Advertisement

Sharavati ವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಿ; ಪ್ರಸನ್ನ ಕೆರೆಕೈ ಆಗ್ರಹ

05:30 PM Jan 17, 2024 | Team Udayavani |

ಸಾಗರ: ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ 1774 ಅಡಿ ಇದೆ. ಇದೇ ರೀತಿ ನಿರಂತರ ವಿದ್ಯುತ್ ಉತ್ಪಾದನೆ ಮಾಡಿ ಇನ್ನು 13ಅಡಿ ನೀರು ಕಡಿಮೆಯಾಗಿ ಜಲಾಶಯದ ಮಟ್ಟ1761 ಅಡಿಗೆ ತಲುಪಿದರೆ ಲಾಂಚ್ ಸಂಚಾರ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ಆಗ ಶರಾವತಿ ಹಿನ್ನೀರಿನ ಸಂತ್ರಸ್ತ ಜನ ತೀವ್ರ ಸಂಕಷ್ಟಕ್ಕೀಡಾಗುತ್ತಾರೆ ಎಂದು ಕರೂರು ಭಾರಂಗಿ ಹೋಬಳಿ ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಪ್ರಸನ್ನ ಕೆರೆಕೈ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ತ್ಯಾಗ ಮಾಡಿರುವ ಹಿನ್ನೀರಿನ ಜನರ ಸಾರಿಗೆ ಸಂಪರ್ಕವನ್ನು ಉಳಿಸಿಕೊಡುವತ್ತ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಗಮನ ಹರಿಸಬೇಕು. ಈ ಹಿನ್ನೆಲೆಯಲ್ಲಿ ಮೇ ತಿಂಗಳವರೆಗೆ ಶರಾವತಿ ನದಿಪಾತ್ರದ ವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಇಂಧನ ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಮಳೆ ವಿಪರೀತ ಕಡಿಮೆಯಾಗಿದ್ದರಿಂದ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ತೀರ ಕಡಿಮೆ ಇದೆ. ಲಿಂಗನಮಕ್ಕಿ ನೀರನ್ನು ಬಳಸಿಕೊಂಡು ಬೇರೆಬೇರೆ ವಿದ್ಯುದಾಗಾರಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದೇ ರೀತಿ ವಿದ್ಯುತ್ ಉತ್ಪಾದನೆಗೆ ನೀರು ಬಳಕೆ ಮಾಡಿದರೆ ಡ್ಯಾಂ ನೀರು ಖಾಲಿಯಾಗುವ ಜೊತೆಗೆ ಶರಾವತಿ ನದಿಪಾತ್ರದಲ್ಲಿ ಹಿನ್ನೀರು ಕಡಿಮೆಯಾಗುತ್ತದೆ. ಆಗ ಲಾಂಚ್ ಓಡಾಡಲು ಸಾಧ್ಯವಾಗುವುದಿಲ್ಲ ಎಂಬುದರತ್ತ ಗಮನ ಸೆಳೆದರು.

ಈಗಾಗಲೇ ಹಿನ್ನೀರು ಕಡಿಮೆಯಾಗಿರುವುದರಿಂದ ಲಾಂಚ್ ನಿಲ್ಲಿಸಲು ರ‍್ಯಾಂಪ್‌ಗಳ ಸಮಸ್ಯೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ರ‍್ಯಾಂಪ್‌ಗಳಿದ್ದರೂ ಅದು ನೀರಿನ ಮಟ್ಟ ಕಡಿಮೆ ಇದ್ದಾಗ ಉಪಯೋಗಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಳಸವಳ್ಳಿ ದಡ ಮತ್ತು ಅಂಬಾರಗೋಡ್ಲು ದಡದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಲಾಂಚ್ ನಿಲ್ಲಿಸಲು ಹೆಚ್ಚುವರಿ ರ‍್ಯಾಂಪ್ ನಿರ್ಮಿಸಲು ಶಾಸಕರು ಗಮನ ಹರಿಸಬೇಕು. ಮಳೆಗಾಲ ಪ್ರಾರಂಭವಾಗುವ ತನಕ ಹಿನ್ನೀರಿನ ಜನರಿಗೆ ಲಾಂಚ್ ಸೌಲಭ್ಯ ಸುಗಮವಾಗಿ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ವಿದ್ಯುತ್ ಉತ್ಪಾದನೆ ಇನ್ನಿತರೆ ಕಾರಣಕ್ಕೆ ಹಿನ್ನೀರನ್ನು ಬಳಕೆ ಮಾಡಿಕೊಂಡು ಸಂತ್ರಸ್ತ ಜನರಿಗೆ ಲಾಂಚ್ ಸೌಲಭ್ಯಕ್ಕೆ ಅಡ್ಡಿಪಡಿಸಿದರೆ ವೇದಿಕೆ ವತಿಯಿಂದ ಹಿನ್ನೀರಿನ ಜನರ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅನಿಲಕುಮಾರ್, ಜಿ.ಪಿ.ಶ್ರೀನಿವಾಸ್ ಗದ್ದೆಮನೆ, ಶ್ರೀಧರ ಚುಟ್ಟಿಕೆರೆ, ಮಂಜಯ್ಯ ಜೈನ್ ಸಂಸೆ, ಸಚಿನ್, ರಾಘವೇಂದ್ರ, ಗಣಪತಿ ಹಿನ್ಸೋಡಿ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next