Advertisement

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

12:19 AM Mar 17, 2024 | Team Udayavani |

ಕುಂಜಿಬೆಟ್ಟು ಶಿವಹರಿದಾಸ ಭಟ್ಟರು (1924-2000) ಜನಿಸಿ ಶತಮಾನ ವಾಯಿತು. “ಲೋಕಾಭಿರಾಮ’ದ ಪ್ರೊ| ಕುಶಿ, ಶಿಕ್ಷಣ, ಸಾಹಿತ್ಯ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಅನುಪಮವಾದ ಸಾಧನೆ-ಸಿದ್ಧಿಗಳಿಂದ ಲೋಕ ವಿಖ್ಯಾತರಾದವರು. ಪ್ರೊ| ಕು.ಶಿ. ಹರಿದಾಸ ಭಟ್ಟರ ಜನ್ಮ ಶತಮಾನೋತ್ಸವ ಉತ್ಸವವನ್ನು ಮಾ. 17ರಂದು ಸಂಭ್ರಮದಿಂದ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಚರಿಸಲಾಗುತ್ತಿದೆ.

Advertisement

ನಾಡು ಕುಶಿಯವರ ನೂರರ ಹಬ್ಬ ಆಚರಿಸುವ ಸಂಭ್ರಮದಲ್ಲಿದೆ. ಪ್ರೊ| ಭಟ್ಟರು ತೀರಿಕೊಂಡು 23 ವರ್ಷಗಳು ಸಂದಿವೆ. ಪ್ರೊ| ಕುಶಿಯವರು ಕಟ್ಟಿ ಬೆಳೆಸಿದ ಮಹಾತ್ಮಾ ಗಾಂಧಿ ಸ್ಮಾರಕ (ಎಂ.ಜಿ.ಎಂ.) ಕಾಲೇಜಿನ ಆವರಣದಲ್ಲಿ ಕಾಲಿಟ್ಟು ರವೀಂದ್ರ ಮಂಟಪದತ್ತ ಹೆಜ್ಜೆ ಹಾಕುವಾಗ ನಮ್ಮ ಪ್ರೀತಿಯ, ಅಭಿಮಾನಧನರಾದ ಗುರುಗಳು ಇಲ್ಲೆ ಎಲ್ಲೋ ಇದ್ದಾರೆ, ಇದೀಗ ಪ್ರತ್ಯಕ್ಷರಾಗಿ ನಮ್ಮಲ್ಲಿ ಸಾರ್ಥಕ್ಯದ ಭಾವ ಮೂಡಿಸುತ್ತಾರೆ ಎಂದು ಅನ್ನಿಸುತ್ತಿರುತ್ತದೆ.
ಕುಶಿಯವರು ಆಕ್ಸ್‌ಫ‌ರ್ಡ್‌, ಕೇಂಬ್ರಿಡ್ಜ್ ವಿಶ್ವ ವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಿದವ ರಲ್ಲ. ಅಪ್ಪಟ ಈ ಮಣ್ಣಿನವರು. 1946 ರಲ್ಲಿ ಅರ್ಥ ಶಾಸ್ತ್ರದಲ್ಲಿ ಆನರ್ಸ್‌ ಪದವಿಪಡೆದು 1950 ರಲ್ಲಿ ಎಂಜಿಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸ್ಥಾಪಕ ಪ್ರಾಂಶುಪಾಲ “ಶೇಕ್ಸ್‌ಪಿಯರ್‌ಸುಂದರ ರಾಯರ’ ಕೈ ಕೆಳಗೆ ಪಳಗಿ 1964ರಲ್ಲಿ ಪ್ರಾಂಶುಪಾಲರ ಪಟ್ಟವೇರಿ ಎಂಜಿಎಂನ “ಭಾಗ್ಯದ ಬಾಗಿಲು’ ತೆರೆದರು.

“ಕುಶಿ ಎಂದರೆ ಎಂಜಿಎಂ; ಎಂಜಿಎಂ ಎಂದರೆ ಕುಶಿ’. ಅದಕ್ಕೆ ಮುಖ್ಯ ಕಾರಣ ಮಣಿಪಾಲದ ಬ್ರಹ್ಮ ಡಾ| ಮಾಧವ ಪೈಯವರ ಕೃಪಾಕಟಾಕ್ಷದಿಂದ ತಾವು ಕಂಡ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಶೈಕ್ಷಣಿಕ ಕನಸುಗಳನ್ನು ಕುಶಿ ಎಂಜಿಎಂ ಪರಿಸರದಲ್ಲಿ ಸಾಕಾರ ಗೊಳಿಸಿದರು.

