Advertisement

ಕಾರ್ಯಕರ್ತಗೆ ಸಲಾಂ; ಬಿಜೆಪಿಯಲ್ಲಿ ಮತ್ತೆ ಒಗ್ಗಟ್ಟಿನ ಮಂತ್ರ

10:26 AM May 08, 2017 | Team Udayavani |

ಬೆಂಗಳೂರು/ ಮೈಸೂರು: ಮುನಿಸಿಕೊಂಡಿರುವ ನಾಯಕರ ಒಗ್ಗಟ್ಟಿಗೆ ವೇದಿಕೆ ಮತ್ತು ಮೂಲ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳುವುದರೊಂದಿಗೆ ಮೈಸೂರಿನಲ್ಲಿ 2 ದಿನ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ರವಿವಾರ ಮುಕ್ತಾಯಗೊಂಡಿದೆ. ಆದರೆ ಈ ಕಾರ್ಯಕಾರಿಣಿ ಪಕ್ಷದ ನಾಯಕರ ನಡುವಿನ ಆಂತರಿಕ ಭಿನ್ನಮತವನ್ನು ಶಮನ ಮಾಡಲು ವಿಫ‌ಲವಾಯಿತಾದರೂ ವೈಮನಸ್ಸು ಪರಿಹಾರಕ್ಕೆ ದಾರಿ ಕಂಡುಕೊಂಡಿತು. ಪಕ್ಷದಲ್ಲಿ ಗೊಂದಲ ಉಂಟುಮಾಡುವ ರೀತಿಯಲ್ಲಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಏನೇ ಸಮಸ್ಯೆ ಇದ್ದರೂ ಅದನ್ನು ಆಂತರಿಕವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಗೊಂದಲ ಮೂಡಿಸುವ ಹೇಳಿಕೆ ನೀಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂಬ ಸ್ಪಷ್ಟ ಸಂದೇಶವನ್ನೂ ವರಿಷ್ಠರು ಮುರಳೀಧರರಾವ್‌ ಅವರ ಮೂಲಕ ಕಳುಹಿಸಿಕೊಟ್ಟಿದ್ದು, ಇದನ್ನು ಕಾರ್ಯಕಾರಿಣಿಯಲ್ಲಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

Advertisement

ಕಾರ್ಯಕರ್ತರಿಗೆ ಜವಾಬ್ದಾರಿ: ಸಂಘಟನೆ ಮತ್ತು ನಾಯಕತ್ವ ಒಟ್ಟೊಟ್ಟಿಗೆ ಹೋಗುತ್ತಿಲ್ಲ ಎಂಬುದೇ ಪಕ್ಷದಲ್ಲಿರುವ ಪ್ರಸ್ತುತ ಭಿನ್ನಮತಕ್ಕೆ ಪ್ರಮುಖ ಕಾರಣವಾಗಿತ್ತು. ಇದನ್ನು ಶಮನ ಮಾಡುವ ನಿಟ್ಟಿನಲ್ಲಿ ಪಕ್ಷ ಸಂಘಟನೆ, ಕೇಂದ್ರ ಸರಕಾರದ ಸಾಧನೆಗಳು, ರಾಜ್ಯ ಸರಕಾರದ ವೈಫ‌ಲ್ಯಗಳನ್ನು ಜನರಿಗೆ ತಿಳಿಸಲು ಸುಮಾರು 10,000 ವಿಸ್ತಾರಕರನ್ನು ನೇಮಿಸಲು ತೀರ್ಮಾನಿಸಲಾಗಿದೆ. ವಿಸ್ತಾರಕರಲ್ಲಿ ಸಂಸದರು, ಶಾಸಕರು ಮಾತ್ರವಲ್ಲದೆ, ಸ್ಥಳೀಯ ಮುಖಂಡರು, ಸಾಕಷ್ಟು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದವರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಪಕ್ಷದ ಮೂಲ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಕಾರ್ಯಕ್ರಮಗಳನ್ನು ರೂಪಿಸಲು ಕೂಡ ಕಾರ್ಯಕಾರಿಣಿ ಯಲ್ಲಿ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.


