Advertisement

ಓಂಕಾರ ಎಂಬ ಶಕ್ತಿ,ಧ್ಯಾನ ಎಂಬ ಸಾಧನ

09:40 AM Dec 01, 2018 | |

ಓಂ ಎಂಬುದು ಕೇವಲ ಒಂದು ಅಕ್ಷರವಲ್ಲ. ಅದು ಅ,ಉ,ಮ ಎಂಬ ಮೂರು ಅಕ್ಷರಗಳ ಸಂಗಮ. “ಅ’ ಅಂದರೆ ಅಗತ್ಯ, “ಉ’ ಅಂದರೆ ಉದ್ದೇಶ ಹಾಗೂ “ಮ’ ಎಂದರೆ ಮಹತ್ವ ಎಂದು ಅರ್ಥ ಮಾಡಿಕೊಳ್ಳಬೇಕು. ಓಂಕಾರವನ್ನು ಜಪಿಸುವುದರಿಂದ ಏಕಾಗ್ರತೆ ಸಾಧಿಸಲು ಅನುಕೂಲ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. 

Advertisement

ಭಾರತೀಯ ಸಂಸ್ಕೃತಿಯಲ್ಲಿ ಓಂಕಾರಕ್ಕೆ ಅತಿಯಾದ ಮಹಣ್ತೀವಿದೆ. ಪ್ರತಿಯೊಂದು ವೇದಮಂತ್ರವೂ ಓಂಕಾರದಿಂದಲೇ ಆರಂಭವಾಗುತ್ತದೆ. ದೇವರ ನಾಮಸ್ಮರಣೆ ಮಾಡುವಾಗಲೂ ಓಂ ಶಬ್ದದಿಂದಲೇ ಆರಂಭ ಮಾಡಲಾಗುತ್ತದೆ. ಓಂ ಕಾರದ ಮೂಲಕ ಆರಂಭವಾದ ದೇವನಾಮಾರ್ಚನೆಯು ಹೆಚ್ಚು ಪರಿಣಾಮಕಾರಿ ಎಂದು ವೇದದಲ್ಲಿ ಹೇಳಲಾಗಿದೆ. ಓಂ ಎಂಬ ಪದಕ್ಕೆ ವಿಶೇಷವಾದ ಶಕ್ತಿಯಿದೆ. ಓಂಕಾರವು ಧ್ಯಾನದ ಸಾಧನವೂ ಹೌದು. ತಪಸ್ಸನ್ನು ಮಾಡುತ್ತಿರುವವರು ಓಂಕಾರವನ್ನು ಪಠಿಸುತ್ತಾರೆ. ಆ ಮೂಲಕ ಸಿದ್ಧಿಯನ್ನು ಪಡೆಯುತ್ತಾರೆ. ಯೋಗಸಿದ್ಧಿಯಲ್ಲೂ ಓಂಕಾರದ ಬಳಕೆಯಿದೆ. ಓಂ ಎಂಬುದು ಕೇವಲ ಒಂದು ಅಕ್ಷರವಲ್ಲ. ಅದು ಅ ಉ ಮ ಎಂಬ ಮೂರು ಅಕ್ಷರಗಳ ಸಂಗಮ. ಓಂ ಎಂಬುದು ಪ್ರಣವ ಸ್ವರೂಪ.

