Advertisement

ಪುನೀತ್‌ ಪ್ರೇರಣೆಯಿಂದ ಚುರುಕಾಯ್ತು ನೇತ್ರದಾನ

09:07 AM Jan 04, 2022 | Team Udayavani |

ಪುನೀತ್‌ ರಾಜ್‌ಕುಮಾರ್‌ ಮಾಡಿರುವ ಕಾರ್ಯಗಳು ಅನೇಕರಿಗೆ ಪ್ರೇರಣೆ. ಅವರು ಮಾಡಿರುವ ಸಾಮಾಜಿಕ ಕಾರ್ಯಗಳು ಅವರ ನಿಧನದ ನಂತರ ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ. ಈ ಮೂಲಕ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಅದರಲ್ಲಿ ನೇತ್ರದಾನವೂ ಒಂದು. ಪುನೀತ್‌ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಬೇರೆಯವರ ಬಾಳಿಗೆ ಬೆಳಕಾಗಿದ್ದಾರೆ. ಈ ಮೂಲಕ ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.

Advertisement

ಈ ಕುರಿತು ಮಾತನಾಡುವ “ನಾರಾಯಣ ನೇತ್ರಾಲಯ’ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, “ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಧನದ ಬಳಿಕ ನೇತ್ರದಾನ ಮಾಡುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. “ನಾರಾಯಣ ನೇತ್ರಾಲಯ’ದಲ್ಲಿರುವ “ಡಾ. ರಾಜಕುಮಾರ್‌ ಕಣ್ಣಿನ ಬ್ಯಾಂಕ್‌’ನಲ್ಲಿ ಈಗಾಗಲೇ 12 ಸಾವಿರಕ್ಕೂ ಅಧಿಕ ಮಂದಿ ನೇತ್ರದಾನಕ್ಕೆ ಸ್ವಯಂಪ್ರೇರಿತರಾಗಿ ನೇರವಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ವಾರದ ಹಿಂದಷ್ಟೇ ನೇತ್ರದಾನಕ್ಕೆ ಆನ್‌ಲೈನ್‌ನಲ್ಲೂ ನೋಂದಣಿ ಶುರುವಾಗಿದ್ದು, ಕೇವಲ ನಾಲ್ಕು ದಿನಗಳಲ್ಲಿ ಆನ್‌ಲೈನ್‌ ಮೂಲಕವೇ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದರು.

ಹೊಸ ಚಿತ್ರ “ನೇತ್ರದಾನ’ದ ಶೀರ್ಷಿಕೆ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಭುಜಂಗ ಶೆಟ್ಟಿ, “ಪುನೀತ್‌ ರಾಜಕುಮಾರ್‌ ಅವರ ನಿಧನದ ನಂತರ ಅವರ ಕಣ್ಣುಗಳಿಂದ 4 ಜನರಿಗೆ ಶಸ್ತ್ರ ಚಿಕಿತ್ಸೆ ಮೂಲಕ ದೃಷ್ಟಿ ನೀಡಲಾಗಿದೆ. ಕೊರೊನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ನೇತ್ರದಾನ ಮಾಡುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಆದರೆ, ಪುನೀತ್‌ ರಾಜಕುಮಾರ್‌ ನಿಧನದ ಬಳಿಕ ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, 2 ತಿಂಗಳಲ್ಲಿ ಸುಮಾರು 470ಕ್ಕೂ ಹೆಚ್ಚು ಮಂದಿಯ ಕಣ್ಣುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಳವಡಿಸಿ ದೃಷ್ಟಿ ನೀಡಲಾಗಿದೆ. ಪುನೀತ್‌ ರಾಜಕುಮಾರ್‌ ತಮ್ಮ ಕಣ್ಣುಗಳನ್ನು ನೀಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್‌ ಪ್ರೇರಣೆಯಿಂದ, ಮುಂದಿನ ದಿನಗಳಲ್ಲಿ ನೇತ್ರದಾನ ಮಾಡುವವರೆ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿದ್ಯುತ್‌ ಗುಣಮಟ್ಟ ಹೆಚ್ಚಳಕ್ಕೆ ಕೇಂದ್ರದಿಂದ 8,500 ಕೋ.ರೂ.

ಇನ್ನು “ನಾರಾಯಣ ನೇತ್ರಾಲಯ’ದಲ್ಲಿರುವ “ಡಾ. ರಾಜಕುಮಾರ್‌ ಕಣ್ಣಿನ ಬ್ಯಾಂಕ್‌’ನಲ್ಲಿ ನೇತ್ರದಾನ ಮಾಡುವವರ ನೋಂದಣಿಗೆ ಆನ್‌ಲೈನ್‌ನಲ್ಲೂ ಅವಕಾಶವಿದ್ದು, ನೇತ್ರದಾನ ಮಾಡಲು ಆಸಕ್ತಿ ಇರುವವರು 8884018800 ಸಂಖ್ಯೆಗೆ ಮಿಸ್ಡ್ ಕಾಲ್‌ ನೀಡಿದರೆ ಆನ್‌ಲೈನ್‌ನಲ್ಲಿಯೇ ಅರ್ಜಿಯ ಲಿಂಕ್‌ ಮೊಬೈಲ್‌ ನಂಬರ್‌ಗೆ ಕಳುಹಿಸಲಾಗುತ್ತದೆ. ಅದರಲ್ಲಿ ಕೆಲವು ಸರಳವಾದ ಮಾಹಿತಿಯನ್ನು ಭರ್ತಿ ಮಾಡಿದರೆ, ಕೆಲ ನಿಮಿಷಗಳಲ್ಲಿ ಆನ್‌ ಲೈನ್‌ನಲ್ಲಿಯೇ ನೇತ್ರದಾನ ನೋಂದಣಿಯಾಗುವುದರ ಜೊತೆಗೆ ನೋಂದಣಿ ಪ್ರಮಾಣಪತ್ರ ಕೂಡ ಮೊಬೈಲ್‌ಗೆ ಬರುತ್ತದೆ.

Advertisement

“ಎಲ್ಲರೂ ಆನ್‌ಲೈನ್‌ನಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ನೇತ್ರದಾನ ಮಾಡುವವರ ನಡುವಿನ ಸಂಖ್ಯೆಯಲ್ಲಿ ಸಾಕಷ್ಟು ಅಂತರವಿದೆ. ಹೀಗಾಗಿ ಸ್ವಯಂ ಪ್ರೇರಿತರಾಗಿ ಎಲ್ಲರೂ ನೇತ್ರದಾನಕ್ಕೆ ಮುಂದಾಗಬೇಕು. ನಮ್ಮ ಕೈಲಾದ ಮಟ್ಟಿಗೆ ನೇತ್ರದಾನದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಡಾ. ಭುಜಂಗ ಶೆಟ್ಟಿ ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next