Advertisement

ಸ್ಥಳೀಯ ಕಲಾವಿದರಿಗೆ ಆದ್ಯತೆ;ಫೆ. 2, 3 ಹಾಗೂ 4 ರಂದು ಹಂಪಿ ಉತ್ಸವಕ್ಕೆ ಸಕಲ ಸಿದ್ಧತೆ: ಡಿಸಿ

06:04 PM Jan 09, 2024 | Team Udayavani |

ಉದಯವಾಣಿ ಸಮಾಚಾರ
ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ನಿಟ್ಟಿನಲ್ಲಿ ಫೆ. 2, 3 ಹಾಗೂ 4 ರಂದು ನಡೆಯಲಿರುವ ಹಂಪಿ ಉತ್ಸವ ಆಚರಣೆಗೆ ವಿಜಯನಗರ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದಕ್ಕಾಗಿ 15 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ  ಧಿಕಾರಿ ಎಂ.ಎಸ್‌. ದಿವಾಕರ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿಯ ಗತವೈಭವ ಮರುಕಳಿಸುವಂತೆ, ವಿಜಯನಗರ ಕಾಲದ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ, ವಿಶ್ವಕ್ಕೆ ಸಾರುವಂತ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಜಿಲ್ಲೆಯ ಜನ ಪ್ರತಿನಿಧಿಗಳು, ಕಲಾವಿದರು ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಮುಖಂಡರ ಸಲಹೆ ಪಡೆಯಲಾಗುವುದು.ವಿವಿಧ ಸಮಿತಿಗಳನ್ನು ರಚಿಸಿ ಉತ್ಸವದ ಆಚರಣೆಗೆ ಜವಾಬ್ದಾರಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆದ್ಯತೆ: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟು ಜನರಲ್ಲಿ ಭಕ್ತಿ, ಶಾಂತಿ ಭಾವವನ್ನು ಪ್ರೇರೇಪಿಸುವ ಹಾಗೆ ವ್ಯವಸ್ಥೆ ಮಾಡಲಾಗುವುದು. ನಾಲ್ಕು ವೇದಿಕೆಗಳನ್ನು ನಿರ್ಮಾಣ ಮಾಡಲಾಗುವುದು. ಧ್ವನಿ ಮತ್ತು ಬೆಳಕು, ಆಗಸದಿಂದ ಹಂಪಿ, ಗ್ರಾಮೀಣ ಕ್ರೀಡಾಕೂಟ, ವಸಂತ ವೈಭವ, ತುಂಗಾರತಿ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಾಹಸ
ಕ್ರೀಡೆ, ಜಾನಪದ ಕಲಾತಂಡಗಳ ಮೆರವಣಿಗೆ, ವಾಟರ್‌ ಬೋಟಿಂಗ್‌, ರಂಗೋಲಿ ಹಾಗೂ ಅಡುಗೆ ಸ್ಪರ್ಧೆ, ಪರಂಪರೆ ನಡಿಗೆ, ವಸ್ತು
ಪ್ರದರ್ಶನ, ಪುಸ್ತಕ ಮೇಳ, ಕವಿಗೋಷ್ಠಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಜನಾಕರ್ಷಣೆ: ಹಂಪಿ ಉತ್ಸವ ಯಶ್ವಸಿಗೆ ನಾಡಿನ ಖ್ಯಾತ, ಗಾಯಕರು ಹಾಗೂ ಕಲಾವಿದರನ್ನು ಕರೆ ತರಲು ಚಿಂತನೆ ನಡೆದಿದೆ. ಕೆಲ ಟಿವಿ ಹಾಗೂ ಚಿತ್ರನಟರು ಸ್ವಯಂ ಪ್ರೇರಿತರಾಗಿ ಆಗಮಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.

ಪ್ರಚಾರ: ಹಂಪಿ ಉತ್ಸವವನ್ನು ಜನೋತ್ಸವವಾಗಿ ಆಚರಿಸಲು ನಾಡಿನಾದ್ಯಂತ 25 ದಿನಗಳ ಕಾಲ ನಿರಂತರ ಪ್ರಚಾರ ಮಾಡಲಾಗುವುದು. ಪರಿಸರ ಸ್ನೇಹಿ ಬ್ಯಾನರ್‌ ಮತ್ತು ಪೋಸ್ಟರ್‌ ಮೂಲಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಅವರು
ಹೇಳಿದರು.

