Advertisement

Renukaswamy Case: ಪವಿತ್ರಾ ಗೌಡ ಫೋನ್‌ನಲ್ಲಿ ಹತ್ಯೆಯ 65 ಫೋಟೋ!

03:49 AM Sep 07, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದರಂತೆ ಸ್ಫೋಟಕ ವಿಷಯಗಳು ಬಹಿರಂಗಗೊಳ್ಳುತ್ತಿವೆ. ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಮೊಬೈಲ್‌ನಲ್ಲಿದ್ದ ಮಾಹಿತಿಗಳನ್ನು ಪೊಲೀಸರು ತೆಗೆಯಿಸಿದ ವೇಳೆ ಕೊಲೆಗೆ ಸಂಬಂಧಿಸಿದ ಸಂಭಾಷಣೆಗಳು, ಫೋಟೊಗಳು, ಸಂದೇಶ ಗಳ ಸಹಿತ ಹಲವು ಸಂಗತಿಗಳು ಪತ್ತೆಯಾಗಿವೆ.

Advertisement

ಕೊಲೆಯಾದ ಬೆನ್ನಲ್ಲೇ ಪವಿತ್ರಾಗೆ ಕರೆ ಮಾಡಿದ್ದ ನಟ ದರ್ಶನ್‌, “ಪೊಲೀಸರು ಬಂದು ಏನಾದರೂ ಕೇಳಿದರೆ ಏನೂ ಗೊತ್ತಿಲ್ಲ ಎಂದು ಹೇಳು, ಅದನ್ನು ಬಿಟ್ಟು ಬೇರೆ ಏನನ್ನೂ ಬಾಯಿಬಿಡಬೇಡ’ ಎಂದು ಕರೆ ಕಡಿತಗೊಳಿಸಿರುವ ವಿಚಾರವೂ ಬೆಳಕಿಗೆ ಬಂದಿದೆ. ಕೊಲೆಯ ಅನಂತರ ಇತರ ಆರೋಪಿಗಳೊಂದಿಗೆ ಮಾತುಕತೆ ನಡೆಸಿ ಪ್ರಕರಣದಲ್ಲಿ ತನ್ನ ಹಾಗೂ ಪವಿತ್ರಾ ಹೆಸರು ತಳುಕು ಹಾಕಿಕೊಳ್ಳದಂತೆ ದರ್ಶನ್‌ ನಡೆಸಿದ್ದ ತಂತ್ರವನ್ನು ಪೊಲೀಸ್‌ ತಂಡ ಪತ್ತೆಹಚ್ಚಿದೆ.

ಪವಿತ್ರಾ ಮೊಬೈಲ್‌ನಲ್ಲಿ ಕೊಲೆ ಪ್ರಕರಣ ಸಂಬಂಧ 65 ಫೋಟೋಗಳು, ಜತೆಗೆ 17 ಸ್ಕ್ರೀನ್‌ ಶಾಟ್‌, ರೇಣುಕಾಸ್ವಾಮಿ ಕಳುಹಿಸಿದ್ದ 20 ಅಶ್ಲೀಲ ಸಂದೇಶಗಳು ಪತ್ತೆಯಾಗಿವೆ. ಪವಿತ್ರಾ ಜತೆ ದರ್ಶನ್‌ ನಡೆಸಿದ್ದ ವಾಟ್ಸ್‌ಆ್ಯಪ್‌ ಚಾಟ್‌ ಕೂಡ ಪೊಲೀಸರ ಕೈ ಸೇರಿದೆ. ಪವಿತ್ರಾ ಬಳಸುತ್ತಿದ್ದ 3 ಮೊಬೈಲ್‌ಗ‌ಳ ಪೈಕಿ ಒಂದನ್ನು ರಿಟ್ರೀವ್‌ ಮಾಡಲಾಗಿದೆ. ಇನ್ನೊಂದು ಮೊಬೈಲನ್ನು ಆಕೆ ಫ್ಲ್ಯಾಶ್‌ ಮಾಡಿಸಿ ಅದರಲ್ಲಿದ್ದ ಕೆಲವು ಅಂಶಗಳನ್ನು ಅಳಿಸಿರುವುದು ಗೊತ್ತಾಗಿದೆ. ಹೀಗಾಗಿ ಇನ್ನೆರಡು ಮೊಬೈಲ್‌ಗ‌ಳನ್ನು ಹೊರ ರಾಜ್ಯದ ಎಫ್ಎಸ್‌ಎಲ್‌ಗೆ ಕಳುಹಿಸಿ ರಿಟ್ರೀವ್‌ ಮಾಡಿಸಲಾಗುತ್ತಿದೆ.

