Advertisement

ಸಮರ್ಥ ಆಡಳಿತಗಾರ, ಗುರುತರ  ಕೊಡುಗೆಗಳ ಮೇಧಾವಿ ಪ್ರೊ|ಸವದತ್ತಿ

11:03 PM Jun 10, 2021 | Team Udayavani |

ಮೇರು ವ್ಯಕ್ತಿತ್ವದ, ದೂರದೃಷ್ಟಿಯ ಸಮರ್ಥ ಆಡಳಿತಗಾರರಾಗಿದ್ದ ಪ್ರೊ| ಎಂ.ಐ. ಸವದತ್ತಿ ಅವರು 1989ರ ಅಕ್ಟೋಬರ್‌ನಿಂದ 1995ರ ವರೆಗೆ 6 ವರ್ಷ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಎರಡು ಅವ ಧಿಯಲ್ಲಿ ಮಾಡಿದ್ದ ಕೆಲಸಗಳು ಮಂಗಳೂರು ವಿವಿಯನ್ನು ರಾಜ್ಯದ ಪ್ರಮುಖ ವಿವಿಗಳ ಸಾಲಲ್ಲಿ ನಿಲ್ಲುವಂತೆ ಮಾಡಿದೆ.

Advertisement

ವಿ.ವಿ.ಯ ಮೂರನೇ ಕುಲಪತಿಗಳಾಗಿದ್ದ ಅವರು ಮಂಗಳೂರು ವಿ.ವಿ.ಯನ್ನು ಕಟ್ಟಿ ಬೆಳೆಸಿದ ಕಾರ್ಯ ಅದ್ವಿತೀಯ. ಅತ್ಯುತ್ತಮ ವಾಗ್ಮಿಯಾಗಿ, ಶ್ರೇಷ್ಠ ವಿಜ್ಞಾನಿಯಾಗಿ, ಅತ್ಯುತ್ತಮ ಆಡಳಿತಗಾರ ರಾಗಿದ್ದ ಅವರು ಎಲ್ಲರನ್ನು ಜತೆಯಾಗಿ ಕರೆದು ಕೊಂಡು ಮುನ್ನಡೆಸಿದ ಮಹಾನ್‌ ಸಾಧಕ. ಗುರುತರ ಕೊಡುಗೆಗಳ ಮೂಲಕ ಅವರು ಮಂಗಳೂರು ವಿ.ವಿ. ಪಾಲಿಗೆ ಎಂದೆಂದಿಗೂ ಅಜರಾಮರ.

ದೇಶದಲ್ಲಿಯೇ ಮೊದಲ ಬಾರಿಗೆ “ಮೈಕ್ರೋ ಟ್ರೋನ್‌ ಸೆಂಟರ್‌’ ಅನ್ನು ಮಂಗಳೂರು ವಿ.ವಿ.ಯಲ್ಲಿ ಸ್ಥಾಪಿಸುವ ಮೂಲಕ ಮಹತ್ತರ ಕೊಡುಗೆ ನೀಡಿದ್ದರು. ಯುಜಿಸಿ ಸದಸ್ಯರೂ ಆಗಿದ್ದ ಅವರು ಎಲ್ಲರ ಜತೆಗೆ ಅತ್ಯುತ್ತಮ ಸಂಬಂಧ ಬೆಸೆದುಕೊಂಡು ಬಾಬಾ ಅಟಮಿಕ್‌ ರಿಸರ್ಚ್‌ ಸೆಂಟರ್‌ ಸಹಭಾಗಿತ್ವದಲ್ಲಿ ಸ್ಥಾಪಿಸಿದ್ದ ಈ ಕೇಂದ್ರ ಈಗಲೂ ಕಾರ್ಯನಿರ್ವಹಿಸುತ್ತಿದೆ.

“ಯುನಿವರ್ಸಿಟಿ ಸೈಂಟಿಫಿಕ್‌ ಇನ್‌ಸ್ಟ್ರೆ ಮೆಂಟೇಶನ್‌ ಸೆಂಟರ್‌’ (ಯುಸೆಕ್‌) 1995ರಲ್ಲಿ ಮಂಗಳೂರು ವಿ.ವಿ.ಯಲ್ಲಿ ಜಾರಿಗೆ ಬರಲು ಪ್ರೊ| ಎಂ.ಐ. ಸವದತ್ತಿ ಅವರೇ ಕಾರಣಕರ್ತರಾಗಿ ದ್ದ ರು. ಬಳಿಕ ರಾಜ್ಯದ ವಿವಿಧ ವಿ.ವಿ.ಗಳಲ್ಲಿ ಇದು ಅನುಷ್ಠಾನವಾಯಿತು. ವಿ.ವಿ. ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ “ಕಾಲೇಜ್‌ ಡೆವೆಲಪ್‌ಮೆಂಟ್‌ ಕೌನ್ಸಿಲ್‌’ ರೂಪಿಸಿ ಅದಕ್ಕೆ ಸಮರ್ಥ ನಾಯಕತ್ವದ ದಿಕ್ಕು ತೋರಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ಈ ಮೂಲಕ ಯುಜಿಸಿ ಸ್ಕೀಂ ಬಳಸಿಕೊಂಡು ಮಹಿಳಾ ವಸತಿಗೃಹ, ಕ್ರೀಡಾ ಪರಿಕರಗಳ ಜೋಡಣೆಯ ಮೂಲಕ ಅವರು ಮೇಲ್ಪಂಕ್ತಿ ಹಾಕಿದ್ದರು.

