ದಾವಣಗೆರೆ: ಮುದ್ದಾಭೋವಿ ಕಾಲೋನಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ ಯುಸಿಐ) ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ನಿವಾಸಿಗಳು ಅರಳಿಮರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮುದ್ದಾಭೋವಿ ಕಾಲೋನಿಯಲ್ಲಿ ರಾಜಕಾಲುವೆ, ಒಳಚರಂಡಿ ನಿರ್ಮಾಣ ಹಾಗೂ ಇತರೆ ನಾಗರಿಕ ಸೌಲಭ್ಯ ಕಲ್ಪಿಸುವಂತೆ ಹಲವು ವರ್ಷಗಳಿಂದ ಜನರು ಒತ್ತಾಯಿಸುತ್ತಿದ್ದಾರೆ. ಬಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದರಿಂದ ಮುದ್ದಾಭೋವಿ ಕಾಲೋನಿಯ ಒಂದು ರಾಜಕಾಲುವೆ ಓಪನ್ ಆಗಿ ಹಂದಿಗಳ ಗೂಡಾಗಿ ಸೊಳ್ಳೆ, ನೊಣ, ಕೆಟ್ಟ ವಾಸನೆಗಳಿಂದ ತುಂಬಿದೆ. ಸರಿಯಾದ ಸೌಲಭ್ಯವಿಲ್ಲದೆ ಜನರು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕಾಲೋನಿಯ ಇನ್ನೊಂದು ಕಡೆ ಒಳಚರಂಡಿ ವ್ಯವಸ್ಥೆಯಿಲ್ಲದ ಕಾರಣ ನಿರಂತರವಾಗಿ ಸುರಿದ ಮಳೆಯಿಂದ ಒಳ ಚರಂಡಿಯ ನೀರು ಮನೆಯ ಒಳಗೆ ನುಗ್ಗುತ್ತಿದೆ. ಕಟ್ಟಿರುವ ಮನೆಗಳು ಬೀಳುವ ಹಂತಕ್ಕೆ ತಲುಪಿವೆ. ಒಳಚರಂಡಿಯ ಕೆಟ್ಟ ವಾಸನೆ, ಕುಡಿಯುವ ನೀರಿನ ನಲ್ಲಿಗಳಲ್ಲಿ ವಿಷಪೂರಿತ ನೀರನ್ನು ಕುಡಿಯುವಂತಹ ಪರಿಸ್ಥಿತಿ ಇದೆ. ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಲೋನಿ ಜನರ ಸಮಸ್ಯೆ ಆಲಿಸುತ್ತಲೇ ಇಲ್ಲ. ಹೇಳುವವರು, ಕೇಳುವವರು ಇಲ್ಲದಂತಾಗಿ ಜನರಿಗೆ ಸಂಕಷ್ಟ ಆಗುತ್ತಿದೆ. ಸ್ವಚ್ಛ ವಾತಾವರಣ ಇಲ್ಲದೆ ಜನರು ಸಾಕಷ್ಟು ಜನರು ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಕೂಡಲೇ ರಾಜಕಾಲುವೆ ಕಾಮಗಾರಿಯನ್ನು ಆರಂಭಿಸಬೇಕು. ಶೌಚಾಲಯದ ಪೈಪ್ ಅಳವಡಿಸಬೇಕು. ಹಂದಿಗಳ ಹಾವಳಿಯನ್ನು ತಡೆಗಟ್ಟಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಜನರ ಜೀವನಕ್ಕೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಅಣಬೇರು ತಿಪ್ಪೇಸ್ವಾಮಿ, ಪಿ. ಪರಶುರಾಮ, ಮಧು ತೊಗಲೇರಿ, ಪುಷ್ಪಾ, ಭಾರತಿ, ಸ್ಮಿತಾ, ಮನೋಜ್ ಇತರರು ಇದ್ದರು.