Advertisement

ಮಸಿ ಬಳಿದವರನ್ನು ತಕ್ಷಣ ಬಂಧಿಸಲು ಆಗ್ರಹಿಸಿ ಪ್ರತಿಭಟನೆ

01:21 PM Mar 13, 2017 | |

ದಾವಣಗೆರೆ: ವಿವಾದಿತ ಲೇಖಕ ಯೋಗೇಶ್‌ ಮಾಸ್ಟರ್‌ಗೆ ಮಸಿ ಬಳಿದು ಮಾರಣಾಂತಿಕ ಹಲ್ಲೆಮಾಡಿದವರು ಸಂಘ ಪರಿವಾರದವರು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿ ಪರ ಸಂಘಟನೆ, ಎಡಪಕ್ಷಗಳ ಪ್ರತಿನಿಧಿಗಳು ಮೆರವಣಿಗೆ ನಡೆಸಿದರು. 

Advertisement

ವಿದ್ಯಾನಗರ ರಸ್ತೆಯ ಬಳಿಯ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಲಂಕೇಶ್‌- 82 ಕಾರ್ಯಕ್ರಮದ ಸ್ಥಳದಿಂದ ಮೆರವಣಿಗೆಆರಂಭಿಸಿದ ನೂರಾರು ಪ್ರತಿನಿಧಿಗಳು ಗುಂಡಿ ವೃತ್ತ, ವಿದ್ಯಾರ್ಥಿ ಭವನ, ಅಂಭೇಡ್ಕರ್‌ ವೃತ್ತದ ಮೂಲಕ ಜಯದೇವ ವೃತ್ತ ತಲುಪಿದರು. 

ಜಯದೇವ ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ನಂತರ ಬಡಾವಣೆ ಠಾಣೆಗೆ ತೆರಳಿ, ದೂರು ಸಲ್ಲಿಸಿದರು. ದೂರು ಸಲ್ಲಿಸುವ ಮುನ್ನ ಮಾತನಾಡಿದ ಪತ್ರಕರ್ತೆ ಗೌರಿ ಲಂಕೇಶ್‌, ದಾವಣಗೆರೆ ಒಂದು ಕ್ರಾಂತಿ ಭೂಮಿ. ಇಲ್ಲಿ ಪ್ರಜ್ಞಾವಂತರು, ಸಾಹಿತಿಗಳು, ಪ್ರಗತಿಪರರು ಇದ್ದಾರೆ. 

ಇದೇ ಕಾರಣಕ್ಕೆ ನಾವು ಇಲ್ಲಿ ಲಂಕೇಶ್‌ರ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ನಾಡಿನ ಹೆಸರಾಂತ ಸ್ವಾಮೀಜಿಗಳಾದ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಅಂತಹ ಕಾರ್ಯಕ್ರಮವನ್ನು ಕೆಡಿಸಬೇಕು ಎಂಬ ಉದ್ದೇಶದಿಂದ ಇಂತಹ ದಾಳಿಮಾಡಲಾಗಿದೆ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ಇಂತಹಕಿಡಿಗೇಡಿಗಳನ್ನು ಬಿಡಬಾರದು. ನಾವು  ಇಂತಹ ಕೃತ್ಯಗಳಿಗೆ ಹೆದರುವುದಿಲ್ಲ. ಆದರೆ, ಕಾನೂನು, ಸುವ್ಯವಸ್ಥೆಗೆ ಬೆಲೆ ಕೊಡುತ್ತೇವೆ. ಅದೇ ಕಾರಣಕ್ಕೆ ಶಾಂತಿಯುತ ಮೆರವಣಿಗೆ ಮಾಡಿ, ದೂರು ಸಲ್ಲಿಸಿದ್ದೇವೆ.ಪೊಲೀಸರು ಯಾವುದೇ ಕಾರಣಕ್ಕೂ ಇಂತಹ ಕಿಡಿಗೇಡಿಗಳನ್ನು ಬಿಡಬಾರದು ತಕ್ಷಣ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. 

Advertisement

ಸಿಪಿಐ ಮುಖಂಡರಾದ ಡಾ| ಸಿದ್ಧನಗೌಡ ಪಾಟೀಲ್‌, ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ಇದೊಂದು ಅತ್ಯಂತ ಹೇಯ ಕೃತ್ಯ, ಅಭಿವ್ಯಕ್ತಿ ಸ್ವಾತಂತ್ರ ಹರಣಮಾಡುವ ಯತ್ನ. ಇಂತಹ ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದರು. ಕೋಮು ಸೌಹಾರ್ದ ವೇದಿಕೆಯ ಕೆ.ಎಲ್‌. ಅಶೋಕ್‌ ಮಾತನಾಡಿ, ನಾವು ಗೂಂಡಾ ಸಂಸ್ಕೃತಿಯಿಂದ ಬಂದವರಲ್ಲ.

ನಾವು ಕಾನೂನು ನಂಬಿ ಜೀವನ ನಡೆಸುವವರು. ಯೋಗೀಸ್‌ ಮಾಸ್ಟರ್‌ ಮೇಲೆ ಹಲ್ಲೆ ನಡೆಯುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಸಹ ದಾವಣಗೆರೆಯ ಕಾರ್ಯಕ್ರಮಕ್ಕೆ ಬಂದಾಗ ಅವರ ಮೇಲೆ ಹಲ್ಲೆಮಾಡಲು ಮುಂದಾಗಿದ್ದರು. ಆಗ ನಮ್ಮ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು.

ಇದು ಗೊತ್ತಿದ್ದು ಪೊಲೀಸರು ಸೂಕ್ತ ಭದ್ರತೆ ಒದಗಿಸದಿರುವುದು ಬೇಸರದ ಸಂಗತಿ ಎಂದರು. ಆಮ್‌ ಆದ್ಮಿ ಪಕ್ಷದ ಕೆ. ರಾಘವೇಂದ್ರ, ನಗರಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌, ರೈತ ಸಂಘದ ಬಲ್ಲೂರು ರವಿಕುಮಾರ್‌, ಆವರಗೆರೆ ರುದ್ರಮುನಿ, ಅರುಣಕುಮಾರ್‌ ಕುರುಡಿ, ಮಾನವ ಬಂಧುತ್ವ ವೇದಿಕೆಯ ರಾಘು ದೊಡ್ಮನಿ,

ಸಿಪಿಐ ಎಂನ ಕೆ.ಎಲ್‌. ಭಟ್‌, ವಕೀಲ ಅನೀಸ್‌ ಪಾಷ, ಮುಖಂಡರಾದ ಐರಣಿ ಚಂದ್ರು, ಟಿ.ವಿ. ರೇಣುಕಮ್ಮ, ಉಷಾರಾಣಿ, ಹೆಗ್ಗೆರೆ ರಂಗಪ್ಪ, ಇ. ಶ್ರೀನಿವಾಸ್‌, ಕೆ. ಮಹಾಂತೇಶ್‌, ಕೋಳಿ ಇಬ್ರಾಹಿಂ, ಟಿ. ಅಜರ್‌, ಮಲ್ಲಿಗೆ ಸೇರಿದಂತೆ ವಿವಿಧ ಪ್ರಗತಿ ಪರ, ದಲಿತ ಪರ, ರೈಪರ ಸಂಘಟನೆ ಮುಖಂಡರು  ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next