Advertisement

ಅಪೌಷ್ಟಿಕ ಮಕ್ಕಳ ಹೆತ್ತವರ ಅಲೆದಾಟಕ್ಕೆ ತಡೆ

10:43 PM Jan 22, 2021 | Team Udayavani |

ಕುಂದಾಪುರ:  ತೀವ್ರತೆರನಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಇನ್ನು ಮುಂದೆ ತಾಲೂಕು ಸರಕಾರಿ ಆಸ್ಪತ್ರೆ ಪುನರ್ವಸತಿ ಕೇಂದ್ರಕ್ಕೆ ಕರೆತರಬೇಕಿಲ್ಲ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಅವರ ಅಪೌಷ್ಟಿಕತೆಗೆ ನೀಡುವ ಆರೈಕೆ ಚಿಕಿತ್ಸೆ ಲಭ್ಯವಾಗಲಿದೆ.

Advertisement

ಈ ಪ್ರಯೋಗ ರಾಜ್ಯದಲ್ಲೇ ಮೊದಲ ಬಾರಿಗೆ ಕುಂದಾಪುರದಲ್ಲಿ ಮಾಡಲಾಗಿದ್ದು ಇಲಾಖೆಯ ಗಮನ ಸೆಳೆದಿದೆ. ಇತರೆಡೆಯೂ ವಿಸ್ತರಣೆಯಾಗುವ ಸಾಧ್ಯತೆಯಿದೆ.

ದಾಖಲು  :

ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಪೋಷಣೆಗೆ ಜಾರಿಯಾದ ಪ್ರಧಾನಮಂತ್ರಿಗಳ ಯೋಜನೆ ಪೋಷಣ್‌ ಅಭಿಯಾನ್‌ ಯೋಜನೆ ಜಾರಿಯಲ್ಲಿದೆ. ಅದಕ್ಕೂ ಮೊದಲೂ  ಅಪೌಷ್ಟಿಕತೆಯ ಮಕ್ಕಳನ್ನು ಸರಕಾರಿ ಆಸ್ಪತ್ರೆಯ ಎನ್‌ಆರ್‌ಸಿ ವಿಭಾಗದಲ್ಲಿ ದಾಖಲು ಮಾಡಿ 14 ದಿನಗಳ ಕಾಲ ಆರೈಕೆ ಮಾಡಿ ಪೌಷ್ಟಿಕವಾಗಿ ಇರುವಂತೆ ಮಾಡಲಾಗುತ್ತಿತ್ತು.

ಇದಕ್ಕೆ ಪ್ರತ್ಯೇಕ ಅನುದಾನವೂ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಗುರುತಿಸಲ್ಪಟ್ಟ ಮಕ್ಕಳನ್ನು ಇಲ್ಲಿ ಆರೈಕೆಗೆ ಕರೆತರಲಾಗುತ್ತಿತ್ತು.

Advertisement

ಸ್ಥಳೀಯವಾಗಿ ದಾಖಲು :

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕುಂದಾಪುರ ತಾಲೂಕು ವಿಭಾಗದವರು ತಾಲೂಕು ಆರೋಗ್ಯಾಧಿಕಾರಿಯವರ ಜತೆ ಸಮಾಲೋಚಿಸಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಈ ಚಿಕಿತ್ಸೆ ದೊರಕಿಸಿಕೊಡುವಂತೆ ಕೇಳಿದರು.

ಅದರಂತೆ ಅತಿಹೆಚ್ಚು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿರುವ ವ್ಯಾಪ್ತಿಯ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ದು ಅಲ್ಲಿ 3 ದಿನಗಳ ಕಾಲ ಪ್ರಾಯೋಗಿಕವಾಗಿ ಆರೈಕೆ ಮಾಡಲಾಯಿತು. ಉಳಿಕೆ 11 ದಿನ ಅಂಗನವಾಡಿ ಕಾರ್ಯಕರ್ತರು ಪ್ರತಿದಿನ ಮಕ್ಕಳ ಮನೆಗೆ ಹೋಗಿ ಪೌಷ್ಟಿಕ ಆಹಾರ ನೀಡುತ್ತಿರುವ ಕುರಿತು ಪರಾಮರ್ಶೆ ನಡೆಸಿದರು. ಇದು ಯಶಸ್ವಿಯಾಗಿದ್ದು 3 ದಿನಗಳಲ್ಲಿ ಮಕ್ಕಳು ತಲಾ 500 ಗ್ರಾಂ ತೂಕ ಹೆಚ್ಚಿಸಿಕೊಂಡಿದ್ದಾರೆ. 2ನೆಯ ಹಂತದಲ್ಲಿ ಇನ್ನೂ 5 ಪಿಎಚ್‌ಸಿಗಳಲ್ಲಿ ಶಿಶು ಆರೈಕೆ ನಡೆಯಲಿದೆ. ಕುಂದಾಪುರ, ಬೈಂದೂರು ತಾಲೂಕಿನಲ್ಲಿ 19 ತೀವ್ರತೆರನಾದ ಅಪೌಷ್ಟಿಕತೆಯ ಮಕ್ಕಳಿದ್ದು 270 ಸಾಧಾರಣ ಅಪೌಷ್ಟಿಕತೆಯ ಮಕ್ಕಳಿದ್ದಾರೆ. ಪ್ರಯೋಗಾತ್ಮಕವಾಗಿ ಪಿಎಚ್‌ಸಿಗಳಲ್ಲಿ ಆರೈಕೆ ಮಾಡಲಾಗಿದ್ದು ಯಶಸ್ವಿಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸಾಧ್ಯ ವಾಗದ ಪ್ರಕರಣಗಳಿದ್ದರೆ ತಾಲೂಕು ಸರಕಾರಿ ಆಸ್ಪತ್ರೆಯ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

ಭೇಟಿ :

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಮಕ್ಕಳ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿ ಧೈರ್ಯ ತುಂಬಿದ್ದರು.

