Advertisement

ಕೋವಿಡ್ ವೀರರಿಗೆ ಋಣಿ; ಸ್ವಾತಂತ್ರ್ಯೋತ್ಸವ ಮುನ್ನಾದಿನ ರಾಷ್ಟ್ರಪತಿ ಭಾಷಣ

12:05 AM Aug 15, 2020 | mahesh |

ಹೊಸದಿಲ್ಲಿ: ಕೋವಿಡ್ ಬಿಕ್ಕಟ್ಟಿನ ನಿವಾರಣೆಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಕೋವಿಡ್ ವೀರರಿಗೆ ದೇಶ ಋಣಿಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಶುಕ್ರವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶ-ವಿದೇಶಗಳಲ್ಲಿರುವ ಎಲ್ಲ ಭಾರತೀಯರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದು, ಸೋಂಕಿನ ಹೆಚ್ಚಳದಿಂದಾಗಿ ಪ್ರಸಕ್ತ ಸಾಲಿನ ಸ್ವಾತಂತ್ರ್ಯ ಸಂಭ್ರಮಕ್ಕೆ ಕೆಲವೊಂದು ಮಿತಿಗಳನ್ನು ಹೇರಲಾಗಿದೆ ಎಂದಿದ್ದಾರೆ.

Advertisement

ಕೋವಿಡ್ ಸೃಷ್ಟಿಸಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಸರಕಾರ ವು ಅತಿಮಾನುಷ ಪರಿಶ್ರಮ ಪಟ್ಟಿದೆ. ಈ ಪ್ರಯತ್ನದಿಂದಾಗಿ, ನಾವು ಈ ಜಾಗತಿಕ ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಸಫ‌ಲರಾಗಿದ್ದೇವೆ ಮತ್ತು ಭಾರೀ ಸಂಖ್ಯೆಯ ಜನರ ಜೀವಗಳನ್ನು ಉಳಿಸುವಲ್ಲೂ ಯಶಸ್ವಿಯಾಗಿದ್ದೇವೆ. ಈ ಮೂಲಕ ಇಡೀ ಜಗತ್ತಿಗೇ ಮಾದರಿಯಾಗಿದ್ದೇವೆ ಎಂದೂ ರಾಷ್ಟ್ರಪತಿ ಕೋವಿಂದ್‌ ನುಡಿದಿದ್ದಾರೆ.

ವಾರಿಯರ್ಸ್‌ಗೆ ಆಭಾರಿ: ಸೋಂಕಿನ ವಿರುದ್ಧದ ಈ ಹೋರಾಟದಲ್ಲಿ ಹಗಲುರಾತ್ರಿಯೆನ್ನದೆ ಮುಂಚೂಣಿಯಲ್ಲಿ ನಿಂತು ಶ್ರಮಿಸುತ್ತಿರುವ ದೇಶದ ವೈದ್ಯರು, ದಾದಿಯರು ಹಾಗೂ ಇತರೆ ಆರೋಗ್ಯ ಸೇವಾ ಸಿಬ್ಬಂದಿಗೆ ಇಡೀ ದೇಶವೇ ಆಭಾರಿಯಾಗಿರುತ್ತದೆ. ಈ ಎಲ್ಲ ವೀರರೂ ತಮ್ಮೆಲ್ಲ ಮಿತಿಗಳನ್ನೂ ಮೀರಿ, ಅನೇಕ ಪ್ರಾಣಗಳನ್ನು ಉಳಿಸುತ್ತಿದ್ದಾರೆ, ಅಗತ್ಯ ಸೇವೆಗಳನ್ನು ಕಲ್ಪಿಸುತ್ತಿದ್ದಾರೆ ಎಂದೂ ಕೋವಿಂದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕುರಿತು ಪ್ರಸ್ತಾಪಿಸಿದ ರಾಷ್ಟ್ರಪತಿ ಕೋವಿಂದ್‌, ‘ಭಾರತದ ಸ್ವಾವಲಂಬನೆ ಎಂದರೆ, ಜಗತ್ತಿನಿಂದ ಅಂತರ ಕಾಯ್ದುಕೊಳ್ಳದೇ, ಉಳಿದವರಿಂದ ದೂರ ಉಳಿಯದೇ ನಾವು ಸ್ವಾವಲಂಬಿಗಳಾಗುವುದು’ ಎಂದಿದ್ದಾರೆ. ತಮ್ಮ ಭಾಷಣದಲ್ಲಿ ಕೋವಿಂದ್‌ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಹೆಮ್ಮೆಯ ಸಂಗತಿ ಎಂದಿದ್ದಾರಲ್ಲದೆ, ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನೂ ಶ್ಲಾಘಿಸಿದ್ದಾರೆ.