ಶಿವರಾಮ ಕಾರಂತರ ವಿನೂತನ “ಯಕ್ಷ ರಂಗ’ದ ಪ್ರಯೋಗಗಳಿಗೆ ಒತ್ತಾಸೆ ನೀಡಿ ದೇಶ- ವಿದೇಶಗಳಲ್ಲಿ ಯಕ್ಷಬ್ಯಾಲೆಯ ಪ್ರದರ್ಶನಗಳನ್ನು ಆಯೋಜಿಸಿದರು. ಬಂಗಾಲದ ರವೀಂದ್ರ ನಾಥ ಟಾಗೋರ್‌, ನಂದಳಿಕೆಯ ಮುದ್ದಣ,ಕೋಟದ ಕಾರಂತ, ಬಾಬುಕೋಡಿ ಕಾರಂತ, ಸಾಧನಕೇರಿಯ ಬೇಂದ್ರೆ, ಸಂತೇಶಿವರದ ಭೈರಪ್ಪ, ಉಡುಪಿಯ ಅನಂತಮೂರ್ತಿ, ಫಿನ್ಲಂಡ್‌ನ‌ ಲಾರಿ ಹಾಂಕೋ, ಅಮೆರಿಕದ ಪೀಟರ್‌ ಕ್ಲಾಸ್‌ ಮುಂತಾದವರೆಲ್ಲರ ವಿಚಾರಧಾರೆಗಳ ಸಂಗಮ ಎಂಜಿಎಂ ಆಯಿತು.

ಪ್ರೊ| ಕುಶಿಯವರು ಪರಂಪರೆಯ ಆರಾಧ ಕರೂ ಹೌದು. ಅವರು ಕಟ್ಟಿಸಿದ ಸ್ಥಾವರಗಳಿಗೆ ಅವರಿಟ್ಟ ನಲಂದಾ, ತಕ್ಷಶಿಲಾ, ವಿಕ್ರಮಶಿಲಾ, ರವೀಂದ್ರ ಮಂಟಪ, ಮುದ್ದಣ ಮಂಟಪ, ವಾದಿರಾಜ ನಿಲಯ ಇತ್ಯಾದಿಗಳು ಸಾಕ್ಷಿ. ಕವಿ ಮುದ್ದಣ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಅವರ ಮೇಲಿನ ಅಭಿಮಾನಕ್ಕೆ ಕಾಲೇಜಿನ ಹಳೆಯ ಕಟ್ಟಡದ ಮೊಗಸಾಲೆಯಲ್ಲಿ ಸ್ಥಾಪಿಸಿದ ಮುದ್ದಣನ ವಿಗ್ರಹ ಹಾಗೂ ಗೋವಿಂದ ಪೈಯವರ ಸಕಲ ಗ್ರಂಥ ಭಂಡಾರವನ್ನೊಳಗೊಂಡ ಸಂಶೋಧನ ಕೇಂದ್ರ ಸಾಕ್ಷಿ. ಇಲ್ಲಿಂದ ಸಾಕಷ್ಟು ಮಂದಿ ಈ ಭಾಗದ ತರುಣ ಪೀಳಿಗೆಯ ವಿದ್ವಾಂಸರು ಸಾಹಿತ್ಯ, ಭಾಷೆ, ಇತಿಹಾಸ, ತುಳು ಜಾನಪದ ಮುಂತಾದ ಕ್ಷೇತ್ರಗಳಲ್ಲಿ ಡಾಕ್ಟರೆಟ್‌ ಪದವಿ ಗಳಿಸಿದ್ದಾರೆ. ಈ ಕಾರ್ಯ ಇಂದಿಗೂ ಮುಂದುವರಿಯುತ್ತಿದೆ.

