Advertisement

ಜಿಲ್ಲಾಧಿಕಾರಿ ಕಚೇರಿ ಮುಂದೆ ದಿನವಿಡೀ ಪ್ರತಿಭಟನೆ

09:35 AM Oct 23, 2018 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸಲು ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದೆ. ಸೋಮವಾರ ರಾತ್ರಿ ವರೆಗೂ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಾವಿರದಷ್ಟು ಕಾರ್ಮಿಕರು, ಲಾರಿ ಮಾಲಕರು ಪ್ರತಿಭಟನೆ ನಡೆಸಿದರು. 

Advertisement

ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಕೋಟ, ಕಟಪಾಡಿ, ಕಾಪು, ಪೆರ್ಡೂರು ಮುಂತಾದ ಕಡೆಗಳಿಂದ ಆಗಮಿಸಿದ್ದ ಪ್ರತಿಭಟನ ಕಾರರನ್ನು ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಆವರಣದ ಹೊರಗೇ ತಡೆದರು.  ನೂರಾರು ಲಾರಿಗಳನ್ನು ಹೆದ್ದಾರಿ ಹಾಗೂ ಒಳ ರಸ್ತೆಯ ಅಲ್ಲಲ್ಲಿ ರವಿವಾರ ತಡರಾತ್ರಿ ಹಾಗೂ ಸೋಮವಾರ ಬೆಳಗ್ಗೆ ತಡೆಹಿಡಿಯಲಾಗಿದ್ದು, ಸಾವಿರದಷ್ಟು ಲಾರಿಗಳು ರಸ್ತೆಬದಿ ನಿಂತಿವೆ. 

ಮೂರು ಸುದೀರ್ಘ‌ ಸಭೆಗಳು
ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಅಹವಾಲು ಆಲಿಸಬೇಕು ಎಂದು ಆರಂಭದಲ್ಲಿ ಪ್ರತಿಭಟನ ಕಾರರು ಪಟ್ಟು ಹಿಡಿದರು. ಪ್ರತಿಭಟನಕಾರರ ಪ್ರತಿನಿಧಿಗಳು ಜಿಲ್ಲಾಧಿಕಾರಿ ಬಳಿ ತೆರಳಿ ಅಹವಾಲು ಸಲ್ಲಿಸಿ ಚರ್ಚೆ ನಡೆಸಿದರು. ಅದು ವಿಫ‌ಲವಾಯಿತು. ಅಪರಾಹ್ನ ಮತ್ತೆ ಚರ್ಚೆ ನಡೆಯಿತು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಎಲ್ಲ ಬೇಡಿಕೆ ಈಡೇರಿಸುವ ನಿರ್ಧಾರ ತೆಗೆದುಕೊಳ್ಳಲಾಗದು, ಸರಕಾರದ ಮಟ್ಟದಲ್ಲಿ ಮಾತನಾಡಿ ತಿಳಿಸುತ್ತೇನೆ ಎಂದರು. ರಾತ್ರಿ ವೇಳೆ ಮತ್ತೂಂದು ಸುತ್ತಿನ ಮಾತುಕತೆ ನಡೆದರೂ ಫ‌ಲ ನೀಡಿಲ್ಲ.

ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹರಿಸಲು 40 ದಿನಗಳ ಅವಧಿ ಕೇಳಿದರು. ನಾವು, ಕಾರ್ಮಿಕರು ಒಪ್ಪಿಗೆ ಸೂಚಿಸಿಲ್ಲ. ಈ ಹಿಂದೆ ಸಮಯ ಕೇಳಿದ್ದರೂ ಸಮಸ್ಯೆ ಪರಿಹರಿಸಿಲ್ಲ ಎಂದು ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್‌ ಸುವರ್ಣ ತಿಳಿಸಿದ್ದಾರೆ. ಮಾತುಕತೆ ವೇಳೆ ಶಾಸಕ ಲಾಲಾಜಿ ಆರ್‌. ಮೆಂಡನ್‌, ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಸಂಘದ ಪ್ರಮುಖರಾದ ಚಂದ್ರ ಪೂಜಾರಿ, ಗುಣಕರ ಶೆಟ್ಟಿ, ಮಂಜು ಬಿಲ್ಲವ ಉಪಸ್ಥಿತರಿದ್ದರು.