ಚೀನಗೆ ತಕ್ಕ ಪ್ರತ್ಯುತ್ತರ: ಜೂನ್‌ ತಿಂಗಳಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್‌ನಲ್ಲಿ ನಡೆದ ಭಾರತ-ಚೀನ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರಿಗೂ ರಾಷ್ಟ್ರಪತಿ ನಮನ ಸಲ್ಲಿಸಿದ್ದಾರೆ. ನಮ್ಮ ಗಡಿಯನ್ನು ರಕ್ಷಣೆ ಮಾಡುತ್ತಾ 20 ವೀರ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ನಾವು ಶಾಂತಿಯ ಮೇಲೆ ನಂಬಿಕೆಯಿಟ್ಟಿದ್ದರೂ, ದುಸ್ಸಾಹಸದ ಯತ್ನ ನಡೆದರೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ ನಮಗಿದೆ ಎಂಬುದನ್ನು ಭಾರತಾಂಬೆಯ ಮಕ್ಕಳು ತೋರಿಸಿಕೊಟ್ಟಿದ್ದಾರೆ ಎಂದೂ ರಾಷ್ಟ್ರಪತಿ ತಿಳಿಸಿದ್ದಾರೆ.

Advertisement

ಗೂಗಲ್‌ ಹೊಸ ಪರಿಕಲ್ಪನೆ
ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ “ಸೌಂಡ್‌ ಆಫ್ ಇಂಡಿಯಾ’ ಎಂಬ ಹೊಸ ಪರಿಕಲ್ಪನೆಯನ್ನು ಗೂಗಲ್‌ ಜನರ ಮುಂದಿಟ್ಟಿದೆ. ಇದೊಂದು, ಕೃತಕ ಬುದ್ಧಿಮತ್ತೆ ಆಧಾರಿತ ಪರಿಕಲ್ಪನೆ. ಅದರಡಿ, ನಾವು ರಾಷ್ಟ್ರಗೀತೆಯನ್ನು ಹಾಡಬೇಕು. ಅದನ್ನು ಧ್ವನಿಮುದ್ರಣ ಮಾಡಿಕೊಳ್ಳುವ ಗೂಗಲ್‌, ಆ ಹಾಡನ್ನು ಭಾರತದ ಮೂರು ಪ್ರಮುಖ ವಾದ್ಯಗಳಾದ ಶೆಹನಾಯಿ, ಸಾರಂಗಿ ಹಾಗೂ ಕೊಳಲು ವಾದನದಲ್ಲಿ ನಮಗೆ ಕೇಳಿಸುತ್ತದೆ. ಗೂಗಲ್‌ ಸರ್ಚ್‌ನಲ್ಲಿ g.co/SoundsofIndia ಲಿಂಕ್‌ ಓಪನ್‌ ಮಾಡಿ, ಸೌಂಡ್‌ ಆಫ್ ಇಂಡಿಯಾ ಪರಿಕಲ್ಪನೆಯನ್ನು ಎಂಜಾಯ್‌ ಮಾಡಬಹುದು.

ವಾರಿಯರ್ಸ್‌ಗೆ ಸಮ್ಮಾನ
ದಿಲ್ಲಿಯಲ್ಲಿ ಕೆಂಪುಕೋಟೆಯ ಸಮಾರಂಭ ಮುಗಿದ ಕೂಡಲೇ, ರಾಷ್ಟ್ರಪತಿ ಭವನದಲ್ಲಿ ಕೊರೊನಾ ವಾರಿಯರ್ಸ್‌ಗೆ ಸಮ್ಮಾನ ಸಮಾರಂಭ ಆಯೋಜಿಸಲಾಗಿದೆ. ಎಲ್ಲ ರಾಜ್ಯಗಳ ವೈದ್ಯರು, ಶುಶ್ರೂಷಕಿಯರನ್ನು ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅದಲ್ಲದೆ, ಆರೋಗ್ಯ ಇಲಾಖೆಯಲ್ಲಿ ಕೊರೊನಾ ವಾರಿಯರ್ಸ್‌ ಆಗಿ ದುಡಿಯುತ್ತಿರುವ ಇತರ ಸಿಬಂದಿಯನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

“ವಿಶೇಷ ಭೋಜನ’ ನೀಡಲು ಹೊಟೇಲ್‌ಗ‌ಳು ಸಜ್ಜು
ಸ್ವಾತಂತ್ರ್ಯೋತ್ಸವವು ವಾರಾಂತ್ಯಕ್ಕೆ ಬಂದಿರುವುದರಿಂದ ಅದರ ಲಾಭ ಪಡೆಯಲು ದೇಶದ ಸಣ್ಣಪುಟ್ಟ ಹೊಟೇಲ್‌ಗ‌ಳಿಂದ ಹಿಡಿದು ಸ್ಟಾರ್‌ ಹೊಟೇಲ್‌ಗ‌ಳೂ ಸಜ್ಜಾಗಿವೆ. ಸ್ವಾತಂತ್ರೋತ್ಸವಕ್ಕಾಗಿ ವಿಶೇಷ ಖಾದ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಲು ಸಿದ್ಧವಾಗಿವೆ. ಈ ಮೂಲಕ ಕೆಲವು ತಿಂಗಳುಗಳಿಂದ ಕಳೆದುಕೊಂಡಿದ್ದ ಗ್ರಾಹಕರನ್ನು ಮರಳಿ ಗಳಿಸುವ ಯೋಜನೆ ಅವುಗಳದ್ದಾಗಿದೆ.

