Advertisement

ಉಪದೇಶ ನೀಡುವುದು ಸುಲಭ, ಪಾಲಿಸುವುದು ಕಷ್ಟ

11:28 PM Oct 17, 2021 | Team Udayavani |

ಮಾತು ಮತ್ತು ಕೃತಿಯ ನಡುವೆ ಅಜಗಜಾಂತರವಿದೆ. ಮಾಡುವುದು ಮಾತನಾಡುವಷ್ಟು ಸುಲಭವಾಗಿದ್ದರೆ ನಮ್ಮ ಸಮಾಜ ಇಂದು ಈ ಸ್ಥಿತಿಗೆ ತಲುಪುತ್ತಿ ರಲಿಲ್ಲ. “ಆಡದೇ ಮಾಡುವವ ರೂಢಿ ಯೊಳಗುತ್ತಮನು, ಆಡಿ ಮಾಡು ವವ ಮಧ್ಯಮನು, ಆಡಿಯೂ ಮಾಡದವ ಅಧಮನು’ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಆದರೆ ನಾವು ಯಾವ ಗುಂಪಿಗೆ ಸೇರಿದವರು ಎನ್ನುವುದನ್ನು ನಮ್ಮ ಅಂತರಂಗವೇ ಹೇಳಬೇಕು.

Advertisement

ಮಾತು ಮುತ್ತು, ಮಾತು ಜ್ಯೋರ್ತಿ ಲಿಂಗ, ಆಡುವ ಮೊದಲು ಯೋಚಿಸು, ನುಡಿದಂತೆ ನಡೆಯಬೇಕು, ಇಲ್ಲವಾದರೆ ಸುಮ್ಮನಿರಬೇಕು ಎನ್ನುವ ಅದೆಷ್ಟೋ ವಿಚಾರಗಳು ನಮಗೆ ತಿಳಿದಿದ್ದರೂ ಸಹ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹೊರಿಸಿ ನಾವು ನಿಶ್ಚಿಂತರಾಗಿ ಮಾತನಾ ಡುವಾಗ, ಮೇಲೆ ಹೇಳಿದ ಯಾವುದೇ ಮಾತಿನ ಕುರಿತು ಯೋಚಿಸುವುದಿಲ್ಲ.

“ಅಧಿಕಾರ ಬೇಕು ಜವಾಬ್ದಾರಿ ಬೇಡ’ ಎನ್ನುವ ಹಂಬಲವೇ ಈಗ ಜಾಸ್ತಿ. ಯಾವುದೇ ಒಂದು ಕೆಲಸ ಕಷ್ಟ -ಸುಖ ಗಳನ್ನು ಎದುರಿಸುತ್ತ ಸತತ ಪ್ರಯತ್ನದ ಮೂಲಕ ಮುನ್ನಡೆಯುತ್ತಿರುವಾಗ ಅದರ ಕುರಿತಾಗಲೀ ಆ ಕೆಲಸದಲ್ಲಿರುವವರು ಎದುರಿಸುತ್ತಿರುವ ಸಮಸ್ಯೆಯ ಕುರಿತು ಸ್ವಲ್ಪವೂ ಆಲೋಚಿಸದ ನಾವು ಆ ಕೆಲಸ ಉತ್ತಮವಾಗಿ ನಡೆದು ಅದನ್ನು ಸಮಾಜ ಗುರುತಿಸುವ ಸ್ಥಿತಿಗೆ ತಲುಪಿದೆ ಎನ್ನವಾಗ ದಿಢೀರನೆ ಎಚ್ಚರಗೊಳ್ಳುತ್ತೇವೆ. ಆ ಕೆಲಸ ಹಾಗೆ ಮಾಡಬೇಕಿತ್ತು, ಹೀಗಿದ್ದರೆ ಚೆನ್ನಾಗಿರುತ್ತಿತ್ತು, ನನ್ನಲ್ಲಿ ಕೇಳಿದ್ದರೆ ನಾನು ಸಹಾಯ ಮಾಡುತ್ತಿದ್ದೆ ಎನ್ನುವ ಮೂದಲಿಕೆಯ ಮಾತುಗಳು ಶುರುವಾ ಗುತ್ತವೆ. ಆದರೆ ಅದೇ ಕೆಲಸ ನಮಗೇ ಒಂದು ಸವಾಲಾಗಿದ್ದರೆ ಅದನ್ನು ಎದುರಿ ಸುವ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ ಆಗ ನಮಗೆ ತಿಳಿಯುತ್ತಿತ್ತು ಅದರ ಹಿಂದೆ ಇರುವ ಶ್ರಮವೆಷ್ಟು? ಆ ಯಶಸ್ಸಿನ ಹಿಂದಿ ರುವ ಕಷ್ಟ-ನಷ್ಟಗಳೆಷ್ಟು ಎನ್ನುವುದು.