9 ದಕ್ಕೆ ಸಾಲದು; ಮಿತಿಯೂ ಬೇಡ 
ಜಿಲ್ಲೆಯಲ್ಲಿ ಕೇವಲ 9 ದಿಬ್ಬ (ದಕ್ಕೆ)ಗಳಲ್ಲಿ ಮಾತ್ರ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಒಂದೊಂದು ದಕ್ಕೆಗೆ 17,500 ಮೆಟ್ರಿಕ್‌ ಟನ್‌ ಮಿತಿ ಹೇರಲಾಗಿದೆ. ಒಟ್ಟು 9 ದಿಬ್ಬಗಳಲ್ಲಿ ಮರಳುಗಾರಿಕೆ ಮಾಡಲು 61 ಮಂದಿಗೆ ಮಾತ್ರ ಲೈಸನ್ಸ್‌ ದೊರೆತಿದೆ. ಇದು ಸಾಲದು. ಈ ಮರಳು ಒಂದು ತಿಂಗಳೊಳಗೆ ಖಾಲಿಯಾಗಬಹುದು. ಹಾಗಾಗಿ ಮತ್ತೆ ಮರಳಿನ ಕೊರತೆ, ದರ ಹೆಚ್ಚಳ ಉಂಟಾಗುತ್ತದೆ. ಬೇಥಮೆಟ್ರಿಕ್ಸ್‌ ಸರ್ವೆ ಮಾಡಿ ಸಿಆರ್‌ಝಡ್‌ ಮತ್ತು ನಾನ್‌ಸಿಆರ್‌ಝಡ್‌ನ‌ ಎಲ್ಲ ದಿಬ್ಬಗಳಲ್ಲಿ ಮರಳುಗಾರಿಕೆ ಆರಂಭಿಸ ಬೇಕು ಎಂಬುದು ನಮ್ಮ ಬೇಡಿಕೆ ಎಂದು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ಪ್ರವೀಣ್‌ ಸುವರ್ಣ ಹೇಳಿದರು.

Advertisement

ಒಂದೇ ಬಾರಿ ಪರವಾನಿಗೆ; ಮತ್ತೆ ವಿಳಂಬ?
ಈಗ ಗುರುತಿಸಿರುವ 9 ದಿಬ್ಬಗಳ ಪೈಕಿ 7 ದಿಬ್ಬಗಳಿಗೆ ಪರವಾನಿಗೆ ನೀಡಲು ಒಪ್ಪಿಗೆ ದೊರೆತಿದ್ದು, 5 ದಿಬ್ಬಗಳಲ್ಲಿ ಮರಳುಗಾರಿಕೆಗೆ ಎಲ್ಲ ಸಿದ್ಧತೆ ನಡೆದಿತ್ತು. ಈಗ ಲಾರಿ ಮಾಲಕರು ಮತ್ತು ಕಾರ್ಮಿಕರು ಕೊಡುವುದಾದರೆ ಎಲ್ಲ ದಿಬ್ಬಗಳಲ್ಲಿ ಮರಳುಗಾರಿಕೆಗೆ ಪರವಾನಿಗೆ ಕೊಡಬೇಕು, ಕೆಲವಕ್ಕೆ ಮಾತ್ರ ನೀಡಿದರೆ ಮರಳು ದುಬಾರಿಯಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ. ಲಾರಿ ಮುಷ್ಕರದಿಂದ ಜನರಿಗೂ ತೊಂದರೆಯಾಗುತ್ತಿದೆ. ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೇನೆ. ಈಗ 7 ದಿಬ್ಬಗಳ ಮರಳುಗಾರಿಕೆಗೆ ನೀಡುತ್ತಿರುವ ಪರವಾನಿಗೆಯನ್ನು ಬಾಕಿ (ಪೆಂಡಿಂಗ್‌) ಇಟ್ಟು ಮುಂದೆ ಎಲ್ಲ ದಿಬ್ಬಗಳಿಗೂ ಒಟ್ಟಿಗೆ ಪರವಾನಿಗೆ ನೀಡುವ ಪ್ರಕ್ರಿಯೆ ಆರಂಭಿಸ ಬೇಕಾಗುತ್ತದೆ ಎಂದು ಡಿಸಿ ಪ್ರತಿಕ್ರಿಯಿಸಿದ್ದಾರೆ.

