾವು ಕಾಂಗ್ರೆಸ್‌ ಸೇರಲು ಕಂಬಳ ವೇದಿಕೆಯೇ ಕಾರಣವಾದ ಸಂಗತಿಯನ್ನು ಶಾಸಕಿ ಶಕುಂತಳಾ ಶೆಟ್ಟಿ ಪರೋಕ್ಷವಾಗಿ ವಿವರಿಸಿದರು.

ಆತ್ಮಾವಲೋಕನ ಅಗತ್ಯ
ತೀರ್ಪುಗಾರ ಕೆ. ಗುಣಪಾಲ ಕಡಂಬ ಮಾತನಾಡಿ, ಕಂಬಳ ಕಾನೂನಿಗೆ ರಾಷ್ಟ್ರಪತಿಗಳ ಅಂಕಿತ ಇನ್ನೂ ಬಿದ್ದಿಲ್ಲ. ಲೇಸರ್‌ ಫಿನಿಶಿಂಗ್‌ ತಂತ್ರಜ್ಞಾನ ಇಲ್ಲದೇ ಇರುತ್ತಿದ್ದರೆ ಕಂಬಳದ ಫಲಿತಾಂಶ ಪಡೆಯುಲು ಕಷ್ಟ ಇರುತ್ತಿತ್ತು. ಎರಡು ದಿನವಾದರೂ ಕಂಬಳ ಮುಗಿಯುತ್ತಿರಲಿಲ್ಲ ಎಂದರು.

149 ಜೋಡಿ ಕೋಣ
ಪುತ್ತೂರಿನ ಕೋಟಿ- ಚೆನ್ನಯ ಜೋಡು ಕರೆಯಲ್ಲಿ 149 ಜೋಡಿ ಕೋಣಗಳು ಭಾಗವಹಿಸಿದವು. ಆರು ವಿಭಾಗದಲ್ಲಿ ಕಂಬಳ ಕೂಟ ನಡಯಿತು. ದೇವರಮಾರು ಗದ್ದೆಯಲ್ಲಿ ಸಾವಿರಾರು ಸಂಖ್ಯೆಯ ಕಂಬಳಾಭಿಮಾನಿಗಳು ಹೊನಲು ಬೆಳಕಿನ ಕಂಬಳ ವೀಕ್ಷಿಸಿ, ಸಂಭ್ರಮಪಟ್ಟರು.

ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ, ಅದಾನಿ ಪವರ್‌ ಗ್ರೂಪ್‌ ಪಡುಬಿದ್ರಿಯ ಎಂ.ಡಿ. ಕಿಶೋರ್‌ ಆಳ್ವ, ಪ್ರಮುಖರಾದ
ರೋಹಿತ್‌ ಹೆಗ್ಡೆ ಎರ್ಮಾಳ್‌, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಉಮೇಶ್‌ ನಾಡಾಜೆ, ಡಾ|
ಮಹಮ್ಮದ್‌ ಇಬ್ರಾಹಿಂ, ನವೀನ್‌ ಭಂಡಾರಿ, ಕೆ.ಎನ್‌. ಜಗದೀಶ್‌, ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್‌, ಉಷಾ ಅಂಚನ್‌, ವಿಜಯ ಕುಮಾರ್‌ ಸೊರಕೆ, ಈಶ್ವರ ಭಟ್‌ ಪಂಜಿಗುಡ್ಡೆ, ಸುರೇಂದ್ರನಾಥ ಆಳ್ವ, ಶಿವರಾಮ ಆಳ್ವ, ವಿಜಯ ಕುಮಾರ್‌ ರೈ ಮುದಲೆಮಾರ್‌, ಸನ್ಮತ್‌ ಮೇಲಾಂಟ, ಪಿ.ಬಿ. ದಿವಾಕರ್‌, ಮಹಮ್ಮದ್‌ ಕುಕ್ಕುವಳ್ಳಿ, ಕಂಬಳ ಸಮಿತಿಯ ಸಂಚಾಲಕ ಎನ್‌. ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್‌ ಕುಲಾಲ್‌, ಕೋಶಾ ಕಾರಿ
ಪ್ರಸನ್ನ ಶೆಟ್ಟಿ ಸಹಕರಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಸಮ್ಮಾನ
25 ವರ್ಷಗಳ ಕಾಲ ಕಂಬಳ ಕೂಟದಲ್ಲಿ ಭಾಗವಹಿಸಿದ ಬೋಳಂತೂರು ದಿ. ಗಂಗಾಧರ ರೈ ಅವರ ಕೋಣ ‘ಕಾಟಿ’ಯನ್ನು ಮುತ್ತಪ್ಪ ರೈ ಸಮ್ಮಾನಿಸಿದರು. ವಿಜಯ ಬ್ಯಾಂಕ್‌ ನಿವೃತ್ತ ಜನರಲ್‌ ಮ್ಯಾನೇಜರ್‌ ಕೆ. ಜಯಕರ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌, ರಜತ ವರ್ಷದ ಹಿನ್ನೆಲೆಯಲ್ಲಿ ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಹಾಗೂ ಅನುರಾಧಾ ದಂಪತಿಯನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next