“ಮನುಷ್ಯನಿಗೆ ಅಹಂಕಾರ ಮಿಶ್ರಿತ ಸ್ವಾಭಿಮಾನವಿರಬೇಕು, ಆದರೆ ದುರ ಹಂಕಾರ ಯಾರನ್ನು ಬೆಳೆಯಲು ಬಿಡು ವುದಿಲ್ಲ’ ಎನ್ನುವ ಮಾತಿನಂತೆ ಜವಾ ಬ್ದಾರಿಯಿಂದ ಕಳಚಿಕೊಂಡವರಿಗೆ ಖಂಡಿತಾ ಅಧಿಕಾರ ಸಿಗುವುದಿಲ್ಲ. ಸಿಕ್ಕಿದರೂ ಇದಕ್ಕೆ ಅರ್ಥವಿಲ್ಲ. ವ್ಯಕ್ತಿ ಯಾವ ಕ್ಷೇತ್ರದಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಂಡು ಪರಿಶ್ರಮಯುಕ್ತ ದುಡಿಮೆ ಮಾಡುತ್ತಾನೋ ಅವನಿಗೆ ಅಧಿಕಾರದ ಹಕ್ಕು, ಮಾತನಾಡುವ ಹಕ್ಕು, ತನ್ನಿಂದ ತಾನೇ ಬರುತ್ತದೆ. ಸಮಾಜವೂ ಅದನ್ನು ಒಪ್ಪುತ್ತದೆ.ಆದರೆ ಅದಕ್ಕೆ ವಿರುದ್ಧವಾದವರನ್ನು ಸಮಾಜ ಖಂಡಿತಾ ಸ್ವೀಕರಿಸಲಾರದು.

