Advertisement

ಕಡಬ ಪ.ಪಂ. ಆಗಿಸಲು ಪ್ರಸ್ತಾವನೆ

02:35 AM Jul 06, 2018 | Karthik A |

ಕಡಬ: ಗ್ರಾಮ ಪಂಚಾಯತ್‌ ಆಗಿರುವ ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಗೆ ಬಲ ಬಂದಿದೆ. ಹೊಸ ತಾಲೂಕುಗಳ ಕೇಂದ್ರ ಸ್ಥಾನದಲ್ಲಿರುವ ಗ್ರಾ.ಪಂ.ಗಳನ್ನು ಪ.ಪಂ. ಆಗಿ ಉನ್ನತೀಕರಿಸಲು ಸರಕಾರ ಮುಂದಾಗಿದೆ. ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಗ್ರೀನ್‌ ಸಿಗ್ನಲ್‌ ಸಿಕ್ಕರೆ ಕಡಬಕ್ಕೆ ಪಟ್ಟಣ ಪಂಚಾಯತ್‌ ಪಟ್ಟ ಸಿಗಲಿದೆ. ಪಟ್ಟಣ ಪಂಚಾಯತ್‌ ಸ್ಥಾನಮಾನ ಲಭಿಸಿದರೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲ ಸೌಕರ್ಯಗಳ ಒದಗಣೆಗೆ ಹೆಚ್ಚಿನ ಅನುದಾನಗಳು ಲಭಿಸಲಿವೆ.

Advertisement

ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ 18.70 ಚದರ ಕಿ.ಮೀ. (5629.67 ಎಕರೆ) ಭೌಗೋಳಿಕ ವಿಸ್ತೀರ್ಣ, 2011ರ ಜನಗಣತಿಯಲ್ಲಿ 9546 ಜನಸಂಖ್ಯೆ ಹೊಂದಿರುವ ಕಡಬ ಗ್ರಾಮ ಪಂಚಾಯತ್‌ ನ್ನು ಪ.ಪಂ. ಆಗಿ ಮೇಲ್ದರ್ಜೆಗೇರಿಸಬೇಕೆಂದು ವಿನಯ ಕುಮಾರ್‌ ಸೊರಕೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಸ್ಥಳೀಯ ಕಾಂಗ್ರೆಸ್‌ ಮುಖಂಡರ ನಿಯೋಗ ಮನವಿ ಸಲ್ಲಿಸಿತ್ತು. ಸರಕಾರವೇ ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಪೂರಕ ಅಂಶಗಳ ವರದಿ ಕೇಳಿದೆ. ಗ್ರಾ.ಪಂ. ವ್ಯವಸ್ಥೆಯಿಂದ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಲು 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಅಗತ್ಯ.

ಪ್ರಸ್ತುತ ಜನಗಣತಿಯಾಗಿ 7 ವರ್ಷಗಳು ಕಳೆದಿರುವುದರಿಂದ ಜನಸಂಖ್ಯೆಯು ಶೇ. 11ರಷ್ಟು ಹೆಚ್ಚಿರಬಹುದೆಂದು ಅಂದಾಜಿಸಿ, 1050 ಹೆಚ್ಚುವರಿ ಜನಸಾಂದ್ರತೆಯನ್ನು ನಮೂದಿಸಿ ಈಗಿನ ಜನಸಂಖ್ಯೆ 10,596 ಎಂದು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ. ಈ ಮಧ್ಯೆ ಜನಸಂಖ್ಯೆ ಕಡಿಮೆ ಇರುವುದು ತೊಡಕಾದರೆ ಹತ್ತಿರದ ಬಂಟ್ರ ಗ್ರಾಮವನ್ನು ಸೇರಿಸಿಕೊಂಡು ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಪುತ್ತೂರು ಎಸಿ ಪಂಚಾಯತ್‌ ಗೆ ಸೂಚಿಸಿದ್ದಾರೆ.

ಇತರ ಪೂರಕ ಅಂಶಗಳು
ಸರಕಾರ ತಾಲೂಕು ಕೇಂದ್ರವಾಗಿ ಗುರುತಿಸಿರುವ ಪ್ರಸ್ತಾವಿತ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಭೌಗೋಳಿಕ ವಿಸ್ತೀರ್ಣದ ಶೇ. 55 (3060.57 ಎಕರೆ) ಭಾಗ ಕೃಷಿಯೇತರ ಚಟುವಟಿಕೆಯ ಭೂಮಿಯಾಗಿದ್ದು, ಶೇ. 45 (2569.10 ಎಕರೆ) ಭಾಗ ಕೃಷಿ ಚಟುವಟಿಕೆಯ ಭೂಮಿಯಾಗಿದೆ. ಪಂಚಾಯತ್‌ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, ಖಾಸಗಿ ಸ್ವಾಮ್ಯದ ವಾಣಿಜ್ಯ ಸಂಕೀರ್ಣಗಳು, 5 ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಗಳು, ವಾರದ ಸಂತೆ, 2 ಪೆಟ್ರೋಲ್‌ ಪಂಪ್‌ ಗಳು, ಸಭಾಭವನಗಳು, ಸಹಕಾರಿ ಸಂಘಗಳು, ಕೃಷಿ ಪತ್ತಿನ ಸಹಕಾರಿ ಸಂಘ, ಭೂ ಅಭಿವೃದ್ಧಿ ಬ್ಯಾಂಕ್‌ ಶಾಖೆ, ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ರೈಲು ನಿಲ್ದಾಣ, ಮೊಬೈಲ್‌ ಟವರ್‌ ಗಳು, ಸಮುದಾಯ ಆರೋಗ್ಯ ಕೇಂದ್ರ, ತಹಶೀಲ್ದಾರ್‌ ಕಚೇರಿ, ಸುಸಜ್ಜಿತ ರಸ್ತೆ ಸಂಪರ್ಕ ಇತ್ಯಾದಿಗಳನ್ನು ಪಟ್ಟಣ ಪಂಚಾಯತ್‌ ಗೆ ಪೂರಕ ಅಂಶಗಳಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.

ಹೊಸ ಪ್ರಸ್ತಾವನೆ
ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಪೂರಕವಾಗಿರುವ ಅಂಶಗಳನ್ನು ದಾಖಲಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಮುಂದಿನ ಪ್ರಕ್ರಿಯೆಗಳು ಸರಕಾರದ ಮಟ್ಟದಲ್ಲಿ ನಡೆಯಬೇಕಿವೆ. ಜನಸಂಖ್ಯೆ ಕಡಿಮೆ ಇರುವುದು ತೊಡಕಾಗುವುದಾದರೆ ಹತ್ತಿರದ ಬಂಟ್ರ ಗ್ರಾಮವನ್ನು ಸೇರಿಸಿಕೊಂಡು ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು. 
– ಚೆನ್ನಪ್ಪ ಗೌಡ ಕಜೆಮೂಲೆ, ಪಿಡಿಒ, ಕಡಬ ಗ್ರಾ.ಪಂ.

Advertisement

— ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next