Advertisement

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

03:09 AM Oct 14, 2024 | Team Udayavani |

ದೇಶದಲ್ಲಿ ಯುವಜನರು ಪಡೆಯುವ ಶಿಕ್ಷಣಕ್ಕೆ ಅನುಸಾರವಾಗಿ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಹಳೆಯ ಆರೋಪ. ಅದಕ್ಕೆ ಪೂರಕವಾಗಿ ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ­ಮೂರ್ತಿ ಅವರು ಎಂಜಿನಿಯರಿಂಗ್‌ ಪದವೀಧರರನ್ನು ಕೇಂದ್ರೀಕರಿಸಿ ಹೆಚ್ಚಿನವರಿಗೆ ಪ್ರಾಯೋಗಿಕ ಕಲಿಕೆಯ ಅನುಭವ ಇಲ್ಲವೆಂದಿದ್ದರು. ಆ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ‌ ಒಂದು ಹೆಜ್ಜೆ ಮುಂದಿಟ್ಟಿದೆ. ಕಾಲೇಜು ಶಿಕ್ಷಣ ಪಡೆಯುವರಿಗೆ ಉದ್ಯೋಗ ಕ್ಷೇತ್ರದಲ್ಲಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಪ್ರಾಯೋಗಿಕ ತರಬೇತಿ ಪಡೆಯಲು ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆಯಲ್ಲಿ ವಿಜಯ ದಶಮಿಯಿಂದ ನೋಂದಣಿಗೆ ಅವಕಾಶ ನೀಡಲಾಗಿದೆ. ಆ ಯೋಜನೆಯತ್ತ ಒಂದು ನೋಟ.

Advertisement

ಏನಿದು ಪ್ರಧಾನಮಂತ್ರಿ ಇಂಟರ್ನ್ಶಿಪ್‌?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ‌ 3ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಜು.24ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದ ಬಜೆಟ್‌ನಲ್ಲಿ ಈ ಯೋಜನೆ ಜಾರಿ ಬಗ್ಗೆ ಪ್ರಕಟಿಸಲಾಗಿತ್ತು. ಅದಕ್ಕೆ ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ ಎಂದೂ ವಿತ್ತ ಸಚಿವರು ಘೋಷಿಸಿದ್ದರು. ದೇಶದ ಟಾಪ್‌ 500 ಕಂಪೆನಿಗಳಲ್ಲಿ ಕಾಲೇಜು ಶಿಕ್ಷಣ ಪಡೆದ ಯುವಕ, ಯುವತಿಯರಿಗೆ ಪ್ರಾಯೋಗಿಕ ತರಬೇತಿ (ಇಂಟರ್ನ್ಶಿಪ್‌)ಯನ್ನು ಈ ಯೋಜನೆಯಡಿ ನೀಡುವುದೇ ಇದರ ಉದ್ದೇಶ. ಕೇಂದ್ರ ಸರಕಾರ‌ ಸದ್ಯ ಹೊಂದಿರುವ ಮೀಸಲಾತಿ ನಿಯಮಗಳು ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆಗೂ ಅನ್ವಯ ಆಗಲಿದೆ

ಇಂಟರ್ನ್ಶಿಪ್‌ ಅವಧಿ ಎಷ್ಟು?
ಒಟ್ಟು ಅವಧಿ 12 ತಿಂಗಳು ಅಥವಾ 1 ವರ್ಷ. ಆದರೆ ಪ್ರಾಯೋಗಿಕವಾಗಿ ತರಬೇತಿ ಅವಧಿ 6 ತಿಂಗಳು. ಈ ಅವಧಿಯಲ್ಲಿ ತರಬೇತಿ ಪಡೆಯಲು ಅರ್ಹರಾದವರು ನಿಗದಿತ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆಗಳು ಹೇಗೆ ನಡೆಯಲಿವೆ?
ಅಂದ ಹಾಗೆ ಇಂಟರ್ನ್ಶಿಪ್‌ ಯೋಜನೆಗೆ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ. ಅದು ಅ.7ರಿಂದ ನ.7ರ ವರೆಗೆ ನಡೆಯಲಿದೆ. ನ.8ರಿಂದ ನ.15ರ ವರೆಗೆ ಆಯ್ಕೆಯಾದವರಿಗೆ ಆಫ‌ರ್‌ ಲೆಟರ್‌ಗಳನ್ನೂ ನೀಡಲಾಗುತ್ತದೆ. ಈ ವರ್ಷದ ಡಿ.2ರಿಂದ ತರಬೇತಿ ಕಾರ್ಯಕ್ರಮವೂ ಆರಂಭವಾಗಲಿದೆ.