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

Advertisement

ಈ ವಿಷಯದಲ್ಲಿ ನಾವು ಬೇರೆ-ಬೇರೆ ಮನೋಭಾವದವರನ್ನು ಕಾಣಬಹುದು. ಒಂದಿಷ್ಟು ಜನ ಏನೋ ಒಂದು ಕೆಲಸ ಮಾಡಿಮಾತನಾಡುವವರು. ಕೆಲವರು ಏನೂ ಮಾಡದೆ ಮಾತನಾಡಲು ತಿಳಿದಿದೆ ಎಂದು ಮಾತನಾಡುವವರು. ಇನ್ನು ಕೆಲ ವರು ಜವಾಬ್ದಾರಿ ಬಯಸದೇ ಕೇವಲ ಅಧಿಕಾರಕ್ಕಾಗಿ ಮಾತನಾಡುವವರು, ಇನ್ನು ಜವಾಬ್ದಾರಿ ವಹಿಸಿಕೊಳ್ಳಲು ಸ್ವಲ್ಪಮಟ್ಟಿನ ಆಸಕ್ತಿ ಇದ್ದರೂ ನನಗೆ ವೈಯಕ್ತಿಕವಾಗಿ ಕರೆ ಕೊಡಲಿಲ್ಲ. ನನ್ನ ಸಹಾಯ ಪ್ರತ್ಯೇಕವಾಗಿ ಕೇಳಲಿಲ್ಲ, ನಾನೇಕೆ ಹೋಗಬೇಕು? ಹಾಗೇನಾದರು ಹೋದರೆ ಅದು ನನ್ನ ಸ್ವಾಭಿಮಾನದ ಪ್ರಶ್ನೆ ಎನ್ನುವವರು. ಇವರ ಅಂತರಾಳದ ಆತ್ಮಕ್ಕೆ ನಿಜವಾಗಲೂ ಸಮಸ್ಯೆಗಳಿಗೆ ಸ್ಪಂದಿಸಿ, ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ನಾನು ಆ ಕೆಲಸ ಮಾಡು
ತ್ತೇನೆ ಎನ್ನುವ ಆತ್ಮಸ್ಥೆರ್ಯ ಖಂಡಿತಾ ಇರುವುದಿಲ್ಲ. “ಕೈಯಲ್ಲಿ ಆಗದೇ ಇರುವವರು ಮೈಯೆಲ್ಲ ಪರಚಿಕೊಂಡರು ಎನ್ನು ವಂತೆ’ ತನ್ನ ಕೈಯ ಲ್ಲಾಗದೇ ಇರುವುದನ್ನು ಬೇರೆಯವರು ಮಾಡಿದರೆ ಅಸೂಯೆ ಪಡುವ ಪ್ರವೃತ್ತಿ ಇವರದ್ದು.

ಉಪದೇಶ ನೀಡುವುದು ಸುಲಭ, ಪಾಲಿಸುವುದು ಕಷ್ಟ. ಮಾತನಾಡುವುದು ಸುಲಭ, ಮಾಡುವುದು ಕಷ್ಟ. ಆದ್ದರಿಂದ ಏನನ್ನು ಮಾಡದೇ ಮಾಡಿದ ಕೆಲಸಕ್ಕೆ ಸರಿ-ತಪ್ಪುಗಳನ್ನು ಹೇಳುತ್ತಾ ತಮ್ಮನ್ನೇ ತಾವು ಅಧಮರೆನಿಸಿಕೊಳ್ಳುವುದನ್ನು ಈಗಿಂದೀಗಲೇ ನಿಲ್ಲಿಸೋಣ. ಸರ್ವರಿಗೂ ಉಪಕಾರಿಯಾಗುವ, ಸಮಾಜಕ್ಕೆ ಒಳಿತಾಗುವ ಕೆಲಸಗಳಿದ್ದರೆ ಆಡಿ ಸಮಯ ಹಾಳು ಮಾಡುವುದಕ್ಕಿಂತ ಅದೇನೆಂದು ನೋಡಿ ಬರುವುದು ಉತ್ತಮವಲ್ಲವೇ? ಇತರರ ನೋವು ಮತ್ತು ಸಂತೋಷವನ್ನು ನೋಡಿ, ಕೇಳಿ ಹಂಚಿಕೊಳ್ಳಬಹುದು ಆದರೆ ಅನುಭವಿಸಲಾರೆವು ತಾನೇ? ಸಾಧ್ಯವಾದರೆ ಇತರರಿಗೆ ಸಹಾಯ ಮಾಡುವ ಇಲ್ಲವಾ ದರೆ ತೊಂದರೆ ಕೊಡುವ ಕೆಲಸಕ್ಕೆ ಹೋಗು ವುದು ಖಂಡಿತಾ ಒಳ್ಳೆಯದಲ್ಲ. ಪರರನ್ನು ಹಳಿಯುವ ಬುದ್ಧಿ ನಮ್ಮದಾಗದಿರಲಿ.

-ವಾಣಿಶ್ರೀ ಭಂಡಾರಿ ಅಮ್ಮಂಜೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next