Advertisement

ಸಂದಲ್‌ ಉರುಸ್ ‌ಗೆ ಅನುಮತಿ ನೀಡಲು ಆಗ್ರಹಿಸಿ ಧರಣಿ

08:39 PM Mar 31, 2021 | Team Udayavani |

ಚಿಕ್ಕಮಗಳೂರು: ಬಾಬಾಬುಡನ್‌ಗಿರಿ ದರ್ಗಾದಲ್ಲಿ ನಡೆಯುವ ಉರುಸ್‌ ಅಂಗವಾಗಿ ಸೋಮವಾರ ನಡೆಯಬೇಕಿದ್ದ ಸಂದಲ್‌ ಉರುಸ್‌ ಅನ್ನು ಶಾಖಾದ್ರಿ ನೇತೃತ್ವದಲ್ಲಿ ನಡೆಸಲು ಜಿಲ್ಲಾಡಳಿತ ನಿರಾಕರಿಸಿದ್ದು, ಅನುಮತಿ ನೀಡದ ಹಿನ್ನೆಲೆಯಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಭಕ್ತರು ದರ್ಗಾದ ಎದುರು ಕೆಲಹೊತ್ತು ಧರಣಿ ನಡೆಸಿ ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಬಾಬಾಬುಡನ್‌ಗಿರಿ ಉರುಸ್‌ ಹಿನ್ನೆಲೆಯಲ್ಲಿ ಶಾಖಾದ್ರಿ ಚಿಕ್ಕಮಗಳೂರು ನಗರದಿಂದ ಅತ್ತಿಗುಂಡಿ ಮಾರ್ಗವಾಗಿ ಬಾಬಾಬುಡನ್‌ಗಿರಿಗೆ ಸಂದಲ್‌(ಗಂಧ) ಕೊಂಡೊಯ್ದಿದ್ದರು. ಗಿರಿ ಆವರಣದಲ್ಲಿ ಶಾಖಾದ್ರಿ ತಮ್ಮ ನೇತೃತ್ವದಲ್ಲಿ ಧಾರ್ಮಿಕ ವಿಧಿ ಗಳನ್ನು ನಡೆಸಲು ಅವಕಾಶ ನೀಡಬೇಕೆಂದು, ಗಂಧಲೇಪನ ಸೇರಿದಂತೆ ಗೋರಿಗಳಿಗೆ ಹಸಿರುಹೊದಿಕೆ ಅವಕಾಶ ನೀಡಬೇಕೆಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಬಳಿ ಕೇಳಿ ಕೊಂಡರು.

ಆದರೆ ನ್ಯಾಯಾಲಯದ ಆದೇಶದಂತೆ ಶಾಖಾದ್ರಿಗೆ ಧಾರ್ಮಿಕ ವಿಧಿ ಗಳನ್ನು ಕೈಗೊಳ್ಳಲು ಅವಕಾಶವಿಲ್ಲ ಎಂದು ಜಿಲ್ಲಾ ಧಿಕಾರಿ ಶಾಖಾದ್ರಿಯ ಪ್ರಸ್ತಾವವನ್ನು ತಿರಸ್ಕರಿಸಿದರು. ಶಾಖಾದ್ರಿ ಮಾತನಾಡಿ, ಅನಾದಿ ಕಾಲದಿಂದಲೂ ಶಾಖಾದ್ರಿ ನೇತೃತ್ವದಲ್ಲಿಯೇ ಉರುಸ್‌ನ ಧಾರ್ಮಿಕ ವಿ ಧಿಗಳನ್ನು ಆಚರಿಸುವುದು ಸಂಪ್ರದಾಯವಾಗಿದೆ. ಇದು 1976ಕ್ಕೂ ಹಿಂದಿನ ಆಚರಣೆಯಾಗಿದೆ. ನ್ಯಾಯಾಲಯ ಹಾಗೂ ಸರ್ಕಾರದ ಆದೇಶದಲ್ಲಿ 1975ಕ್ಕೂ ಹಿಂದಿನ ಆದೇಶ ಪಾಲಿಸಲು ತಿಳಿಸಲಾಗಿದೆ.

ಉರುಸ್‌ ಆಚರಣೆ 1975ಕ್ಕೂ ಮುಂಚಿನ ಆಚರಣೆಯಾಗಿದ್ದು, ಇದಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರೂ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಲಿಲ್ಲ. ನಂತರ ಶಾಖಾದ್ರಿ ನೇತೃತ್ವದಲ್ಲಿ ಸಾವಿರಾರು ಸೂಫಿ ಪಂಥದ ಭಕ್ತರು, ಫಕೀರರು ಬಾಬಾಬುಡನ್‌ಗಿರಿ ದರ್ಗಾದ ಗೇಟ್‌ ಎದುರು ಜಿಲ್ಲಾಡಳಿತದ ಕ್ರಮ ಖಂಡಿಸಿ ಧರಣಿ ನಡೆಸಿದರು. ಬಳಿಕ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಿ ಸಂದಲ್‌ನೊಂದಿಗೆ ಅತ್ತಿಗುಂಡಿಗೆ ಹಿಂದಿರುಗಿದರು. ಉರುಸ್‌ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸೂಫಿ ಸಂತರು ಹಾಗೂ ಬೆಂಗಳೂರಿನ ಸರ್ವ ಧರ್ಮ ಪೀಠದ ಸಂಗಮ್‌ ಆನಂದ್‌ ಸ್ವಾಮೀಜಿ ಉರುಸ್‌ ಹಿನ್ನೆಲೆಯಲ್ಲಿ ಬಾಬಾ ಬುಡನ್‌ಗಿರಿಗೆ ಭೇಟಿ ನೀಡಿದ್ದರು. ಸೂಫಿ ಪಂಥದ ಐದು ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಉರುಸ್‌ ಹಿನ್ನೆಲೆಯಲ್ಲಿ ಗಿರಿಗೆ ಭೇಟಿ ನೀಡಿದ್ದರು.

ಮುಸ್ಲಿಂ ಸಂಘಟನೆಗಳ ಮುಖಂಡ ಯೂಸೂಫ್‌ ಹಾಜಿ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಇದ್ದರು. ಉರುಸ್‌ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸಿರುವ ಸಾವಿರಾರು ಸೂಫಿ ಪಂಥದ ಅನುಯಾಯಿಗಳು, ಫಕೀರರು ಮಂಗಳವಾರ ಧಾರ್ಮಿಕ ಸಭೆ ನಡೆಸಿದ್ದು, ಬುಧವಾರ ನಾಗೇನಹಳ್ಳಿ ದರ್ಗಾದಲ್ಲಿ ಉರುಸ್‌ ಕಾರ್ಯಕ್ರಮ ನಡೆಯಲಿದೆ. ಉರುಸ್‌ ಹಿನ್ನೆಲೆಯಲ್ಲಿ ಬಾಬಾ ಬಡನ್‌ಗಿರಿ ಆವರಣದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದರು. ಸ್ಥಳದಲ್ಲಿ ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌. ಅಕ್ಷಯ್‌, ಅಪರ ಜಿಲ್ಲಾ ಧಿಕಾರಿ ರೂಪಾ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿ ಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next