Advertisement

ಮುಂದಿನ ಪೀಳಿಗೆಯ ಕೆಲಸವೇ ಬೇರೆ

01:10 PM Nov 17, 2018 | Team Udayavani |

ಪುತ್ತೂರು: ಭಾರತದ ಪ್ರಸಿದ್ಧ ಫ‌ುಟ್‌ಬಾಲ್‌ ಆಟಗಾರ ಸುನೀಲ್‌ ಛೆಟ್ರಿ ಗರಿಷ್ಠ ಗೋಲ್‌ಗ‌ಳ ಸಾಧನೆ ಮಾಡಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂದು ಅವರನ್ನು ಒಂದು ಸಂದರ್ಶನದಲ್ಲಿ ಪ್ರಶ್ನಿಸಿದಾಗ, ಎಲ್ಲರೂ ಬಾಲ್‌ ಎದುರಿಗೆ ಬರುವಾಗ ಒದೆಯುತ್ತಾರೆ. ಆದರೆ ನಾನು ಬಾಲ್‌ ಮುಂದೆ ಎಲ್ಲಿ ಹೋಗಿ ಬೀಳುತ್ತದೆ ಎನ್ನುವುದನ್ನು ಆಲೋಚಿಸುತ್ತೇನೆ. ಬಾಲ್‌ ಬೀಳುವ ಜಾಗಕ್ಕೆ ಹೋಗಿ, ಗೋಲ್‌ಗೆ ತಳ್ಳುತ್ತೇನೆ ಎಂದಿದ್ದರು. ಇದೇ ರೀತಿ ಜೀವನ, ಉದ್ಯೋಗದಲ್ಲಿ ಮುಂದಿನ ಹೆಜ್ಜೆಯ ಬಗ್ಗೆ ಸ್ಪಷ್ಟತೆ ಹೊಂದಿರಬೇಕು.

Advertisement

ಪುತ್ತೂರು ಬಂಟರ ಭವನದಲ್ಲಿ ನ. 16ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ನಾಳೆ ನಿಮ್ಮದೇ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಮೇಶ್‌ ಅರವಿಂದ್‌ ಹೇಳಿದ ಮಾತಿದು. ಛೆಟ್ರಿ ಅವರು ಹೇಳಿದ ಮಾತು ಜೀವನಕ್ಕೂ ಅನ್ವಯಿಸುತ್ತದೆ. ಜೀವನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ, ಮುಂದಿನ ಹೆಜ್ಜೆಯ ಬಗ್ಗೆ ಈಗಲೇ ಆಲೋಚನೆ ಮಾಡಬೇಕು. ಇಂದಿನ ಉದ್ಯೋಗಗಳು ಬದಲಾವಣೆ ಕಾಣುತ್ತಿವೆ. ಇವತ್ತು ತಾನು ಮಾಡುತ್ತಿರುವ ಉದ್ಯೋಗ, ನಾಳೆ ಇದೇ ರೀತಿ ಇರಬೇಕೇಂದೇನಿಲ್ಲ. ಮುಂದಿನ ಪೀಳಿಗೆ ಯಾವ ಕೆಲಸಗಳನ್ನು ನಿರೀಕ್ಷಿಸಬಹುದು ಎನ್ನುವುದರ ಬಗ್ಗೆ ಕಲ್ಪನೆ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜೀವನವನ್ನು ಎದುರಿಸುವ ಸಂದರ್ಭ ಭಯ ಕಾಡುತ್ತದೆ. ಇದೇ ಕಾರಣಕ್ಕೆ ಹಲವು ಸೋಲುಗಳನ್ನು ಎದುರಿಸಬೇಕಾಗುತ್ತದೆ. ಮೊದಲು ಭಯವನ್ನು ಹೊಡೆದೋಡಿಸಬೇಕು. ಭಯಕ್ಕೆ ಕಾರಣವಾದ ವಿಷಯದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಿ. ಆಗ ಭಯಕ್ಕೆ ಅರ್ಥವೇ ಇರುವುದಿಲ್ಲ ಎಂದು ಧೈರ್ಯ ತುಂಬಿದರು.

ಇತಿಹಾಸದಲ್ಲಿ 1 ಲಕ್ಷ ಕೋಟಿಗೂ ಅಧಿಕ ಜನರು ಬಂದು ಹೋಗಿದ್ದಾರೆ. ಇಷ್ಟು ಜನರ ಪೈಕಿ ಒಬ್ಬನಂತೆ ಒಬ್ಬನಿಲ್ಲ. ಪ್ರತಿಯೊಬ್ಬನೂ ವಿಭಿನ್ನ. ಯಶಸ್ಸಿನ ಗುಟ್ಟು ನಮ್ಮೊಳಗೇ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ. ಅದಕ್ಕಾಗಿ ಹೆಚ್ಚು ಕಲಿಯುವ ಕೆಲಸ ಆಗಬೇಕು. 

