Advertisement

ರಕ್ತಸಿಕ್ತ ‘ಕೆಜಿಎಫ್’ಸಾಮ್ರಾಜ್ಯದ ಹೊಸ ಅಧ್ಯಾಯ

09:27 AM Mar 28, 2022 | Team Udayavani |

“ಕೆಜಿಎಫ್ ನಲ್ಲಿ ಗರುಡನ ಸಾಯಿಸಿದ ಮೇಲೆ ಮುಂದೇನಾಯ್ತು…? ನೀವು ಓದ್ತೀರಾ..?’ ಹೀಗೆ ಹೇಳುತ್ತಿದ್ದಂತೆ, “ಕೆಜಿಎಫ್’ನ ರಕ್ತಸಿಕ್ತ ಅಧ್ಯಾಯದ ತುಣುಕುಗಳು, ಪಾತ್ರಗಳು ಶರವೇಗದಲ್ಲಿ ಕಣ್ಮುಂದೆ ಸುಳಿದು ಮರೆಯಾಗುತ್ತವೆ. ಅದರ ಬೆನ್ನಲ್ಲೇ “ರಕ್ತದಿಂದ ಬರೆದಿರೋ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಅಂದ್ರೆ, ಮತ್ತೆ ರಕ್ತನೇ ಕೇಳುತ್ತೆ..’ ಎಂಬ ಸಂಭಾಷಣೆಗಳು. ಅದರ ಹಿಂದೆ “ಅಧೀರ’ನಾಗಿ ಸಂಜಯ್‌ ದತ್‌ ರಗಡ್‌ ಎಂಟ್ರಿ. “ಅಲ್ಲಿ ಬೀಳುವ ಹೆಣಗಳೂ ಉಪಯೋಗಕ್ಕೆ ಬರುತ್ತದೆ, ಬೇಕಿದ್ದರೆ ರಣ ಹದ್ದುಗಳನ್ನು ಕೇಳು…’ ಎಂಬ ಬ್ಯಾಕ್‌ ಟು ಬ್ಯಾಕ್‌ ಖಡಕ್‌ ಮಾಸ್‌ ಡೈಲಾಗ್ಸ್‌, ಅದಕ್ಕೆ ಇಂಬು ನೀಡುವಂಥ ಬ್ಯಾಗ್ರೌಂಡ್‌ ಸ್ಕೋರ್‌. ಒಂದೇ ಮಾತಿನಲ್ಲಿ ಹೇಳುವುದಾದರೆ, ನಾಲ್ಕುವರೆ ವರ್ಷಗಳಿಂದ ಕಾತುರದಿಂದ ಕಾದು ಕುಳಿತಿದ್ದ ಸಿನಿಪ್ರಿಯರ ಅದರಲ್ಲೂ ಯಶ್‌ ಅಭಿಮಾನಿಗಳ ನಿರೀಕ್ಷೆಯನ್ನ, ಎದೆಬಡಿತವನ್ನು ಮತ್ತಷ್ಟು ಹೆಚ್ಚಿಸಿದ ಝಲಕ್‌!

Advertisement

ಇದು ಭಾನುವಾರ ಸಂಜೆ ಬಿಡುಗಡೆಯಾಗಿರುವ ಬಹುನಿರೀಕ್ಷಿತ “ಕೆಜಿಎಫ್-2′ ಸಿನಿಮಾದ ಟ್ರೇಲರ್‌ನಲ್ಲಿ ಕಂಡುಬಂದ ಸಣ್ಣ ತುಣುಕುಗಳು. ಸುಮಾರು 2.56 ನಿಮಿಷದ “ಕೆಜಿಎಫ್-2′ ಟ್ರೇಲರ್‌ನಲ್ಲಿ ಸಿನಿಮಾದ ಕಥೆಯ ಸಣ್ಣ ಎಳೆ, ಬೃಹತ್‌ ಕಲಾವಿದರ ದಂಡು, ಶಾರ್ಪ್‌ ಡೈಲಾಗ್ಸ್‌, ತಾಂತ್ರಿಕ ಕಾರ್ಯಗಳು, ಅದ್ಧೂರಿ ಮೇಕಿಂಗ್‌ ಎಲ್ಲವನ್ನೂ ಅನಾವರಣ ಮಾಡಿದೆ ಚಿತ್ರತಂಡ.