ತರಬೇತಿ ಪಡೆಯುವವರಿಗೆ ಸ್ಟೈಪೆಂಡ್‌
ಅಂದ ಹಾಗೆ ಈ ತರಬೇತಿ ಪಡೆಯುವವರಿಗೆ ಪುಕ್ಕಟೆ ತರಬೇತಿ ನೀಡಲಾಗುವುದಿಲ್ಲ. ಪ್ರತಿ ತಿಂಗಳು ಕೇಂದ್ರ ಸರಕಾರ‌ದ ವತಿಯಿಂದ 4500 ರೂ. ಮತ್ತು ಅವರು ತರಬೇತಿ ಪಡೆಯುವ ಕಂಪೆ‌ನಿಯಿಂದ ಹೆಚ್ಚುವರಿಯಾಗಿ 500 ರೂ. ಅನ್ನು ನೀಡ ಲಾಗುತ್ತದೆ. ಹೀಗೆ ಅವರಿಗೆ ಒಟ್ಟು 5,000 ರೂ. ಮೊತ್ತವನ್ನು ತರಬೇತಿ ಪಡೆಯುವವರ ಖಾತೆಗೆ ಜಮೆ ಮಾಡಲಾಗುತ್ತದೆ. ಇದಲ್ಲದೆ ಏಕಕಂತಿನ ಸಹಾಯಧನವಾಗಿ 6,000 ರೂ.ಗಳನ್ನೂ ಇಂಟರ್ನ್ಶಿಪ್‌ ಪಡೆಯುವವರಿಗೆ ನೀಡಲಾಗುತ್ತದೆ.

Advertisement

ಕೇಂದ್ರ ಸರಕಾರ‌ವೇ ಕೊಡಲಿದೆ ವಿಮೆ
ತರಬೇತಿ ಪಡೆಯುವವರ ಕ್ಷೇಮ ಪಾಲನೆಯ ಅಗತ್ಯವನ್ನು ಮನಗಂಡಿರುವ ಕೇಂದ್ರ ಸರಕಾರ‌ ಪ್ರಧಾನಮಂತ್ರಿ ಜೀವನ ವಿಮೆ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಅಡಿ ವಿಮೆಯನ್ನು ನೀಡುತ್ತದೆ. ಅದರ ಪ್ರೀಮಿಯಂ ಮೊತ್ತ ವನ್ನೂ ಕೇಂದ್ರ ಸರಕಾರ‌ವೇ ಭರಿಸಲಿದೆ.

ಹಲವು ಕ್ಷೇತ್ರಗಳಲ್ಲಿ ಇಂಟರ್ನ್ಶಿಪ್‌ ಲಭ್ಯ
ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆಯ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ರಾಸಾಯನಿಕ ಕ್ಷೇತ್ರ, ಎಫ್ಎಂಸಿಜಿ, ಆರೋಗ್ಯ, ಗೃಹ, ಮೂಲಸೌರ್ಯ ಮತ್ತು ನಿರ್ಮಾಣ, ಐ.ಟಿ. ಮತ್ತು ಸಾಫ್ಟ್ವೇರ್‌ ಅಭಿವೃದ್ಧಿ, ಕೈಗಾರಿಕೆ ಮತ್ತು ಉತ್ಪಾದನಾ ವಲಯ, ಮಾಧ್ಯಮ, ಮನರಂಜನೆ ಮತ್ತು ಶಿಕ್ಷಣ, ಗಣಿ­ಗಾರಿಕೆ, ತೈಲ, ಅನಿಲ ಮತ್ತು ಇಂಧನ, ದೂರಸಂಪರ್ಕ, ಜವುಳಿ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರ, ಕೃಷಿ ಮತ್ತು ಸಹವರ್ತಿ ಕ್ಷೇತ್ರಗಳು, ವಾಹನೋದ್ಯಮ, ನಾಗರಿಕ ವಿಮಾನ ಯಾನ ಮತ್ತು ರಕ್ಷಣೆ, ಬ್ಯಾಂಕಿಂಗ್‌ ಮತ್ತು ವಿತ್ತೀಯ ಸೇವಾ ಕ್ಷೇತ್ರಗಳಲ್ಲಿ ತರಬೇತಿ ಪಡೆಯುವ ಅವಕಾಶ ಇದೆ.