ಕೆಂಪುಕೋಟೆಯಲ್ಲಿ ಎಲ್ಲವೂ ಕಟ್ಟುನಿಟ್ಟು
ಗಣ್ಯರ ನಡುವೆ, ಅತಿಥಿಗಳ ನಡುವೆ ಸೂಕ್ತ ಸಾಮಾಜಿಕ ಅಂತರ ಕಾಪಾಡಲು ಕ್ರಮ. ಆಹ್ವಾನಿಸಲಾಗಿರುವ ಪ್ರತಿಯೊಬ್ಬ ಅತಿಥಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಸಮಾರಂಭಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಆಹ್ವಾನ ಪತ್ರಿಕೆ ನೀಡಲಾಗಿರುವ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ. ಒಟ್ಟು 4 ಸಾವಿರ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗಿದೆ.

ಗಣ್ಯರು ಕುಳಿತುಕೊಳ್ಳಲಿರುವ ಸ್ಥಳದಲ್ಲಿ ಆಸನದ ನಡುವೆ 6 ಅಡಿ ಅಂತರಕ್ಕೆ ಆದ್ಯತೆ. ಎನ್‌ಸಿಸಿ ಅಭ್ಯರ್ಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅವರು ಗಣ್ಯರ ಉಪಸ್ಥಿತಿ, ಸ್ಯಾನಿಟೈಸರ್‌ ಹಾಗೂ ಫೇಸ್‌ ಮಾಸ್ಕ್ನಂಥ ಮೂಲ ಸೌಕರ್ಯಗಳ ಕಡೆಗೆ ಗಮನ ಕೊಡಲಿದ್ದಾರೆ. ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಮಕ್ಕಳ ಕವಾಯತು ರದ್ದುಗೊಳಿಸಲಾಗಿದೆ.

ಹಲವು ಸುತ್ತಿನ ಭದ್ರತೆ
ಎನ್‌ಎಸ್‌ಜಿ ಸ್ನೆ„ಪರ್‌ಗಳು, ಸ್ವಾಪ್‌ ಕಮಾಂಡರ್‌ಗಳು, ಕೈಟ್‌ ಕ್ಯಾಚರ್‌ಗಳ ನಿಯೋಜನೆ. ಎಸ್‌ಪಿಜಿ, ಇಂಡೋ-ಟಿಬೆಟಿಯನ್‌ ಗಡಿ ಕಾವಲು ಪಡೆಯ ಯೋಧರ ಭದ್ರತೆ. ದೆಹಲಿ ಪೊಲೀಸರಿಂದಲೂ ಬಿಗಿ ಬಂದೋಬಸ್ತ್. ಕೆಂಪು ಕೋಟೆಯ ಒಳಗೂ ಹೊರಗೂ ಸಮವಸ್ತ್ರವಿರದ ಪೊಲೀಸರ ಕಾವಲನ್ನು ನಿಯೋಜಿಸಲಾಗಿದೆ. ಟ್ರಾಫಿಕ್‌ ಇರದಂತೆ ಕ್ರಮ ಕೈಗೊಳ್ಳಲಾಗಿದೆ. ಕೋಟೆ ಸುತ್ತು ಇರುವ ಎಂಟು ಮಾರ್ಗಗಳಲ್ಲಿ ಸಂಚಾರಕ್ಕೆ ನಿರ್ಬಂಧ.

ಇತರ ಕ್ರಮಗಳು
ವೈದ್ಯಕೀಯ ಪರಿಕರಗಳು ಇರುವ ಆ್ಯಂಬುಲೆನ್ಸ್‌ಗಳ ನಿಯೋಜನೆ. ಕೋಟೆಯ ಹಲವಾರು ಕಡೆ ಥರ್ಮಲ್‌ ಸ್ಕ್ರೀನಿಂಗ್‌ಗೆ ಕ್ರಮ. ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಕೇಂದ್ರ ತೆರೆಯಲಾಗಿದೆ. ದಿಲ್ಲಿಯ ಎಲ್ಲ ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್. ಧ್ವಜಾರೋಹಣ ನಡೆಯಲಿರುವ ಸಮಯದ ಮುನ್ನ ಹಾಗೂ ಅನಂತರದ ಕೆಲವು ನಿಮಿಷಗಳವರೆಗೆ (ಬೆಳಗ್ಗೆ 6.45ರಿಂದ 8.45ರ ವರೆಗೆ) ರೈಲು ಸಂಚಾರ ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next