Advertisement

ಮುಂಗಾರು ಪೂರ್ವ ಮಳೆ: ಕೃಷಿ ಕಾರ್ಯ ಚುರುಕು

06:30 PM May 13, 2023 | Team Udayavani |

ಅರಕಲಗೂಡು: ತಾಲೂಕಿನಲ್ಲಿ ಉತ್ತಮವಾದ ಮುಂಗಾರು ಪೂರ್ವ ಮಳೆ ಬೀಳುತಿದ್ದು, ರೈತರು ಕೃಷಿ ಚಟುವಟಿಯಲ್ಲಿ ನಿರತ ವಾಗಿರುವುದು ಕಂಡುಬಂದಿದೆ.

Advertisement

ವಾಡಿಕೆಗಿಂತ ಶೇ.90ರಷ್ಟು ಪೂರ್ವ ಮುಂಗಾರು ಮಳೆ ಪಟ್ಟಣ ಸೇರಿದಂತ್ತೆ ತಾಲೂಕಿನಾದ್ಯಂತ ಬಿದ್ದಿದೆ. ಈ ಪರಿಣಾಮ ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು, ಮೆಕ್ಕೆ ಜೋಳ ಬಿತ್ತನೆ ಆರಂಭಗೊಂಡಿದೆ. ಆಲೂಗಡ್ಡೆ ಬಿತ್ತನೆ ಬೀಜ ಮಾರುಕಟ್ಟೆಗೆ ಬಂದಿದ್ದು, ಬಿತ್ತನೆ ಮಾತ್ರ ವಾರದಲ್ಲಿ ಪ್ರಾರಂಭಗೊಳ್ಳಬೇಕಿದೆ. ಜನವರಿಯಿಂದ ಮೇ ವರೆಗಿನ ವಾಡಿಕೆ ಮಳೆ ಪ್ರಮಾಣ 108 ಮಿ.ಮೀ.ಇದ್ದು, ಮೇ 9ರ ಅಂತ್ಯಕ್ಕೆ 220 ಮಿ.ಮೀ.ಮಳೆಯಾಗಿದೆ. ಇದು ರೈತರಿಗೆ ವರದಾನವಾಗಿ ಕೃಷಿ ಚಟುವಟಿಕೆ ಚುರುಕುಗೊಳ್ಳಲು ನೆರವಾಗಿದೆ.

ಕೃಷಿ ಕಾರ್ಯ ಬಿರುಸು: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಬಿತ್ತನೆ ಕೈಗೊಳ್ಳುವ ದೊಡ್ಡಮಗ್ಗೆ, ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದ್ದು ತಂಬಾಕು ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಕಸಬಾ ಹೋಬಳಿ ಮತ್ತು ಮಲ್ಲಿ ಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಿದ್ದು, ಈ ಭಾಗದಲ್ಲಿ ಪ್ರಮುಖವಾಗಿ ಕೈಗೊಳ್ಳುವ ಮೆಕ್ಕೆ ಜೋಳ, ಆಲೂಗಡ್ಡೆ, ರಾಗಿ ಬಿತ್ತನೆಗೆ ಸ್ವಲ್ಪಮಟ್ಟಿನ ಹಿನ್ನೆಡೆ ಆಗಿದೆ. ಮಳೆ ಪ್ರಮಾಣ ಮತ್ತಷ್ಟು ಅಧಿಕಗೊಂಡರೇ ಕೃಷಿ ಕಾಯಕ ಬಿರುಸು ಗೊಳ್ಳುವ ಸಾಧ್ಯತೆ ಇದೆ.

