Advertisement

ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವಿರಲಿ

09:28 PM Dec 23, 2019 | Lakshmi GovindaRaj |

ಮೈಸೂರು: ಮಾತೃ ಭಾಷೆಯಲ್ಲಿಯೇ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ದೊರಕುವಂತಾಗಬೇಕು ಎಂದು ಹಾಮಾನಾ ಪ್ರತಿಷ್ಠಾನದ ಅಧ್ಯಕ್ಷ, ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಹೇಳಿದರು. ಹಾಮಾನಾ ಪ್ರತಿಷ್ಠಾನದ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಸೋಮವಾರ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಹಾಮಾನಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಕೇಂದ್ರ ಸರ್ಕಾರ 1965ರಲ್ಲಿ 14 ಭಾಷೆಗಳಲ್ಲಿ ಮಾತೃ ಭಾಷೆಗಳಲ್ಲೆ ಶಿಕ್ಷಣ ನೀಡುವಂತೆ ಕಾಯಿದೆಯಾಯಿತು. ಈಗ ಅಧಿಕೃತವಾಗಿ 22 ಭಾಷೆಗಳು ಸ್ಥಾನ ಪಡೆದಿವೆ. ಶಿಕ್ಷಣ ಅಲ್ಲಿನ ರಾಜ್ಯಭಾಷೆಗಳಲ್ಲೇ ದೊರಕಬೇಕು. 5ನೇ ತರಗತಿಯಿಂದ ಮಕ್ಕಳಿಗೆ ಕಡ್ಡಾಯವಾಗಿ ಇಂಗ್ಲಿಷ್‌ ಭಾಷೆಯನ್ನು ಕಲಿಸುವಂತಾಗಬೇಕು. 8ನೇ ತರಗತಿಯಿಂದ ಮಕ್ಕಳಿಗೆ ನೀಡುವ ಉತ್ತರ ಪತ್ರಿಕೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉತ್ತರ ಬರೆಯಲು ಒಂದೇ ಹಾಳೆಯಲ್ಲಿ ಅವಕಾಶ ನೀಡಿದಾಗ ಶೇ.80ರಷ್ಟು ಮಕ್ಕಳು ಕನ್ನಡ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ರಾಜಕಾರಣಿಗಳ ಮನಪರಿವರ್ತಿಸಿ ಕನ್ನಡ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಪ್ರೇರೇಪಿಸಬೇಕು. ಹಿಂದಿನ ಸರ್ಕಾರ 1 ಸಾವಿರ ಇಂಗ್ಲಿಷ್‌ ಶಾಲೆಗಳನ್ನು ತೆರೆದಿತ್ತು. ಪಾಠ ಮಾಡುವವರೂ ಕೂಡ ಎರಡು ಭಾಷೆಗಳಲ್ಲಿ ಪಾಠ ಮಾಡಿದರೆ ಮಕ್ಕಳಿಗೆ ಅರ್ಥವಾಗಿ ಅವರು ಉನ್ನತ ಶಿಕ್ಷಣಕ್ಕೆ ಹೋದಾಗ ತುಂಬಾ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಂಬೈನ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ಆರೋಗ್ಯಮತ್ತು ಸುರಕ್ಷತಾ ವಿಭಾಗದ ವಿಶ್ರಾಂತ ನಿರ್ದೇಶಕ ಡಾ.ಡಿ.ವಿ. ಗೋಪಿನಾಥ್‌ ಅವರು “ಜಾಗತಿಕ ಸಮಾಜಕ್ಕೆ ವಿಕಿರಣಗಳ ಕೊಡುಗೆ’ ಕುರಿತು ಉಪನ್ಯಾಸ ನೀಡಿ, ವಿಕಿರಣ ಆವಿಷ್ಕಾರವು 120 ವರ್ಷಗಳಷ್ಟು ಇತಿಹಾಸ ಹೊಂದಿದ್ದು, ಕ್ಯೂರಿ ಕುಟುಂಬದವರು ಹೆಚ್ಚು ಕ್ರಿಯಾಶೀಲರಾಗಿ ಸಂಶೋಧನೆ ನಡೆಸಿ ಕೊಡುಗೆ ನೀಡಿದ್ದಾರೆ.

ವಿಕಿರಣದಿಂದ ಈಗ ವೈದ್ಯಕೀಯ ಕ್ಷೇತ್ರ, ಆಹಾರ ಸಂರಕ್ಷಣೆ ಕ್ಷೇತ್ರ, ಕೃಷಿ ಕ್ಷೇತ್ರ, ಪ್ರಾಕ್ತನ ಶಾಸ್ತ್ರ ಕ್ಷೇತ್ರದಲ್ಲೂ ಬಳಕೆ ಹೆಚ್ಚಾಗಿದೆ. ನೆಲೆದೊಳಗೆ ಬೆಳೆಯುವ ಧಾನ್ಯಗಳ ಬೀಜ ರೂಪಾಂತರದಲ್ಲೂ ಬಳಸಲಾಗುತ್ತಿದೆ. ವಿಕಿರಣ ವಸ್ತುವಿನೊಳಗೆ ಪ್ರವೇಶಿಸಿ ವಿಕಿರಣ ರಾಸಾಯನಿಕ ಕ್ರಿಯೆ ನಡೆಸಿ ಹೊರಬರುತ್ತದೆ. ಆ ರಾಸಾಯನಿಕದಿಂದ ಅಲ್ಲಿಯೇ ಉಳಿದು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದೆ ಎಂಬುದರ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ.

Advertisement

ಡಿಎನ್‌ಎ ಅಣುವಿನ ರಚನಾ ವಿನ್ಯಾಸದಲ್ಲೂ ವಿಕರಣ ಕೊಡುಗೆ ಬಹಳಷ್ಟಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಹಾಮಾನಾ ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ಪಿ. ವೆಂಕಟರಾಮಯ್ಯ, ಖಜಾಂಚಿ ಡಾ.ಕೆ. ಮಹದೇವ್‌, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ಎನ್‌. ತಳವಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next