Advertisement

ಕುದುರೆಮುಖ ಕಂಪೆನಿಗೆ ಸೋಲಾರ್‌ ಪವರ್‌ !

05:12 AM Jan 16, 2019 | |

ಮಹಾನಗರ: ಎಂಆರ್‌ಪಿಎಲ್‌, ಎನ್‌ಎಂಪಿಟಿ ಸೇರಿದಂತೆ ಬೃಹತ್‌ ಉದ್ದಿಮೆಗಳು ಸೋಲಾರ್‌ ಉತ್ಪಾದ ನೆಯ ಮೂಲಕ ದೇಶಾದ್ಯಂತ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವಾಗ ಸರಕಾರಿ ಸ್ವಾಮ್ಯದ ಕರಾವಳಿಯ ಇನ್ನೊಂದು ಬೃಹತ್‌ ಕೈಗಾರಿಕೆ ಕೆಐಒಸಿಎಲ್‌ಸೋಲಾರ್‌ ಉತ್ಪಾದನೆಗೆ ಮುಂದಾಗಿದೆ.

Advertisement

ಕೂಳೂರಿನಲ್ಲಿರುವ ಕುದುರೆಮುಖ ಕಂಪೆನಿಯ ಬ್ಲಾಸ್ಟ್‌ ಫರ್ನೆಸ್‌ ಘಟಕದ ಆವರಣದಲ್ಲಿ 6.7 ಕೋ.ರೂ. ವೆಚ್ಚದಲ್ಲಿ 1.3 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್‌ ಉತ್ಪಾದನ ಘಟಕ ಆರಂಭಿಸಲಾಗಿದ್ದು, ಕೊನೆಯ ಹಂತದ ತಯಾರಿಯಲ್ಲಿದೆ. ಕೆಲವೇ ದಿನಗಳಲ್ಲಿ ಕೇಂದ್ರ ಸಚಿವರನ್ನು ಆಹ್ವಾನಿಸಿ ಸೋಲಾರ್‌ ಘಟಕ ಉದ್ಘಾಟಿಸಲು ಸಿದ್ಧತೆ ನಡೆಸಲಾಗಿದೆ.

ಘಟಕದ ಮೂಲಕ ಪ್ರತೀ ತಿಂಗಳು 1.6 ಲಕ್ಷ ಯುನಿಟ್ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದೆ. ಕುದುರೆಮುಖ ಕಂಪೆನಿಯ ಪೆಲೆಟ್ ಪ್ಲಾಂಟ್ ಯುನಿಟ್‌ನ ಕಾರ್ಯಗಳಿಗೆ ಸೋಲಾರ್‌ ವಿದ್ಯುತ್‌ ಅನ್ನೇ ಬಳಸಲು ಉದ್ದೇಶಿಸಲಾಗಿದೆ. ಸುಮಾರು ಐದು ಎಕ್ರೆ ಜಾಗವನ್ನು ಇದಕ್ಕಾಗಿ ಮೀಸಲಿಡಲಾಗಿದೆ.

ಪರಿಸರ ಸ್ನೇಹಿ ವಾತಾವರಣ
ಕುದುರೆಮುಖ ಕಂಪೆನಿಗಾಗಿ ಇತರ ಕಡೆಗಳಲ್ಲಿಯೂ 5 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಘಟಕವನ್ನು 30 ಕೋ.ರೂ. ವೆಚ್ಚದಲ್ಲಿ ಅಳವಡಿಸುವ ಕುರಿತಂತೆಯೂ ಮಾತುಕತೆ ನಡೆಯುತ್ತಿದೆ. ಈ ಮೂಲಕ ಕಂಪೆನಿಯು ಸಂಪೂರ್ಣ ಸೋಲಾರ್‌ ಪವರ್‌ಗೆ ಬದಲಾಗುವ ನಿರೀಕ್ಷೆಯಲ್ಲಿದೆ.ಕುದುರೆಮುಖ ಸಂಸ್ಥೆಯು ಸೋಲಾರ್‌ಮೂಲಕ ಪರಿಸರ ಪೂರಕ ಕ್ರಮಕ್ಕೆ ಮುಂದಾಗುವುದರ ಜತೆಗೆ, ಇಲ್ಲಿನ ಪೆಲೆಟ್ ಪ್ಲಾಂಟ್ ಘಟಕ ಮತ್ತು ಬ್ಲಾಸ್ಟ್‌ ಫರ್ನೆಸ್‌ ಘಟಕಗಳ ಆವರಣಗಳಲ್ಲಿ ವಿವಿಧ ರೀತಿಯ ಮರ-ಗಿಡಗಳನ್ನು ಬೆಳೆಸಿ ಪರಿಸರ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ.