ಇನ್ನೂ ಹಲವು ದಾಖಲೆ: ಆರೋಪಿ ವಿನಯ್‌ ಮೊಬೈಲ್‌ನಲ್ಲಿ ಕೊಲೆಗೆ ಸಂಬಂಧಿಸಿದ 10 ಫೋಟೋಗಳು ಪತ್ತೆಯಾಗಿವೆ. ದೀಪಕ್‌ ಮೊಬೈಲ್‌ನಲ್ಲಿ ಕೊಲೆ ಕುರಿತು ನಡೆಸಿರುವ 30 ಆಡಿಯೋ ಸಂಭಾಷಣೆ ಲಭಿಸಿವೆ. ವಿನಯ್‌, ನಾಗರಾಜ್‌ ಜತೆ ದರ್ಶನ್‌ ನಡೆಸಿದ್ದ ವಾಟ್ಸ್‌ಆ್ಯಪ್‌ ಕರೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ದರ್ಶನ್‌ ಜೂ. 8ರಿಂದ 11ರ ವರೆಗೆ ಇವರ ಜತೆಗೆ 32 ಬಾರಿ ವಾಟ್ಸ್‌ಆ್ಯಪ್‌ ಕರೆ ಮಾಡಿ ಮಾತನಾಡಿದ್ದ. ಪ್ರದೋಷ್‌ಗೆ 10 ಬಾರಿ ವಾಟ್ಸ್‌ಆ್ಯಪ್‌ ಕರೆ ಮಾಡಿದ್ದಾನೆ.

Advertisement

ಅನುಕುಮಾರ್‌ ಮೊಬೈಲ್‌ನಲ್ಲಿ 2 ವೀಡಿಯೋ, ಪ್ರದೋಷ್‌ ಜತೆ ನಡೆಸಿರುವ ಚಾಟಿಂಗ್‌, ವಿನಯ್‌, ಪ್ರದೋಷ್‌, ಪವನ್‌ ಜತೆ 42 ವಾಟ್ಸ್‌ಆ್ಯಪ್‌ ಕರೆ ಸಂಭಾಷಣೆಯ ಇಂಚಿಂಚು ಮಾಹಿತಿ ಪೊಲೀಸರಿಗೆ ಸಿಕ್ಕಿದೆ.ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಹಿಂಬಾಲಿಸಿ ತೆಗೆದ ಫೋಟೋ, ಪಟ್ಟಣಗೆರೆ ಶೆಡ್‌ಗೆ ಆತನನ್ನು ಕರೆತಂದಿದ್ದ ವೇಳೆ ತೆಗೆದ ಫೋಟೋ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವ ಫೋಟೋ, ಶವವನ್ನು ಸುಮನಳ್ಳಿ ರಾಜಕಾಲುವೆ ಬಳಿ ಎಸೆದಿರುವ ಫೋಟೋಗಳು ಕೂಡ ಲಭಿಸಿವೆ.

“ನನಗೇನೂ ಗೊತ್ತಿಲ್ಲ’ ಎನ್ನುವಂತೆ ಪವಿತ್ರಾಗೆ ತಿಳಿಸಿದ್ದ ದರ್ಶನ್‌
ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಬಳಿಕ ಪವಿತ್ರಾಳನ್ನು ಆರೋಪಿ ವಿನಯ್‌ ಮನೆಗೆ ಬಿಟ್ಟುಬಂದಿದ್ದ. ಸ್ವಲ್ಪ ಹೊತ್ತಿನ ಅನಂತರ ಪವಿತ್ರಾಗೆ ಕರೆ ಮಾಡಿದ್ದ ದರ್ಶನ್‌, “ಪೊಲೀಸರು ಬಂದು ಏನಾದರೂ ಕೇಳಿದರೆ, ನಿನ ಗೆ ಏ ನೂ ಗೊತ್ತಿಲ್ಲ ಎಂದು ಹೇಳು, ಅದನ್ನು ಬಿಟ್ಟು ಬೇರೆ ಏನೂ ಹೇಳಬೇಡ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದ ಎಂದು ತಿಳಿದು ಬಂದಿದೆ.