ಸದಾ ಹೊಸತನದ ಆವಿಷ್ಕಾರಗಳು, ಜನರ ಬಳಿಗೇ ಆರೋಗ್ಯ ಎನ್ನುವ ಕಲ್ಪನೆಯನ್ನು ಸಾಕಾರ ಗೊಳಿಸುತ್ತಿರುವ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಅವರು ಪೂರಕವಾಗಿ ಸ್ಪಂದಿಸಿ ವ್ಯವಸ್ಥೆಗೊಳಿಸಿದರು.

ತರಕಾರಿ ತೋಟ :

ಪೋಷಣ್‌ ಅಭಿಯಾನದಲ್ಲಿ ತಾಲೂಕಿನ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ, ಹಣ್ಣು ಹಂಪಲು, ಸೊಪ್ಪು ಹಾಗೂ ತರಕಾರಿ ತೋಟಗಳನ್ನು ರಚಿಸಲಾಗುತ್ತಿದೆ. 412 ಅಂಗನವಾಡಿಗಳಲ್ಲಿ ಆಗಬೇಕಿದ್ದರೂ ಆವರಣ ಇಲ್ಲದ, ಭದ್ರತೆ ಇಲ್ಲದ, ಸರಿಯಾದ ಸ್ಥಳಾವಕಾಶ ಇಲ್ಲದೆಡೆ ತೋಟ ರಚನೆ ಕಷ್ಟ. ಈಗಾಗಲೇ 46 ಕಡೆ ರಚಿಸಲಾಗಿದೆ.

ಸೀಮಂತ, ಅನ್ನಪ್ರಾಶನ :

ಪೋಷಣ್‌ ಅಭಿಯಾನದ ಪ್ರಕಾರ ಮೊದಲ 1 ಸಾವಿರ ದಿನಗಳವರೆಗೆ ಗರ್ಭಿಣಿ, ಮಗು, ಬಾಣಂತಿಯ ಆರೋಗ್ಯದ ಮೇಲ್ವಿಚಾರಣೆಯನ್ನು  ನಡೆಸಲಾಗುತ್ತದೆ. ಆರೋಗ್ಯ ಮಾಹಿತಿ, ಪೌಷ್ಟಿಕ ಆಹಾರಗಳಲ್ಲದೇ ಸೀಮಂತ, ಅನ್ನಪ್ರಾಶನದಂತಹ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತಿದೆ. ಕಳೆದ ವರ್ಷ ಫೆಬ್ರವರಿ ಅನಂತರ ಸ್ಥಗಿತಗೊಂಡಿದ್ದ ಈ ಕಾರ್ಯಕ್ರಮಗಳು ಈಗ ಪುನಾರಂಭಗೊಂಡಿದೆ. ಪೋಷಣ್‌ ಅಭಿಯಾನ ಒಟ್ಟು 21 ಹಂತಗಳಲ್ಲಿದ್ದು  ಈವರೆಗೆ 8 ಹಂತದವರೆಗಿನ ತರಬೇತಿಯನ್ನು ನೀಡಲಾಗಿದೆ.

ಕುಂದಾಪುರ, ಬೈಂದೂರು ತಾಲೂಕು :

ತೀವ್ರ ಅಪೌಷ್ಟಿಕ ಮಕ್ಕಳು : 19

ಸಾಧಾರಣ ಅಪೌಷ್ಟಿಕ ಮಕ್ಕಳು : 279

ಅಂಗನವಾಡಿ  ಕೇಂದ್ರಗಳು : 412

ಆರೋಗ್ಯ ಇಲಾಖೆ ಸಹಕಾರದಲ್ಲಿ ಪಿಎಚ್‌ಸಿಗಳಲ್ಲಿ ಅಪೌಷ್ಟಿಕ ಮಕ್ಕಳ ಆರೈಕೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇತರ ಪಿಎಚ್‌ಸಿಗಳಲ್ಲೂ ಮಾಡಲಾಗುವುದು. ಪೋಷಣ್‌ ಅಭಿಯಾನ ಅನ್ವಯ ಸೀಮಂತ, ಅನ್ನಪ್ರಾಶನ, ಅಂಗನವಾಡಿಗಳಲ್ಲಿ ತರಕಾರಿ ತೋಟ ರಚನೆ, ಆರೋಗ್ಯ ಮಾಹಿತಿ ನಡೆಸಲಾಗುತ್ತಿದೆ. ಈ ಯೋಜನೆ ಅಂಗನವಾಡಿಯ ಕೆಲಸ ಚಟುವಟಿಕೆಗಳನ್ನು ಒಂದೇ ಚೌಕಟ್ಟಿಗೆ ತರುತ್ತದೆ.ಶ್ವೇತಾ, ಸಿಡಿಪಿಒ, ಕುಂದಾಪುರ

 

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next