ಇದನ್ನೂ ಓದಿ:ಗುಜರಾತ್‌ ಟೈಟಾನ್ಸ್‌- ಲಕ್ನೋ ಸೂಪರ್‌ ಜೈಂಟ್ಸ್‌: ನೂತನ ತಂಡಗಳ ರಂಗಪ್ರವೇಶ

“ಕೆಜಿಎಫ್’ ಮೊದಲ ಭಾಗವನ್ನೂ ಮೀರಿಸುವಂಥ ಅಂಶಗಳು ಎರಡನೇ ಭಾಗದಲ್ಲಿ ನಿರೀಕ್ಷಿಸಬಹುದು ಎಂಬ ಭಾವನೆ ಟ್ರೇಲರ್‌ ನೋಡಿದವರಿಂದ ವ್ಯಕ್ತವಾಗುವಂತಿದೆ. “ಕೆಜಿಎಫ್’ನಲ್ಲಿ ಗರುಡನನ್ನು ಹತ್ಯೆ ಮಾಡಿದ ನಂತರ ಆ ಸಾಮ್ರಾಜ್ಯ ರಾಕಿಯ ಕೈ ಸೇರಿದೆ. ನಟೋರಿಯಸ್‌ ಗ್ಯಾಂಗ್‌ ಸ್ಟರ್‌ ಹಾಗೂ ಉದ್ಯಮಿಯಾಗಿ ಬೆಳೆದಿರುವ ರಾಕಿ (ಯಶ್‌) ಪಾತ್ರನ್ನು “ಕೆಜಿಎಫ್-2′ ಟ್ರೇಲರ್‌ನಲ್ಲಿ ಹೈಲೈಟ್‌ ಮಾಡಲಾಗಿದೆ. ಒಂದೆಡೆ ರಾಕಿಗೆ ಎದುರಾಗಿ ಅಬ್ಬರಿಸಲು ಬರುವ ಅಧೀರ (ಸಂಜಯ್‌ ದತ್‌) ಮತ್ತೂಂದೆಡೆ ರಾಕಿಯನ್ನು ಹಣೆಯಲು ರಮಿಕಾ ಸೇನ್‌ (ರವೀನಾ ಟಂಡನ್‌) ಇವರಿಬ್ಬರ ನಡುವಿನ ಕಾಳಗ ಸಿನಿಮಾದಲ್ಲಿ ಹೇಗಿರಬಹುದು ಎಂಬ ಸಣ್ಣ ಸುಳಿವು ಟ್ರೇಲರ್‌ನಲ್ಲಿ ಸಿಕ್ಕಿದಂತಿದೆ.

Advertisement

ಒಟ್ಟಾರೆ “ಕೆಜಿಎಫ್-2′ ಟ್ರೇಲರ್‌ ಬಿಡುಗಡೆಯಾಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲೂ ಜೋರಾಗಿ ಸದ್ದು ಮಾಡುತ್ತಿದ್ದು, ದಾಖಲೆಯ ವೀಕ್ಷಣೆ ಕಾಣುತ್ತಿದೆ. ಸದ್ಯ ಟ್ರೇಲರ್‌ ಬಿಡುಗಡೆಯಾಗಿ ಹಿಟ್‌ ಆಗಿದ್ದು, ಇನ್ನೇನಿದ್ದರೂ, ಸಿನಿ ಪ್ರಿಯರ ಚಿತ್ತ ಏ. 14ರಂದು “ಕೆಜಿಎಫ್-2′ ಬಿಡುಗಡೆಯಾಗುವುದರತ್ತ ನೆಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next