Advertisement

ಸಾಮಾನ್ಯ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

03:45 AM Mar 05, 2017 | Team Udayavani |

ಬೆಂಗಳೂರು: ಸ್ನಾತಕೋತ್ತರ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ಶನಿವಾರದಿಂದ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿ ಕೌನ್ಸೆಲಿಂಗ್‌ ಆರಂಭಗೊಂಡಿದ್ದು, ಮೊದಲ ದಿನವೇ “ಸಾಮಾನ್ಯ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿ’ಗೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ಕೇಂದ್ರ ಸರ್ಕಾರ ಏಕರೂಪ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಜಾರಿ ಮಾಡಿದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶಕ್ಕೆ ಕೌನ್ಸೆಲಿಂಗ್‌ ಮಾತ್ರ ಬೇರೆ ಬೇರೆ ನಡೆಯುತ್ತಿದೆ. ಸರ್ಕಾರಿ ಕೋಟಾ ಸೀಟುಗಳಿಗೆ ರಾಜ್ಯ ಸರ್ಕಾರ, ಇತರೆ ಸೀಟುಗಳಿಗೆ ಖಾಸಗಿ ಕಾಲೇಜುಗಳ ಒಕ್ಕೂಟಗಳು ಕೌನ್ಸೆಲಿಂಗ್‌ ನಡೆಸುತ್ತಿವೆ. ಇದು ಸರಿಯಲ್ಲ. ಕೂಡಲೇ ನೀಟ್‌ ರೀತಿ ಕೌನ್ಸೆಲಿಂಗ್‌ ಅನ್ನೂ ಏಕರೂಪಗೊಳಿಸಬೇಕು. ಆಯಾ ರಾಜ್ಯ ಸರ್ಕಾರಗಳೇ ಎಲ್ಲ ಕೋಟಾದ ಸೀಟುಗಳಿಗೂ ಕೌನ್ಸೆಲಿಂಗ್‌ ನಡೆಸುವಂತೆ ಕಾನೂನು ಜಾರಿಗೆ ತರಬೇಕೆಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

ಅಲ್ಲದೆ, ರಾಜ್ಯದಲ್ಲಿ ಕನಿಷ್ಠ 7 ವರ್ಷ ವಾಸವಿರುವ ಅಭ್ಯರ್ಥಿಗಳಿಗೆ ಮಾತ್ರ ರಾಜ್ಯ ಕೋಟಾದ ಸ್ನಾತಕೋತ್ತರ ವೈದ್ಯ ಸೀಟುಗಳ ಪ್ರವೇಶಕ್ಕೆ ಅರ್ಹತೆ ನೀಡಬೇಕು. ಈಗಿರುವ ನಿಯಮ ಪ್ರಕಾರ ಹೊರ ರಾಜ್ಯದ ವಿದ್ಯಾರ್ಥಿಗಳಾದರೂ ರಾಜ್ಯದಲ್ಲಿ ಎಂಬಿಬಿಎಸ್‌, ಎಂಡಿಎಸ್‌ ವ್ಯಾಸಂಗ ಮಾಡಿರುವವರಿಗೂ ರಾಜ್ಯ ಕೋಟಾ ಸೀಟುಗಳು ಸಿಗುತ್ತಿವೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಅದನ್ನು ಸರ್ಕಾರಕ್ಕೆ ತಿಳಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next