Advertisement

ಪ್ರಿಯಾಮಣಿ ಹ್ಯಾಪಿ ಸಿನಿಜರ್ನಿ

06:03 PM Jan 11, 2020 | mahesh |

ಮದುವೆಯ ಬಳಿಕ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಕನ್ನಡ ಮೂಲದ ಬಹುಭಾಷಾ ನಟಿ ಪ್ರಿಯಾಮಣಿ, ವರ್ಷದ ಆರಂಭದಲ್ಲಿಯೇ ಈ ವರ್ಷವನ್ನು ಹೊಸ ಹುರುಪಿನೊಂದಿಗೆ ಆರಂಭಿಸುವ ಸುಳಿವನ್ನು ನೀಡಿದ್ದಾರೆ. ಹೌದು, ವರ್ಷದ ಆರಂಭದಲ್ಲಿಯೇ ಈ ವರ್ಷದ ತಮ್ಮ ಬಣ್ಣದ ಬದುಕಿನ ಪ್ಲಾನಿಂಗ್‌ ಕುರಿತು ಮಾತನಾಡಿರುವ ಪ್ರಿಯಾಮಣಿ, ಕಳೆದ ವರ್ಷಕ್ಕಿಂತ ಈ ವರ್ಷ ಸಿನಿ ದುನಿಯಾದಲ್ಲಿ ಇನ್ನಷ್ಟು ಬ್ಯುಸಿಯಾಗಿರುವ ನಿರ್ಧಾರ ಕೈಗೊಂಡಿದ್ದಾರೆ.

Advertisement

ಕಳೆದ ವರ್ಷ ತಮಿಳಿನಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆಗಿ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಗೆಲುವು ಕಂಡಿದ್ದ ಅಸುರನ್‌ ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. ಧನುಷ್‌ ಮತ್ತು ಮಂಜು ವಾರಿಯರ್‌ ನಟನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಆ ಚಿತ್ರ ವರ್ಷದ ಆರಂಭದಲ್ಲಿಯೇ ತೆಲುಗಿಗೆ ರಿಮೇಕ್‌ ಆಗಿ ಸೆಟ್ಟೇರುತ್ತಿರುವ ಸುದ್ದಿ ಹೊರಬಿದ್ದಿದೆ. ಇನ್ನು ವಿಕ್ಟರಿ ವೆಂಕಟೇಶ್‌ ನಾಯಕನಾಗಿ ಅಭಿನಯಿಸುತ್ತಿರುವ ಅಸುರನ್‌ ತೆಲುಗು ರಿಮೇಕ್‌ನಲ್ಲಿ ವಿಕ್ಟರಿ ವೆಂಕಟೇಶ್‌ಗೆ, ಪ್ರಿಯಾಮಣಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ಶ್ರೇಯಾ ಶರಣ್‌, ಅನುಷ್ಕಾ ಶೆಟ್ಟಿ ಮೊದಲಾದವರು ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದ್ದರೂ, ಅಂತಿಮವಾಗಿ ಪ್ರಿಯಾಮಣಿ ನಾಯಕಿಯ ಪಟ್ಟ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಇದಾದ ಬಳಿಕ ಪ್ರಿಯಾಮಣಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ ತಲೈವಿ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ತಲೈವಿ ಚಿತ್ರದಲ್ಲಿ ಕಂಗನಾ ರಣಾವತ್‌ ಜಯಲಲಿತಾ ಪಾತ್ರ ನಿರ್ವಹಿಸುತ್ತಿದ್ದು, ಪ್ರಿಯಾಮಣಿ ಶಶಿಕಲಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮತ್ತೂಂದೆಡೆ ದಿ ಫ್ಯಾಮಿಲಿ ಮ್ಯಾನ್‌ ಎಂಬ ವೆಬ್‌ ಸೀರಿಸ್‌ನಲ್ಲೂ ಅವರಿದ್ದಾರೆ. ಇನ್ನಷ್ಟು ಪ್ರಾಜೆಕ್ಟ್ ಮಾತುಕತೆಯ ಹಂತದಲ್ಲಿದೆ. ಈ ಬಗ್ಗೆ ಮಾತನಾಡುವ ಪ್ರಿಯಾಮಣಿ, “ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆರಂಭ ಆಶಾದಾಯಕವಾಗಿದೆ. ನಾನೊಬ್ಬಳು ನಟಿಯಾಗಿದ್ದು, ನಟನೆಯಿಂದ ಯಾವತ್ತೂ ನಿವೃತ್ತಿ ತೆಗೆದುಕೊಳ್ಳಲು ಬಯಸಲಾರೆ. ಕೇವಲ ನಾಯಕಿಯಾಗಿದ್ದರೆ ಮಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ಎಂಬ ಭಾವನೆ ತಪ್ಪು. ಇತ್ತೀಚೆಗೆ ನನಗೆ ನಾಯಕಿ ಪಾತ್ರಕ್ಕಿಂತ ಖಳನಾಯಕಿ ಪಾತ್ರಗಳು ಹೆಚ್ಚು ಇಷ್ಟವಾಗುತ್ತಿವೆ’ ಎಂದಿದ್ದಾರೆ. ಹೊಸ ಜೋಶ್‌ನೊಂದಿಗೆ, ಹೊಸವರ್ಷದ ಸಿನಿ ಜರ್ನಿ ಶುರು ಮಾಡಿರುವ ಪ್ರಿಯಾಮಣಿ ಈ ವರ್ಷ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ ಅನ್ನೋದು ಚಿತ್ರಗಳು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next