ಕಲಿಕೆ ನಿಮ್ಮ ಬಳಿಗೆ ಬರುವುದಿಲ್ಲ. ನಾವಾಗಿ ಹುಡುಕಿಕೊಂಡು ಹೋಗಬೇಕು ಎಂದರು. ಪುತ್ತೂರು ಆಕಾಂಕ್ಷಾ ಚಾರಿಟೆಬಲ್‌ ಟ್ರಸ್ಟ್‌, ರಾಮಕೃಷ್ಣ ಪ್ರೌಢಶಾಲೆ, ಶ್ರೀ ಸರಸ್ವತಿ ಚಾರಿಟೆಬಲ್‌ ಟ್ರಸ್ಟ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು. ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸರಸ್ವತಿ ಚಾರಿಟೆಬಲ್‌ ಟ್ರಸ್ಟ್‌ ಕಾರ್ಯದರ್ಶಿ ವಸಂತ್‌ ಎ., ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪ್ರೊ| ಎ.ಪಿ. ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಆಕಾಂಕ್ಷಾ ಚಾರಿಟೆಬಲ್‌ ಟ್ರಸ್ಟ್‌ನ ಶ್ರೀಶ ಭಟ್‌ ವಂದಿಸಿ, ಸುಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

Advertisement

ವಿದ್ಯಾಭ್ಯಾಸಕ್ಕೆ ಸ್ನೇಹ ಪೂರಕವೇ, ಮಾರಕವೇ?
ಈ ಪ್ರಶ್ನೆಗೆ ಕಥೆಯೊಂದನ್ನು ದೃಷ್ಟಾಂತವಾಗಿ ನೀಡಿದ ರಮೇಶ್‌ ಅರವಿಂದ್‌, ಕಪ್ಪೆ ಹಾಗೂ ಇಲಿ ಉತ್ತಮ ಗೆಳೆಯರು. ಸದಾ ಜತೆಯಲ್ಲೇ ಇರಬೇಕೆಂದು ತಮ್ಮ ಕಾಲಿಗೆ ಹಗ್ಗ ಕಟ್ಟಿಕೊಂಡರು. ಒಂದು ದಿನ ಸರೋವರದಲ್ಲಿದ್ದ ಮಿಡತೆಯನ್ನು ನೋಡಿ ಕಪ್ಪೆ ಹಿಂದೆ- ಮುಂದೆ ಆಲೋಚಿಸದೇ ನೀರಿಗೆ ಹಾರಿತು. ಇಲಿ ಉಸಿರುಗಟ್ಟಿ ಸತ್ತಿತು. ಇದನ್ನು ನೋಡಿದ ಗಿಡುಗವೊಂದು ಇಲಿಯನ್ನು ಹೊತ್ತೂಯ್ದಿತು. ಜತೆಗೆ ಕಪ್ಪೆಯೂ ಸತ್ತಿತು. ಸ್ನೇಹ ಎಂಬ ಹಗ್ಗವನ್ನು ಕಟ್ಟಿಕೊಳ್ಳುವಾಗ ಎಚ್ಚರವಾಗಿರಬೇಕು. ಕಂಬೈನ್‌ ಸ್ಟಡಿಗೆ ಆಯ್ಕೆ ಮಾಡಿಕೊಳ್ಳುವ ಸ್ನೇಹಿತನ ಮನಸ್ಥಿತಿ ನಮ್ಮಂತೆಯೇ ಇರಬೇಕು. ಆಗ ಕಲಿಕೆಯ ವೇಗ ದುಪ್ಪಟ್ಟಾಗುತ್ತದೆ. ವಿರುದ್ಧವಾಗಿ ಇದ್ದರೆ, ಕಲಿಕೆ ಕುಂಠಿತ ಆಗುತ್ತದೆ. ಆದ್ದರಿಂದ ಸ್ನೇಹಿತನನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರವಾಗಿರಿ ಎಂದು ಕಿವಿಮಾತು ಹೇಳಿದರು.