ಆಗ ಪವಿತ್ರಾಗೆ ಅನುಮಾನ ಮೂಡಿ ಈ ಬಗ್ಗೆ ಪವನ್‌ ಬಳಿ ವಿಚಾರಿಸಿದ್ದಳು. ಆಗ ಪವನ್‌ ಏನಿಲ್ಲ, ನೀವು ಸುಮ್ಮನೆ ಇರಿ ಎಂದು ಹೇಳಿದ್ದ. ಇಷ್ಟಕ್ಕೆ ಸುಮ್ಮನಾಗದ ಪವಿತ್ರಾ ಆತನ ಮೇಲೆ ರೇಗಾಡಿ ಪ್ರಶ್ನಿಸಿದಾಗ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಶವ ಎಸೆದು ಬಂದಿರುವ ಸಂಗತಿಯನ್ನು ಆಕೆಗೆ ಹೇಳಿದ್ದ ಎಂದು ಗೊತ್ತಾಗಿದೆ.

ಶರಣಾಗಲು ರಾಘವೇಂದ್ರ ನಿರಾಕರಣೆ
ರೇಣುಕಾಸ್ವಾಮಿ ಹತ್ಯೆ ಬಳಿಕ ಶರಣಾಗಲು ದರ್ಶನ್‌ ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಒಪ್ಪದೇ ನೇರವಾಗಿ ಚಿತ್ರದುರ್ಗಕ್ಕೆ ಮರಳಿದ್ದ. ಆದರೆ ಆರೋಪಿಗಳಾದ ವಿನಯ್‌, ಪ್ರದೋಶ್‌ ಸೇರಿ ರಾಘವೇಂದ್ರನ ಮನವೊಲಿಸಿದ್ದರು.
ಪವಿ ಎಂದು ನಂಬರ್‌ ಸೇವ್‌ ಮಾಡಿದ್ದ ದರ್ಶನ್‌

ದರ್ಶನ್‌ ಐಫೋನ್‌ 15 ಪ್ರೋ ಮೊಬೈಲ್‌ ಬಳಸುತ್ತಿದ್ದ. ಅದರಲ್ಲಿ ಪವಿತ್ರಾಳ ಮೊದಲನೇ ನಂಬರನ್ನು ಪವಿ, ಇನ್ನೊಂದು ನಂಬರ್‌ ಪವೀ ಹಾಗೂ ಮೂರನೇ ನಂಬರ್‌ ಅನ್ನು ಪವಿತ್ರಾ ಗೌಡ ಎಂದು ಸೇವ್‌ ಮಾಡಿಕೊಂಡಿದ್ದ. ಐಫೋನ್‌ 15 ಪ್ರೋ ಮೊಬೈಲ್‌ ಬಳಸುತ್ತಿದ್ದ ಪವಿತ್ರಾ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ದರ್ಶನ್‌ ನಂಬರ್‌ ಅನ್ನು “ಡಿ’ ಎಂದು ಸೇವ್‌ ಮಾಡಿಕೊಂಡಿರುವುದು ಗೊತ್ತಾಗಿದೆ.

ರೇಣುಕಾಸ್ವಾಮಿ ಫೋಟೋ ಸೆರೆಹಿಡಿದಿದ್ದ ಹಂತಕರು:
ರೇಣುಕಾಸ್ವಾಮಿ ಅಪಹರಣಕ್ಕೂ ಮುನ್ನ ಆರೋಪಿಗಳು ಆಟೋವೊಂದರಲ್ಲಿ ಕುಳಿತುಕೊಂಡು ಆತನನ್ನು ಹಿಂಬಾಲಿಸಿಕೊಂಡು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಫೋಟೋವೊಂದು ರಿಟ್ರೈವ್‌ ವೇಳೆ ಸಿಕ್ಕಿದೆ. ರೇಣುಕಾಸ್ವಾಮಿ ಅಪಹರಣ ಆಗುವ ದಿನ ಚಿತ್ರದುರ್ಗದ ಪಂಕ್ಷರ್‌ ಶಾಪ್‌ನಲ್ಲಿ ತನ್ನ ಸ್ಕೂಟರ್‌ ಟೈಯರ್‌ಗೆ ಗಾಳಿ ತುಂಬಿಸಿದ್ದ. ಗಾಳಿ ಹಿಡಿಸಿದ್ದನ್ನು ಅಪಹರಣಕಾರರು ಆಟೋದಲ್ಲಿ ಕುಳಿತು ಫೋಟೋ ತೆಗೆದಿದ್ದರು. ಈ ವೇಳೆ ರೇಣುಕಾಸ್ವಾಮಿ ಆಟೋದಲ್ಲಿರುವವರನ್ನು ನೋಡಿದ್ದ. ಇದೀಗ ಆ ಫೋಟೋ ವೈರಲ್‌ ಆಗಿದೆ.

