ಬೆಳಗಾವಿ: ಕೊರೊನಾ ಹಾವಳಿಯ ಮಧ್ಯೆ ಈಗಲೇ ಶಾಲೆಗಳನ್ನು ಆರಂಭ ಮಾಡಬೇಕೇ, ಬೇಡವೇ ಎಂಬುದರ ಬಗ್ಗೆ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈಗಲೇ ಶಾಲೆಗಳನ್ನು ಆರಂಭ ಮಾಡದೇ ಇರುವುದು ಒಳ್ಳೆಯದು ಎಂಬ ಅಭಿಪ್ರಾಯ ಮೂಡಿಬಂದಿದೆ. ಜನಪ್ರತಿನಿಧಿಗಳ ಅನಿಸಿಕೆಗಳು ಇಲ್ಲಿವೆ.
ಇನ್ನೂ ಒಂದು ತಿಂಗಳ ಶಾಲೆ ಅರಂಭ ಮಾಡುವುದು ಬೇಡ. ಮಕ್ಕಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವದು ಬಹಳ ಕಷ್ಟ. ಇದಲ್ಲದೆ ಮಾಸ್ಕ ಕಡ್ಡಾಯವಾಗಿ ಧರಿಸುವುದು ಸಹ ಸರಿಯಾಗಿ ಆಗುವುದಿಲ್ಲ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ಅರಂಭ ಮಾಡುವದು ಉಚಿತವಲ್ಲ.
– ದುರ್ಯೋಧನ ಐಹೊಳೆ, ಶಾಸಕರು, ರಾಯಬಾಗ
ಯಾವುದೇ ಕಾರಣಕ್ಕೂ ಈಗ ಶಾಲೆ ಆರಂಭ ಮಾಡಬಾರದು. ಮಕ್ಕಳು ಹಾಗೂ ಪಾಲಕರಲ್ಲಿ ಕೊರೊನಾ ಭಯ ಇದೆ. ಮುಖ್ಯವಾಗಿ ಮಕ್ಕಳ ಭವಿಷ್ಯದ ಬಗ್ಗೆ ಎಲ್ಲರಿಗೂ ಚಿಂತೆ ಇರುತ್ತದೆ. ಮೇಲಾಗಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಸಹ ಹೆಚ್ಚುತ್ತಿದೆ. ಶಾಲೆಯ ಬದಲಿಗೆ ಆನ್ಲೈನ್ ತರಗತಿಗಳೇ ಮುಂದುವರಿಯಲಿ. ಶಾಲೆಗಳಲ್ಲಿ ನಾವು ಸುರಕ್ಷತೆಯ ಬಗ್ಗೆ ನಿರೀಕ್ಷೆ ಮಾಡುವದು ಸಾಧ್ಯವಿಲ್ಲ.
– ಆಶಾ ಐಹೊಳೆ, ಜಿಪಂ ಅಧ್ಯಕ್ಷ
ಸರಕಾರ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಶಾಲೆ ಆರಂಭ ಮಾಡಿದರೆ ನಮ್ಮ ಅಭ್ಯಂತರ ಇಲ್ಲ. ಆದರೆ ಇದರ ಬಗ್ಗೆ ಮಕ್ಕಳ ಪಾಲಕರಲ್ಲಿ ವಿಶ್ವಾಸ ಬರಬೇಕು. ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್ ಹಾಕುವಂತೆ ಕ್ರಮ ಕೈಗೊಳ್ಳಬೇಕು.
– ಪಾರ್ವತಿ ನರೇಂದ್ರ, ತಾಪಂ ಅಧ್ಯಕ್ಷ, ಬೈಲಹೊಂಗಲ
ಸಾಮಾಜಿಕ ಅಂತರ ಕಾಯ್ದುಕೊಳ್ಳುವದು, ಕಡ್ಡಾಯವಾಗಿ ಮಾಸ್ಕ ಧರಿಸುವ ಬಗ್ಗೆ ಮಕ್ಕಳಲ್ಲಿ ಪ್ರಬುದ್ಧತೆ ಬರಬೇಕು. ಅವರು ಭವಿಷ್ಯದ ಪ್ರಜೆಗಳು. ಈಗ ಶಾಲೆ ಆರಂಭಮಾಡಿ ಮಕ್ಕಳನ್ನು ಕಳಿಸಿದರೆ ಮುಂದೆ ಅವರ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಆದ್ದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈಗಲೇ ಶಾಲೆ ಆರಂಭ ಮಾಡುವದು ಸರಿಯಲ್ಲ. ಸರಕಾರವೂ ಇದೇ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದೆ. ಪಾಲಕರಿಗೆ ಭಯ ಇದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಶಾಲೆ ಆರಂಭಿಸುವದು ಬೇಡ.
– ಆನಂದ ಮಾಮನಿ, ವಿಧಾನಸಭಾ ಉಪಾಧ್ಯಕ್ಷರು
ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ಆರಂಭ ಮಾಡಬೇಕು. ಈಗಲೇ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಒಂದು ಶಾಲೆಯಲ್ಲಿ ಕೇವಲ 25 ವಿದ್ಯಾರ್ಥಿಗಳನ್ನು ಕೂಡಿಸಿ ಕಲಿಸಬೇಕು. ಇನ್ನೊಂದು ದಿನ 25 ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು.
– ಟಿ.ಆರ್. ಕಾಗಲ್, ಜಿ ಪಂ ಸದಸ್ಯ