ಸಂವಾದದ ತುಣುಕು
· ಜ್ಞಾನ ಇದ್ದಾಗ ಮಾತ್ರ ಆತ್ಮವಿಶ್ವಾಸ ಸಿಗುತ್ತದೆ. ಗೊಂದಲ ಉಂಟಾಗುವುದಿಲ್ಲ. ನೀವು ಮಾಡುವ ಕೆಲಸಕ್ಕೆ ಮನಸ್ಸನ್ನು ಒಗ್ಗಿಸಿಕೊಳ್ಳಿ.
· ಟೆನ್ಶನ್‌ ಜಾಸ್ತಿಯಾದರೆ ಏಕಾಗ್ರತೆ, ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಆದ್ದರಿಂದ ಕೂಲ್‌ ಆಗಿರಿ. ನನ್ನಿಂದ ಆಗುವುದಿಲ್ಲ ಎನ್ನಬೇಡಿ.
· ಹಾರ್ಡ್‌ ವರ್ಕ್‌ಗಿಂತಲೂ ಸ್ಮಾರ್ಟ್‌ ವರ್ಕ್‌ಗೆ ಗಮನ ಕೊಡಿ. ಬಹಳ ಇಷ್ಟವಾದ ಕೆಲಸ ಆಯ್ಕೆ ಮಾಡಿಕೊಳ್ಳಿ. 
· ಮನಸ್ಸಲ್ಲೊಂದು ಚಿತ್ರಣ ಇರುತ್ತದೆ. ಅದು ಆಗದೇ ಇರುವಾಗ ಒತ್ತಡ ಉಂಟಾಗುತ್ತದೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳಿ. ಆಲೋಚಿಸುವ ರೀತಿಯನ್ನು ಬದಲಾಯಿಸಿ ಅಥವಾ ವಾಸ್ತವಕ್ಕೆ ಹೊಂದಿಕೊಳ್ಳಿ.
· ಸಮಸ್ಯೆ ಬೇಡ ಎನ್ನಬೇಡಿ. ಅದನ್ನು ಎದುರಿಸುವ ಶಕ್ತಿ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿ.
· ಸೌಂದರ್ಯದ ಗುಟ್ಟು: ಸದಾ ಆಸಕ್ತಿಕರ ಕೆಲಸದಲ್ಲಿ ತೊಡಗಿಸಿಕೊಳ್ಳುವುದು. ಕಡಿಮೆ ತಿನ್ನುವುದು. ಚಟುವಟಿಕೆಯಿಂದ ಕೂಡಿರುವುದು.

ರಮೇಶ್‌ ಅರವಿಂದ್‌ ಯಶಸ್ಸಿಗೆ ಕಾರಣ
1 ಕೆಲಸದಲ್ಲಿ ಪರ್ಫೆಕ್ಟ್ನೆಸ್‌. ಗಂಡನಾಗಿ, ನಟನಾಗಿ ತನ್ನ ಕೆಲಸವನ್ನು ಲೋಪ ಇಲ್ಲದಂತೆ ಮಾಡುವುದು. ಸಣ್ಣ ವಿಷಯವನ್ನು ನಿರ್ಲಕ್ಷಿಸದೇ ಇರುವುದು.
2 ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು. 
3 ಸದಾ ಒಂದಿಲ್ಲೊಂದು ವಿಚಾರವನ್ನು ಕಲಿಯುತ್ತಾ ಇರುವುದು.
4 ಯಾರಿಗೂ ತೊಂದರೆ ಕೊಡದೇ ಇರುವುದು.
5 ಸಾಧ್ಯವಾದಷ್ಟು ಪ್ರೀತಿಯ ದಾರಿಯನ್ನು ಆಯ್ಕೆ ಮಾಡಿಕೊಂಡಿರುವುದು.

ಯಶಸ್ಸು ಎಂದರೆ ಏನು?
ಹಲವು ಸಾಧಕರ ಬಗ್ಗೆ ಶೋ ನಡೆಸಿದ್ದೇನೆ. ಕೊನೆಗೂ ಕಂಡುಕೊಂಡದ್ದು, ಮನಶಾಂತಿಯೇ ದೊಡ್ಡ ಯಶಸ್ಸು. ನಾವು ಹೆಚ್ಚು ಕಂಫರ್ಟೆಬಲ್‌ ಆಗಿರುವ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಸಿಗುವ ಮನಶಾಂತಿಯೇ ನಮಗೆ ದೊಡ್ಡದು. ಅದಕ್ಕಿಂತ ದೊಡ್ಡ ಯಶಸ್ಸು ಇಲ್ಲ ಎಂದು ರಮೇಶ್‌ ಅರವಿಂದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next