ಬೂದಿ ಮುಚ್ಚಿದ ಕೆಂಡ

ಆದರೆ ನಾವೆಲ್ಲ ಒಟ್ಟಾಗಿದ್ದೇವೆ, ಒಗ್ಗಟ್ಟಿನಿಂದ ಇದ್ದೇವೆ ಎಂದು ಮುಖಂಡರು ಪದೇ ಪದೆ ಹೇಳುತ್ತಿದ್ದರೂ ಪರಿಸ್ಥಿತಿ ಮಾತ್ರ ಇನ್ನೂ ಬೂದಿಮುಚ್ಚಿದ ಕೆಂಡದಂತೆಯೇ ಉಳಿದುಕೊಂಡಿದೆ. ಪಕ್ಷದ ಮುಖಂಡರು ಪ್ರತ್ಯೇಕ ಗುಂಪುಗಳಲ್ಲಿ ಗುರುತಿಸಿಕೊಂಡು ಕಾರ್ಯಕಾರಿಣಿಯಲ್ಲಿ ಕಾಲ ಕಳೆದಿರುವುದನ್ನು ಗಮನಿಸಿದಾಗ ಇನ್ನೂ ಎಲ್ಲವೂ ಸರಿಹೋಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರ ನಡುವೆಯೂ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮುನ್ಸೂಚನೆ ನೀಡಿದ್ದಾರೆ. ನಮ್ಮ ಗುರಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 150 ಸೀಟು ಗೆಲ್ಲು ವುದು. ಅದಕ್ಕಾಗಿ ನಮಗೆ ನಾವೇ ನಿರ್ಬಂಧ ಹಾಕಿಕೊಳ್ಳಬೇಕು. ಸಂಘಟನೆಯನ್ನು ಉಳಿಸುವ ಕೆಲಸವನ್ನು ನೀವು, ನಾವು ಸೇರಿ ಮಾಡಬೇಕು ಎಂದು ತನ್ನ ಸಮಾರೋಪ ಭಾಷಣದಲ್ಲಿ ಹೇಳಿದರು.

ಮೆತ್ತಗಾದ ಬಿಎಸ್‌ವೈ, ಈಶ್ವರಪ್ಪ: ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮುನಿಸು ಸ್ವಲ್ಪ ಮೆತ್ತಗಾದಂತೆ ಕಾರ್ಯಕಾರಿಣಿಯ 2ನೇ ದಿನ ಕಾಣಿಸಿತು. ಯಡಿಯೂರಪ್ಪ ರವಿವಾರ ತನ್ನ ಭಾಷಣದಲ್ಲಿ 2 ಬಾರಿ ನಮ್ಮ ನಾಯಕ ಈಶ್ವರಪ್ಪ ಎಂದು ಹೇಳಿದ್ದಾರೆ. ತನ್ನ ಭಾಷಣದಲ್ಲಿ 3 ಬಾರಿ ನಮ್ಮ ಸಿಎಂ ಅಭ್ಯರ್ಥಿ ಯಡಿಯೂರಪ್ಪ ಎಂದು ಈಶ್ವರಪ್ಪ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಕಾರ್ಯಕಾರಿಣಿ ಇಬ್ಬರ ಮಧ್ಯೆ ತೇಪೆ ಹಚ್ಚುವ ಕೆಲಸ ಮಾಡಿದೆ.