Advertisement

ಕನ್ನಡ ವಿವಿ ಸಹಯೋಗ: ಹಂಪಿ ಇತಿಹಾಸದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಕಿರೀಟವಿದ್ದಂತೆ. ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳು ಸೇರಿದಂತೆ ಅಲ್ಲಿನ ಎಲ್ಲ ವಿಭಾಗಗಳ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ವಿಭಿನ್ನ ಕಾರ್ಯಕ್ರಮ ರೂಪಿಸಲಾಗುವುದು ಎಂದ ಅವರು,ಯುವ ಸಮುದಾಯ, ರೈತರಿಗೆ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮಾಧ್ಯಮ ಪ್ರತಿನಿಧಿಗಳು, ಕಲಾವಿದರು, ಗಣ್ಯರು, ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಇನ್ನಿತರರು ಉತ್ಸವದಲ್ಲಿ ಅಚ್ಚುಕಟ್ಟಾಗಿ ಭಾಗಿಯಾಗಿ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಾಸ್‌ಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಎಚ್‌.ಆರ್‌. ಗವಿಯಪ್ಪ, ಜಿಪಂ ಸಿಇಒ ಸದಾಶಿವ ಪ್ರಭು ಬಿ, ಉಪವಿಭಾಗಾಧಿಕಾರಿ ಮಹಮದ್‌ ಅಲಿ ಅಕ್ರಂ ಷಾ ಹಾಗೂ ವಿವಿಧ
ಇಲಾಖಾಧಿಕಾರಿಗಳು ಇದ್ದರು.

ಸಿಎಂ ಆಶಯದಂತೆ ಅದ್ಧೂರಿ ಆಚರಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಫೆ.2 ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ-2024ನ್ನು ಅದ್ಧೂರಿ
ಯಾಗಿ ಆಚರಿಸಲಾಗುವುದು ಎಂದು ಶಾಸಕ ಎಚ್‌.ಆರ್‌.ಗವಿಯಪ್ಪ ಹೇಳಿದರು.

ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ದಿ|ಎಂ.ಪಿ.ಪ್ರಕಾಶ ಅವರಂತೆ ಸಿಎಂ ಸಿದ್ದರಾಮಯ್ಯನವರೂ ಸಹ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದರು. ಹಂಪಿ ಉತ್ಸವದ ಆಚರಣೆಯಿಂದ ಸ್ಥಳೀಯ ಪರಂಪರೆ, ಕಲೆ, ಸಾಹಿತ್ಯ, ಪರಂಪರೆ ಜತೆ ಸ್ಥಳೀಯ ಕಲಾವಿದರಿಗೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಬರದ ನಡುವೆಯೂ ವಿಜೃಂಬಣೆಯ ಹಂಪಿ ಉತ್ಸವ ಆಚರಣೆಗೆ ಸಿದ್ದತೆ ನಡೆಸಲಾಗಿದೆ ಎಂದು ಹೇಳಿದರು.

ಹಂಪಿ ಉತ್ಸವ ಆಚರಣೆಗೆ ಅಗತ್ಯ ಅನುದಾನ ಮೀಸಲಿಡುವುದು ಸೇರಿದಂತೆ ಮುಂದಿನ ವರ್ಷ ನವೆಂಬರ್‌ ತಿಂಗಳಲ್ಲಿ ಹಂಪಿ ಉತ್ಸವ ಆಚರಣೆ ನಡೆಸಲಾಗುವುದು. ಇದಕ್ಕಾಗಿ ಸಿಎಂ ಸಿದ್ದರಾಮ್ಯನವರ ಗಮನಕ್ಕೆ ತರಲಾಗುವುದು ಎಂದರು. ಸಮಯವಕಾಶ
ಕಡಿಮೆ ಇರುವುದರಿಂದ ಯುದ್ದೋಪಾದಿಯಲ್ಲಿ ಉತ್ಸವದ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next