ಕೃಷಿ ಚಟುವಟಿಕೆ, ಬೆಳೆ ವಿವರ: ತಾಲೂಕಿನಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ 33,770 ಹೆಕ್ಟೇರ್‌ ಕೃಷಿ ಪ್ರದೇಶದ ಗುರಿಹೊಂದಲಾಗಿದ್ದು, ಈ ವರೆಗೆ ವಿವಿಧ ಬೆಳೆಗಳು ಸೇರಿ 3011ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಇದರಲ್ಲಿ ತಂಬಾಕು ಬಿತ್ತನೆ ಚುರುಕುಗೊಂಡಿದ್ದರೆ, ಮುಸುಕಿನಜೋಳ, ಉದ್ದು, ಹೆಸರು, ಅಲಸಂದೆ, ನೆಲಗಡಲೆ ಹಾಗೂ ಕೂಳೆ ಕಬ್ಬು ಬಿತ್ತನೆ ಕೈಗೊಳ್ಳಲು ರೈತರು ಭೂಮಿಯನ್ನು ಹಸನು ಗೊಳಿಸುವಲ್ಲಿ ನಿರತವಾಗಿದ್ದಾರೆ.

ಬಿತ್ತನೆ ಬೀಜ, ಪರಿಕರಗಳ ದಾಸ್ತಾನು: 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಅರಕಲಗೂಡು ತಾಲೂಕಿಗೆ ಎಲ್ಲಾ ಕೃಷಿ ಬೆಳೆಗಳು ಸೇರಿದಂತೆ 2054 ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲು ಗುರಿ ನಿಗಧಿಯಾಗಿರುತ್ತದೆ. ತಾಲೂಕಿನ ಎಲ್ಲ 5 ಹೋಬಳಿಗಳಲ್ಲಿ (ಕಸಬಾ, ದೊಡ್ಡಮಗ್ಗೆ, ರಾಮನಾಥಪುರ, ಕೊಣನೂರು ಮತ್ತು ಮಲ್ಲಿಪಟ್ಟಣ) ಅಗತ್ಯತೆಗೆ ತಕ್ಕಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ, ಉದ್ದು (5 ಕೆ.ಜಿ.ಬ್ಯಾಗ್‌) ಹಾಗೂ ಮುಸುಕಿನಜೋಳ (4 ಕೆ.ಜಿ.ಬ್ಯಾಗ್‌) ಬಿತ್ತನೆ ಬೀಜ ದಾಸ್ತಾನಿದ್ದು, ಕೃಷಿ ಪರಿಕರಗಳಾದ ಜಿಂಕ್‌ ಸಲ್ಪೇಟ್‌, ಬೋರಾಕ್ಸ್‌ (ಲಘು ಪೋಷಕಾಂಶಗಳು), ಸಸ್ಯ ಸಂರಕ್ಷಣಾ ಐಷಗಳು ರೈತರಿಗೆ ಲಭ್ಯವಿರುತ್ತವೆ. ಪ್ರಸ್ತುತ್ತ ಆಲಸಂದೆ, ಉದ್ದು ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ದಾಸ್ತಾನು ಸ್ವೀಕೃತವಾಗಿರುತ್ತದೆ.

Advertisement

ರಸಗೊಬ್ಬರ ದಾಸ್ತಾನು: ತಾಲೂಕಿಗೆ ಮುಂಗಾರು ಹಂಗಾಮಿಗೆ ಒಟ್ಟಾರೆಯಾಗಿ 23800 ಟನ್‌ ರಸಗೊಬ್ಬರ ಸರಬರಾಜು ಅಗತ್ಯವಿದ್ದು ತಾಲೂಕಿನ 5 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, 1 ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ ಹಾಗೂ 59 ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ರಸಗೊಬ್ಬರ ದಾಸ್ತಾನು ಹಾಗೂ ವಿತರಣೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರಸ್ತುತ್ತ ಏಪ್ರೀಲ್‌ ಅಂತ್ಯಕ್ಕೆ 3280 ಟನ್‌ ವಿವಿಧ ರಸಗೊಬ್ಬರಗಳ ದಾಸ್ತಾನು ಲಭ್ಯವಿರುತ್ತದೆ. ಹಾಗೂ ತಂಬಾಕು ಮಂಡಳಿ ಪ್ಲಾಟ್‌ ಫಾರಂ-7 ಮತ್ತು 63ರಲ್ಲಿ ಪ್ರತ್ಯೇಕ ವಾಗಿ 5800ಟನ್‌ ರಸಗೊಬ್ಬರ ದಾಸ್ತಾನಿದ್ದು ತಂಬಾಕು ಬೆಳೆಗಾರರಿಗೆ ತಂಬಾಕು ಮಂಡಳಿ ವತಿಯಿಂದ ವಿತರಿಸಲಾಗುತ್ತಿದೆ.