ದ.ಕ.: ಬ್ಲಾಕ್‌ ಹಂಚಿಕೆ ಆರಂಭ
ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಅಂಗೀಕಾರಗೊಂಡಿರುವ ಮರಳು ಬ್ಲಾಕ್‌ಗಳನ್ನು ಅರ್ಹರಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ಈಗ ಪ್ರಾರಂಭಗೊಂಡಿದೆ ಎಂದು ಡಿ.ಸಿ. ಶಶಿಕಾಂತ ಸೆಂಥಿಲ್‌ ಉದಯವಾಣಿಗೆ ತಿಳಿಸಿದ್ದಾರೆ. 

ಭರವಸೆ: ಪ್ರತಿಭಟನೆ ಅಂತ್ಯ
ರಾತ್ರಿ 9ರ ವರೆಗೆ ನಡೆದ ಮೂರನೇ ಸುತ್ತಿನ ಮಾತುಕತೆಯ ಅನಂತರ ಜಿಲ್ಲಾಧಿಕಾರಿ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು “ಜಿಲ್ಲೆಯ ಸಿಆರ್‌ಝಡ್‌ ಮತ್ತು ನಾನ್‌ಸಿಆರ್‌ಝಡ್‌ನ‌ಲ್ಲಿರುವ ಮರಳು ದಿಬ್ಬಗಳ ಪೈಕಿ ಗರಿಷ್ಠ ದಿಬ್ಬಗಳಲ್ಲಿ ಮರಳುಗಾರಿಕೆ ನಡೆಸಲು 21 ದಿನಗಳೊಳಗೆ ಅವಕಾಶ ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು ಎಂದು ಲಾರಿ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್‌ ಸುವರ್ಣ ತಿಳಿಸಿದ್ದಾರೆ.

ಸಿಎಂ ಆದೇಶಕ್ಕೂ ಬೆಲೆಯಿಲ್ಲ !
ಉಡುಪಿ:
ಜಿಲ್ಲೆಯಲ್ಲಿ ಮರಳು ಸಾಗಾಟ, ವಿತರಣೆಗೆ ಅ. 16ರಿಂದ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದರೂ ಜಿಲ್ಲಾಡಳಿತ ಬೆಲೆ ನೀಡಿಲ್ಲ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ರಾಜ್ಯ ಸರಕಾರ ಮಧ್ಯ ಪ್ರವೇಶಿಸಲಿ
ಉಡುಪಿ
: ಮರಳು ಸಮಸ್ಯೆಗೆ ಜಿಲ್ಲಾಡಳಿತದ ಹಠಮಾರಿ ಧೊರಣೆಯೇ ಕಾರಣ. ರಾಜ್ಯ ಸರಕಾರ ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು  ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ಆಗ್ರಹಿಸಿದ್ದಾರೆ.