ಯಾವ ಯಾವ ಕಂಪೆನಿಗಳು?
ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಅಲೆಂಬಿಕ್‌, ಶೋಭಾ, ಮ್ಯಾಕ್ಸ್‌ ಲೈಫ್ ಇನ್ಶೂರೆನ್ಸ್‌ ಸೇರಿದಂತೆ ಪ್ರಮುಖ ಕಂಪೆನಿಗಳಲ್ಲಿ ಪ್ರಾಯೋಗಿಕ ತರಬೇತಿಯ ಅವಕಾಶ ಇದೆ.

ಅರ್ಜಿ ಸಲ್ಲಿಸಲು ಅ.25 ಕೊನೆಯ ದಿನ
ಅಂದ ಹಾಗೆ ನೆನಪಿಡಿ. ಅ.3ರಂದೇ pminternship.mca.gov.in. ವೆಬ್‌ಸೈಟ್‌ ಆರಂಭವಾಗಿದೆ. ಈ ಬಾರಿಯ ವಿಜಯದಶಮಿಯ ದಿನ, ಅ.12ರಿಂದ ಅ.25ರ ಒಳಗಾಗಿ ಯೋಜನೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಇರುವ 21-24 ವರ್ಷ ವಯೋಮಿತಿಯರು ಅರ್ಜಿ ಹಾಕಿಕೊಳ್ಳಲು ಅವಕಾಶ ಇದೆ.

ಈಗಾಗಲೇ 200 ಕಂಪೆನಿಗಳ ನೋಂದಣಿ
ಹಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಕೇಂದ್ರ ಸರಕಾರ‌ದ ಪ್ರಯತ್ನಕ್ಕೆ ಇಂಬು ಕೊಡುವ ನಿಟ್ಟಿನಲ್ಲಿ ಈಗಾಗಲೇ 200 ಕಂಪೆನಿಗಳು ಇಂಟರ್ನ್ಶಿಪ್‌ ಯೋಜನೆಗೆ ನೋಂದಣಿ ಮಾಡಿಕೊಂಡಿವೆ. ಪ್ರಸಕ್ತ ವರ್ಷದಲ್ಲಿ 1.2 ಲಕ್ಷ ಇಂಟರ್ನ್ಶಿಪ್‌ ಅವಕಾಶಗಳನ್ನು ನೀಡಲಾಗುತ್ತದೆ. ಅಕ್ಟೋಬರ್‌ 9ರವರೆಗೆ 130 ಕಂಪೆನಿಗಳು 50000 ಪ್ರಾಯೋಗಿಕ ತರಬೇತಿ ಅವಕಾಶ ಇರುವ ಬಗ್ಗೆ ಘೋಷಣೆ ಮಾಡಿಕೊಂಡಿವೆ. ಹಾಗಾಗಿ, ಆರಂಭದಲ್ಲೇ ಈ ಯೋಜನೆಗೆ ಭಾರೀ ಯಶಸ್ಸಿನ ನಿರೀಕ್ಷೆಗಳು ಮೂಡಿವೆ.

ಈ ಯೋಜನೆಯಿಂದ ಯಾರಿಗೆ ಲಾಭ?
ಇಂಟರ್ನ್ಶಿಪ್‌ ಯೋಜನೆಯಿಂದ ಆಯಾ ಕ್ಷೇತ್ರದ ಉದ್ಯಮ ಕ್ಷೇತ್ರದ ಆಗುಹೋಗುಗಳು, ಅವರು ಕಲಿತ ವಿಚಾರಗಳು ಮತ್ತು ಅದನ್ನು ನಿಜವಾದ ಉದ್ದಿಮೆ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಯಾವ ರೀತಿ ಅನುಷ್ಠಾನ ಮಾಡಲಾಗುತ್ತದೆ ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ಕಂಪೆನಿಗಳು ಕೂಡ ಶಿಕ್ಷಣ ಸಂಸ್ಥೆಗಳ ಜತೆಗೆ ಈ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಸಹಭಾಗಿತ್ವ ಹೊಂದಲು ಅವಕಾಶ ಕಲ್ಪಿಸಲಾಗಿದೆ.