ಪ್ರಶ್ನೋಪನಿಷತ್ತಿನಲ್ಲಿ ಓಂಕಾರವನ್ನು ಪರಂಬ್ರಹ್ಮ ಮತ್ತು ಅಪರಂಬ್ರಹ್ಮ ಎಂಬ ಎರಡು ಬಗೆಯಲ್ಲಿ ಹೇಳಲಾಗಿದೆ. ಪ್ರಣವದ ಅರ್ಧಮಾತ್ರೆಯು ಪರಬ್ರಹ್ಮವೂ ತ್ರಿಮಾತ್ರೆಯು ಅಪರಬ್ರಹ್ಮವೂ ಆಗಿರುವುದು. ಓಂಕಾರ ಎಂಬುದು ಪರಬ್ರಹ್ಮ ಮತ್ತು ಅಪರಬ್ರಹ್ಮವೆಂಬ ಉಭಯಾತ್ಮಕಾವಾಗಿರುವುದು. ಈ ಓಂಕಾರ ಎಂಬ ಉಪಾಯದಿಂದಲೇ ಅಪರ ಮತ್ತು ಪರಬ್ರಹ್ಮಗಳಲ್ಲಿ ಒಂದನ್ನು ಉಪಾಸ್ಯವಾಗಿ ಪಡೆಯುತ್ತಾನೆ ಎಂದು ಪ್ರಶ್ನೋಪನಿಷತ್‌ ಹೇಳುತ್ತದೆ.

ಓಂಕಾರದ ಪ್ರಣವವನ್ನು ಅಂದರೆ, ಮೊದಲ ಮಾತ್ರೆ ಅಕಾರವನ್ನು ನಿಶ್ಚಲವಾಗಿ ಧ್ಯಾನಿಸುವುದರಿಂದ ಭೂಮಿಯಲ್ಲಿ ಉತ್ತಮ ಶರೀರಿಯಾಗಿ ಉತ್ತಮ ಜೀವನವನ್ನು ಹೊಂದುತ್ತಾನೆ. ಅಕಾರವು ಭೂಸ್ವರೂಪವೂ ಆಗಿರುವುದರಿಂದ ಅಕಾರೋಪಾಸನೆಯು ಭೂಪ್ರಸನ್ನತೆಯೂ ಒದಗುವಂತೆ ಮಾಡುತ್ತದೆ. ಜೀವನದಲ್ಲಿ ದೃಢವಿಶ್ವಾಸವೂ ಸ್ಥೈರ್ಯವೂ ದೊರೆಯುತ್ತದೆ. ಎರಡನೆಯ ಮಾತ್ರೆಯಾದ ಉಕಾರದೊಡನೆ ಸತತವಾಗಿ ಪಠಿಸಿದರೆ ಇನ್ನೂ ಉತ್ತಮವಾದ ಫ‌ಲಗಳನ್ನು ಪಡೆಯಲು ಸಾಧ್ಯ. ಉಕಾರವು ಯಜುಃಶಕ್ತಿಯ ಅಂತರಿಕ್ಷಾತ್ಮಕವಾದ ಭುವರ್ಲೋಕವಾಗಿರುವುದರಿಂದಲೂ,

ಸೋಮಲೋಕವಾದ್ದರಿಂದಲೂ ಉಕಾರದ ಧ್ಯಾನದಿಂದ ಯಜುಃಶಕ್ತಿಯ ಪ್ರಸನ್ನತೆಯೂ, ಸೋಮಲೋಕದ ಪ್ರಸನ್ನತೆಯೂ ಲಭಿಸುತ್ತದೆ ಎಂಬ ನಂಬಿಕೆಯಿದೆ.