Advertisement

ಕುಶಿಯವರು ಉಡುಪಿಯ ಕೃಷ್ಣನ ಹಾಗೆ ಉತ್ಸವ ಪ್ರಿಯರು. ವಾದಿರಾಜ ಕನಕದಾಸ ಸಂಗೀ ತೋತ್ಸವ, ಮುದ್ದಣ ಜಯಂತಿ, ಕಾಲೆವಾಲ, ಬೆಳ್ಳಿ ಹಬ್ಬದ ವಿಜ್ಞಾನ ಪ್ರದರ್ಶನ ಇತ್ಯಾದಿ ಇಂದಿಗೂ ಜನಮನದಲ್ಲಿ ಹಸುರು.
ಭಟ್ಟರು ಸಾಂಪ್ರದಾಯಿಕತೆ, ಆಧುನಿಕತೆ ಮತ್ತು ಪ್ರಜಾತಾಂತ್ರಿಕತೆಯ ತ್ರಿವೇಣಿ ಸಂಗಮ. ಸೇಡಿಯಾಪು, ಬೇಂದ್ರೆಯವರನ್ನು ಆರಾಧಿಸುವ ಹಾಗೆ ಗೋಪಾಲಕೃಷ್ಣ ಅಡಿಗರನ್ನೂ ಮೆಚ್ಚಿಕೊಂಡವರು. ಮಾರ್ಕ್ಸ್ವಾದಿ ನೆಲೆಯ ಇಗ್ನೇಶಿಯಸ್‌ ಸಿಲೋನೆಯ ಕಾದಂಬರಿಯನ್ನು ಅನು ವಾದ ಮಾಡಿದವರು. ಪ್ರಜಾತಾಂತ್ರಿಕ ಶಿಕ್ಷಣತಜ್ಞ ಡಾ| ಅಂಬೇಡ್ಕರ್‌ ಅವರ ಗುರು ಅಮೆರಿಕದ ಜಾನ್‌ ಡ್ನೂಯಿಯವರ ಕೃತಿಯನ್ನು ಕನ್ನಡಕ್ಕೆ ತಂದವರು.
ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್‌ ಈ ನಾಲ್ಕು ಭಾಷಾವಾಹಿನಿಗಳ ಸಂಗಮ ಕುಶಿ. ಕನ್ನಡದಲ್ಲಿ ಎಷ್ಟು ಮೊನಚಾಗಿ, ಅದ್ಭುತವಾಗಿ ಮಾತನಾಡುತ್ತಿದ್ದರೋ ಆಂಗ್ಲಭಾಷೆಯಲ್ಲೂ ಅಷ್ಟೇ ತಲಸ್ಪರ್ಶಿಯಾದ ಪ್ರೌಢವಾದ ವಾಗ್ಮಿತೆ ಇತ್ತು.

ಪ್ರೊ| ಭಟ್ಟರು ಖ್ಯಾತ ಅಂಕಣಕಾರರು. “ಉದಯವಾಣಿ’ಯಲ್ಲಿ ಬರೆದ “ಲೋಕಾಭಿ ರಾಮ’ ಅಂಕಣ 6 ಸಂಪುಟಗಳಲ್ಲಿ ಪ್ರಕಟವಾ ಗಿದ್ದು ವಿಷಯವೈವಿಧ್ಯ, ವಿಷಯದ ಹರಹು, ಆಳ, ಚಿಂತನೆ, ಚಿಕಿತ್ಸಕತೆ, ಟೀಕೆ, ಹರಿತ ವಿಡಂ ಬನೆ, ಭಾಷೆಯ ಗಾರುಡಿಗ ತನ, ಸಮ ಕಾಲೀನ ಪ್ರಸ್ತುತತೆ, ಟೀಕೆಯ ಹೊದಿಕೆಯೊಳಗವಿತ ಆರೋಗ್ಯಕರ ದೃಷ್ಟಿಗೆ ನಿದರ್ಶನ ದಂತಿದೆ. ಜಿಡ್ಡು ಕೃಷ್ಣಮೂರ್ತಿ, ಅಲೆಕ್ಸ್‌ ಕೆರೊಲ…, ಆರ್ಥರ್‌ ಕೆಸ್ಲರ್‌ ಮೊದಲಾದವರ ಕೃತಿಗಳನ್ನು ಕನ್ನಡಕ್ಕೆ ಮೊದಲು ಅನುವಾದಿಸಿದ ಅಗ್ಗಳಿಕೆ ಅವರದ್ದು.

“ಇತಾಲಿಯಾ ನಾ ಕಂಡಂತೆ’, “ಒಮ್ಮೆ ರಶಿಯ, ಇನ್ನೊಮ್ಮೆ ಇತಾಲಿಯ’. “ಜಗದಗಲ’, “ರಂಗಾ ಯನ’ ಅವರ ಸಾಂಸ್ಕೃತಿಕ ಪ್ರವಾಸ ಕಥನಗಳು. ರಾಷ್ಟ್ರಕವಿ ಗೋವಿಂದ ಪೈ, ಡಾ| ಟಿಎಂಎ ಪೈ, ಕಲ್ಲರಳಿ ಹೂವಾಗಿ, ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‌- ಅವರು ರಚಿಸಿದ ಜೀವನಚರಿತ್ರೆಗಳು. ಕೆ.ಕೆ. ಹೆಬ್ಬಾರರ ಬಗೆಗಿನ ಜೀವನ ಚರಿತ್ರೆಯಂತೂ ಕಾಲ, ಕಲೆ ಮತ್ತು ಕಲಾವಿದನ ಚರಿತ್ರೆಯಾಗಿದೆ.

