Advertisement

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ!

11:26 PM Oct 29, 2021 | Team Udayavani |

ಪುನೀತ್‌ ಅವರಿಗೆ ಹುಷಾರಿಲ್ಲ ಅಂತ ಸುದ್ದಿ ಕೇಳಿದ ತಕ್ಷಣ, ಬಹುಶಃ ಜ್ವರವೇನಾದರೂ ಇರಬಹುದು ಎಂದುಕೊಂಡೆ. ಅದಾದ ಸ್ವಲ್ಪ ಸಮಯಕ್ಕೆ ಅವರು ಬದುಕಿಲ್ಲ ಎಂದು ಸುದ್ದಿ ಬಂತು. ಒಮ್ಮೆಲೆ ಮೈ ಝುಂ ಎನಿಸಿತು. ತಲೆ ಕೆಟ್ಟಂತಾಯಿತು. ನಾಲ್ಕು ದಿನ ಮೊದಲು “ಭಜರಂಗಿ 2′ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೆವು. ಅದರ ಮಾರನೇ ದಿನವೂ ಕರೆಮಾಡಿ ಮಾತನಾಡಿದ್ದೆ. ಹತ್ತಾರು ವರ್ಷ ಜೊತೆಗಿದ್ದ ವ್ಯಕ್ತಿ ಈಗಿಲ್ಲ ಎಂದರೆ ಅದು ನಂಬೋದಕ್ಕೂ ಅಸಾಧ್ಯವಾಗಿತ್ತು.

Advertisement

ಸೂಪರ್‌ ಸ್ಟಾರ್‌ ಮಗ, ನಾನೂ ಸೂಪರ್‌ ಸ್ಟಾರ್‌ ಎನ್ನುವಂತಹ ಯಾವುದೇ ಭಾವನೆ ಪುನೀತ್‌ ಅವರಿಗಿರಲಿಲ್ಲ. ನನಗೆ ಅಪ್ಪುಗಿಂತ ಮೊದಲು ಅಣ್ಣಾವ್ರು, ಪಾರ್ವತಮ್ಮನವರು ಮತ್ತು ವರದಪ್ಪ ಅವರ ಜೊತೆ ಒಳ್ಳೆಯ ಒಡೆನಾಟವಿತ್ತು. ನಂತರದ ದಿನಗಳಲ್ಲಿ ಶಿವಣ್ಣನ ಪರಿಚಯ ಆಗಿ ಸ್ನೇಹ ಬೆಳೆಯಿತು. ಆಗ ಪುನೀತ್‌ ಪರಿಚಯವಾಗಿ ತುಂಬಾನೇ ಹತ್ತಿರವಾದರು. ಪುನೀತ್‌ ಸಿನಿಮಾಕ್ಕೆ ನಾನು ಹಾಡು ಬರೆಯಲೇ ಬೇಕೆನ್ನುವುದು ಅಪ್ಪಾಜಿ ಮತ್ತು ಪಾರ್ವತಮ್ಮನವರ ಒತ್ತಾಸೆಯಾಗಿತ್ತು. ಹಾಗಾಗಿ ಅಪ್ಪು ಅವರ ಮೊದಲ 12 ಸಿನಿಮಾಗಳಿಗೆ ನಾನೇ ಹಾಡು ಬರೆದೆ. ಒಟ್ಟು ಅವರ 16 ಸಿನಿಮಾಗಳಿಗೆ ಹಾಡು ಬರೆದುಕೊಟ್ಟಿದ್ದೇನೆ.
ದೊಡ್ಡವರು ನೋಡ್ಕೊತಾರೆ!

ಅಣ್ಣಾವ್ರ ಕುಟುಂಬ 23 ವರ್ಷದಿಂದ ನನಗೆ ಪರಿಚಯ. ಪುನೀತ್‌ ಜೊತೆ 19 ವರ್ಷಗಳ ಸ್ನೇಹ… ಅಪ್ಪು ಅವರ ಕಣ್ಣಲ್ಲೇ ಮುಗ್ಧತೆಯಿತ್ತು. ಸಿನಿಮಾ ರಂಗದಲ್ಲಿ ಶಿವಣ್ಣನಿಗಿಂತ ಪುನೀತ್‌ ದೊಡ್ಡವರು. ಅಪ್ಪುಗೆ ಹಿರಿಯರ ಮೇಲೆ ಎಷ್ಟು ಗೌರವವಿತ್ತೆಂದರೆ, ಅವರು ಯಾವತ್ತೂ ಹಿರಿಯರ ಮುಂದೆ ಕುಳಿತು ಮಾತನಾಡುತ್ತಿರಲಿಲ್ಲ. ದೊಡ್ಡವರ ಮಾತಿಗೆ ಎದುರು ಮಾತನಾಡುತ್ತಿರಲಿಲ್ಲ. ಎಲ್ಲದಕ್ಕೂ “ದೊಡ್ಡವರು ನೋಡ್ಕೊàತಾರೆ’ ಎನ್ನುತ್ತಾ ವಿನಯದಿಂದ ಬದುಕುತ್ತಿದ್ದರು. ನಡೆ, ನುಡಿ, ನಡವಳಿಕೆಯಿಂದ ಅವರು ಅತಿ ವಿಶೇಷ.