ಹಲವು ಸಿಸಿ ಕೆಮರಾ ದೃಶ್ಯ ಉಲ್ಲೇಖ: 

ಆರೋಪಿಗಳು ಟ್ರೆಂಡ್ಸ್‌ನಲ್ಲಿ ಬಟ್ಟೆ ಖರೀದಿಸಿದ ಸಿಸಿ ಕ್ಯಾಮರಾ ಫ‌ೂಟೇಜ್‌, ಮಾರಮ್ಮ ದೇವಸ್ಥಾನಕ್ಕೆ ಕೈ ಮುಗಿದಿರುವುದು ಸಿಸಿ ಕ್ಯಾಮರಾ ದೃಶ್ಯ, ಶವ ಎಸೆದ ಸ್ಥಳದಲ್ಲಿ ಸತ್ವ ಅಪಾರ್ಟ್‌ಮೆಂಟ್‌ ಸಿಸಿಟಿವಿ ಫ‌ೂಟೇಜ್‌, ತುಮಕೂರಿನ ದುರ್ಗಾ ಬಾರ್‌ನಲ್ಲಿ ಮದ್ಯ ಖರೀದಿಸಿರುವುದು, ಚಿತ್ರದುರ್ಗ ಟು ಬೆಂಗಳೂರು ಟೋಲ್‌ಗ‌ಳ ಸಿಸಿಟಿವಿ ಫ‌ೂಟೇಜ್‌, ಮೈಸೂರಿನ ರ್ಯಾಡಿಸನ್‌ ಬ್ಲೂ ಹೋಟೆಲ್‌ನ ಸಿಸಿಟಿವಿ, ಆರೋಪಿಗಳು ಶರಣಾಗತಿಗೆ ಬಂದ ವೇಳೆ ಸಿಸಿಟಿವಿ, ರೇಣುಕಾಸ್ವಾಮಿ ಫೋಟೋ ಇರುವ ಪೆನ್‌ ಡ್ರೈವ್‌, ಪವಿತ್ರಾ ಗೌಡ ದರ್ಶನ್‌ಗೆ ಸಂಬಂಧಿಸಿದ ಫೋಟೋಗಳು, ಇತರೆ 15 ಜನ ಆರೋಪಿಗಳಿಗೆ ಸಂಬಂಧಿಸಿದ ಫೋಟೋಗಳು, ದರ್ಶನ್‌ ಮನೆಯ ಸಿಸಿಟಿವಿ ಡಿವಿಆರ್‌, ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌, ಪಟ್ಟಣಗೆರೆ ಶೆಡ್‌ ಸಿಸಿಟಿವಿ, ಪವಿತ್ರಾ ಗೌಡ ಮನೆಯ ಸಿಸಿಟಿವಿ ಫ‌ೂಟೇಜ್‌  ವಿಡಿಯೋಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಪಡೆದು ಚಾರ್ಜ್‌ಶೀಟ್‌ನಲ್ಲಿ ಉಲೇಖೀಸಲಾಗಿದೆ.

ಪವಿತ್ರಾಗೌಡ ಕಣ್ಣೀರು ಹಾಕಿದ ಫೋಟೊ ವೈರಲ್‌:
ಬಂಧನಕ್ಕೊಳಗಾದ ವೇಳೆ ಎಪಿ ನಗರ ಠಾಣೆಯಲ್ಲಿ ಪವಿತ್ರಾ ಗೌಡ ಕಣ್ಣೀರು ಹಾಕ್ತಿರುವ ಫೋಟೊವೊಂದು ಹರಿದಾಡುತ್ತಿದೆ. ಅದರಲ್ಲಿ ವಿಚಾರಣೆ ವೇಳೆ ಪೊಲೀಸರ ಮುಂದೆ ಪವಿತ್ರಾ ಗೌಡ ಕಣ್ಣೀರು ಹಾಕಿ ಹೇಳಿಕೆ ನೀಡಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next