Advertisement

ಬೇರೆ ಕ್ಷೇತ್ರಗಳ ಪ್ರವೇಶಕ್ಕೆ ಅಭ್ಯರ್ಥಿಗಳಿಗೆ ನಿಷೇಧ

12:09 PM May 11, 2018 | Team Udayavani |

ಬೆಂಗಳೂರು: ಗುರುವಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಅಭ್ಯರ್ಥಿಗಳು ಶುಕ್ರವಾರದಿಂದ ಮನೆ ಮನೆ ಪ್ರಚಾರ ನಡೆಸಲು ಅವಕಾಶವಿದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಎಂ.ಮಹೇಶ್ವರ್‌ ರಾವ್‌ ಹೇಳಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 12ರಂದು ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುವ ಹಿನ್ನೆಲೆಯಲ್ಲಿ 48 ಗಂಟೆಗಳ ಮೊದಲು ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಇದರೊಂದಿಗೆ ಗುರುವಾರ ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಎಣಿಕೆ ದಿನವಾದ ಮೇ 15ರಂದು ಮುಂಜಾನೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.

ಚುನಾವಣಾ ಆಯೋಗದ ಆದೇಶದಂತೆ ಮತಗಟ್ಟೆಯ 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರಚಾರಕ್ಕೆ ಅವಕಾಶವಿಲ್ಲ. ಪ್ರಚಾರಕ್ಕಾಗಿ ಧ್ವನಿವರ್ಧಕ ಬಳಕೆ, ಜಾಹೀರಾತು ಫಲಕ, ಭಿತ್ತಿಪತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದು ಹೇಳಿದರು. 

ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮಾತ್ರ ಇರಬೇಕು. ಒಂದು ಕ್ಷೇತ್ರದ ಅಭ್ಯರ್ಥಿ ಮತ್ತೂಂದು ಕ್ಷೇತ್ರಕ್ಕೆ ಪ್ರವೇಶಿಸುವುದು ನಿಷೇಧ ಹೇರಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಗರದ 81 ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಒಂದು ಕಾರಿನಲ್ಲಿ 5ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಸೂಚನೆ ನೀಡಿದರು. 

ಶುಕ್ರವಾರ ಮತಯಂತ್ರಗಳ ರವಾನೆ: ಶುಕ್ರವಾರ ಮಧ್ಯಾಹ್ನ 1.30ರಿಂದ ಮತಗಟ್ಟೆಗಳಿಗೆ ಮತಯಂತ್ರಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಗದಿಪಡಿಸಿದ ಮತಗಟ್ಟೆಗಳಲ್ಲಿ ಬೆಳಗ್ಗೆ 9.30ಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಮತಯಂತ್ರಗಳನ್ನು ನಿರ್ವಹಿಸುವಲ್ಲಿ ಸಣ್ಣ ದೋಷ ಕಂಡಬಂದರೂ ಅದನ್ನು ತಕ್ಷಣವೇ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು. 

Advertisement

ಮೊಬೈಲ್‌ ಬಳಸುವಂತಿಲ್ಲ: ಮತದಾನದ ದಿನಂದರು ಮತದಾರರು ಮತಗಟ್ಟೆಯಿಂದ 200 ಮೀಟರ್‌ ದೂರದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ, ಮತಗಟ್ಟೆ ನಡೆದುಕೊಂಡು ಬಂದು ಮತದಾನ ಮಾಡಬೇಕು. ಜತೆಗೆ ಮತಗಟ್ಟೆಯ 100 ಮೀಟರ್‌ ವ್ಯಾಪ್ತಿಯಲ್ಲಿ ಮೊಬೈಲ್‌, ಕಾರ್ಡ್‌ಲೆಸ್‌ ಪೋನ್‌ ಬಳಕೆ ಹಾಗೂ ಮತಗಟ್ಟೆ ಬಳಿ ಪೂಜೆ, ತೆಂಗಿನಕಾಯಿ ಒಡೆಯುವುದು, ಅಗರಬತ್ತಿ ಹಚ್ಚುವುದು ಸಹ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಮತಗಟ್ಟೆ ಬಳಿ ಸಹಾಯ ಕೇಂದ್ರ: ಚುನಾವಣಾಧಿಕಾರಿಗಳು ಈಗಾಗಲೇ ಮನೆ ಮನೆಗೆ ತೆರಳಿ ವೋಟರ್‌ ಸ್ಲಿಪ್‌ ಹಾಗೂ ಗೈಡ್‌ಗಳನ್ನು ವಿತರಿಸಿದ್ದಾರೆ. ಈಗಾಗಲೇ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ವಿತರಣೆ ಶೇ.95ರಷ್ಟು ಆಗಿದ್ದು, ಸ್ಲಿಪ್‌ ದೊರೆಯದಿರುವ ಮತದಾರರು ಮತದಾನದ ದಿನ ಮತಗಟ್ಟೆಗೆ ಹೋಗಿ ಅಲ್ಲಿರುವ ಸಹಾಯ ಕೇಂದ್ರದಲ್ಲಿ ಪಡೆಯಬಹುದಾಗಿದೆ ಎಂದರು. 

6.8 ಕೋಟಿ ನಗದು ವಶ: ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಒಟ್ಟು 6.8 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದ್ದು, 11.699 ಲೀ. ಮದ್ಯ ವಶಪಡಿಸಿಕೊಂಡು 39,540 ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ 5.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. 

14 ಮಂದಿ ವಿರುದ್ಧ ಎಫ್ಐಆರ್‌ ದಾಖಲು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಫ್ಲಾಟ್‌ನಲ್ಲಿ ಸಿಕ್ಕಿರುವ ಗುರುತಿನ ಚೀಟಿ ಪ್ರಕರಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನನಾಯ್ಡು ಸೇರಿ 14 ಮಂದಿ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ಎಂಸಿಸಿ ತಂಡವು ಪರಿಶೀಲನೆ ನಡೆಸಿದ ವೇಳೆ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಿದೆ. 9,564 ಗುರುತಿನ ಚೀಟಿ, 6,300 ಮತದಾರರ ನೋಂದಣಿ ಅರ್ಜಿಗಳು, 20 ಸಾವಿರ ಮತದಾರರ ಸ್ಲಿಪ್‌ಗ್ಳು ಪತ್ತೆಯಾಗಿವೆ. ಆ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಮಹೇಶ್ವರ್‌ ರಾವ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next