ಕವೀಂದ್ರ ರವೀಂದ್ರರ ಜಯಂತಿಆಚರಿಸಿ, ಟಾಗೋರರ ನಾಟಕ ಆಡಿಸಿ ಅವರ ಸಾಹಿತ್ಯಾಧ್ಯ ಯನಕ್ಕೆ ಪ್ರೇರಣೆ ನೀಡಿದರು. ವರಕವಿ ಬೇಂದ್ರೆಯವರ ವಾಗ್ವಿಲಾಸವನ್ನು ಆಸ್ವಾದಿಸುವ ಅವಕಾಶ ಮಾಡಿಕೊಟ್ಟರು. ಕಾರಂತರ ಹುಟ್ಟುಹಬ್ಬಕ್ಕೆ ಸಾಹಿತ್ಯ ಗೋಷ್ಠಿಗಳನ್ನೇರ್ಪಡಿಸಿ ಸಾಹಿತ್ಯ ದಿಗ್ಗಜ ರನ್ನು ಆಹ್ವಾನಿಸಿದವರು. ಬಂಗಾಲಿ ನಾಟಕಕಾರ ಬಾದಲ್‌ ಸರ್ಕಾರ್‌ ಅವರ ನಾಟಕಗಳ ಪ್ರದರ್ಶನ ಏರ್ಪಡಿಸಿ ಚಿಂತನೆಯ ದಿಕ್ಕುಗಳನ್ನೇ ಬದಲಾಯಿಸಿದರು. ರಂಗ ನಿರ್ದೇಶಕ ಬಿ.ವಿ. ಕಾರಂತರನ್ನು ಮರಳಿ ಮಣ್ಣಿಗೆ ತಂದ ಭಗೀರಥ. ನವ್ಯಕವಿ ಗೋಪಾಲಕೃಷ್ಣ ಅಡಿಗರ ಐವತ್ತನೆ ಹುಟ್ಟುಹಬ್ಬದ ಸಲುವಾಗಿ ಸಾಹಿತ್ಯಗೋಷ್ಠಿಗಳನ್ನು ಏರ್ಪಡಿಸಿ ಲಂಕೇಶ್‌, ಅನಂತಮೂರ್ತಿ, ಕುರ್ತ ಕೋಟಿ ಮತ್ತಿತರರನ್ನು ಪರಿಚಯಿಸಿದವರು. 1960 ದಶಕದಲ್ಲೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿದ ಪ್ರೊ| ಭಟ್ಟರು ಸೇವಾನಿವೃತ್ತಿಯ ಬಳಿಕ ತುಳು ನಿಘಂಟು ಯೋಜನೆ, ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ರಂಗಕಲೆಗಳ ಸಂಪನ್ಮೂಲ ಕೇಂದ್ರ, ಯಕ್ಷಗಾನ ಕೇಂದ್ರ, ದಾಖಲೀಕರಣ, ದೇಶವಿದೇಶ ಸಂಚಾರವೆಂದು ಬಿಡುವಿಲ್ಲದೆ ದುಡಿದು 20-08-2000ರಲ್ಲಿ ದಿವಂಗತರಾದರು.

ಪ್ರೊ| ಭಟ್ಟರು ಆಧುನಿಕ ಕರ್ನಾಟಕದ ಪ್ರಾತಃಸ್ಮರಣೀಯರು. ಕಿರಿಯರಿಗೆ, ಅರ್ಹರಿಗೆ ನಿರಂತರ ಪ್ರೇರಣೆ, ಭಿನ್ನಮತ ಸಹಿಷ್ಣುತೆ, ಟೀಕೆಗಳಿಗೆ ಕುಗ್ಗದ ಚೈತನ್ಯ , ಸಂಪ್ರದಾಯವಾದದ ಒಳಗಣ ವಿಮರ್ಶನ, ಹರಿತಮಾತು, ವಿಡಂಬನೆ, ಸೂತ್ರರೂಪಿ ಸಂದಿಗ್ಧ ಅಭಿವ್ಯಕ್ತಿ, ಹೊರಗೆ ಗಂಭೀರ ಒಳಗೆ ಮಗು ಮನಸ್ಸು- ಇದು ಕು.ಶಿಯವರ ಅನನ್ಯತೆ.

-ಡಾ| ಮಹಾಬಲೇಶ್ವರ ರಾವ್‌,
ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next