ಎಂಆರ್‌ಪಿಎಲ್‌ನಲ್ಲಿ ಸೋಲಾರ್‌ ಯಶಸ್ವಿ
ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ (ಎಂಆರ್‌ಪಿಎಲ್‌)ಸಂಸ್ಥೆಯು ಈಗ ಸೋಲಾರ್‌ ಉತ್ಪಾದನೆ ಮೂಲಕ ಸಾಧನೆ ತೋರಿದೆ. ವಾರ್ಷಿಕ 88 ಲಕ್ಷ ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿರುವ ಸೋಲಾರ್‌ ಘಟಕವನ್ನು ಕುತ್ತೆತ್ತೂರಿನಲ್ಲಿ ನಿರ್ಮಿಸಿದೆ. 27 ಕೋ.ರೂ. ವೆಚ್ಚದಲ್ಲಿ ಸ್ಥಾಪನೆಯಾಗಿರುವ 6.063 ಮೆ.ವ್ಯಾಟ್ ಸಾಮರ್ಥ್ಯದ ಈ ಘಟಕ 24,000 ಯೂನಿಟ್ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ. ಈ ಮೂಲಕ ಸೋಲಾರ್‌ ಪವರ್‌ ಎಂಆರ್‌ಪಿಎಲ್‌ನಲ್ಲಿ ಯಶಸ್ವಿಯಾಗಿದೆ.

Advertisement

ಗ್ರೀನ್‌ ಪೋರ್ಟ್‌
ಭಾರತದಲ್ಲಿಯೇ ದೊಡ್ಡ ಪ್ರಮಾಣ ದಲ್ಲಿ ಎಲ್‌.ಪಿ.ಜಿ.ಯನ್ನು ನಿರ್ವ ಹಿಸುತ್ತಿರುವ ಪ್ರತಿಷ್ಠಿತ ನವಮಂಗಳೂರು ಬಂದರು (ಎನ್‌ಎಂಪಿಟಿ) ಕೂಡ ಸೋಲಾರ್‌ ಉತ್ಪಾದನೆಯ ಮೂಲಕ ‘ಗ್ರೀನ್‌ ಪೋರ್ಟ್‌’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಒಟ್ಟು ನಿರ್ವ ಹಣೆಗಾಗಿ ನಿತ್ಯ ಸುಮಾರು 24,000 ಯೂನಿಟ್ ವಿದ್ಯುತ್‌ ಆವಶ್ಯಕತೆಯಿದ್ದು, ಈಗ ಇಲ್ಲಿ ಸೋಲಾರ್‌ ಮೂಲಕವೇ 20,000 ಯೂನಿಟ್ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಇಲ್ಲಿ ಪ್ರಸ್ತುತ 5.19 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಪೈಕಿ ದೇಶದ ಮುಂಚೂಣಿಯ ಬಾಷ್‌ ನ್ಯೂ ಕಂಪೆನಿ ವತಿಯಿಂದ ನವಮಂಗಳೂರು ಬಂದರಿನ ಕಾರ್ಮಿಕರ ವಸತಿ ನಿಲಯದ ಸಮೀಪದಲ್ಲಿ 4 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್‌ ವಿದ್ಯುತ್‌ ಉತ್ಪಾದನ ಯೋಜನೆ ಅನುಷ್ಠಾನಿಸಿದೆ. ಉಳಿದಂತೆ 350 ಕಿಲೋ ವ್ಯಾಟ್,840 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್‌ ವಿದ್ಯುತ್‌ ರೂಫ್‌ಟಾಪ್‌ ಮೂಲಕ ವಿದ್ಯುತ್‌ ಪಡೆಯಲಾಗುತ್ತಿದೆ.

