Advertisement

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

03:10 PM Jun 29, 2024 | Team Udayavani |

ಖಾತ್ಯ ಸರೋದ್‌ ವಾದಕ , ಅತ್ಯಂತ ಸರಳ ಮತ್ತು ಶ್ರೇಷ್ಠ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾಗಿದ್ದ ರಾಜೀವ್‌ ತಾರಾನಾಥರು ನಮ್ಮನ್ನು ಅಗಲಿರುವುದು ಸಂಗೀತವೆಂಬ ಆಕಾಶದಲ್ಲಿ ಒಂದು ನಕ್ಷತ್ರ ಕಳಚಿದಂತಾಗಿದೆ. 17 ಅಕ್ಟೋಬರ್‌ 1932ರಲ್ಲಿ ರಾಯಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿರುವ ಪ್ರೇಮಾಯತನ ಆಶ್ರಮದಲ್ಲಿ ರಾಜೀವ್‌ ತಾರಾನಾಥರು ಜನಿಸಿದರು.

Advertisement

ರಾಜೀವ್‌ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ಅವರ ತಂದೆ ಪಂಡಿತ ತಾರಾನಾಥ್‌ ಅವರಿಂದ ಕಲಿತಿದ್ದರು. ಸಣ್ಣ ವಯಸ್ಸಿನಲ್ಲಿ ಅಂದರೆ ಕೇವಲ ಒಂಬತ್ತು ವರ್ಷದವರಿದ್ದಾಗ ಅವರು ತಮ್ಮ ಪ್ರಥಮ ಸಂಗೀತ ಕಛೇರಿಯನ್ನು ನಡೆಸಿದ್ದರು.

ರಾಜೀವ್‌ ತಾರಾನಾಥರು ಸಂಗೀತದ ಜತೆಗೆ ಶಿಕ್ಷಣದಲ್ಲೂ ಮುಂದಿದ್ದರು. ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬಿಎ ಪದವಿಯಲ್ಲಿ ಚಿನ್ನದ ಪದಕ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎ ಇಂಗ್ಲಿಷ್‌ನಲ್ಲಿ ಚಿನ್ನದ ಪದಕ ಪಡೆದು ಅನಂತರ ಪ್ರೊ| ಸಿ.ಡಿ ನರಸಿಂಹಯ್ಯರ ಮಾರ್ಗದರ್ಶನಲ್ಲಿ ಪಿಎಚ್‌.ಡಿ.  ಪದವಿಯನ್ನು ಸಹ ಪಡೆದಿದ್ದರು.

ರಾಜೀವ್‌ ತಾರಾನಾಥರು ತಮ್ಮ 20ನೇ ವಯಸ್ಸಿನಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು. ಅವರು ಉಸ್ತಾದ್‌ ಆಲಿ ಅಕ್ಬರ್‌ ಖಾನ್‌ ಅವರ ಶಿಷ್ಯರಾಗಿದ್ದರು ಮತ್ತು ರವಿಶಂಕರ್‌ ಮತ್ತು ಅನ್ನಪೂರ್ಣ ದೇವಿಯವರ ಮಾರ್ಗದರ್ಶನವನ್ನೂ ಪಡೆದರು.

1980ರ ದಶಕದಲ್ಲಿ ಆಡೆನ್‌ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಸಾಹಿತ್ಯವನ್ನು ಅಧ್ಯಯನ ಮಾಡಿದರು ಮತ್ತು 1995-2005ರ ವರೆಗೆ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್ ಆರ್ಟ್ಸ್ನಲ್ಲಿ ಭಾರತೀಯ ಸಂಗೀತ ಕಾರ್ಯಕ್ರಮದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

Advertisement

ಪಲ್ಲವಿ, ಸಂಸಾರ, ಖಂಡವಿದಕೊ ಮಾಂಸವಿದೆಕೊ, ಅನುರೂಪ, ಪೇಪರ್‌ ಬೋಟ್‌, ಅಗುಂತಕ, ಮಲಾಯಳಂನ ಕಡವು, ಕಾಂಚಬ ಸೀತಾ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಚಲನಚಿತ್ರ ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಇವರ ಹಲವಾರು ಧ್ವನಿ ಮುದ್ರಣಗಳು ಇಂದಿಗೂ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಇವರ ಸಾಧನೆಗಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ನಾಡೋಜ, ಪದ್ಮಶ್ರೀ, ರಾಜ್ಯ ಸಂಗೀತ ವಿದ್ವಾನ್‌, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡದಿದ್ದಾರೆ.

ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಗಳಿಸಿದ್ದ  ಪಂ| ರಾಜೀವ್‌ ತಾರಾನಾಥರ ಕಚೇರಿಯೊಂದರ ಬಗ್ಗೆ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ “ತಾರಾನಾಥರ ಸಂಗೀತವು ಹೃದಯದ ತಂತಿಗಳನ್ನು ಮೀಟುವಂತದ್ದಾಗಿದ್ದು, ಶ್ರೋತೃವರ್ಗ ಅವರ ಸಂಗೀತದ ಭಾವುಕತೆಯ ಆರ್ತತೆ ಮತ್ತು ಸಮರ್ಥತೆಗೆ ಮೂಕವಾಗಿ ತಲ್ಲೀನಗೊಂಡಿತ್ತು ಎಂದು ಬರೆಯಲಾಗಿತ್ತು. ಎಕನಾಮಿಕ್‌ ಟೈಮ್ಸ್ ರಾಜೀವ್‌ ತಾರಾನಾಥರು ಅದೆಷ್ಟು ಮೋಹಕ ಚೆಲುವನ್ನು ತಮ್ಮ ಸ್ವರ’ ಮತ್ತು ದನಿಗಳಲ್ಲಿ ಬಿತ್ತರಿಸುತ್ತಾರೆ.

ಅವರ ಸಂಗೀತದ ಪ್ರತೀ ಸ್ತರವೂ ಮೋಹಕತೆಯ ಸುದೀರ್ಘ‌ ಸುಮಧುರತೆಯ ಅನುಭಾವವನ್ನು ಉಳಿಸುತ್ತ ಮುನ್ನಡೆಯುವಂತದ್ದು ಎಂದೂ ಬರೆಯಲಾಗಿತ್ತು. ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆಯಲ್ಲಿ ಎಡ್ವರ್ಡ್‌ ರೋತ್‌ ಸ್ಟೀನ್‌ ಪ್ರಕಾರ ರಾಜೀವ್‌ ತಾರಾನಾಥರ ಸಂಗೀತವು ʼspiritual and spirited’ ಸಂಯೋಗದ ಲಕ್ಷಣಗಳುಳ್ಳಂತಹ ಔನ್ನತ್ಯವನ್ನು ಸ್ಫುರಿಸುವಂತಹವು, ಅಂತರಾತ್ಮದ ಹುಡುಕಾಟವನ್ನು ಪ್ರಾತಿನಿಧಿಕವಾಗಿ ತಲುಪುವ ಪ್ರಾರ್ಥನಾ ರೂಪವಾಗಿ ಪ್ರಾರಂಭಗೊಳ್ಳುವ ಅವರ ಸಂಗೀತ ನಾದಭವ್ಯತೆಗೆ ತೆರೆದುಕೊಳ್ಳುವ ರೀತಿ ಅಸಾಮಾನ್ಯವಾದುದು ಎಂದೂ ಹೊಗಳಿದ್ದರು.

ಹೀಗೆ  ಪಂ| ರಾಜೀವ್‌ ತಾರಾನಾಥರು ತಮ್ಮ ಸಂಗೀತ ವಿಶ್ವಸಮುದಾಯವನ್ನು ಸಂಮೋಹಗೊಳಿಸಿದ್ದರು. ಪಂ| ರಾಜೀವ್‌ ತಾರಾನಾಥರು ರಾಗಗಳ ಕುರಿತಾಗಿ ಆಳವಾದ ಜ್ಞಾನವನ್ನು ಹೊಂದಿದ್ದರು. ಇವರ ತಾಂತ್ರಿಕ ಕೌಶಲ, ಕಲ್ಪನಾ ಸಾಮರ್ಥ್ಯ, ಅನುಭೂತಿಯ ಸೌಂದರ್ಯ ಇವರ ಸಂಗೀತದಲ್ಲಿ ಕಾಣಿಸುತ್ತಿತ್ತು.ದೇಶ ವಿದೇಶಗಳಲ್ಲಿ ಸಂಗೀತ ಕಛೇರಿ ನಡೆಸಿದ್ದ ಅವರು ಜೂ.11ರಂದು ವಯೋಸಹಜತೆಯಿಂದಾಗಿ ತಮ್ಮ 91ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಇವರ  ದೇಹ ನಮ್ಮಿಂದ ದೂರ ಹೋದರೂ, ಸಂಗೀತದ ಮೂಲಕ ನಮ್ಮ ನಡುವೆ ಅಮರರಾಗಿದ್ದಾರೆ.

-ರಾಸುಮ ಭಟ್‌

ಕುವೆಂಪು ವಿವಿ, ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next