ಬೇಡಿಕೆಗಳೇನು?
* 5 ವರ್ಷ ಹಿಂದಿನ ಮರಳು ನೀತಿ ಅನುಷ್ಠಾನ ಆಗಬೇಕು.
* ಸಿಆರ್‌ಝಡ್‌, ನಾನ್‌ ಸಿಆರ್‌ಝಡ್‌ನ‌ಲ್ಲಿ ಮರಳು ಇದ್ದಲ್ಲಿ ಅವಕಾಶ ನೀಡಿ.
* ಕನಿಷ್ಠ ರಾಯಧನ ವಿಧಿಸಿ ಜನಸಾಮಾನ್ಯರಿಗೆ ಎಷ್ಟು ಮರಳು ಬೇಕೋ ಅಷ್ಟು ಪರವಾನಿಗೆ ನೀಡಬೇಕು. 
* ಜಿಪಿಎಸ್‌ ಕಡ್ಡಾಯಗೊಳಿಸದೆ ವಾಹನದ ನೋಂದಣಿ ಸಂಖ್ಯೆ ಮೇಲೆ ಪರವಾನಿಗೆ ನೀಡುವಂತಾಗಬೇಕು. 
* ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಟೆಂಡರ್‌ ಪ್ರಕ್ರಿಯೆ ಕೈಬಿಟ್ಟು ಸ್ಥಳೀಯ ಪಂ. ವ್ಯಾಪ್ತಿಯಲ್ಲಿಯೇ ಪರವಾನಿಗೆ ನೀಡಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. 
* ಪರವಾನಿಗೆ ಇಲ್ಲದ ಸಾಗಾಟ ವಾಹನಗಳ ಮುಟ್ಟುಗೋಲು ಕಾನೂನನ್ನು ಹಿಂಪಡೆಯಬೇಕು. ವಾಹನ ಮಾಲಕರು ಪರ್ಮಿಟ್‌ ಇಲ್ಲದೆ ತಪ್ಪು ಮಾಡಿದಲ್ಲಿ ಹಿಂದಿನಂತೆ ಕನಿಷ್ಠ ದಂಡನೆ ವಿಧಿಸಿ ವಾಹನ ಬಿಡುವಂತಾಗಬೇಕು. 
* ಕಾರ್ಕಳಕ್ಕೆ ಬೇಕಾದಷ್ಟು ಮರಳು ಸಿಗದಿರುವಾಗ ಗುರುಪುರದಿಂದ ಮರಳು ತರುವ ಪದ್ಧತಿ ಇತ್ತು. ಅದೇ ರೀತಿ ಪರವಾನಿಗೆ ಪಡೆದು ಮಂಗಳೂರಿನಿಂದ ಕಾರ್ಕಳಕ್ಕೆ ಮರಳು ತರುವಂತಾಗಬೇಕು. 
* ಡೀಮ್ಡ್ ಅರಣ್ಯ ಸಮಸ್ಯೆ ಸರಿಪಡಿಸಿ ಕಲ್ಲು, ಕೆಂಪು ಕಲ್ಲು, ಮರಳು, ಜಲ್ಲಿಯಂತಹ ಕಟ್ಟಡ ಸಾಮಗ್ರಿಗಳನ್ನು ಕೂಡ ಪರವಾನಿಗೆ ಪಡೆದು ತೆಗೆಯಲು ಅವಕಾಶ ನೀಡಬೇಕು. 94ಸಿ, ಅಕ್ರಮ ಸಕ್ರಮ ಕಾನೂನು ತೊಡಕು ಸರಿಪಡಿಸಬೇಕು. 
* ಆವಶ್ಯಕತೆಗೆ ಬೇಕಾದಷ್ಟು ಮರಳು ಅಡ್ಡಿ ಇಲ್ಲದೆ ದೊರೆಯುವಂತಾಗಬೇಕು. 
* ಉಡುಪಿ ಜಿಲ್ಲೆಯ ಮರಳನ್ನು ಇಲ್ಲಿಗೇ ನೀಡಬೇಕು, ಹೊರಜಿಲ್ಲೆಗೆ ನೀಡಬಾರದು.

Advertisement

Udayavani is now on Telegram. Click here to join our channel and stay updated with the latest news.

Next