Advertisement

ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಪರಿಶೀಲನೆ

02:43 PM May 15, 2018 | |

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಗರದ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಮೇ 15ರಂದು ಬೆಳಗ್ಗೆ 8:00 ಗಂಟೆಗೆ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದರು.

Advertisement

ನಗರದ ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿನ ಸ್ಟ್ರಾಂಗ್‌ ರೂಮ್‌ ಹಾಗೂ ಮತ ಎಣಿಕೆ ಕೊಠಡಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಒಂದೇ ಸ್ಥಳದಲ್ಲಿ ನಡೆಯಲಿದೆ. ಸುರಪುರ ಮತ್ತು ಶಹಾಪುರ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಕಾಲೇಜಿನ ಕೆಳ ಮಹಡಿಯಲ್ಲಿ ನಡೆಯಲಿದ್ದು, ಗುರುಮಠಕಲ್‌ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮೊದಲನೇ ಮಹಡಿಯಲ್ಲಿ ಜರುಗಲಿದೆ. ಯಾದಗಿರಿ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದರು.

ಒಂದು ವಿಧಾನಸಭಾ ಕ್ಷೇತ್ರದ ಮತ ಎಣಿಕೆ 2 ಕೊಠಡಿಗಳಲ್ಲಿ ಕೈಗೊಳ್ಳಲಾಗುವುದು. ಇವುಗಳಲ್ಲಿ ಒಟ್ಟು 14 ಟೇಬಲ್‌ಗ‌ಳು ಮತ್ತು 1 ಮತದಾನ ಖಾತ್ರಿ ಯಂತ್ರದ ಮತ ಚೀಟಿಗಳನ್ನು ಎಣಿಸಲು ಹಾಗೂ ಪೋಸ್ಟಲ್‌ ಬ್ಯಾಲೆಟ್‌ಗಳನ್ನು ಎಣಿಕೆ ಮಾಡುವ ಸಲುವಾಗಿ ಒಂದು ಕೌಂಟರ್‌ ಇರುತ್ತದೆ. ಒಂದು ಟೇಬಲ್‌ ಚುನಾವಣಾಧಿಕಾರಿ ಉಪ ಚುನಾವಣಾಧಿಕಾರಿಗೆ ಮೀಸಲಾಗಿರುತ್ತದೆ. ಮತ ಎಣಿಕೆಯ 14 ಟೇಬಲ್‌ಗ‌ಳಲ್ಲಿ ಪ್ರತಿಯೊಂದಕ್ಕೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್‌ ಇರುತ್ತಾರೆ. ಇವರಿಗೆ ಮೇ 15ರ ಬೆಳಗ್ಗೆ ಆಯಾ ಕ್ಷೇತ್ರಗಳ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ರ್‍ಯಾಂಡಮ್‌ ಆಗಿ ಕ್ಷೇತ್ರ ಹಂಚಿಕೆ ಮಾಡಲಾವುದು ಎಂದು ತಿಳಿಸಿದರು. 

ಮತ ಎಣಿಕೆ ಕಾರ್ಯಕ್ಕೆ ಒಟ್ಟು 320 ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದ್ದು, ಭದ್ರತೆಗಾಗಿ 500ಕ್ಕೂ ಹೆಚ್ಚು
ಪೊಲೀಸ್‌ ಸಿಬ್ಬಂದಿ, ಗೃಹ ರಕ್ಷಕರು ಹಾಗೂ ಕೇಂದ್ರ ಭದ್ರತಾ ಪಡೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ 100 ಮೀಟರ್‌ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದ ವಾಹನ ಮತ್ತು ವ್ಯಕ್ತಿಗಳಿಗೆ ಪ್ರವೇಶ ಇಲ್ಲ.

ಆಯಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಿಗೆ ಹೋಗಲು ಬ್ಯಾರಿಕೇಡ್‌ ಹಾಕಲಾಗಿದ್ದು, ಒಂದು ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ನೇಮಕವಾದ ಸಿಬ್ಬಂದಿ ಅಥವಾ ಪಕ್ಷಗಳ ಏಜೆಂಟರುಗಳು ಮತ್ತೂಂದು ಕ್ಷೇತ್ರದ ಕೇಂದ್ರಕ್ಕೆ ಹೋಗುವಂತಿಲ್ಲ. ಮತ ಎಣಿಕೆಯ 8 ಕೊಠಡಿಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್‌ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

Advertisement

ಬೆಳಗ್ಗೆ 8:00 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ಈ ಸಮಯದೊಳಗೆ ಬರುವ ಎಲ್ಲಾ ಅಂಚೆ ಪತ್ರಗಳನ್ನೂ ಎಣಿಕೆ ಮಾಡಲಾಗುವುದು. ನಂತರ ಬರುವ ಅಂಚೆ ಮತಪತ್ರಗಳನ್ನು ಪರಿಗಣಿಸುವುದಿಲ್ಲ. ತದನಂತರ 8:30ರಿಂದ ಕಂಟ್ರೋಲ್‌ ಯುನಿಟ್‌ ಮತ ಎಣಿಕೆ ಆರಂಭವಾಗಲಿದೆ. ಕೊನೆಯಲ್ಲಿ ರ್‍ಯಾಂಡಮ್‌ ಆಗಿ ಆಯ್ಕೆ ಮಾಡಲಾದ ಮತಗಟ್ಟೆಯ ಒಂದು ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್‌)ದ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಧ್ವನಿವರ್ಧಕದಲ್ಲಿ ಫಲಿತಾಂಶ: ಮತ ಎಣಿಕೆಯ ಕೇಂದ್ರದ ಸುತ್ತ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ನಾಲ್ಕು ವಿಧಾನಸಭಾ ಕ್ಷೇತ್ರಗಳ ಪ್ರತಿ ಸುತ್ತಿನ ಫಲಿತಾಂಶವನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಅವರು ತಿಳಿಸಿದರು.

ಅಭಿನಂದನೆ: ಜಿಲ್ಲೆಯ 1,129 ಮತಗಟ್ಟೆಗಳಲ್ಲಿ ಶಾಂತಿಯುವಾಗಿ ಮತದಾನ ನಡೆದಿದೆ. ಇದಕ್ಕೆ ಕಾರಣಿಕರ್ತರಾದ ಎಲ್ಲಾ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪ ಚುನಾವಣಾಧಿ ಕಾರಿಯಾದ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ನಾಲ್ಕು ವಿಧಾನಸಭಾ ಕ್ಷೇತ್ರಗಳ ನೋಡಲ್‌ ಅಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಡಾ| ಬಿ.ಎಸ್‌. ಮಂಜುನಾಥ ಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು 

Advertisement

Udayavani is now on Telegram. Click here to join our channel and stay updated with the latest news.

Next