ಮಳೆ ವಿವರ: ಜನವರಿ ಒಂದರಿಂದ ಮೇ 9ರವರೆಗೆ ಬಿದ್ದ ಮಳೆವಿವರ ಇಂತಿದೆ. ಅರಕಲಗೂಡು ತಾಲೂಕಿನಾದ್ಯಂತ ಒಟ್ಟು 92ಮಿ.ಮೀ ಮಳೆ ಬಿದ್ದಿದೆ. ಕಸಬಾ ಹೋಬಳಿ 75 ಮಿ.ಮೀ.ದೊಡ್ಡಮಗ್ಗೆ 99ಮಿ. ಮೀ.ಕೊಣನೂರು 110ಮಿ.ಮೀ.ಮಲ್ಲಿಪಟ್ಟಣ 66ಮಿ.ಮೀ. ಹಾಗೂ ರಾಮನಾಥಪುರ 115ಮಿ. ಮೀ.ಮಳೆಯಾಗಿದೆ.

ತಾಲೂಕಿನಲ್ಲಿ ವಾಡಿಕೆಗಿಂತ ಮುಂಚೆಯೇ ಮಳೆಯಾಗುತಿದ್ದು, ಈ ಅವಧಿಯಲ್ಲಿ ಕೈಗೊಳ್ಳಬೇಕಾದ ಬಿತ್ತನೆಯನ್ನು ರೈತರು ಕೈಗೊಳ್ಳಬಹುದಾಗಿದೆ. ರೈತ ಬಾಂಧವರು ಆಧಾರ್‌ಕಾರ್ಡ್‌ ಮತ್ತು ಪಹಣಿ, ಪಟ್ಟೆ ಪುಸ್ತಕ, ಹಿಡುವಳಿ ಪತ್ರವನ್ನು ತಂದು, ಲಭ್ಯವಿರುವ ಕೃಷಿ ಪರಿಕರಗಳನ್ನು ಖರೀದಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. – ರಮೇಶ್‌ ಕುಮಾರ್‌, ತಾಲೂಕು ಸಹಾಯಕ ಕೃಷಿ ನಿರ್ದೇಶಕರು.

ಪೂರ್ವ ಮುಂಗಾರು ಮಳೆ ಬೀಳುತ್ತಿರುವ ಹಿನ್ನೆಲೆ ಭೂಮಿ ಹದಗೊಳಿಸಲು, ಕೃಷಿ ಕಾಯಕದಲ್ಲಿ ತೊಡಗಲು ಸಹಕಾರಿಯಾಗಿದೆ. ಆದರೆ, ಏರಿಕೆಯಾಗಿರುವ ರಸಗೊಬ್ಬರ ಬೆಲೆಯಿಂದ ನಿರೀಕ್ಷಿತ ಕೃಷಿಯನ್ನು ಕೈಗೊಳ್ಳಲು ತುಂಬಾ ತೊಂದರೆಯಾಗಿದೆ. ರಸಗೊಬ್ಬರ ಖರೀದಿಗೆ ಸಹಾಯ ಧನವನ್ನು ಸರಕಾರ ನೀಡಬೇಕಿತ್ತು. – ಸಣ್ಣಯ್ಯ, ನೇಗೆರೆ ಗ್ರಾಮದ ರೈತ.

-ವಿಜಯ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next