ಮೇ 18ರಿಂದ 36 ದಿನಗಳ ಕಾಲ ರಾಜ್ಯಾದ್ಯಂತ ಬರ ಪ್ರವಾಸ ಕೈಗೊಳ್ಳಲಿರುವ ಯಡಿಯೂರಪ್ಪ ಅವರೊಂದಿಗೆ ಕೆಲವೆಡೆ ಈಶ್ವರಪ್ಪ ಅವರೂ ಪಾಲ್ಗೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಹತ್ತಿರವಾಗಲು ವೇದಿಕೆ ಸಿದ್ಧಪಡಿಸಲಾಗಿದೆ. ಇಷ್ಟೆಲ್ಲ ಆದರೂ ಅವರಿಬ್ಬರೂ ಒಟ್ಟಾಗಿ ಕುಳಿತು ಚರ್ಚಿಸುವ ಮಟ್ಟಕ್ಕೆ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಇಬ್ಬರೂ ಒಂದೇ ವೇದಿಕೆಯಲ್ಲಿ ಇದ್ದರೂ ಶನಿವಾರ ಇಬ್ಬರ ಮಧ್ಯೆ ಕೇಂದ್ರ ಸಚಿವರಿಬ್ಬರು ಕುಳಿತಿದ್ದರೆ, ರವಿವಾರ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಇದ್ದರು.

Advertisement

ಅಪಸ್ವರದ ಬಾಯಿ ಮುಚ್ಚಿಸಿದ ಯಡಿಯೂರಪ್ಪ 
ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಿರುವ ರಾಷ್ಟ್ರೀಯ ಜಂಟಿ ಸಹ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಅವರು ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಅವರ ಜನ್ಮ ಶತಾಬ್ದ ಕಾರ್ಯಕ್ರಮಗಳ ಗೋಷ್ಠಿಯಲ್ಲಿ ನಿರ್ಣಯ ಮಂಡಿಸುತ್ತಾ ಪ್ರತಿಯೊಬ್ಬ ಶಾಸಕ, ಸಂಸದರು ಸಹಿತ ಮುಖಂಡರು, ಕಾರ್ಯಕರ್ತರು ತಮ್ಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ವಿಸ್ತಾರಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದಾಗ ಸಭೆಯಲ್ಲಿ ಗುಸುಗುಸು ಜೋರಾಗಿ ತಮ್ಮೊಳಗೇ ಅತೃಪ್ತಿ ಹೇಳಿಕೊಳ್ಳುತ್ತಿದ್ದರು. ಮಧ್ಯಪ್ರವೇಶಿಸಿದ ಯಡಿಯೂರಪ್ಪ ಅವರು ಕೈಸನ್ನೆ ಮೂಲಕ ಬಾಯಿ ಮುಚ್ಚುವಂತೆ ಎಚ್ಚರಿಕೆ ನೀಡಿದ್ದರಿಂದ ಎಲ್ಲರೂ ಸುಮ್ಮನಾದರು. 

ವರಿಷ್ಠರಿಂದ ಬಂದಿತ್ತೇ ಸೂಚನೆ?: ರಾಜ್ಯಾದ್ಯಂತ 10 ಸಾವಿರ ವಿಸ್ತಾರಕರ ನೇಮಕ ಮತ್ತು ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಕಾರ್ಯಕ್ರಮಗಳನ್ನು ರೂಪಿಸುವುದು, ಬರ ಪರಿಸ್ಥಿತಿ ಅಧ್ಯಯನಕ್ಕೆ ತೆರಳುವ ಯಡಿಯೂರಪ್ಪ ಅವರು ಇತರ ಎಲ್ಲ ಮುಖಂಡರನ್ನು ಒಟ್ಟಾಗಿ ಕರೆದೊಯ್ಯುವ ಯೋಜನೆಗಳು ವರಿಷ್ಠರಿಂದ ನಿರ್ದೇಶಿತಗೊಂಡಿತ್ತೇ? ಹೌದು ಎನ್ನುತ್ತವೆ ಪಕ್ಷದ ಮೂಲಗಳು.

Advertisement

Udayavani is now on Telegram. Click here to join our channel and stay updated with the latest news.

Next