ಮೈಸೂರಿನಲ್ಲಿದ್ದ ಪ್ರಸಾರಾಂಗ ನಮ್ಮಲ್ಲಿಯೂ ಆಗಬೇಕು ಎಂಬ ತುಡಿತದೊಂದಿಗೆ ಮಂಗಳೂರಿ ನಲ್ಲಿ ಪ್ರಸಾರಾಂಗ ಜಾರಿಗೊಳಿಸಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ಬೋಧನಾಂಗ, ಸಂಶೋಧ ನಾಂಗ ಇರುವಂತೆಯೇ ಪ್ರಸಾರಾಂಗ ಇರಬೇಕು ಎಂಬ ಪರಿಕಲ್ಪನೆಯಲ್ಲಿ ಅದನ್ನು ಜಾರಿಗೊಳಿಸಿ ದ್ದರು. ಅದರ ಮೂಲಕ ಅದೆಷ್ಟೋ ಪುಸ್ತಕಗಳು ಬಿಡುಗಡೆಯಾಗುತ್ತಿವೆ.

Advertisement

ಮಂಗಳೂರು ವಿ.ವಿ.ಯು ಕೈಗಾರಿಕೆಗಳ ಜತೆಗೆ ಸಂಬಂಧ ಬೆಸೆದುಕೊಂಡು ವಿದ್ಯಾರ್ಥಿಗಳಿಗೆ ನೆರವಾಗುವ ಪರಿಕಲ್ಪನೆಯನ್ನು ಪ್ರೊ|ಸವದತ್ತಿ ಅವರು ಜಾರಿಗೆ ತಂದಿದ್ದರು. ವಿದ್ಯಾರ್ಥಿಗಳ ಜತೆಗೆ ಸಂವಾದ, ಕೈಗಾರಿಕೆಗಳಿಗೆ ಶಿಕ್ಷಕರು ತೆರಳಿ ಅಧ್ಯಯನ ಮಾಡಲು ಉದ್ದೇಶಿಸಲಾಗಿತ್ತು. ಇಬ್ಬರ ಮಧ್ಯೆ ಒಡಂಬಡಿಕೆ ಮೂಡಿಸುವ ಮೊದಲ ಪ್ರಯತ್ನಕ್ಕೆ ಭದ್ರಬುನಾದಿ ಹಾಕುವ ಮೂಲಕ ಅನಂತರದ ದಿನಗಳಲ್ಲಿ ವಿ.ವಿ. ಸ್ಥಾನಮಾನವನ್ನು ಎತ್ತರಕ್ಕೇರಿಸಿದ್ದರು.

ದೇಶದ ಬಹುತೇಕ ವಿ.ವಿ.ಗಳ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಅವರು, ದೇಶದ ಎಲ್ಲ ಕುಲಪತಿಗಳನ್ನು ಸೇರಿಸಿಕೊಂಡು ವಿಚಾರಸಂಕಿರಣ ಸಂಘಟಿಸಿದ್ದರು. ಯುಜಿಸಿ ಸದಸ್ಯರಾಗಿದ್ದ ಕಾರಣದಿಂದ ಎಲ್ಲರ ಜತೆಗೆ ಬೆರೆಯುವ ಚಾಕಚಕ್ಯತೆ ಗುಣ ಅವರಲ್ಲಿತ್ತು. ಈ ಮೂಲಕ ಮಂಗಳೂರು ವಿ.ವಿ.ಯ ಕುಲಪತಿ ಕಚೇರಿಯ ಘನತೆ, ಗೌರವ ಎತ್ತಿಹಿಡಿದಿದ್ದರು.

ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ಅವರು ಸಮಾಜಶಾಸ್ತ್ರ, ವಾಣಿಜ್ಯ, ರಾಜಕೀಯ, ಆಡಳಿತ, ರಸಾಯನಶಾಸ್ತ್ರ, ಇತಿಹಾಸ.. ಹೀಗೆ ಯಾವುದೇ ವಿಚಾರದಲ್ಲಿ ನಿರರ್ಗಳ ಹಾಗೂ ಪಾಂಡಿತ್ಯ ಪೂರ್ಣವಾಗಿ ಇಂಗ್ಲಿಷ್‌, ಕನ್ನಡದಲ್ಲಿ ಮಾತನಾಡ ಬಲ್ಲ ಬಹುಮುಖ್ಯ ಕಲೆ ಅವರಲ್ಲಿತ್ತು. ವಿ.ವಿ.ಯಲ್ಲಿ ಅಧ್ಯಯನ ಪೀಠ ಹಾಗೂ ಅಧ್ಯಯನ ಕೇಂದ್ರವನ್ನು ಅವರ ಕಾಲದಲ್ಲಿ ಸ್ಥಾಪಿಸುವ ಮೂಲಕ ವಿ.ವಿ.ಗೆ ಹೊಸತನವನ್ನು ಪರಿಚಯಿಸಿದ್ದರು.

