Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆದಿಜಾಂಬವ ಸಂಘ ಪ್ರತಿಭಟನೆ

04:50 PM Sep 01, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭಿವೃದ್ಧಿ ಕಾಮಗಾರಿಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳು ದುರ್ಬಳಕೆ ಆಗಿರುವುದನ್ನು ಖಂಡಿಸಿ ರಾಜ್ಯ ಆದಿಜಾಂಬವ (ಮಾದರ) ಸಂಘದ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ಸಂಘದ ನೇತೃತ್ವದಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯದಿಂದ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಯಿತು. ಬಳಿಕ ಡಿಸಿ ಕಚೇರಿ ಎದುರು ಧರಣಿ ಕೈಗೊಂಡು ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಲೋಕೋಪಯೋಗಿ ಇಲಾಖೆ, ಜಿಪಂ, ಸಣ್ಣ ನೀರಾವರಿ, ಹು-ಧಾ ಮಹಾನಗರ ಪಾಲಿಕೆ ಹಾಗೂ ಇನ್ನುಳಿದ ಎಲ್ಲ ಇಲಾಖೆಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ, ಶಾಸನ ಬದ್ಧ ಅನುದಾನ ದುರುಪಯೋಗ ಮಾಡಿದ ಅಧಿಕಾರಿಗಳ ಮೇಲೆ ಕೂಡಲೇ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಬಗರಹುಕುಂ ಭೂಮಿ ಸಾಗುವಳಿ ಮಾಡಿದ ಪಜಾ/ಪಪಂ ಜನರಿಗೆ ಕೂಡಲೇ ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಲಾಯಿತು.

ಸರ್ವೇ ಮಾಡಿ ಮನೆಯಿಲ್ಲದವರಿಗೆ ಕೂಡಲೇ ನಿವೇಶನ ಮತ್ತು ಮನೆಗಳನ್ನು ನೀಡಬೇಕು. ಪಜಾ/ಪಪಂ ಜನರ ಭೂಮಿಯನ್ನು ಕೆಐಎಡಿಬಿಗೆ ಸರಕಾರ ಭೂಸ್ವಾಧೀನ ಮಾಡಿಕೊಂಡಿದ್ದು, ಅವರಿಗೆ ಭೂ ಮಂಜೂರಾತಿ ಮಾಡದೇ ಜಮೀನು ವಶಪಡಿಸಿಕೊಂಡಿದೆ. ಇದು ಕಾನೂನುಬಾಹಿರವಾಗಿದ್ದು, ಅಂತಹ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ಹು-ಧಾ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ನೇಮಕ ಪ್ರಕ್ರಿಯೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಕವಿವಿ, ಕೃವಿವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿಗಳಲ್ಲಿ ಎಸ್‌ಸಿಪಿ/ಟಿಎಸ್‌ಪಿ ಅನುದಾನ ದುರ್ಬಳಕೆಯಾಗಿದೆ. ಇದನ್ನು ಕೂಡಲೇ ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಎಲ್ಲಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪಜಾ/ಪಪಂ ಗುತ್ತಿಗೆದಾರರಿಗೆ ಟೆಂಡರ್‌ ನೀಡಬೇಕು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಪಜಾ/ಪಪಂ ಸಮುದಾಯದವರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಯಿತು.

ಮಾಜಿ ಸಚಿವ ಅಲ್ಕೋಡ್‌ ಹನುಮಂತಪ್ಪ, ಜಿಲ್ಲಾಧ್ಯಕ್ಷ ಅಶೋಕ ದೊಡಮನಿ, ವೆಂಕಟೇಶ ಸಗಬಾಲ, ಶಂಕರ ದೊಡಮನಿ, ಕಲ್ಮೇಶ ಹಾದಿಮನಿ, ಸಂಗಮೇಶ ಮಾದರ, ಬಸವರಾಜ ಮಾದರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next