ಇದನ್ನೂ ಓದಿ:ಅಪ್ಪು ಅಂತಿಮ ನಮನ : ಕಂಠೀರವ ಸ್ಟೇಡಿಯಂ ಬಳಿ ನೂಕು ನುಗ್ಗಲು

ಅಪಾರ ಜ್ಞಾಪಕ ಶಕ್ತಿ
ಅಪ್ಪುಗೆ ಜ್ಞಾಪಕ ಶಕ್ತಿ ಅಧಿಕವಿತ್ತು. ಸುಮಾರು 10 ವರ್ಷಗಳ ಹಿಂದೆ ನಾನೊಂದು ಆಲ್ಬಂ ಸಾಂಗ್‌ ಮಾಡೋದಕ್ಕೆ ಹೊರಟಿದ್ದೆ. ಅಪ್ಪು ಕಮರ್ಷಿಯಲ್‌ ಹಿಟ್‌ ಕೊಡುತ್ತಿದ್ದ ಸಮಯವದು. ಆಗ ಅವರಿಂದಲೇ ಒಂದು ಭಕ್ತಿ ಗೀತೆ ಹಾಡಿಸಬೇಕು ಎಂದುಕೊಂಡಿದ್ದೆ. ಒಮ್ಮೆ ಎಲ್ಲೋ ಹೊರಗೆ ಸಿಕ್ಕಾಗ ಅವರಿಗೆ ಆ ವಿಚಾರ ಹೇಳಿದ್ದೆ. ಹಾ ಮಾಡೋಣ ಎಂದಿದ್ದರು. 2 ವರ್ಷಗಳಾದ ಮೇಲೆ ಆ ಹಾಡು ರಿಲೀಸ್‌ ಆಯ್ತು. ಅದರ ಪ್ರಸ್‌ ಮೀಟ್‌ಗೆ ಬಂದಿದ್ದ ಅಪ್ಪು, 2 ವರ್ಷದ ಹಿಂದೆ ಅಲ್ಲೆಲ್ಲೋ ಹೊರಗೆ ಸಿಕ್ಕಾಗ ಹೇಳಿದ್ದನ್ನು ನೆನಪಿಸಿಕೊಂಡು ಹೇಳಿದರು. ಸಣ್ಣ ಪುಟ್ಟ ವಿಚಾರಗಳನ್ನೂ ಅಷ್ಟು ಚೆನ್ನಾಗಿ ನೆನಪಿಟ್ಟುಕೊಳ್ತಿದ್ರು.

Advertisement

ತುಂಬಾ ತಲೆ ಕೆಡಿಸ್ಕೋಬೇಡಿ…
ಅಪ್ಪು ಬರೀ ನಟನೆ ಮೂಲಕ ಜನರಿಗೆ ಇಷ್ಟವಾದವರಲ್ಲ. ಅವರು ಮಾಡಿದ ಕೆಲಸದಿಂದಲೂ ಜನರಿಗೆ ಹತ್ತಿರವಾದವರು. ಅನಾಥಾಶ್ರಮ, ಉಚಿತ ಶಿಕ್ಷಣ ಹೀಗೆ ಅನೇಕ ಕೆಲಸ ಮಾಡಿದ್ದಾರೆ. ಯಾರಿಗೂ ಒಂದೇ ಒಂದು ಸಣ್ಣ ನೋವನ್ನೂ ಮಾಡಿದವರಲ್ಲ. ತಮ್ಮಿಂದ ಏನಾದರೂ ತಪ್ಪಾಯಿತು ಎನಿಸಿದರೆ ತಕ್ಷಣ ಸ್ವಾರಿ ಕೇಳುತ್ತಿದ್ದರು. ಅದೇನೇ ಆದರೂ “ತುಂಬಾ ತಲೆ ಕೆಡಿಸ್ಕೋಬೇಡಿ’ ಅಂತ ಹೇಳ್ತಿದ್ರು. ಆ ನಡವಳಿಕೆಯನ್ನು ನಾನೂ ಅವರಿಂದ ಕಲಿಯುವ ಪ್ರಯತ್ನ ಮಾಡಿ ಸೋತಿದ್ದೀನಿ. ಪುನೀತ್‌ ಅವರನ್ನೂ ಎಂದಿಗೂ ಮರೆಯೋದಿಲ್ಲ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ…

– ಕೆ. ಕಲ್ಯಾಣ್‌, ಚಿತ್ರ ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next