ಆಯಾ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿ ಪಡೆಯುವುದರಿಂದ ಕೌಶಲ ಅಭಿವೃದ್ಧಿಯಾಗು­ವುದಲ್ಲದೆ, ಉದ್ಯೋಗ ಪಡೆಯಲೂ ಅನುಕೂಲವಾಗುತ್ತದೆ ಎನ್ನುವುದು ಕೇಂದ್ರ ಸರಕಾರ‌ದ ಪ್ರತಿಪಾದನೆ. ವಿಶೇಷವಾಗಿ ಉನ್ನತ ಶಿಕ್ಷಣ ಪಡೆಯಲು ಅಸಾಧ್ಯವಾದವರಿಗೆ, ವಿಶೇಷ ಕೌಶಲಗಳ ಬಗ್ಗೆ ದುಬಾರಿ ಶುಲ್ಕ ನೀಡಿ ತರಬೇತಿ ಪಡೆಯಲು ಅಸಾಧ್ಯವಾಗುವವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಈ ಇಂಟರ್ನ್ ಶಿಪ್‌ ಯೋಜನೆಯಿಂದ ಹೆಚ್ಚು ಲಾಭವಾಗಲಿದೆ.

ಆದಾಯ 8 ಲಕ್ಷಕ್ಕಿಂತ ಹೆಚ್ಚಿದ್ದರೆ ಅರ್ಹರಲ್ಲ
ಐಐಎಂ, ಐಐಟಿ, ಇಂಡಿಯನ್‌ ಇನ್‌ಸ್ಟಿಟ್ಯೂಟ್ಸ್‌ ಆಫ್ ಸೈನ್ಸ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ (ಐಐಎಸ್‌ಇಆರ್‌), ಪ್ರತಿಷ್ಠಿತ ಕಾನೂನು ಕಾಲೇಜು/ವಿವಿಗಳಲ್ಲಿ ಅಧ್ಯಯನ ಮಾಡಿದವರಿಗೆ ಈ ಯೋಜನೆಗೆ ಅರ್ಹರಲ್ಲ. ಪೂರ್ಣ ಪ್ರಮಾಣದಲ್ಲಿ ಉದ್ಯೋಗದಲ್ಲಿದ್ದವರಿಗೂ ಈ ಯೋಜನೆ ಲಾಭ ಸಿಗದು. ರಾಷ್ಟ್ರೀಯ ತರಬೇತಿ ಪಡೆಯುವ ಯೋಜನೆ (ಎನ್‌ಎಟಿಎಸ್‌) ಅಥವಾ ಎನ್‌ಎಪಿಎಸ್‌ ವ್ಯಾಪ್ತಿಯಲ್ಲಿ ಈಗಾಗಲೇ ತರಬೇತಿ ಪಡೆದಿದ್ದರೂ, ಹೊಸ ಯೋಜನೆಯಲ್ಲಿ ತರಬೇತಿ ಪಡೆಯಲು ಸಾಧ್ಯವಾಗದು. 2023-24ನೇ ಸಾಲಿನಲ್ಲಿ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಳಿಗಿಂತ ಹೆಚ್ಚಾಗಿದ್ದವರು ಅರ್ಹರಲ್ಲ. ಸ್ನಾತಕೋತ್ತರ, ವೃತ್ತಿಪರ ಶಿಕ್ಷಣ ಪಡೆದ (ವೈದ್ಯ, ಸಿಎ, ಸಿಎಸ್‌) ವರಿಗೆ ಈ ಯೋಜನೆಯ ಲಾಭ ಸಿಗಲಾರದು. ಜತೆಗೆ ಸರಕಾರಿ ಉದ್ಯೋಗ ಇರುವವ ಮಕ್ಕಳಿಗೂ ಇಲ್ಲ.

ಯಾರು ಅರ್ಹರು?:
ಯೋಜನೆಯ ಲಾಭ ಪಡೆಯಲು ಬಿಎ., ಬಿಎಸ್‌ಸಿ., ಬಿಕಾಂ., ಬಿಸಿಎ., ಬಿಬಿಎ ಸೇರಿದಂತೆ ಯಾವುದೇ ಪದವಿ, ಪ್ರೌಢಶಾಲಾ ಶಿಕ್ಷಣ, ಐಟಿಐ, ಡಿಪ್ಲೊಮಾ ಪದವಿ ಪಡೆದ 21 ವರ್ಷಗಳಿಂದ 24 ವರ್ಷ ವಯೋಮಿತಿಯವರು ಅರ್ಹರು.


– ಸದಾಶಿವ .ಕೆ.

Advertisement

Udayavani is now on Telegram. Click here to join our channel and stay updated with the latest news.

Next