Advertisement

ಇದರಿಂದ ಸ್ವರ್ಗಲೋಕವಾಸಿಯಾಗುವ ಭಾಗ್ಯ ದೊರೆಯುತ್ತದೆ. ಇನ್ನು ಕೊನೆಯ ಮಾತ್ರೆಯಾದ ಮಕಾರವನ್ನು ಸೇರಿಸಿ ಓಂಕಾರವನ್ನು ಧ್ಯಾನಿಸುವುದರಿಂದ ಪರಮಪುರುಷನು ಒಲಿಯುತ್ತಾನೆ. ಮಕಾರವು ಸಾಮಶಕ್ತಿ ಮತ್ತು ಸುವಃ ಎಂಬ ದ್ಯುಲೋಕದೊಡನೆ ಸಂಬಂಧ ಹೊಂದಿರುವುದರಿಂದ ಸಾಮಶಕ್ತಿಗಳಿಂದ ಮೇಲಕ್ಕೆ ಒಯ್ಯಲ್ಪಡುವನು. ಹೀಗೆ ಮಾನವನು ಏಕಾಗ್ರಬುದ್ಧಿಯಿಂದ ನಿರಂತರವಾಗಿ ಓಂಕಾರವನ್ನು ಪಠಿಸುವುದರಿಂದ ಪಾಪಗಳೆಲ್ಲ ಕಳೆದು ಪುಣ್ಯಬಲವನ್ನು ಪಡೆಯುತ್ತಾನೆ. ಬ್ರಹ್ಮಲೋಕವನ್ನು ಸುಲಭವಾಗಿ ತಲುಪಿ, ಪಿಂಡಬ್ರಹ್ಮಾಂಡಗಳೆಂಬ ಬ್ರಹ್ಮಪುರದಲ್ಲಿ ಪರಮಪುರುಷನನ್ನು ಸಾಕ್ಷಾತ್ಕರಿಸುವನು. ಪಾಪರಹಿತನಾಗುತಾನೆ. ಮತ್ತೆ ಭೂಮಿಯಲ್ಲಿ ಹುಟ್ಟದೆ, ತೇಜೋಭೂತನಾಗಿ ಜೀವನದ ಹಿಂದಿನ ಮೂಲಸ್ಥಾನಕ್ಕೆ ತಲುಪಿಬಿಡುತ್ತಾನೆ. ಹೀಗೆ ಓಂಕಾರ ಅಥವಾ ಪ್ರಣವೋಪಾಸನೆಯಿಂದ ಮೋಕ್ಷ ವನ್ನು ಪಡೆಯುವಂಥವನಾಗುತ್ತಾನೆ. ಹೀಗೆ ಪ್ರಶ್ನೋಪನಿಷತ್ತಿನಲ್ಲಿ ಓಂಕಾರದ ಸ್ವರೂಪ ಮತ್ತು ಮಹಣ್ತೀವನ್ನು ವಿವರಿಸಲಾಗಿದೆ.

ಓಂ ಎಂಬ ಪದವು ಜೀವನೋತ್ಸಾಹವನ್ನು ನೀಡುವಂಥದ್ದಾಗಿದೆ. ಇದನ್ನು ನಾವು ಸರಳವಾಗಿ ಅರ್ಥೈಸಿಕೊಂಡು ಧ್ಯಾನಿಸಬೇಕು. ಮನಸ್ಸನ್ನು ವಿಚಲಿತವಾಗದಂತೆ, ದೃಢವಾಗಿರುವಂತೆ ಮಾಡುವಲ್ಲಿ ಈ ಓಂಕಾರದ ಪಠಣ ಸಹಾಯಕ ಸಾಧನ. ಅಉಮಕಾರಗಳನ್ನು ಸರಳವಾಗಿ ಅ ಎಂದರೆ ಅಗತ್ಯ, ಉ ಎಂದರೆ ಉದ್ದೇಶ ಮತ್ತು ಮ ಎಂದರೆ ಮಹಣ್ತೀ ಎಂದು ಅರ್ಥೈಸಿಕೊಂಡು ಜೀವನದಲ್ಲಿ ಅಗತ್ಯವಾಗಿರುವುದನ್ನು ಪಡೆಯುವಾಗ ಅದು ಉತ್ತಮ ಉದ್ದೇಶವನ್ನೂ ಹೊಂದಿದ್ದು ಮತ್ತು ಅದರಿಂದ ಮಹತ್ತಾಗಿದ್ದನ್ನು ಸಾಧಿಸುವಂತೆ ಬದುಕನ್ನು ರೂಪಿಸಿಕೊಳ್ಳಬೇಕು. ಇದಕ್ಕೆ ಮನೋನಿಗ್ರಹ ಬೇಕು; ಮನೋ ನಿಗ್ರಹಕ್ಕೆ ಶಕ್ತಿಯೇ ಈ ಓಂಕಾರ. 

ವಿಷ್ಣು ಭಟ್‌ ಹೊಸ್ಮನೆ 

Advertisement

Udayavani is now on Telegram. Click here to join our channel and stay updated with the latest news.

Next