35 ಲಕ್ಷ ಟನ್‌ ಕಬ್ಬಿಣದ ಉಂಡೆ ತಯಾರಿ
ಕರ್ನಾಟಕ ಕೈಗಾರಿಕೋದ್ಯಮ ಚರಿತ್ರೆಯಲ್ಲಿ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಬಹುಮುಖ್ಯ ಸ್ಥಾನವಿದೆ. ಕಾರಣಾಂತರಗಳಿಂದ ಕೆಲವು ವರ್ಷಗಳ ಕಷ್ಟದ ಹಾದಿ ಸವೆಸಿದ ಕೆಐಒಸಿಎಲ್‌ಗೆ ಈಗ ಹಳೆಯ ಹೊಳಪು ಬಂದಿದೆ. ವಿದೇಶಗಳಿಗೆ ಲಕ್ಷಾಂತರ ಟನ್‌ಗಳಷ್ಟು ಅದಿರು ಉಂಡೆಗಳನ್ನು ರಫ್ತು ಮಾಡುವ ಉದ್ಯಮವನ್ನು ಕಳೆದ ವರ್ಷಗಳಿಂದ ಚುರುಕುಗೊಳಿಸುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟಿದೆ. 2017-18ರಲ್ಲಿ 23.27 ಲಕ್ಷ ಟನ್‌ ಕಬ್ಬಿಣದ ಉಂಡೆಗಳನ್ನು ಉತ್ಪಾದಿಸಲಾಗಿದ್ದು, ಶೇ.59ರ ಪ್ರಗತಿ ದಾಖಲಿಸಿದೆ. 2016-17ರಲ್ಲಿ 23.01 ಲಕ್ಷ ಟನ್‌ ಕಬ್ಬಿಣದ ಉಂಡೆಗಳ ಉತ್ಪಾದನೆ ಮಾಡಲಾಗಿತ್ತು. ಕಳೆದ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 81.48 ಕೋ.ರೂ. ಲಾಭ ಗಳಿಸಿದೆ. ಮಂಗಳೂರು ಘಟಕವು 35 ಲಕ್ಷ ಟನ್‌ ಕಬ್ಬಿಣದ ಉಂಡೆ ತಯಾರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ಎರಡು ವರ್ಷಗಳಲ್ಲಿ ಮಂಗಳೂರು ಘಟಕವು ಒಟ್ಟು 50 ಲಕ್ಷ ಟನ್‌ ಕಬ್ಬಿಣದ ಉಂಡೆ ಗಳ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸೋಲಾರ್‌ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಪರಿಸರ ಪೂರಕ ಸೋಲಾರ್‌
ಕುದುರೆಮುಖ ಸಂಸ್ಥೆಯ ಬ್ಲಾಸ್ಟ್‌ ಫರ್ನೆಸ್‌ ಘಟಕದ ಆವರಣದಲ್ಲಿ 6.7 ಕೋ.ರೂ. ವೆಚ್ಚದಲ್ಲಿ 1.3 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್‌ ಉತ್ಪಾದನ ಘಟಕ ಸ್ಥಾಪಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭಿಸಲಿದೆ.
 – ಎಂ.ವಿ. ಸುಬ್ಬರಾವ್‌,
 ಅಧ್ಯಕ್ಷರು, ಆಡಳಿತ ನಿರ್ದೇಶಕರು, ಕೆಐಒಸಿಎಲ್‌

•ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next