ಅವರು ನಿವೃತ್ತರಾದ ಅನಂತರ, ಪ್ರೊ| ಭೈರಪ್ಪ ಅವರು ಕುಲಪತಿಗಳಾಗಿದ್ದಾಗ ಹಾಗೂ ನಾನು ಕುಲಸಚಿವನಾಗಿದ್ದ ಸಮಯದಲ್ಲಿ ನಡೆದ “ವಿಷನ್‌ 2020-2030 ಡಾಕ್ಯುಮೆಂಟ್‌’ನ ಅಧ್ಯಕ್ಷರಾಗಿ ಅವರ ಕಾರ್ಯವೈಖರಿ ಮಾದರಿ ಹಾಗೂ ಅವಿ ಸ್ಮರಣೀಯ. ಅವರ ಒಕ್ಕಣೆಯ ಬರಹ ವಿ.ವಿ.ಯ ಮುಂದಿನ ಬೆಳವಣಿಗೆಗೆ ದಾರಿದೀಪದಂತಿದೆ. ವಿ.ವಿ ವಿದ್ಯಾರ್ಥಿಗಳು, ಶಿಕ್ಷಕರು ಗ್ರಾಮಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಅವಲೋಕಿಸಿ ಸರಕಾರದ ಜತೆಗೆ ಕೊಂಡಿಯಾಗಿ ಕೆಲಸ ಮಾಡುವ ನೆಲೆಯಲ್ಲಿ “ವಿ.ವಿ. ಹಳ್ಳಿಗಳ ಕಡೆಗೆ’ ಎಂಬ ಪರಿಕಲ್ಪನೆಗೆ ಜೀವ ತುಂಬಿದವರು ಅವರು. ಅದನ್ನು ಅನುಷ್ಠಾನಿಸುವ ಕಾರ್ಯವನ್ನು ನಾವು ಪ್ರಾಮಾ ಣಿಕವಾಗಿ ನಡೆಸಿದ್ದೇವೆ.

ಅವರ 6 ವರ್ಷಗಳ ಅಧಿಕಾರಾವಧಿಯಲ್ಲಿ 120 ಸಂಯೋಜಿತ ಕಾಲೇಜುಗಳಿಗೆ ಕನಿಷ್ಠ  ಒಂದು ಬಾರಿಯಾದರೂ ಭೇಟಿ ನೀಡುವ ಮೂಲಕ ಅಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಜತೆಗೆ ಸಂಬಂಧ ಬೆಸೆಯುವ ಪ್ರಯತ್ನ ನಡೆಸಿದ್ದರು.

ವಿ.ವಿ. ಕುಲಪತಿಗಳನ್ನು ರಾಜ್ಯಪಾಲರು ಬಹಿರಂಗವಾಗಿ ಶ್ಲಾಘಿಸುವುದು ಕಡಿಮೆ. ಆದರೆ ನೊಬೆಲ್‌ ಪುರಸ್ಕೃತ ಲಾರಿ ಪೋರ್ಟರ್‌ ಅವರನ್ನು ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಪ್ರೊ| ಎಂ.ಐ. ಸವದತ್ತಿ ಅವರು ಕರೆತಂದಿದ್ದರು. ಇದನ್ನು ಕಂಡ ಅಂದಿನ ರಾಜ್ಯಪಾಲರಾದ ಖುರ್ಷಿದ್‌ ಆಲಂ ಖಾನ್‌ ಅವರು ಮಾಧ್ಯಮದವರ ಜತೆಗೆ ಮಾತನಾಡಿ, “ನೊಬೆಲ್‌ ಪುರಸ್ಕೃತರನ್ನು ಘಟಿ ಕೋತ್ಸವಕ್ಕೆ ಕರೆತಂದು ಪ್ರೊ| ಸವದತ್ತಿ ಅವರು ಈ ಕಾರ್ಯಕ್ರಮದ ಘನತೆ ಇಮ್ಮಡಿಗೊಳಿಸಿದ್ದಾರೆ. ಕುಲಪತಿಯವರ ಆಡಳಿತಾತ್ಮಕ ಕಾರ್ಯವೈಖರಿ ಅದ್ಭುತ’ ಎಂದು ಕೊಂಡಾಡಿದ್ದರು.

 

 ಪ್ರೊ|ಪಿ.ಎಸ್‌.ಯಡಪಡಿತ್ತಾಯ,

ಕುಲಪತಿಗಳು,

ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next