ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನಮ್ಮೊಂದಿಗೆ ಟಿಎಂಸಿಯ 40 ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳುವ ಮೂಲಕ ಕೀಳುಮಟ್ಟದ ರಾಜಕಾರಣಕ್ಕಿಳಿದಿದ್ದಾರೆ. ಆಪರೇಷನ್ ಕಮಲಕ್ಕೆ ಅವರೇ ಸಹಾಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಗಂಭೀರ ಆರೋಪ ಮಾಡಿದರು.
ಕುಂದಗೋಳ ಉಪ ಚುನಾವಣೆ ತಯಾರಿಗೆ ಯಾರು ಯಾವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಚರ್ಚಿಸುತ್ತಿದ್ದೇವೆ. ಕುಂದಗೋಳದಲ್ಲಿ ಬಂಡಾಯವೆಂದಿದ್ದ ಶಿವಾನಂದ ಬೆಂತೂರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸತ್ಯಾಂಶ ಯಾವುದು, ಸುಳ್ಳು ಯಾವುದೆಂಬುದು ನನಗೆ ಗೊತ್ತಿದೆ. ಬೆಂತೂರ ಬಗ್ಗೆ ಈಗ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ಈ ನಡುವೆ ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆ ನಂತರ ಮಾತನಾಡಿದ ಅವರು, ಪಕ್ಷದ ಶಾಸಕರು, ಸಚಿವರು, ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡುವ ಬಗ್ಗೆ ಸಭೆ ಮಾಡಿದ್ದೇವೆ. ಉಪ ಮುಖ್ಯಮಂತ್ರಿ ಡಾ|ಜಿ. ಪರಮೇಶ್ವರ ಅವರು ಕೆಲವು ಸಲಹೆ ನೀಡಿದ್ದಾರೆ. ಕುಂದಗೋಳದಲ್ಲಿ ಗೆಲ್ಲೋದ್ರಲ್ಲಿ ನಮಗೆ ಅನುಮಾನವೇ ಇಲ್ಲ. ಚಿಂಚೋಳಿ ಕೂಡಾ ಗೆಲ್ಲುತ್ತೇವೆ ಎಂದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಲೋಕಸಭೆ ಹಾಗೂ ಚಿಂಚೋಳಿ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿಗೆ ಅಭ್ಯರ್ಥಿಗಳೇ ಸಿಗಲಿಲ್ಲ. ಹೀಗಾಗಿ ಅವರಿಗೆ ಅಪ್ಪ-ಮಕ್ಕಳೇ ಬೇಕಾಯಿತೆಂದು ಗೇಲಿ ಮಾಡಿದರು.
ನೀತಿ ಸಂಹಿತೆ ಕಾರಣ ಸರ್ಕಾರಿ ಯಂತ್ರ ಸ್ಥಗಿತ
ಹುಬ್ಬಳ್ಳಿ: ನೀತಿ ಸಂಹಿತೆ ಕಾರಣದಿಂದ ಸರಕಾರ ಯಾವುದೇ ಕೆಲಸ ಮಾಡಲಾಗದ ಸ್ಥಿತಿಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಾ| ಪರಮೇಶ್ವರ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಕಾರ ಎರಡು ತಿಂಗಳು ಕೈಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಚುನಾವಣಾ ಆಯೋಗ ಈ ಹಿಂದೆ ಈ ರೀತಿ ನಡೆದುಕೊಂಡಿರಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಉಂಟಾದ ಬರಗಾಲ ಕಾಮಗಾರಿ ನಿರ್ವಹಣೆ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದ್ದು, ಆದರೆ ಯಾವುದೇ ಸಭೆಗಳನ್ನು ಮಾಡಬಾರದೆಂದು ಸರಕಾರಕ್ಕೆ ಆಯೋಗ ಪತ್ರ ಬರೆದಿದೆ. ಬರ ಕಾಮಗಾರಿ ಕೈಗೊಳ್ಳಲು ಹಾಗೂ ಅಧಿಕಾರಿಗಳ ಜತೆ ಸಭೆ ಮಾಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.